ಕರ್ತಾರ್‌ಪುರ ಕಾರಿಡಾರ್‌: ಹಂಗಾಮಿ ಅಧಿಕಾರಿ ನೇಮಕ
ಲಾಹೋರ್‌: ಕರ್ತಾರ್‌ಪುರ ಕಾರಿಡಾರ್ ವ್ಯವಹಾರ ನಿರ್ವಹಣೆಗೆ ಪಾಕಿಸ್ತಾನ ಸರ್ಕಾರ ತಾತ್ಕಾಲಿಕವಾಗಿ ಮೂರು ತಿಂಗಳ ಅವಧಿಗೆ ಅಧಿಕಾರಿಯನ್ನು ನೇಮಿಸಿದೆ.
ಪಾಕಿಸ್ತಾನದ ಅಲ್ಪಸಂಖ್ಯಾತ ಸಮುದಾಯದ ಧಾರ್ಮಿಕ ಸ್ಥಳಗಳ ನಿರ್ವಹಣೆ ಹೊಣೆ ಹೊತ್ತಿರುವ ನಿರ್ವಸಿತರ ಟ್ರಸ್ಟ್ ಆಸ್ತಿ ಮಂಡಳಿಯು(ಇಟಿಪಿಬಿ) ಮೂರು ತಿಂಗಳ ಅವಧಿಗೆ ಕರ್ತಾರ್‌ಪುರ ಕಾರಿಡಾರ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ನೇಮಕ ಕುರಿತು ಬುಧವಾರ ಅಧಿಸೂಚನೆ ಹೊರಡಿಸಿತ್ತು.
ಇಟಿಪಿಬಿ ಹೆಚ್ಚುವರಿ ಕಾರ್ಯದರ್ಶಿ ಸನಾವುಲ್ಲಾ ಖಾನ್ ಅವರಿಗೆ ಮೂರು ತಿಂಗಳ ಕಾಲ ಕರ್ತಾರ್‌ಪುರ ಕಾರಿಡಾರ್ ಯೋಜನೆ ನಿರ್ವಹಣಾ ಘಟಕದ ಸಿಇಒ ಜವಾಬ್ದಾರಿ ವಹಿಸ ಲಾಗಿದೆ.
ಸಿಖ್‌ ಧರ್ಮದ ಸ್ಥಾಪಕ ಗುರುನಾನಕ್‌ ದೇವ್‌ ಅವರು ಅಂತಿಮ ಕ್ಷಣಗಳನ್ನು ಕಳೆದ ಸ್ಥಳ ಪಾಕಿಸ್ತಾನದ ಗುರುದ್ವಾರ ದರ್ಬಾರ್‌ ಸಾಹಿಬ್‌ನಿಂದ ಭಾರತದ ಪಂಜಾಬ್‌ನಲ್ಲಿರುವ ಗುರುದಾಸ್‌ಪುರ ಜಿಲ್ಲೆಯ ದೇರಾ ಬಾಬಾ ನಾನಕ್‌ ದೇಗುಲಕ್ಕೆ ಈ ಕರ್ತಾರ್‌ಪುರ ಕಾರಿಡಾರ್ ಸಂಪರ್ಕ ಕಲ್ಪಿಸುತ್ತದೆ.