ಶ್ರದ್ಧೆಯಿಂದ ಓದಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ
ಸಿರವಾರ:ಸರ್ಕಾರಿ ಶಾಲೆಯ ಮಕ್ಕಳು ಬಹುಮುಖ ಪ್ರತಿಭೆ ಹೊಂದಿರುತ್ತಾರೆ. ಶಿಸ್ತು, ಶ್ರದ್ಧೆಯಿಂದ ಓದುವ ಮೂಲಕ ಹೆಚ್ಚಿನ ಅಂಕ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ರಾಯಚೂರು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾದ ದೇವಿಕಾ ಆರ್. ಸಲಹೆ ನೀಡಿದರು.
ತಾಲೂಕಿನ ಸಣ್ಣಹೊಸೂರು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 260 ಕ್ಕೂ ಹೆಚ್ಚು ಮಕ್ಕಳಿಗೆ ಬಳ್ಳಾರಿಯ ಸ್ಪಿಕ್ ಲಿ. ಮತ್ತು ಗ್ರೀನ್ ಸ್ಟಾರ್ ಫರ್ಟಿಲೈಜರ್ಸ್ ಲಿ. ವತಿಯಿಂದ ನೋಟ್‌ಬುಕ್ ಮತ್ತು ಜಾಮಿಟ್ರಿ ಬಾಕ್ಸ್ ವಿತರಿಸಿ ಮಾತನಾಡಿದ ಅವರು, ಸ್ಪಿಕ್ ಸಂಸ್ಥೆಯು 53 ವರ್ಷಗಳಿಂದಲೂ ರೈತರಿಗೆ ರಸಗೊಬ್ಬರ ಮಾರಾಟ ಮಾಡುವುದರ ಜತೆಗೆ ಸಮಾಜಮುಖಿ ಕಾರ್ಯ ಮಾಡುತ್ತಿದೆ ಎಂದು ಹೇಳಿ ದರು.
ಮಾನ್ವಿ ಸಹಾಯಕ ಕೃಷಿ ನಿರ್ದೇಶಕ ಹುಸೇನ್ ಸಾಹೇಬ್ ಮಾತನಾಡಿ, ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿತೊಡಗಿಸಿಕೊಳ್ಳಬೇಕೆಂದು ಹೇಳಿದರು. ರೈತರಿಗೆ ಗೊಬ್ಬರಗಳ ಉಪಯೋಗಗಳ ಬಗ್ಗೆ ವಿವರಿಸಿದರು. ಸ್ಪಿಕ್ ಸಂಸ್ಥೆಯು ಸಣ್ಣ ಹೊಸೂರು ಶಾಲೆಯನ್ನು ಆಯ್ಕೆ ಮಾಡಿಕೊಂಡು ಮಕ್ಕಳಿಗೆ ನೋಟ್‌ಬುಕ್, ಜಾಮಿಟ್ರಿ ಬಾಕ್ಸ್ ವಿತರಿಸಿದ್ದಕ್ಕಾಗಿ ಸರ್ಕಾರಿ ನೌಕರರ ಸಂಘದ ಸಿರವಾರ ಘಟಕದ ಅಧ್ಯಕ್ಷ ಅಯ್ಯನಗೌಡ್ರು ಐರೆಡ್ಡಿ, ಶಾಲೆಯ ಮುಖ್ಯೋಪಾಧ್ಯಾಯ ನಾಗಪ್ಪ ವಾಲೀಕರ್ ಸಂತಸ ವ್ಯಕ್ತ ಪಡಿಸಿದರು.
ಶಾಲೆಯ ಎಸ್‌ಡಿಸಿಎಂಸಿ ಅಧ್ಯಕ್ಷ ಲಿಂಗರಾಜಗೌಡ ಅತ್ತನೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಪಿಕ್ ಲಿ. ಕಂಪನಿಯ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ಶ್ರೀನಿವಾಸ್ ಕೆ. ಕಂಪನಿಯ ಬಗ್ಗೆ ವಿವರಿಸಿದರು.
ಶಿಕ್ಷಕ ನಾಗರಾಜ್ ನಿರೂಪಣೆ ಮಾಡಿದರು. ಮರೆಣ್ಣ ಎಂ.ಗುಜರಾಣಿ ವಂದಿಸಿದರು. ಸಂಸ್ಥೆಯ ಚಂದ್ರಕುಮಾರ್, ಶಿವಶಂಕರ್ ಹಾಗೂ ಗ್ರಾಮದ ಹಿರಿಯರಾದ ಅಮರೇಶಗೌಡ, ಎಸ್ಡಿಎಂಸಿ ಸದಸ್ಯರಾದ ಶರಣಬಸವ ಹುಡೇದ್, ಯಲ್ಲಪ್ಪ ಪೂಜಾರಿ, ಡಾ.ಅಮರೇಶ, ಲಿಂಗಣ್ಣ ದೊರೆ, ಚಂದ್ರಶೇಖರ್, ರೈತರು, ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.