ಕಲ್ಲಿದ್ದಲು ಕೊರತೆ: ತಪ್ಪಿಸಬೇಕಿದೆ ಹೊರೆ
ದೇಶಾದ್ಯಂತ ಈಗ ವಿದ್ಯುತ್ ಅಭಾವದ ಭೀತಿ ಉಂಟಾಗಿದೆ. ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ಕೊರತೆ ಈ ವಿದ್ಯುತ್ ಬಿಕ್ಕಟ್ಟು ಉದ್ಭವವಾಗಲು ಮುಖ್ಯ ಕಾರಣಎನ್ನಲಾಗಿದೆ. ದೇಶದಲ್ಲಿನ ಕಲ್ಲಿದ್ದಲು ಸಂಗ್ರಹದಲ್ಲಿ ಭಾರಿ ಕುಸಿತವಾಗಿದೆ.
೧೩೫ ಕಲ್ಲಿದ್ದಲು ವಿದ್ಯುತ್ ಸ್ಥಾವರಗಳಲ್ಲಿ ಅರ್ಧಕ್ಕೂ ಹೆಚ್ಚಿನ ಘಟಕಗಳಲ್ಲಿ ಕಲ್ಲಿದ್ದಲು ಸಂಗ್ರಹ ಬಹುತೇಕ ಖಾಲಿಯಾಗಿದೆ. ದೇಶದ ಶೇ.೭೦ರಷ್ಟು ವಿದ್ಯುತ್ ಉತ್ಪಾದನೆ ಕಲ್ಲಿದ್ದಲು ಘಟಕಗಳನ್ನೇ ಅವಲಂಬಿಸಿರುವು ದರಿಂದ ಭಾರತದ ಆರ್ಥಿಕತೆ ಮೇಲೆ ಇದು ಭಾರಿ ದೊಡ್ಡ ಹೊಡೆತವಾಗಿದೆ. ವಿದ್ಯುತ್‌ಗೆ ಉಂಟಾಗಿರುವಅಽಕ ಬೇಡಿಕೆ ಕೂಡ ಕಲ್ಲಿದ್ದಲಿನ ಅಭಾವಕ್ಕೆ ಪ್ರಮುಖ ಕಾರಣ.
ಜಗತ್ತಿನ ನಾಲ್ಕನೇ ಅತಿ ದೊಡ್ಡ ಕಲ್ಲಿದ್ದಲು ಸಂಗ್ರಹಗಳನ್ನು ಹೊಂದಿದ್ದರೂ, ಭಾರತ ವಿಶ್ವದಲ್ಲಿಯೇ ಎರಡನೇ ಅತಿ ಹೆಚ್ಚಿನ ಕಲ್ಲಿದ್ದಲು ಆಮದುದಾರ ದೇಶವಾಗಿದೆ. ವಿದ್ಯುತ್ ಘಟಕಗಳು ಹೆಚ್ಚಾಗಿ ಈ ಆಮದು ಕಲ್ಲಿದ್ದಲನ್ನೇ ಅವಲಂಬಿಸಿವೆ. ಆದರೆ ಈಗ ಭಾರತದಲ್ಲಿ ಹೊರತೆಗೆಯುವ ಕಲ್ಲಿದ್ದಲಿನ ಮೇಲೆ ಅತಿ ಅವಲಂಬನೆ ಮಾಡು ವಂತಾಗಿದೆ. ಈ ಒತ್ತಡ ಒಟ್ಟಾರೆ ಕಲ್ಲಿದ್ದಲು ಉತ್ಪಾದನೆ, ಪೂರೈಕೆ ಮೇಲೆ ಪರಿಣಾಮ ಬೀರಿದೆ. ಅಲ್ಲದೆ, ಈ ಬಾರಿ ಕಲ್ಲಿದ್ದಲಿನ ದರ ಸಾರ್ವಕಾಲಿಕ ತುಟ್ಟಿಯಾಗಿದೆ.
ಎರಡು ತಿಂಗಳಲ್ಲಿಯೇ ಜಾಗತಿಕ ಕಲ್ಲಿದ್ದಲು ಬೆಲೆ ಶೇ.೪೦ರಷ್ಟು ದುಬಾರಿಯಾಗಿದೆ. ಒಂದು ಕಂಪನಿ ದುಬಾರಿ ಮೊತ್ತಕ್ಕೆ ಕಲ್ಲಿದ್ದಲು ಆಮದು ಮಾಡಿಕೊಂಡರೆ ವಿದ್ಯುತ್ ದರವನ್ನೂ ಹೆಚ್ಚಿಸಬೇಕಾಗುತ್ತದೆ. ಉದ್ಯಮದಲ್ಲಿ ಕೊನೆಯದಾಗಿ ಈ ಎಲ್ಲ ವೆಚ್ಚಗಳನ್ನು ಹೇರುವುದು ಗ್ರಾಹಕರ ಮೇಲೆಯೇ. ಇದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾದ ಎರಡೂ ಬಗೆಯ ಹಣದುಬ್ಬರದ ಪರಿಣಾಮ ಎದುರಾಗಬಹುದು. ಈ ಬಿಕ್ಕಟ್ಟು ಮುಂದುವರಿದರೆ, ವಿದ್ಯುತ್ ದರ ಬಲು ದುಬಾರಿಯಾಗಲಿದೆ. ಇದರಿಂದ ಜನಸಾಮಾನ್ಯರಿಗೆ ಮತ್ತೊಂದು ಬರೆ ಬೀಳಲಿದೆ. ಈಗಾಗಲೇ ಇಂಧನದಿಂದ ಹಿಡಿದು ಆಹಾರ ಉತ್ಪನ್ನಗಳವರೆಗೆ ಬೆಲೆ ಏರಿಕೆಯ ಬಿಸಿ ಅನುಭವಿಸುತ್ತಿರುವ ಜನರು, ಈ ಆಘಾತವನ್ನು ತಡೆದುಕೊಳ್ಳುವುದು ಸುಲಭವಲ್ಲ.
ಆದ್ದರಿಂದ ಕಲ್ಲಿದ್ದಲು ಅವಲಂಬಿತ ವಿದ್ಯುತ್ ಉತ್ಪಾದನೆಗೆ ಪರ್ಯಾಯವಾಗಿ ವಿದ್ಯುತ್ ಉತ್ಪಾದಿಸುವ ಮಾರ್ಗಗಳ ಚೇತರಿಕೆಗೆ ಕ್ರಮ ಕೈಗೊಳ್ಳಬೇಕಿದೆ. ಆಮೂಲಕ ಜನರ ಜೇಬಿಗೆ ಮತ್ತಷ್ಟು ಬರೆ ಬೀಳುವುದನ್ನು ತಪ್ಪಿಸಬೇಕಿದೆ.