ಜೀವನ ಸುಖಕರವಾಗಿರಲು ಆರೋಗ್ಯದ ಪಾತ್ರ ಮಹತ್ವದ್ದು
ಚಿಕ್ಕನಾಯಕನಹಳ್ಳಿ:ಮನುಷ್ಯನ ಜೀವನ ಸುಖಕರವಾಗಿರಲು ಆರೋಗ್ಯವು ಮಹತ್ವದ ಪಾತ್ರವನ್ನು ವಹಿಸುತ್ತದೆ. ಈಶಕ್ತಿಯನ್ನು ಹೆಚ್ಚಿಸಲು ಭಾರತದಲ್ಲಿ ಹಿಂದಿನಿ0ದಲೂ ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ, ತಪಸ್ಸು ಮೊದಲಾದವು ಗಳನ್ನು ಅನುಸರಿಸಲಾಗುತ್ತಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಪಟ್ಟಣದ ನವೋದಯ ಪ್ರೌಢಶಾಲೆ, ಪ್ರಥಮದರ್ಜೆ ಕಾಲೇಜ್, ಹಾಗು ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ವಿಶ್ವ ಯೋಗ ದಿನದ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು. ಇಂದಿನ ವ್ಯಸ್ತ ಜೀವನದಲ್ಲಿ ಅತಿಯಾದ ಒತ್ತಡ, ಉದ್ವೇಗ, ಖಿನ್ನತೆ ಕಂಡು ಬರುತ್ತಿದ್ದು, ನಿತ್ಯವೂ ಕೆಲವು ಕಾಲ ಯೋಗಾಭ್ಯಾಸವನ್ನು ಮಾಡುವುದರಿಂದ ನಮ್ಮ ಆರೋಗ್ಯದಲ್ಲಿ ಮತ್ತು ದೈಹಿಕ ಸಧೃಢತೆಯಲ್ಲಿ ಪ್ರಗತಿ ಕಾಣ ಬಹುದಾಗಿದೆ.
ಯೋಗದ ಮೂಲಕ ಮನಸ್ಸನ್ನು ಹತೋಟಿಯಲ್ಲಿಟ್ಟು ದೇಹವನ್ನು ಸುಸ್ಥಿರವಾಗಿ ಇಟ್ಟು ಕೊಳ್ಳಬಹುದು. ಅದಕ್ಕಾಗಿ ನಿತ್ಯವೂ ಯೋಗಭ್ಯಾಸ ಮಾಡುವುದು ಒಳ್ಳೆಯದು. ಚಿಕ್ಕ ಮಕ್ಕಳಿದ್ದಾಗಲೇ ಇದಕ್ಕೆ ತೊಡಗಿಕೊಂಡಲ್ಲಿ ಬದಲಾದ ಜೀವನ ಶೈಲಿ ಮತ್ತು ಅದರಿಂದ ಉಂಟಾಗುವ ಸಮಸ್ಯೆಗಳಿಗೆ ಆರೋಗ್ಯ ಮನಸ್ಸು ಖಂಡಿತ ಹಾಳಾಗದಂತೆ ತಡೆಯಬಹುದು ಎಂದರು.
ಈ ವೇಳೆ ಯೋಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಇಓ ವಸಂತ್‌ಕುಮಾರ್, ನವೋದಯ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ್, ಅಭಿಜ್ಞಾ ಮಾಧುಸ್ವಾಮಿ, ಬಗರ್‌ಹುಕುಂ ಸಮಿತಿ ಸದಸ್ಯ ನಿರಂಜನ್, ಮುಖಂಡರಾದ ಕೇಶವಮೂರ್ತಿ, ಶಂಕರಣ್ಣ, ಬಸವರಾಜ್, ವಿನಯ್ ಪುರಸಭಾ ಸದಸ್ಯ ಶ್ಯಾಮ್, ಮಲ್ಲಿಕಾರ್ಜುನಸ್ವಾಮಿ, ಮಿಲಿಟರಿ ಶಿವಣ್ಣ, ಹಾಗು ವಿದ್ಯಾರ್ಥಿಗಳಿದ್ದರು.