ವಿಶ್ವವಾಣಿ ವಿಶೇಷ: ನ್ಯಾಯಾಂಗ ಸಮಿತಿಯ ವರದಿಯೇ ಅಂತಿಮವಲ್ಲ
ಚಾಮರಾಜನಗರ ಆಕ್ಸಿಜನ್ ಕೊರತೆ ಪ್ರಕರಣದ ವರದಿ ಕುರಿತು ವಿಭಾಗೀಯ ಪೀಠ ಅಭಿಮತ
ಬೆಂಗಳೂರು:ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ24ಜನರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಸಮಿತಿ ನೀಡಿದ್ದ ವರದಿಯೇ ಅಂತಿಮವಲ್ಲ, ಅದನ್ನು ಪರಾಮರ್ಶಿಸಲು ಅವಕಾಶವಿದೆ ಎಂದು ವಿಭಾಗೀಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಸಂಬಂಧ ವಿಚಾರಣೆ ನಡೆಸುತ್ತಿರುವ ವಿಭಾಗೀಯ ಪೀಠದ ಮುಂದೆ ಗುರುವಾರ ವಿಚಾರಣೆ ನಡೆಯುತ್ತಿ ದ್ದ ವೇಳೆ ನ್ಯಾಯಪೀಠ, ವರದಿ ಅಂತಿಮ ಎಂದು ಹೇಳಲು ಸಾಧ್ಯವಿಲ್ಲ, ಅದನ್ನು ಪರಾಮರ್ಶಿಸಬಹುದು. ಆದರೆ, ಈ ಕುರಿತು ಚರ್ಚಿಸುವ ಬದಲು ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ನೀಡುವ ಪರಿಹಾರ ಹೆಚ್ಚಿಸುವ ಬಗ್ಗೆ ಸರಕಾರದ ನಿಲುವೇನು ಎಂದು ಪ್ರಶ್ನೆ ಮಾಡಿದೆ.
ಪ್ರಕರಣದಲ್ಲಿ ಮೃತಪಟ್ಟ 24 ಜನರ ಕುಟುಂಬಸ್ಥರಿಗೆ ಸರಕಾರ ಈಗಾಗಲೇ ತಲಾ ಎರಡು ಲಕ್ಷ ರು.ಗಳ ಪರಿಹಾರ ಘೋಷಣೆ ಮಾಡಿದೆ. ಈ ಮೊತ್ತವನ್ನು ಮತ್ತಷ್ಟು ಹೆಚ್ಚಳ ಮಾಡುವ ಸಂಬಂಧ ವಿಚಾರಣೆ ನಡೆಯುತ್ತಿದೆ. ಈ ವೇಳೆ ನ್ಯಾಯಪೀಠ ಪರಿಹಾರದಮೊತ್ತ ಹೆಚ್ಚಳ ಸಾಧ್ಯವಿದೆಯೇ ಎಂದು ಪ್ರಶ್ನೆ ಮಾಡಿದೆ. ಜತೆಗೆ, ನ್ಯಾಯಾಂಗ ಸಮಿತಿ ನೀಡಿದ ವರದಿಯನ್ನು ಪ್ರಶ್ನೆಮಾಡಲೇ ಬಾರದು ಎಂದೇನಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಈ ಮೂಲಕ ಚಾಮರಾಜನಗರ ಜಿಲ್ಲಾಧಿಕಾರಿ ಮತ್ತು ಆಸ್ಪತ್ರೆ ವೈದ್ಯರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದ ವರದಿಯೇ ಅಂತಿಮ ಎಂಬಂತೆ ಬಿಂಬಿಸಿದ್ದ ವರದಿ ಪರಾಮರ್ಶಿಸುವಂತೆ ಮಾಡಿದೆ.
