 : ರಸ್ತೆ ಗುಂಡಿ ಮುಚ್ಚುವ  ಕಾಮಗಾರಿ  ಪರಿಶೀಲನೆಗೆ ರಾತ್ರಿ ನಗರ ಸಂಚಾರ: ಡಿ.ಕೆ. ಶಿವಕುಮಾರ್
ಬೆಂಗಳೂರು:ರಸ್ತೆ ಗುಂಡಿ ( ) ಮುಚ್ಚುವ ಕಾಮಗಾರಿಯ ಗುಣಮಟ್ಟ ವೀಕ್ಷಣೆ ಮಾಡಲು ರಾತ್ರಿ ಸಂಚಾರ ನಡೆಸುತ್ತೇನೆ. ಎರಡು ಮೂರು ದಿನಗಳಲ್ಲಿ ದಿನಾಂಕ ತಿಳಿಸುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ( ) ತಿಳಿಸಿದರು. ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಷ್ಟು ರಸ್ತೆ ಗುಂಡಿಗಳಿವೆ ಎಂಬುದರ ಬಗ್ಗೆ ನನ್ನ ಬಳಿ ಲೆಕ್ಕವಿದೆ. ಅಭಿಯಾನದ ರೀತಿ ಕೆಲಸ ಮಾಡಿದ್ದೇವೆ. ಇದು ಸಾಧನೆಯಲ್ಲ ಜವಾಬ್ದಾರಿ. ನನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಆದೇಶ ಕೊಟ್ಟ ಮೇಲೆ ಅಧಿಕಾರಿಗಳು ಇಷ್ಟು ತ್ವರಿತವಾಗಿ ಕೆಲಸ ಮಾಡಿದ್ದನ್ನು ನಾನು ನೋಡಿರಲಿಲ್ಲ ಎಂದು ಹೇಳಿದರು.
ರಸ್ತೆಗುಂಡಿಗಳನ್ನು ಮುಚ್ಚಿಸುವ ವಿಚಾರದಲ್ಲಿ ಬಿಬಿಎಂಪಿ ಅಧಿಕಾರಿಗಳು ಹಗಲು- ರಾತ್ರಿ ಕೆಲಸ ಮಾಡುತ್ತಿದ್ದಾರೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಮಧ್ಯೆ ಮಳೆ ಬಂದಿದೆ. ನೀವು (ಮಾಧ್ಯಮ)ಗಳು ಅಷ್ಟೋ, ಇಷ್ಟೊ ಕೆಲಸ ಮಾಡಿದ್ದಾರೆ ಎಂದು ವರದಿ ಮಾಡಿದ್ದೀರಿ. ನಾವು ಬದ್ಧತೆಯಿಂದ ನಾಗರೀಕರಿಗೆ ಅನುಕೂಲ ಮಾಡುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | : ನಿಫಾ ಸೋಂಕು ಆತಂಕ, ಬೆಂಗಳೂರಿನಲ್ಲಿ 41 ಜನರಿಗೆ ಹೋಮ್‌ ಕ್ವಾರಂಟೈನ್
ನಾನು ಬೇರೆ ರಾಜ್ಯಗಳಿಗೆಲ್ಲಾ ಭೇಟಿ ನೀಡಿದ್ದೇನೆ. ಅಲ್ಲಿನ ರಸ್ತೆಯ ವಿಡಿಯೋಗಳನ್ನು ಹಾಕಿದರೆ ಆ ರಾಜ್ಯಗಳಿಗೆ ಅವಮಾನವಾಗುತ್ತದೆ. ಅದಕ್ಕಿಂತ ಉತ್ತಮವಾಗಿ ನಮ್ಮವರು ಇಲ್ಲಿನ ರಸ್ತೆಗಳ ಪರಿವರ್ತನೆ ಮಾಡಬೇಕು ಎಂದು ಕೆಲಸ ಮಾಡಿದ್ದಾರೆ. ಅದರಲ್ಲಿ ನಾವು ಯಶಸ್ವಿಯಾಗುತ್ತಿದ್ದೇವೆ ಡಿಸಿಎಂ ತಿಳಿಸಿದರು.
ಶಾಸಕ ಮುನಿರತ್ನ ಪ್ರಕರಣಗಳ ವಿಚಾರವಾಗಿ ಎಸ್‌ಐಟಿ ರಚನೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಅನೇಕರು ಒತ್ತಡ ಹಾಕುತ್ತಿದ್ದಾರೆ. ನೀವು ಇದರ ಚರ್ಚೆ ನಡೆಸಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನಗೆ ಸಿಎಂ ಭೇಟಿ ಸಾಧ್ಯವಾಗಿಲ್ಲ. ಆದರೆ ಆರ್. ಅಶೋಕ್ ಮೇಲೆ ಮಾಡಿದ್ದ ಸಂಚು ಕೇಳಿ ದಿಗ್ಬ್ರಮೆಯಾಗಿದ್ದೇನೆ. ಈ ರೀತಿಯ ಸಂಚನ್ನು ನಾನು ಇಡೀ ಪ್ರಪಂಚದಲ್ಲಿಯೇ ಕೇಳಿಲ್ಲ ಎಂದರು.
ಈ ಸುದ್ದಿಯನ್ನೂ ಓದಿ | : ದುಬೈನಲ್ಲಿ ನಡೆದ ಬಾಡಿ ಬಿಲ್ಡಿಂಗ್‌ ಸ್ಪರ್ಧೆಯಲ್ಲಿ ಬಂಗಾರ ಗೆದ್ದ ಸೂಪರ್‌ ಮಾಡೆಲ್‌ ಜ್ಯೋತ್ಸ್ನಾ
ಮುನಿರತ್ನ ವಿಚಾರವಾಗಿ ಅಶೋಕ್ ಅವರು ಮೊದಲು ಮಾತನಾಡಿದ್ದನ್ನು ಕೇಳಿದ್ದೆ. ಈಗ ಮಾತನಾಡಿದ್ದನ್ನು ನಾನು ನೋಡಿಲ್ಲ. ಅಶೋಕಣ್ಣ, ಸಿ.ಟಿ. ರವಿಯಣ್ಣ, ವಿಜಯೇಂದ್ರಣ್ಣ ಅವರುಗಳು ಮಾತನಾಡಬೇಕು. ಈ ವಿಚಾರದಲ್ಲಿ ಸತ್ಯ ಏನಿದೆ ಎಂದು ತಮ್ಮ ಅಭಿಪ್ರಾಯಗಳನ್ನು ಹೇಳಬೇಕು. ಮುಖ್ಯವಾಗಿ ಕುಮಾರಣ್ಣ, ಡಾ. ಮಂಜುನಾಥ್ ಅವರು ಮಾತನಾಡಬೇಕು. ಯಾರು, ಯಾರಿಗೆ ಏನಾಗಿದೆ ಎಂದು ನಾನು ತಿಳಿದುಕೊಳ್ಳಲು ಆಗಿಲ್ಲ ಎಂದರು.