ಮೈಸೂರು ಮಹಾನಗರ ಪಾಲಿಕೆ: ಶಿವಕುಮಾರ್ ನೂತನ ಮೇಯರ್
ಮೈಸೂರು:ತೀವ್ರ ಕುತೂಹಲ ಮೂಡಿಸಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಪ್ರಕ್ರಿಯೆ ಮುಗಿದಿದ್ದು ಬಿಜೆಪಿಯ ಅಭ್ಯರ್ಥಿ ಶಿವಕುಮಾರ್ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಮೇಯರ್ ಸ್ಥಾನಕ್ಕಾಗಿ ಮೂರು ಪಕ್ಷಗಳಿಂದ ತೀವ್ರ ಪೈಪೋಟಿ ನಡೆದಿತ್ತು. ಕೊನೆಯ ಹಂತದವರೆಗೂ ಯಾವುದೇ ಪಕ್ಷಗಳು ತಮ್ಮ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಕೊನೆಗೆ ಬಿಜೆಪಿಗೆ ಮೈಸೂರಿನ ಮಹಾಪೌರ ಪಟ್ಟ ದೊರೆತಿದೆ.
ನಗರದ 47ನೇ ವಾರ್ಡ್‌ನ ಸದಸ್ಯ ಶಿವಕುಮಾರ್‌ ಮೇಯರ್ ಆಗಿ ನೇಮಕಗೊಂಡಿದ್ದಾರೆ. ಉಪಮೇಯರ್ ಆಗಬೇಕಿದ್ದ ಜೆಡಿಎಸ್‌ನ ರೇಷ್ಮಾ ಉಪಮೇಯರ್ ನಾಮಪತ್ರ ತಿರಸ್ಕೃತ ಗೊಂಡಿದ್ದರಿಂದ ಬಿಜೆಪಿಯ ಅಭ್ಯರ್ಥಿ ನಾಗೇಶ್‌ ಆಯ್ಕೆಯಾಗಿದ್ದಾರೆ.
ಮಂಗಳವಾರ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿತ್ತು. ಕಾಂಗ್ರೆಸ್ ನಿಂದ ಮೇಯರ್ ಸ್ಥಾನಕ್ಕೆ ಸಯ್ಯದ್ ಹಸ್ರತ್ ಉಲ್ಲಾ ಮತ್ತು ಗೋಪಿ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ.
ಉಪಮೇಯರ್ ಸ್ಥಾನಕ್ಕೆ ಶೋಭಾ ಸುನೀಲ್ ನಾಮಪತ್ರ ಸಲ್ಲಿಸಿದರೇ, ಜೆಡಿಎಸ್ ನಿಂದ ಮೇಯರ್ ಸ್ಥಾನಕ್ಕೆ ಕೆ. ವಿ ಶ್ರೀಧರ್ , ಉಪಮೇಯರ್ ಸ್ಥಾನಕ್ಕೆ ರೇಷ್ಮಾಭಾನು ನಾಮಪತ್ರ ಸಲ್ಲಿಸಿದ್ದರು.