ಅನಕ್ಷರತೆ ನಿರ್ಮೂಲನೆಗೆ ವರದಾನ ‘ಪಢನಾ – ಲಿಖನಾ’
ರಾಜ್ಯದ ಎಲ್ಲ ಅನಕ್ಷರಸ್ಥರು, ನವಸಾಕ್ಷರರು ಹಾಗೂ ಅರ್ಧಕ್ಕೆ ಶಿಕ್ಷಣವನ್ನು ಸ್ಥಗಿತಗೊಳಿಸಿದವರಿಗೆ ಶಿಕ್ಷಣದ ಅವಕಾಶ ಕಲ್ಪಿಸುವಲ್ಲಿ ಲೋಕ ಶಿಕ್ಷಣನಿರ್ದೇಶನಾಲಯ ಕಾರ್ಯನಿರ್ವಹಿಸುತ್ತಿದೆ.
ಅನಕ್ಷರಸ್ಥರಿಗೆ ಶಿಕ್ಷಣ ನೀಡಿ ಸಾಕ್ಷರರನ್ನಾಗಿಸುವಲ್ಲಿ ಕೇಂದ್ರ ಸರಕಾರದಿಂದಲೂ ಹಲವು ಮಹತ್ವದ ಅಭಿಯಾನಗಳನ್ನು, ಯೋಜನೆಗಳನ್ನು ಘೋಷಿಸ ಲಾಗುತ್ತಿದೆ. ಇಂಥ ಮಹತ್ವದ ಯೋಜನೆಗಳಲ್ಲಿ ಇದೀಗ ಬಹಳಷ್ಟು ನಿರೀಕ್ಷೆಗಳನ್ನು ಮೂಡಿಸಿರುವ ಅಭಿಯಾನ ‘ಪಢನಾ – ಲಿಖನಾ’.ಕೇಂದ್ರ ಸರಕಾರ ಪ್ರಾಯೋಜಿತ ಈ ಓದು – ಬರಹ ಅಭಿಯಾನಕ್ಕೆ ರಾಜ್ಯದಲ್ಲಿ ಏ.೨ರಿಂದ ಚಾಲನೆ ದೊರೆಯಲಿದೆ.
ಈ ಹಿಂದೆ ವಯಸ್ಕರ ಶಿಕ್ಷಣ ಮೂಡಿಸಿದಂಥ ಬದಲಾವಣೆಯನ್ನು ಇಂಥ ಅಭಿಯಾನದ ಮೂಲಕ ಮತ್ತೊಮ್ಮೆ ಕಾಣಬಹುದು. ರಾಜ್ಯದಲ್ಲಿ ಗುರುತಿಸ ಲಾಗಿದ್ದ೧.೨೬ಕೋಟಿ ಅನಕ್ಷರಸ್ಥರಲ್ಲಿ ಈಗಾಗಲೇ೫೭ಲಕ್ಷ ಜನರನ್ನು ಸಾಕ್ಷರರನ್ನಾಗಿಸಲಾಗಿದೆ. ಉಳಿದಿರುವವರನ್ನು ಸಾಕ್ಷರರನ್ನಾಗಿಸಲು ಇದೀಗ ಕೇಂದ್ರ ಸರಕಾರದ ಶಿಕ್ಷಣ ನೀತಿಯ ಆಶಯದಂತೆ ಈ ಅಭಿಯಾನವನ್ನು ರೂಪಿಸಲಾಗಿದೆ.
೨೦೨೧ರ ಮೇ ತಿಂಗಳ ಒಳಗೆ೩.೨೦ಲಕ್ಷ ಅನಕ್ಷರಸ್ಥರನ್ನು ಸಾಕ್ಷರಸ್ಥರನ್ನಾಗಿಸಲು ಆಶಿಸಲಾಗಿದೆ.೧೫- ೫೦ವರ್ಷದ೨.೪ಲಕ್ಷ ಮಹಿಳೆಯರು ಹಾಗೂ೮೦ಸಾವಿರ ಪುರುಷರಿಗೆ ಅಕ್ಷರ ಕಲಿಸುವುದು ಈ ಅಭಿಯಾನದ ಉದ್ದೇಶ. ರಾಜ್ಯದ ರಾಯಚೂರು, ಯಾದಗಿರಿ, ಕಲಬುರಗಿ, ವಿಜಯಪುರ, ಚಾಮರಾಜ ನಗರ ಜಿಲ್ಲೆಗಳ೪ತಾಲೂಕು,೨೧೯ಗ್ರಾಪಂ ಹಾಗೂ೧೯ನಗರಗಳಲ್ಲಿ ಈ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ.
ಶೀಘ್ರದಲ್ಲಿ ಚಾಲನೆ ದೊರೆಯಲಿರುವ ಈ ಮಹತ್ವದ ಅಭಿಯಾನವನ್ನು ಅನಕ್ಷರಸ್ಥರು ಸದುಪಯೋಗ ಪಡಿಸಿಕೊಳ್ಳಬೇಕಿರುವುದು ಪ್ರಮುಖ ಜವಾಬ್ದಾರಿ. ಪ್ರಸ್ತುತ ದಿನಗಳಲ್ಲಿ ಮಕ್ಕಳ ಪಾಲನೆಗೆ ಪೋಷಕರಿಗೂ ಶಿಕ್ಷಣ ಅನಿವಾರ್ಯವಾಗುತ್ತಿರುವ ಇಂದಿನ ದಿನಗಳಲ್ಲಿ ಅನಕ್ಷರತೆ ನಿರ್ಮೂಲನೆಗೆ ಈ ಅಭಿಯಾನ ಮಹತ್ವದ್ದಾಗಿದೆ.