ಪರೀಕ್ಷಾ ಅಕ್ರಮ ತಡೆಗೆ ಕಠಿಣ ಕಾನೂನು ಸ್ವಾಗತಾರ್ಹ
ನೀಟ್ ಮತ್ತು ನೆಟ್ ಪರೀಕ್ಷೆಯಲ್ಲಾದ ಲೋಪಗಳು ಪರೀಕ್ಷಾ ವ್ಯವಸ್ಥೆಯ ಬಗ್ಗೆಯೇ ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ. ಎನ್‌ಟಿಎ ಏಜೆನ್ಸಿಯ ವಿಶ್ವಾಸಾ ರ್ಹತೆಗೆ ಬಲವಾದ ಪೆಟ್ಟು ಕೊಟ್ಟಿವೆ. ಪರೀಕ್ಷೆಗಳಿಗೆ ಸಿದ್ಧರಾಗಲು ವಿದ್ಯಾರ್ಥಿಗಳು ಬಹಳಷ್ಟು ಸಮಯ, ಶಕ್ತಿ ಮತ್ತು ಹಣವನ್ನು ವ್ಯಯಿಸುತ್ತಾರೆ. ಕೆಲವು ವಿದ್ಯಾರ್ಥಿಗಳು ಯಾವುದೇ ಕೋಚಿಂಗ್ ಪಡೆಯದೆ ತಿಂಗಳುಗಳ ಕಾಲ ತಾವಾಗಿಯೇ ಅಧ್ಯಯನ ನಡೆಸಿರುತ್ತಾರೆ. ಅವರು ಎರಡನೆಯ ಬಾರಿ ಪರೀಕ್ಷೆ ಬರೆಯುವಂತಹ ಪರಿಸ್ಥಿತಿ ಸೃಷ್ಟಿಸುವುದು, ಅವರು ಮಾನಸಿಕವಾಗಿ ಸಂಕಟ ಅನುಭವಿಸುವಂತೆ ಮಾಡುವುದು ಎಷ್ಟರಮಟ್ಟಿಗೆ ಸರಿ? ಪರೀಕ್ಷೆ ನಡೆಸಲು ಅಗತ್ಯವಿರುವ ಅತ್ಯುತ್ತಮ ತಂತ್ರeನ ಲಭ್ಯವಿರು ವಾಗ ಎನ್‌ಟಿಎ ಅಥವಾ ಇತರ ಯಾವುದೇ ಸಂಸ್ಥೆಗೆ ಲೋಪರಹಿತವಾದ ಪರೀಕ್ಷೆ ನಡೆಸಲು ಸಾಧ್ಯ ವಾಗಬೇಕು.
ಸರಿಯಾದ ಯೋಜನೆ ಇದ್ದಲ್ಲಿ, ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಲ್ಲಿ ಲೋಪಗಳಿಗೆ ಆಸ್ಪದ ಇಲ್ಲದಂತೆ ಪರೀಕ್ಷೆ ನಡೆಸಲು ಸಾಧ್ಯವಿದೆ. ಈಗಎದುರಾಗಿರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಿ, ಅವು ಮುಂದೆ ಮತ್ತೆ ಎದುರಾಗದಂತೆ ನೋಡಿಕೊಳ್ಳಬೇಕು. ಈಗಾಗಲೇ ನೆಟ್ ಪರೀಕ್ಷೆಯಲ್ಲಾದಲೋಪಗಳ ಕುರಿತು ತನಿಖೆ ಮಾಡಲು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ. ಪ್ರಕರಣದ ತನಿಖೆಯೂ ಪ್ರಗತಿಯಲ್ಲಿದ್ದು, ಈಗಾಗಲೇ ಕೆಲವ ರನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ.
ಇದರ ಹಿಂದೆ ಬಹುದೊಡ್ಡ ಜಾಲವೇ ಇದ್ದಂತಿದೆ. ಹಾಗಾಗಿ ತಪ್ಪೆಸಗಿದ ಎಲ್ಲರನ್ನೂ ಪತ್ತೆ ಹಚ್ಚಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು. ಆ ಮೂಲಕ ಮತ್ತೆ ಯಾರೂ ಇಂತಹ ಪ್ರಯತ್ನಕ್ಕೆ ಕೈ ಹಾಕದಂತೆ ಸಂದೇಶ ರವಾನಿಸಬೇಕು. ಈ ನಡುವೆ ಕೇಂದ್ರ ಸರಕಾರ ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮ ತಡೆಗೆ ಜೂ.೨೧ ರಿಂದಲೇ ಪೂರ್ವಾನ್ವಯವಾಗುವಂತೆ ಕಠಿಣ ಕಾನೂನನ್ನು ದೇಶಾದ್ಯಂತ ಜಾರಿ ಮಾಡಿದ್ದು ಸ್ವಾಗತಾರ್ಹ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ಎಸಗಿದ ವರಿಗೆ ಕನಿಷ್ಠ ೫ ವರ್ಷದಿಂದ ಗರಿಷ್ಠ ೧೦ ವರ್ಷಗಳ ಸೆರೆವಾಸ ಮತ್ತು ಗರಿಷ್ಠ ೧ ಕೋಟಿ ರು.ವರೆಗೂ ದಂಡ ವಿಧಿಸಲು ನೂತನ ಕಾಯಿದೆ ಯಲ್ಲಿ ಅವಕಾಶವಿದೆ. ಈ ಕಾಯಿದೆ ಕಟ್ಟುನಿಟ್ಟಾಗಿ ಜಾರಿಯಾಗಲಿ. ಆ ಮೂಲಕ ಪರೀಕ್ಷಾ ಅಕ್ರಮ ಗಳಿಗೆ ಕಡಿವಾಣ ಬೀಳಲಿ.