 : ಕ್ರೀಡೆಯಲ್ಲಿ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು -ಬಿಇಒ ವೆಂಕಟೇಶಪ್ಪ
ಬಾಗೇಪಲ್ಲಿ:ಶಿಕ್ಷಣದ ಜೊತೆಗೆ ಕ್ರೀಡೆಯನ್ನು ಸಮತೋಲನವಾಗಿ ನೋಡಬೇಕು. ಕ್ರೀಡೆಯಲ್ಲಿ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿದಾಗ ನಾವೆಲ್ಲರೂ ಒಂದೇ ಎಂಬ ಮನೋಭಾವ ಮೂಡುತ್ತದೆ ಎಂದು ಬಿಇಒ ಕೆ.ವೆಂಕಟೇಶಪ್ಪ ತಿಳಿಸಿದರು.
ಬಾಗೇಪಲ್ಲಿ ಪಟ್ಟಣದ ವಿಶ್ವೇಶ್ವರಯ್ಯ ತಾಲ್ಲೂಕು ಕ್ರೀಡಾಂಗಣದಲ್ಲಿ 2024-25 ಸಾಲಿನ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಆಟಗಳಿಗೆ ಮೊದಲು ಕ್ರೀಡಾ ಮನೋಭಾವದ ಅವಶ್ಯಕತೆ ಇದೆ. ಮನಸ್ಸನ್ನು ನಿಯಂತ್ರಿಸಿ ಶಾಂತಿ ಮಾರ್ಗದಲ್ಲಿ ನಡೆಯಲು ಕ್ರೀಡೆ ಬೇಕು. ಬಹುಮಾನಕ್ಕಾಗಿಯೇ ಕ್ರೀಡೆಗಳಲ್ಲಿ ಭಾಗಿಯಗುವುದು ತರವಲ್ಲ ಎಂದರು.
ಇದನ್ನೂ ಓದಿ: : ಮುಂಬಯಿಯ ಲಾಲ್‌ಬಾಗ್ಚಾ ಗಣಪತಿಗೆ ₹15 ಕೋಟಿ ಬೆಲೆಯ ಚಿನ್ನದ ಕಿರೀಟ ಅರ್ಪಣೆ; ಕೊಟ್ಟವರು ಯಾರು?
ಇಂದಿನ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಆರೋಗ್ಯದತ್ತ ನಿರ್ಲಕ್ಷ ತೋರುತ್ತಿರುವುದು ವಿಷಾದದ ಸಂಗತಿ. ದಿನದ ಒಂದಷ್ಟು ಅವಧಿಯನ್ನಾದರೂ ಆರೋಗ್ಯಕ್ಕಾಗಿ ಮೀಸಲಾಗಿಡಬೇಕು. ಮಕ್ಕಳು ಸದಾ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು. ಪುಸ್ತಕ ಜ್ಞಾನಕ್ಕಿಂತ ಮಿಗಿಲಾದ ಕ್ರೀಡಾ ಪ್ರೌಢಮೆ ಕೆಲವರಲ್ಲಿರುತ್ತದೆ. ಶಿಕ್ಷಣ ಹಾಗೂ ಕ್ರೀಡೆ ಎರಡಕ್ಕೂ ಸಮಾನ ಪ್ರಾತಿನಿಧ್ಯ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಮನ್ವಯ ಅಧಿಕಾರಿಗಳಾದ ವೆಂಕಟರಾಮ್, ದೈಹಿಕ ಶಿಕ್ಷಣ ಪರಿವೀಕ್ಷಕ ರಂಗನಾಥ್, ಆರ್.ಹನುಮಂತ ರೆಡ್ಡಿ, ಪಿ.ಎನ್.ನಾರಾಯಣ ಸ್ವಾಮಿ, ಕೆ.ವಿ.ಶ್ರೀನಿವಾಸ್, ಈಶ್ವರಪ್ಪ, ವೆಂಕಟೇಶಪ್ಪ, ಸುಜಾತ, ಸಿ.ನಾರಾಯಣ ಸ್ವಾಮಿ, ಅಪ್ಪಣ್ಣ,ರಘುನಾಥ, ಶ್ರೀನಿವಾಸ್ ಪದ್ಮಾವತಿ, ರಾಜರಾಜೇಶ್ವರಿ, ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.