ಬಿಜೆಪಿ ವಿರೋಧಿ ಅಲೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ:ಮಾಜಿ ಸಿಎಂ ಸಿದ್ದರಾಮಯ್ಯ
ತುರುವೇಕೆರೆ:ರಾಜ್ಯದಲ್ಲಿರುವ ಬಿಜೆಪಿ ವಿರೋಧಿ ಅಲೆಯನ್ನು ಕೇಂದ್ರದಿಂದ ಯಾರೇ ಬಂದರೂ ಕಡಿಮೆ ಮಾಡಲು ಆಗುವು ದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾಗಿ ಅಲೆ ಎದ್ದಿದ್ದು ಜನರು ಕಾಂಗ್ರೆಸ್‌ಗೆ ಮತ ನೀಡಲು ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ೫ ವರ್ಷದ ಆಡಳಿತವನ್ನು ಜನರು ನೆನಪಿಸಿಕೊಳ್ಳುತ್ತಿದ್ದು ಮತ್ತೊಮ್ಮೆ ಕಾಂಗ್ರೆಸ್‌ಗೆ ಮತ ನೀಡಲಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಆಗಲಿ, ಪ್ರಧಾನಿ ನರೇಂದ್ರ ಮೋದಿಯಾಗಲಿ ಯಾರೂ ಇದನ್ನು ಬದಲಿಸಲು ಸಾಧ್ಯವಿಲ್ಲ ಎಂದರು.
ಹಳೇ ಮೈಸೂರು ಭಾಗವನ್ನು ಮಾತ್ರ ಬಿಜೆಪಿಯವರು ಗುರಿಯಾಗಿಸಿಕೊಂಡಿದ್ದು ಅಲ್ಲಿನ ಜನರು ಬಿಜೆಪಿಗೆ ಮತ ನೀಡುವುದಿಲ್ಲ. ಬಿಜೆಪಿ ಸುಳ್ಳಿನ ಫ್ಯಾಕ್ಟರಿ ಎಂದು ಜನಕ್ಕೆ ಗೊತ್ತಾ ಗಿದ್ದು ೨೦೧೮ರಲ್ಲಿ ನೀಡಿದ್ದ ೬೦೦ ಭರವಸೆಗಳಲ್ಲಿ ಯಾವ ಮಾತನ್ನು ಸಹ ಉಳಿಸಿ ಕೊಂಡಿಲ್ಲ ಎಂದು ಕುಟುಕಿದರು.
ರಾಮ ಮಂದಿರವನ್ನು ನಮ್ಮ ಊರಿನಲ್ಲಿ ಕಟ್ಟಿಲ್ಲವೆ. ರಾಮ ಮಂದಿರವನ್ನು ಎಲ್ಲ ಊರಿನಲ್ಲಿಯೋ ಕಟ್ಟಿದ್ದಾರೆ. ರಾಮ ರಹೀಮ ಎಲ್ಲರೂ ಒಂದೇ ಗಾಂಧಿಜಿ ಹೇಳಿದ್ದರು. ಕಾಂಗ್ರೆಸ್‌ನಲ್ಲಿ ಲಕ್ಷಾಂತರ ಜನ ಕಾರ್ಯಕರ್ತರಿದ್ದಾರೆ. ಯಾರೋ ಒಬ್ಬರು ಹೋದರೆ ಹೋಗಲಿ. ಈ ತಿಂಗಳ ಕೊನೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದ್ದು ೧೫೦ ಅಭ್ಯರ್ಥಿಗಳು ಈ ಪಟ್ಟಿಯಲ್ಲಿ ಇರಲಿದ್ದಾರೆ ಎಂದರು.
ಮನಮೋಹನ್ ಸಿಂಗ್ ಇದ್ದಾಗ ಸಿದ್ದರಾಮಯ್ಯ ಅನುದಾನ ತರಲು ಆಗಲಿಲ್ಲ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಉತ್ತರಿಸಿ, ಆಹಾರ ಭದ್ರತೆ ಕಾಯ್ದೆ ತಂದವರು ಯಾರು . ನಾನು ಮುಖ್ಯಮಂತ್ರಿ ಆದ ಮೇಲೆ ಪ್ರಧಾನಿಯಾಗಿ ಇದ್ದಿದ್ದು ಒಂದೇ ವರ್ಷ. ಈ ಒಂಬತ್ತು ವರ್ಷ ಅಧಿಕಾರದಲ್ಲಿ ಇದ್ದವರು ಏನೇನು ಕೊಟ್ಟಿದ್ದಾರಂತೆ, ೧೫ನೇ ಹಣಕಾಸಿನ ಆಯೋಗದಲ್ಲಿ ೫೪೯೫ ಕೋಟಿ ರು. ವಿಶೇಷ ಅನುದಾನ ನೀಡಲಾಗಿತ್ತು. ಈ ಅನುದಾನ ಬಂತಾ ಎಂದು ಪ್ರಶ್ನಿಸಿದರು.
ಅಧಿವೇಶನದಲ್ಲಿ ಸಿದ್ದರಾಮಯ್ಯ ಮಹದಾಯಿ ಬಗ್ಗೆ ಮಾತನಾಡಿಲ್ಲ ಎಂಬ ವಿಚಾರಕ್ಕೆ ಉತ್ತರಿಸಿ ಅಸೆಂಬ್ಲಿ ಇನ್ನೊಂದು ವಾರ ಮಾಡಬೇಕಿತ್ತು. ಆದರೆ, ಯಾಕೆ ಮೊಟಕುಗೊಳಿಸಿದರು. ಜಗದೀಶ್ ಶೆಟ್ಟರ್ ಮಹದಾಯಿ ಬಗ್ಗೆ ಮಾತನಾಡಿದ್ದಾರಾ ಅವರಿಗೆ ನೈತಿಕತೆ ಇದೆಯಾ ಎಂದು ಕಿಡಿಕಾರಿದರು. ಕರ್ನಾಟಕಕ್ಕೆ ಒಂದು ಹನಿ ನೀರು ಕೊಡಲ್ಲ ಎಂಬ ಸೋನಿಯಾ ಗಾಂಧಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಆ ಮಾತನ್ನು ಅವರು ಗೋವಾದಲ್ಲಿ ಹೇಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಅದು ಗೋವಾ ಚುನಾವಣೆ ಸಂದರ್ಭ ದಲ್ಲಿ ಮಾತನಾಡಿರುವುದು ಎಂದರು.
ಈ ವೇಳೆ ಮುಖಂಡರಾದ ಜಯಚಂದ್ರ, ರಾಜಣ್ಣ, ಷಡಕ್ಷರಿ, ಬೈರತಿ ಸುರೇಶ್, ಮಧುಬಂಗಾರಪ್ಪ ಚೌದ್ರಿರಂಗಪ್ಪ, ಬಿ.ಎಸ್.ವಸಂತಕುಮಾರ್, ಬೆಮೆಲ್ ಕಾಂತರಾಜು ಇದ್ದರು.
 - 