ತೆಲಂಗಾಣ ಸಿಎಂ ತಮ್ಮ ರಾಜ್ಯದ ಸಮಸ್ಯೆ ಮರೆಮಾಚಲು ಇಂತ ಹೇಳಿಕೆ ನೀಡುತ್ತಿದ್ದಾರೆ : ಸಿಎಂ ಬೊಮ್ಮಾಯಿ
ರಾಯಚೂರು:ರಾಯಚೂರು ಜಿಲ್ಲೆಯನ್ನು ತೆಲಂಗಾಣಕ್ಕೆ ಸೇರ್ಪಡೆ ಮಾಡುವ ವಿಚಾರ ತೆಲಂಗಾಣ ಸಿಎಂ ಹೇಳಿಕೆ ಹಾಸ್ಯಾಸ್ಪದವಾಗಿದ್ದು ತಮ್ಮ ರಾಜ್ಯದ ಸಮಸ್ಯೆಗಳನ್ನು ಮರೆಮಾಚಲು ಈ ರೀತಿಯಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದುಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಅವರಿಂದು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಿರಿಧಾನ್ಯಗಳ ಸಮ್ಮೇಳನಕ್ಕೆ ಆಗಮಿಸಿ ವಿಶ್ವವಿದ್ಯಾಲಯದ ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಯಚೂರು ಜಿಲ್ಲೆಯಲ್ಲಿ ಶಾಖೋತ್ಪನ್ನ ಕೇಂದ್ರ ಚಿನ್ನದ ಗಣಿ, ಇಧಿಗ ವಿಮಾನ ನಿಲ್ದಾಣ ವಾಗುತ್ತಿವೆ ಅದೇ ರೀತಿ ಇನ್ನಷ್ಟು ಅಭಿವೃದ್ಧಿಗಳನ್ನು ಸಹಿಸದೇ ರಾಜಕೀಯ ಪ್ರೇರಿತವಾಗಿ ಜಿಲ್ಲೆಯನ್ನು ತೆಲಂಗಾಣಕ್ಕೆ ಸೇರಿಸುವ ತೆಲಂಗಾಣ ಮುಖ್ಯಮಂತ್ರಿಯವರ ಮಾತು ಹಾಸ್ಯಾಸ್ಪದವಾಗಿದ್ದು, ತೆಲಂಗಾಣದ ಸಮಸ್ಯೆಗಳನ್ನು ಮರೆಮಾಚಲು ಈ ರೀತಿಯ ಹೇಳಿಕೆಗಳನ್ನು ಅಲ್ಲಿನ ಮುಖ್ಯ ಮಂತ್ರಿ ನೀಡುತ್ತಿದ್ದಾರೆ. ತೆಲಂಗಾಣ ಹಿಂದುಳಿದ ರಾಜ್ಯವಾಗಿದ್ದು, ಮೊದಲು ಅವರು ತಮ್ಮ ರಾಜ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಅದು ಬಿಟ್ಟು ಈ ರೀತಿಯಾದ ವಿವಾದಾತ್ಮಕ ಹೇಳಿಕೆಯನ್ನು ನೀಡಬಾರದೆಂದರು.
2023ರ ವರ್ಷವನ್ನು ಸಿರಿಧಾನ್ಯಗಳ ವರ್ಷವೆಂಬ ಅಭಿಯಾನವನ್ನು ಕೇಂದ್ರ ಸರ್ಕಾರದಿಂದ ಕೈಗೊಳ್ಳಲಾಗಿದ್ದು ಈ ಕಾರ್ಯ ಕ್ರಮಕ್ಕೆ ರಾಯಚೂರು ಜಿಲ್ಲೆಯಿಂದಲೇ ಚಾಲನೆ ನೀಡಲಾಗುತ್ತಿದೆ. ಅದಕ್ಕಾಗಿ ಇಂದು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಹಾಗೂ ಶೋಭಾ ಕರಂದ್ಲಾಜೆ ಅವರು ಆಗಿಮಿಸಿದ್ದಾರೆ.
ಮುಂದಿನ ತಿಂಗಳು ರಾಯಚೂರಿನಲ್ಲಿ ನಿರ್ಮಾಣವಾಗುತ್ತಿರುವ ಏರ್ ಪೋರ್ಟ್ ಅಡಿಗಲ್ಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗು ವುದು ಅದರಂತೆ ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವಂತೆ ನಿರಂತರ ಹೋರಾಟಗಳು ನಡೆಯುತ್ತಿದ್ದು, ಈ ವಿಚಾರವಾಗಿ ರಾಯಚೂರಿ ನಲ್ಲಿ ಏಮ್ಸ್ ಸ್ಥಾಪಿಸುವಂತೆ ಕೇಂದ್ರಕ್ಕೆ ಒತ್ತಾಯಿಸಲಾಗಿದ್ದು ಕೇಂದ್ರದ ಸಮಿತಿ ರಾಜ್ಯದಲ್ಲಿ ಸರ್ವೆ ಮಾಡಿ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗಾಗಿ ರಾಯಚೂರು ಜಿಲ್ಲೆಗೆ ಏಮ್ಸ್ ನೀಡುವ ಸಾಧ್ಯತೆಗಳಿವೆ ಎಂದರು.
ರಾಯಚೂರಿನಲ್ಲಿ ಗುಳೆ ಹೋಗುವ ಪರಿಸ್ಥಿತಿ ಹೆಚ್ಚಾಗಿ ಕಂಡುಬರುತ್ತಿದೆ ಇದಕ್ಕೆ ಮುಖ್ಯ ಕಾರಣ ಇಲ್ಲಿನ ನೀರಾವರಿ ಹಾಗೂ ಉದ್ಯೋಗ ಸಮಸ್ಯೆ ಕೂಡಲೇ ಇಲ್ಲಿನ ಕೈಗಾರಿಕೆಗಳನ್ನು ವಿಸ್ತರಣೆ ಮಾಡಿ ರಾಜ್ಯದ ಕಾರ್ಯಕ್ರಮದಡಿ ಟೆಕ್ಸ್ ಟೈಲ್ ಪಾರ್ಕ್ ನಿರ್ಮಾಣ ಮಾಡಿ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ತಿಳಸಿದರು.
ಈ ಸಂದರ್ಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಡಾ.ಶಿವರಾಜ್ ಪಾಟೀಲ್, ದೇವದುರ್ಗ ಶಾಸಕ ಶಿವನಗೌಡ ನಾಯಕ, ಯಾದಗಿರಿ ಶಾಸಕ ರಾಜೂಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.