 : ಹಣವಿಲ್ಲ ಎಂದ ಯುವಕನ ಬೈಕ್ ಎಗರಿಸಿದ್ದ ಆಸಾಮಿ ಬಂಧನ
ಹಳಿಯಾಳ:ಹಣ ಕೊಟ್ಟರೇ ಡಬಲ್ ಮಾಡಿ ಕೊಡುತ್ತೇನೆ ಎಂದಾಗ, ಹಣವಿಲ್ಲ ಎಂದಿದ್ದ ಯುವಕನ ಬೈಕ್ ಎಗರಿಸಿದ್ದ ( ) ಆಸಾಮಿಯನ್ನು ಹಳಿಯಾಳ ಪೋಲಿಸರು ಬಂಧಿಸಿದ್ದಾರೆ. ಹಳಿಯಾಳ ಪಟ್ಟಣದ ( ) ಚವ್ವಾಣ ಪ್ಲಾಟ್ ನಿವಾಸಿ ಕ್ರಿಮಿನಲ್ ಹಿನ್ನೆಲೆಯ, ಅಂಬಿಕಾನಗರದಲ್ಲಿ ಗುಂಡಾ ಲಿಸ್ಟ್‌ನಲ್ಲಿರುವ ರಾಕೇಶ ದಿನಕರ ವಾಲೇಕರ ಆರೋಪಿಯಾಗಿದ್ದಾನೆ.
ಪಟ್ಟಣದ ಕಾನ್ವೆಂಟ್ ರೋಡ್ ನಿವಾಸಿ ರಾಹುಲ್ ಜಯವಂತ ವಾಣಿ ಎಂಬಾತ ತನ್ನ ಮನೆಯ ಎದುರುಗಡೆ ನಿಂತಿದ್ದಾಗ ಆರೋಪಿ ರಾಕೇಶ ವಾಲೇಕರ ಹತ್ತಿರ ಬಂದು, ನಿನಗೆ ಹಣವನ್ನು ಡಬಲ್ ಮಾಡಿಕೊಡುತ್ತೇನೆ. ನನಗೆ ಅರ್ಜೆಂಟಾಗಿ 1 ಲಕ್ಷ ಹಣವನ್ನು ಕೊಡು ಅಂತ ಕೇಳಿದಾಗ, ಅದಕ್ಕೆ ರಾಹುಲ್ ಅಷ್ಟು ಹಣ ಇಲ್ಲ ಅಂತ ಹೇಳಿದ್ದಾನೆ. ಈ ವೇಲೆ ಆರೋಪಿ ಹಣ ಕೊಡು ಅಥವಾ ನಿನ್ನ ಹತ್ತಿರ ಇರುವ ಬೈಕನ್ನು ಕೊಡು, ಇಲ್ಲದಿದ್ದರೆ ನಿನ್ನನ್ನು ಸುಮ್ಮನೆ ಬಿಡಲ್ಲ, ಸಾಯಿಸಿ ಬಿಡುತ್ತೇನೆ ಅಂತಾ ಭಯ ಪಡಿಸಿದ್ದ.
ಮೊದಲೇ ಆಪಾದಿತ ರಾಕೇಶ್ ಹುಂಬ ಸ್ವಭಾವದವನಾಗಿರುವ ಬಗ್ಗೆ ಗೊತ್ತಿದ್ದರಿಂದ ರಾಹುಲ್ ಹೆದರಿ ತನ್ನ ಮಾಲೀಕತ್ವದಲ್ಲಿರುವ ಒಂದೂವರೆ ಲಕ್ಷ ರೂ. ಮೌಲ್ಯದ ರಾಯಲ್ ಎನ್ಫಿಲ್ಡ್ ಕೆಎ-65, ಜೆ-1393 ಬೈಕ್ ಅನ್ನುರಾಕೇಶನಿಗೆ ಕೊಟ್ಟಿದ್ದು, ಆ ದಿನದಿಂದ ರಾಕೇಶ ಸಿಕ್ಕಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದ.
