ಪ್ರೆಸ್ ಕ್ಲಬ್ ತುಮಕೂರಿನ ಗೌರವ ಸದಸ್ಯತ್ವ ಪಡೆದ ಗೃಹ ಸಚಿವ ಅರಗ ಜ್ಞಾನೇಂದ್ರ
ತುಮಕೂರು:ನಗರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪ್ರೆಸ್ ಕ್ಲಬ್ ತುಮಕೂರು ಸದಸ್ಯತ್ವ ನೋಂದಣಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಗೌರವ ಸದಸ್ಯತ್ವ ಪಡೆಯುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪ್ರೆಸ್ ಕ್ಲಬ್ ತುಮಕೂರು ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಸದಸ್ಯತ್ವ ನೋಂದಣಿ ಅರ್ಜಿಗೆ ಸಹಿ ಮಾಡಿ ಗೌರವ ಸದಸ್ಯತ್ವ ಪಡೆದ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ, ಜನತಂತ್ರ ವ್ಯವಸ್ಥೆಯಲ್ಲಿ 4ನೇ ಸ್ತಂಭ ಪತ್ರಿಕಾ ರಂಗ. ಸಾರ್ವಜನಿಕರು ಮತ್ತು ಸರ್ಕಾರದ ವ್ಯವಸ್ಥೆಯ ನಡುವಿನ ಕೊಂಡಿಯಾಗಿ ಹಾಗೂ ಧ್ವನಿ ಇಲ್ಲದವರ ಧ್ವನಿಯಾಗಿ ಸದಾ ಕಾಲ ಮಾಧ್ಯಮ ಕೆಲಸ ಮಾಡುತ್ತಿದೆ ಎಂದರು.
ಭಾರತೀಯ ಮಾಧ್ಯಮ ಅತ್ಯಂತ ಪ್ರಬಲವಾಗಿದೆ. ಮಾಧ್ಯಮದಲ್ಲಿ ಕೆಲಸ ಮಾಡುತ್ತಿರು ವವರು ಸಾಮಾನ್ಯ ಜನರಿಗಿಂತ ಮೇಲ್ಪಟ್ಟ ದಲ್ಲಿರುತ್ತಾರೆ. ಅಧಿಕಾರದಲ್ಲಿರುವವರನ್ನು ಪ್ರಶ್ನೆ ಮಾಡುವ, ಸಲಹೆ ನೀಡುವ ಸ್ವಾತಂತ್ರ್ಯವನ್ನು ಪತ್ರಕರ್ತರು ಹೊಂದಿದ್ದಾರೆ ಎಂದು ಹೇಳಿದರು.
ಮೊದಲು ಸುದ್ದಿ ಕೊಡುವ ಹಪಹಪಿ ಸದ್ಯದ ಸ್ಪರ್ಧೆಯಾಗಿದೆ. ಸದಾ ಆರೋಗ್ಯಕರ ಸ್ಪರ್ಧೆ ಇರಲಿ. ವಾಸ್ತವತೆಯ ಸುದ್ದಿಗೆ ಆದ್ಯತೆ ನೀಡಬೇಕು ಎಂದು ಅವರು ಸಲಹೆ ಮಾಡಿದರು.
ಸದಾ ಒತ್ತಡದಲ್ಲೇ ಕಾರ್ಯನಿರ್ವಹಿಸುವ ಪತ್ರಕರ್ತರ ಮನರಂಜನೆ, ಹಿತ ಕಾಯುವ ಸದುದ್ದೇಶದಿಂದ ಆರಂಭವಾಗಿರುವ ಪ್ರೆಸ್ ಕ್ಲಬ್ ಮುಂದಿನ ದಿನಗಳಲ್ಲಿ ಉತ್ತಮವಾಗಿ ಬೆಳೆಯಲಿ, ಮಾದರಿ ಪ್ರೆಸ್ ಕ್ಲಬ್ ಆಗಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್‌ ಕುಮಾರ್ ಅವರು ಪ್ರೆಸ್‌ಕ್ಲಬ್‌ನ ಗೌರವ ಸದಸ್ಯತ್ವ ಪಡೆದು, ಪ್ರೆಸ್ ಕ್ಲಬ್ ತುಮಕೂರು ಉತ್ತಮವಾಗಿ ಮುನ್ನಡೆಯಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಶಶಿಧರ್ ದೋಣಿಹಕ್ಲು, ವಿಜಯಕರ್ನಾಟಕ ಉಪಾಧ್ಯಕ್ಷರಾದ, ಕರುಣಾಕರ್( ಸತ್ಯ ದರ್ಶಿನಿ), ಮಾರುತಿ ಗಂಗಹನುಮಯ್ಯ( ಅಮೃತವಾಣಿ), ಶ್ರೀನಿವಾಸ ರೆಡ್ಡಿ ( ಅಮೋಘ ವಾಹಿನಿ), ಪ್ರಧಾನ ಕಾರ್ಯದರ್ಶಿ ಯೋಗೇಶ್. ಎಲ್(ಸುವರ್ಣ ನ್ಯೂಸ್), ಸಹ ಕಾರ್ಯದರ್ಶಿ ಸತೀಶ್ (ಸಂಯುಕ್ತ ಕರ್ನಾಟಕ), ಸಂಘಟನಾ ಕಾರ್ಯದರ್ಶಿ ರಂಗನಾಥ ಕೆ ಮರಡಿ (ವಿಶ್ವವಾಣಿ) ಹಾಗೂ ನಿರ್ದೇಶಕರುಗಳು, ಮತ್ತಿತರರು ಉಪಸ್ಥಿತರಿದ್ದರು.