ನಂಜನಗೂಡು: ಎಪಿಎಂಸಿ ಏಜೆಂಟ್ ಬರ್ಬರ ಹತ್ಯೆ
ಮೈಸೂರು:ನಂಜನಗೂಡು ರಸ್ತೆಯಲ್ಲಿರುವ ಬಂಡಿಪಾಳ್ಯದ ಎಪಿಎಂಸಿ ಮಾರುಕಟ್ಟೆಯಲ್ಲಿ ತಮ್ಮ ಮಳಿಗೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ಎಪಿಎಂಸಿ ಏಜೆಂಟ್ ಒಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ನಿವಾಸಿ ಎಂ.ಜೆ.ರವಿ (35) ಎಂಬವರೆ ಕೊಲೆ ಯಾದವರು.
ಎಪಿಎಂಸಿಯಲ್ಲಿ ಏಜೆಂಟ್ ಆಗಿದ್ದು, ಉತ್ತನಹಳ್ಳಿಯ ಬಳಿಯ ಹೆಳವರಹುಂಡಿಯಲ್ಲಿ ಕುಟುಂಬದ ಸಮೇತ ವಾಸವಿದ್ದರು. ಮೃತರಿಗೆ ತಂದೆ- ತಾಯಿ, ಪತ್ನಿ, ಮೂವರು ಮಕ್ಕಳು, ಸಹೋದರಿ ಇದ್ದಾರೆ.
ಮಳಿಗೆಯಲ್ಲಿ ಮಂಗಳವಾರ ಕೆಲಸ ಮಾಡುತ್ತಿದ್ದಾಗ ಬಂದ 3-4 ಮಂದಿ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಆರ್. ಶಿವಕುಮಾರ್, ಮೈಸೂರು ದಕ್ಷಿಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶಶಿಕುಮಾರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.