ರಾಹುಲ್ ಆರೋಪಿಯ ಹೆದರಿಕೆಯಿಂದ ಮನೆಯಲ್ಲಿ ಚರ್ಚಿಸಿ ವಿಳಂಬವಾಗಿ ದೂರು ನೀಡಿದ್ದಾನೆಂದು ಉಲ್ಲೇಖಿಸಲಾಗಿದೆ. ಆಪಾದಿತ ರಾಕೇಶನನ್ನು ಹಳಿಯಾಳ ಪೋಲಿಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಸೆಪ್ಟೆಂಬರ್ ದಿ. 25 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ‌‌.
ಹಳಿಯಾಳ ತಾಲೂಕಿನ ಮಂಗಳವಾಡ ಗ್ರಾಮದ ರಾಕೇಶ್ ಮೇಲೆ ಹಳಿಯಾಳ- ಅಂಬಿಕಾನಗರ ಸೇರಿ ಹಲವು ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳಿವೆ. ಅಲ್ಲದೇ ಈತ ಅಂಬಿಕಾನಗರ ಪೋಲಿಸ್ ಠಾಣೆಯಲ್ಲಿ ಗುಂಡಾ ಲಿಸ್ಟ್ ನಲ್ಲಿರುವ ವ್ಯಕ್ತಿಯಾಗಿದ್ದು, ಹಳಿಯಾಳದಲ್ಲಿ ಅನೇಕರಿಗೆ ಮೊಸ, ವಂಚನೆ ಮಾಡಿದ ಬಗ್ಗೆ ದೂರುಗಳಿವೆ. ಅಲ್ಲದೇ ತನ್ನ ದುಷ್ಕೃತ್ಯಗಳಿಂದ ಉಳಿಯಲು ಈ ಕಪಟಿ ಅಯ್ಯಪ್ಪ ಸ್ವಾಮಿಯ ಮಾಲೆಯನ್ನು ಕಳೆದ ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ಧರಿಸಿದ್ದ. ವ್ರತಾಚರಣೆಯ ವಿರುದ್ಧವೇ ನಡೆಯುತ್ತಾ ಮಾಲೆಯನ್ನು ತೆಗೆಯದಿರುವ ಬಗ್ಗೆ ಹಳಿಯಾಳ ಅಯ್ಯಪ್ಪ ಸ್ವಾಮಿ ಸಮಿತಿಯವರು ಹಳಿಯಾಳ ಪೋಲಿಸ್ ಠಾಣೆ ಸೇರಿದಂತೆ ತಹಸೀಲ್ದಾರ್ ಅವರಿಗೂ ಮನವಿ ಸಲ್ಲಿಸಿದ್ದಾರೆ‌. ಅಲ್ಲದೇ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಯುವಕನೊರ್ವನ ಮೇಲೆ ಹಲ್ಲೆ ಮಾಡಿದ ಪ್ರಕರಣವು ಚಾಲ್ತಿಯಲ್ಲಿದೆ.
ಈತ ಹಳಿಯಾಳ ನ್ಯಾಯಾಲಯದಲ್ಲಿ ಅನೇಕ ಚೆಕ್ ಬೌನ್ಸ್ ಪ್ರಕರಣಗಳನ್ನು ದಾಖಲಿಸಿ ಜನರಿಗೆ ವಂಚಿಸುತ್ತಿರುವ ಬಗ್ಗೆ ಕೂಡ ಪಟ್ಟಣದಲ್ಲಿ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಸದ್ಯದಲ್ಲೇ ಈತ ಹಾಗೂ ಇತನ ಗ್ಯಾಂಗ್ ವಿರುದ್ಧ ದೊಡ್ಡ ಹೋರಾಟವೇ ನಡೆಯುವ ಬಗ್ಗೆ ಮಾಹಿತಿ ಪತ್ರಿಕೆಗೆ ಲಭಿಸಿದೆ.