ಬಿಜೆಪಿ ಪಕ್ಷದ ವಿವಿಧ ಪ್ರಕೋಷ್ಠಗಳ ಮುಖಂಡರುಗಳ ಸಮಾವೇಶ
ತುಮಕೂರು:ಬಿಜೆಪಿ ಪಕ್ಷದ ವಿವಿಧ ಪ್ರಕೋಷ್ಠಗಳ ಮುಖಂಡರುಗಳ ಸಮಾವೇಶ ಮೇ.07 ರಂದು ಅಮಾನಿಕೆರೆಯಲ್ಲಿರುವ ಗಾಜಿನ ಮನೆಯಲ್ಲಿ ನಡೆಯ ಲಿದೆ ಎಂದು ಬಿಜೆಪಿ ವಿವಿಧ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಬ್ಯಾಟರಂಗೇಗೌಡ ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 07ರಂದು ಬೆಳಗ್ಗೆ 10:30 ಗಂಟೆ ಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಸಮಾವೇಶ ನಡೆಯಲಿದ್ದು, ಜಿಲ್ಲೆಯ 2600 ಮಂಡಲಗಳ 1500ಕ್ಕೂ ಹೆಚ್ಚು ಮುಖಂಡರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಬಿಜೆಪಿ ಪಕ್ಷದ ಬೇರುಗಳಾದ ಪ್ರಕೋಷ್ಠಗಳು,ಚುನಾವಣೆಯಲ್ಲಿ ಮತ್ತು ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಇವುಗಳ ನಾಯಕರುಗಳಿಗೆ ಚುನಾವಣೆಯಲ್ಲಿ ಮತ್ತು ಬಿಜೆಪಿ ಸಂಘಟನೆಯಲ್ಲಿ ಪ್ರಕೋಷ್ಠಗಳ ಪಾತ್ರ ಎಂಬ ವಿಚಾರವಾಗಿ ಪಕ್ಷದ ಮುಖಂಡರಾದ ಭಾನುಪ್ರಕಾಶ್ ಅವರು ಉಪನ್ಯಾಸ ನೀಡಲಿದ್ದಾರೆ.
ಸಮಾವೇಶದಲ್ಲಿ ಬಿಜೆಪಿ ಪಕ್ಷದೊಂದಿಗೆ ಕೆಲಸ ಮಾಡುತ್ತಿರುವ ಪ್ರಶಿಕ್ಷಣ, ಸಹಕಾರ, ಅಸಂಘಟಿತ ಕಾರ್ಮಿಕ,ಕಲೆ ಮತ್ತು ಸಾಂಸ್ಕೃತಿಕ, ವ್ಯಾಪಾರಿ, ಕಾನೂನು, ವೈದ್ಯಕೀಯ, ಪ್ರಬುದ್ದರ, ವೃತ್ತಿಪರರ, ಕೈಗಾರಿಕ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ದಿ,ಫಲಾನುಭವಿ,ಶಿಕ್ಷಕರ, ಹಾಲು ಉತ್ಪಾದಕರ, ಹಿರಿಯ ನಾಗರಿಕರ, ಪಂಚಾಯತ್ ರಾಜ್ ನಗರ, ಪೂರ್ವಸೈನಿಕ, ಅರ್ಥಿಕ, ವಿವಿಧ ಭಾಷಿಕ ಸೇರಿ 24 ಪ್ರಕೋಷ್ಠಗಳ ಮುಖಂಡರು ಭಾಗವಹಿಸಲಿದ್ದಾರೆ.
ತುಮಕೂರು ಜಿಲ್ಲೆಯಿಂದ ಆರಂಭಗೊಳ್ಳುವ ಪ್ರಕೋಷ್ಠಗಳ ಸಮಾವೇಶ, ಎಲ್ಲಾ ಜಿಲ್ಲೆಗಳಲ್ಲಿಯೂ ನಡೆದು, ಚಿಕ್ಕಮಗಳೂರಿನಲ್ಲಿ ಮುಕ್ತಾಯಗೊಳ್ಳಿದೆ. ಸಮಾವೇಶಗಳಲ್ಲಿ ಪಾಲ್ಗೊಳ್ಳುವ ಪ್ರಕೋಷ್ಠಗಳ ಮುಖಂಡರು, ತಮ್ಮ ತಮ್ಮ ಮಂಡಲಗಳಿಗೆ ತೆರಳಿ ಮತದಾರರೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಬ್ಯಾಟರಂಗೇಗೌಡ ತಿಳಿಸಿದರು.
ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳೀನ್‌ಕುಮಾರ್ ಕಟೀಲ್,ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್,ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ, ಜಿಲ್ಲೆಯ ಸಚಿವರಾದ ಬಿ.ಸಿ.ನಾಗೇಶ್,ಜೆ.ಸಿ.ಮಾಧುಸ್ವಾಮಿ,ತುಮಕೂರು ಸಂಸದ ಜಿ.ಎಸ್.ಬಸವರಾಜು,ಶಾಸಕರಾದ ಜಿ.ಬಿ.ಜೋತಿಗಣೇಶ್, ಡಾ.ರಾಜೇಶ ಗೌಡ, ಮಸಾಲೆ ಜಯರಾಮ್, ವಿಧಾನಪರಿಷತ್ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ,ಚಿದಾನಂದ ಗೌಡ, ಮಾಜಿ ಸಚಿವ ಸೊಗಡು ಶಿವಣ್ಣ,ಮಾಜಿ ಶಾಸಕರಾದ ಕೆ.ಎಸ್.ಕಿರಣ್ ಕುಮಾರ್,ಬಿ.ಸುರೇಶಗೌಡ ಹಾಗೂ ರಾಜ್ಯ ಮತ್ತು ಜಿಲ್ಲೆಯ ಪದಾಧಿಕಾರಿಗಳು, ಹಿರಿಯರು, ಪ್ರಮುಖರು ಆಗಮಿಸಲಿದ್ದಾರೆ ಎಂದು ಬ್ಯಾಟರಂಗೇಗೌಡ ವಿವರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಕೆ.ಪಿ.ಮಹೇಶ್,ವಿವಿಧ ಪ್ರಕೋಷ್ಠಗಳ ಸಂಚಾಲಕರಾದ ಹೆಚ್.ಎನ್.ನಟರಾಜು,ನಂಜೇಗೌಡ, ಜೋತಿ, ಹೀಮಾನಂದ್.ಡಿ.ಸಿ., ಕೆ.ಶಂಕರ್, ಆಂಜಿನಪ್ಪ, ಸಣ್ಣರಾಮಯ್ಯ, ಶ್ರೀಧರ್, ಷಣ್ಮುಖ ಸೇರಿದಂತೆ ಹಲವರು ಉಪಸ್ಥಿತರಿದ್ದರು.