ಆಗಸ್ಟ್​ 20ಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ
ಬೆಂಗಳೂರು
ದೇಶದಲ್ಲೇ ಕರ್ನಾಟಕವು ನೂತನ ರಾಷ್ಟ್ರೀಯ ಶಿಕ್ಷಣ ನೀತಿ-ಎನ್ಇಪಿ-2019 ನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲಿರುವ ಮೊದಲ ರಾಜ್ಯಗಳಲ್ಲಿ ಒಂದಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ನೂತನ ರಾಷ್ಟ್ರೀಯ ನೀತಿ ಅನುಮೋದನೆಗೊಂಡ ನಂತರ ಕರಡು ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಅಧ್ಯಕ್ಷರಾದ ಡಾ. ಕೆ. ಕಸ್ತೂರಿರಂಗನ್ ಅವರೊಂದಿಗೆ ವೆಬಿನಾರ್ ಮೂಲಕ ಮಾತನಾಡಿದ ಅವರು, ವಿವಿಧ ಸ್ತರಗಳ, ನಾನಾ ಅಂತರಗಳಿರುವ ಈ ರಾಷ್ಟ್ರದ ಎಲ್ಲರಿಗೂ ಅನ್ವಯವಾಗಬಹುದಾದ ನೂತನ ಶಿಕ್ಷಣ ನೀತಿಯನ್ನು ಶ್ರಮವಹಿಸಿ ರೂಪಿಸಿದ್ದಕ್ಕೆ ಕಸ್ತೂರಿರಂಗನ್ ಅವರಿಗೆ ಕರ್ನಾಟಕ ಸರ್ಕಾರದ ಪರವಾಗಿ ಧನ್ಯವಾದ ಅರ್ಪಿಸಿದರು.
ಕರ್ನಾಟಕ ನನ್ನ ರಾಜ್ಯ.  ಕೇರಳ ನನ್ನ ಜನ್ಮಭೂಮಿಯಾಗಿದ್ದರೂ ಕರ್ನಾಟಕ ನನ್ನ ಕರ್ಮಭೂಮಿ, ಕರ್ನಾಟಕ ನನ್ನ ರಾಜ್ಯ ಎಂದು ಹೆಮ್ಮೆಯಿಂದ ಹೇಳಿದ ಕಸ್ತೂರಿರಂಗನ್, ಭಾರತ ದೇಶ ವಿವಿಧ ರೀತಿಯ ಸಾಮಾಜಿಕ, ಭಾಷೆ, ಧರ್ಮ, ಸಂಸ್ಕೃತಿ, ಗ್ರಾಮೀಣ, ನಗರ, ಗುಡ್ಡಗಾಡು, ಅಭಿವೃದ್ಧಿ ಹೊಂದಿದ, ಹಿಂದುಳಿದ ಪ್ರದೇಶಗಳಂತಹ ಹಲವು ಸ್ತರಗಳ ಪ್ರದೇಶಗಳನ್ನೊಳಗೊಂಡಿದ್ದು, ಮುಂದಿನ 20 ವರ್ಷಗಳಲ್ಲಿ ದೇಶವು ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು. ತಾವು ಕರ್ನಾಟಕದಲ್ಲಿ ಕಳೆದ ದಿನಗಳನ್ನು ಸ್ಮರಿಸಿಕೊಂಡ ಕಸ್ತೂರಿ ರಂಗನ್, ನಾಡಿನ ಶೈಕ್ಷಣಿಕ ಅಭಿವೃದ್ಧಿಯ ನಿಟ್ಟಿನಲ್ಲಿ ತಮ್ಮ ಉತ್ಸುಕತೆ, ಆಸಕ್ತಿ ಮೆಚ್ಚುವಂತಹದ್ದಾಗಿದ್ದು, ಕರ್ನಾಟಕ ಈಗಾಗಲೇ ಶೈಕ್ಷಣಿಕವಾಗಿ ಇಡೀ ದೇಶದಲ್ಲೇ ಮಂಚೂಣಿಯಲ್ಲಿರುವುದನ್ನು ರಾಷ್ಟ್ರ ಗಮನಿಸಿದೆ ಎಂದರು ಶ್ಲಾಘನೆ ವ್ಯಕ್ತಪಡಿಸಿದರು.