 : ಧರ್ಮಸ್ಥಳ ಸಂಸ್ಥೆಯಿಂದ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ
ಗುಬ್ಬಿ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಜನರ ಆರ್ಥಿಕ ಸಬಲತೆಯ ಜೊತೆಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು.
ಪಟ್ಟಣದ ಎಸ್‌ಸಿಎಸ್ ಲ್ಯಾಣ ಮಂಟಪದಲ್ಲಿ ನಡೆದ 68 ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ, ಕ್ಷೇತ್ರಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದ್ದು. ಚತುರ್ದಾನಗಳಿಗೆ ಹೆಸರುವಾಸಿ ಯಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪ್ರಾರಂಭವಾಗಿ 42 ವರ್ಷಗಳ ಕಳೆದಿದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿರುವ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಾದ ಕೆರೆ ಪುನಶ್ಚೇತನ, ವಾತ್ಸಲ್ಯ ಮನೆ, ಅತಿಥಿ ಶಿಕ್ಷಕರ ನೇಮಕಾತಿ, ಪರಿಸರ ಸಂರಕ್ಷಣೆ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮ ಗಳನ್ನು ಮಾಡಲಾಗುತ್ತಿದೆ ಎಂದರು.
ಎಸ್ ಬಿ ಐ ಬ್ಯಾಂಕ್ ಸಹ ವ್ಯವಸ್ಥಾಪಕರಾದ ಚಿನ್ನ ಮಾತನಾಡಿ ಎಸ್ ಬಿ ಐ ಬ್ಯಾಂಕಿನ ಪ್ರತಿನಿಧಿಯಾಗಿ ಆರ್ ಬಿ ಐ ನ ನಿಬಂಧನೆಗಳ ಪ್ರಕಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಿಸುತ್ತಿದ್ದು. ಇದುವರೆಗೆ ಗುಬ್ಬಿ ತಾಲೂಕಿನಲ್ಲಿ 2982 ಸಂಘದ ಖಾತೆಗಳನ್ನು ತೆರೆಯಲಾಗಿದೆ.84 ಕೋಟಿ ಸಾಲವನ್ನು ನೀಡಲಾಗಿದೆ ಎಂದರು.
ಜನಜಾಗೃತಿ ವೇದಿಕೆ ಸದಸ್ಯ ಶಿವಕುಮಾರ್ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗುಬ್ಬಿ ತಾಲೂಕಿಗೆ ಬಂದು ಸುಮಾರು 13 ವರ್ಷಗಳಾಗಿದ್ದು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಈ ವರ್ಷವೂ ಸಹ 2 ವಾತ್ಸಲ್ಯ ಮನೆ ನಿರ್ಮಾಣ, ಅತಿಥಿ ಶಿಕ್ಷಕರ ನೇಮಕವನ್ನು ಮಾಡಲಾಗಿದೆ ಯೋಜನೆಯಿಂದ ಹಲವಾರು ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ದೊರೆಯುತ್ತಿದ್ದು, ನಿರ್ಗತಿಕರಿಗೆ ಮಾಸಾಶನ ನೀಡಲಾಗುತ್ತಿದೆ.ಸರ್ಕಾರ ಮಾಡದ ಹಲವಾರು ಸಮುದಾಯ ಅಭಿವೃದ್ಧಿ ಕಾರ್ಯಗಳನ್ನ ಪರಮಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವುದು ಶ್ಲಾಘನೀಯ.ಎಲ್ಲ ಒಕ್ಕೂಟ ಪದಾಧಿಕಾರಿಗಳು ಮತ್ತು ಸಂಘದ ಸದಸ್ಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನೀಡುತ್ತಿರುವ ಸೌಲಭ್ಯ ಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಆರ್ಥಿಕ ಸ್ವಾವಲಂಬಿಗಳಾಗಿ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ರಾಜೇಶ್. ಎಸ್, ಎಸ್ ಬಿ ಐ ಬ್ಯಾಂಕ್ ರೀಜಿನಲ್ ಮ್ಯಾನೇಜರ್ ಶಂಕರ್ ಮಿಶ್ರ, ಚೀಫ್ ಮೆನೇಜರ್ ಶಾಲಿನಿ, ಒಕ್ಕೂಟ ಪದಾಧಿಕಾರಿಗಳು, ಮೇಲ್ವಿಚಾರಕರು, ಕಚೇರಿ ಸಿಬ್ಬಂದಿಗಳು, ಸಿ ಎಸ್ ಸಿ ಸೇವಾದಾರರು ಹಾಗೂ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.
ಇದನ್ನೂ ಓದಿ: : ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ರಾಜ್ಯಮಟ್ಟದ ಮಹಾಧಿವೇಶನ