ಭೇಟಿ ನೀಡದೆ ವರದಿಈ ನಡುವೆ ಸರಕಾರ ಸಮಿತಿಯಿಂದ ಚಾಮರಾಜನಗರ ಜಿಲ್ಲೆಗೆ ಭೇಟಿಯಾಗದೆ ವರದಿ ನೀಡಿದ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು,ವೇಣು ಗೋಪಾಲ್ ಗೌಡ ಅವರ ಕಮಿಟಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿಲ್ಲ, ಆಸ್ಪತ್ರೆಯ ಡೀನ್, ಜಿಲ್ಲಾ ಶಸ್ತ್ರಚಿಕಿತ್ಸ ಕರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹ ಮಾಡಿಲ್ಲ. ಹೀಗೆ ಯಾರ ಅಭಿಪ್ರಾಯವನ್ನೂ ಪಡೆಯದೆ ವಿಚಾರಣೆ ಕೈಗೊಂಡು, ಅವರನ್ನು ತಪ್ಪಿತಸ್ಥರನ್ನಾಗಿ ಮಾಡಲಾಗಿದೆ ಎಂಬ ಆಕ್ಷೇಪಣೆಗೆ ವರದಿ ಪರಾಮರ್ಶೆ ಮಾಡಲೇಬಾರದು ಎಂದು ಹೇಳಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಜತೆಗೆ, ಸರಕಾರ ಡೆತ್ ಆಡಿಟ್‌ನಲ್ಲಿ3ಜನರು ಮಾತ್ರ ಆಮ್ಲಜನಕದ ಕೊರತೆಯಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದ್ದರೂ,ಮಾನವೀಯ ನೆಲೆಯಲ್ಲಿ24ಜನರಿಗೆ ಪರಿಹಾರ ನೀಡಲಾಗಿದೆ ಎಂದು ಸರಕಾರ ವಾದಿಸಿತ್ತು.
ಸಿಂಧೂರಿಗೆ ಕ್ಲೀನ್‌ಚಿಟ್ ಕತೆ ಏನು?ವರದಿಯೇ ಅಂತಿಮವಲ್ಲ ಎಂಬುವುದಾದರೆ, ಹಿಂದಿನ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರಿಗೆಪ್ರಕರಣದಲ್ಲಿ ಕ್ಲಿನ್ ಚಿಟ್ ನೀಡಿ, ಚಾಮರಾಜನಗರ ಜಿಲ್ಲಾಧಿಕಾರಿ ಮತ್ತು ಜಿಲ್ಲಾಸ್ಪತ್ರೆಯ ವೈದ್ಯರೇ ತಪ್ಪಿತಸ್ಥರು ಎಂದು ಬಿಂಬಿಸ ಲಾಗಿದ್ದ ವರದಿಗಳು ಸುಳ್ಳು ಎಂಬುದು ಸಾಬೀತಾದಂತಾಗಿದೆ. ವರದಿ ಅಂತಿಮವಲ್ಲ ಎಂಬ ಅಭಿಪ್ರಾಯವನ್ನು ನ್ಯಾಯ ಪೀಠವೇ ವ್ಯಕ್ತಪಡಿಸಿದ್ದು, ಆ ಮೊದಲೇ ಕೆಲವರನ್ನು ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದಿದ್ದಾರೆ ಎಂಬಂತೆ ಬಿಂಬಿಸುವುದು ಕೂಡ ಸರಿಯಲ್ಲ ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ರೋಹಿಣಿ ಸಿಂಧೂರಿ ಅವರು ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದುಕೊಂಡಿದ್ದಾರೆ ಎಂಬಂತೆ ಬಿಂಬಿಸಲಾಗುತ್ತಿತ್ತು. ಇದೀಗ ನ್ಯಾಯಾಲಯದ ಆಭಿಪ್ರಾಯದನ್ವಯ ಅವರ ಕ್ಲೀನ್ ಚಿಟ್ ಕತೆ ಏನು ಎನ್ನಲಾಗುತ್ತಿದೆ.