ಬೆಳೆಗೆ ಬೆಂಕಿ: ಮುಂಜಾಗ್ರತೆ ವಹಿಸಿ
ಬೇಸಿಗೆ ಆರಂಭವಾಗುತ್ತಿದ್ದಂತೆ ಬೆಳೆಗಳಿಗೆ ಬೆಂಕಿ ಅವಘಡಗಳು ನಿತ್ಯ ಸಂಭವಿಸುತ್ತಲೇ ಇವೆ. ಬಿಸಿಲಿನ ತಾಪ ಏರಿಕೆಯಾಗುತ್ತಿದ್ದಂತೆ ಅಗ್ನಿ ಅವಘಡಗಳ ಪ್ರಮಾಣವೂ ಹೆಚ್ಚಾಗುತ್ತಿದೆ. ಇದರಿಂದಾಗಿ ರೈತರು ಜತನದಿಂದ ಬೆಳೆದ ಬೆಳೆ ಕ್ಷಣಮಾತ್ರದಲ್ಲಿ ಬೆಂಕಿಗೆ ಆಹುತಿಯಾಗಿ ನಷ್ಟ ಅನುಭವಿಸುವಂತಾಗಿದೆ.ಬೇಸಿಗೆಯಲ್ಲಿ ಕಬ್ಬು, ಮೆಕ್ಕೆಜೋಳದ ರವದಿ, ಭತ್ತ, ಹುಲ್ಲಿನ ಬಣವೆ, ತೊಗರಿ ಬಣವೆ ಹಾಗೂ ಅಡಕೆ, ತೆಂಗು, ಮಾವಿನ ತೋಟಗಳಿಗೆ ಸಾಮಾನ್ಯವಾಗಿ ಬೆಂಕಿ ತಗಲುತ್ತದೆ.
ಕಬ್ಬು ಬೆಳೆಗೆ ಬೆಂಕಿ ತಗಲುವ ಪ್ರಮಾಣ ಹೆಚ್ಚು. ಕಬ್ಬಿನ ಸೂಲಂಗಿ ವಿದ್ಯುತ್ ಲೈನ್‌ಗೆ ತಗುಲಿ ಬೆಂಕಿ ಅವಘಡ ಗಳು ಉಂಟಾಗುತ್ತವೆ. ಸಾಮಾನ್ಯವಾಗಿ ವಿದ್ಯುತ್ ಲೈನ್‌ಗಳನ್ನು ೨೦ ಅಡಿ ಎತ್ತರದಲ್ಲಿ ಹಾಕಲಾಗಿರುತ್ತದೆ. ಆದರೆ, ಕಬ್ಬಿನ ಸೂಲಂಗಿ ೨೨ ಅಡಿಗೂ ಹೆಚ್ಚು ಎತ್ತರಕ್ಕೆ ಬೆಳೆಯುತ್ತವೆ. ಅವು ವಿದ್ಯುತ್ ಲೈನ್‌ಗೆ ತಗುಲಿ ಶಾರ್ಟ್ ಸರ್ಕಿಟ್ ಉಂಟಾಗುತ್ತದೆ. ಇನ್ನು ಜನರು ಸಂಚರಿಸುವ ಜಾಗದಲ್ಲಿ ವಿವಿಧ ಕಾರಣಗಳಿಂದ ಬೆಂಕಿ ಹೊತ್ತಿಕೊಳ್ಳುತ್ತದೆ.
ಧೂಮಪಾನಿಗಳು ಉರಿಸಿ ಬಿಸಾಡಿದ ಬೆಂಕಿ ಕಡ್ಡಿ, ಬೀಡಿ, ಸಿಗರೇಟ್ ನಿಂದಲೂ ಒಣ ಹುಲ್ಲಿಗೆ ಬೆಂಕಿ ಹೊತ್ತಿ ಕೊಳ್ಳುತ್ತದೆ. ಅದು ಜಮೀನಿಗೆ ವ್ಯಾಪಿಸುತ್ತದೆ. ಅಲ್ಲದೆ ಕೆಲವೆಡೆ ವಿದ್ಯುತ್ ಲೈನ್‌ಗಳು ಜಮೀನಿನ ಒಳಗೇ ಹಾದುಹೋಗಿರುತ್ತವೆ. ಆಗ ಅಗ್ನಿ ಅವಘಡಗಳ ಸಂಭವ ಹೆಚ್ಚಿರುತ್ತದೆ. ಮಳೆಗಾಲದಲ್ಲಿ ಅತಿವೃಷ್ಟಿ, ಅನಾ ವೃಷ್ಟಿಯಿಂದ ರೈತರು ಬೆಳೆ ಕೆಳೆದುಕೊಂಡರೆ ಬೇಸಿಗೆಯಲ್ಲಿ ಬೆಂಕಿ ಅನಾಹುತದಿಂದ ಬೆಳೆ ನಷ್ಟ ಅನುಭವಿಸು ವಂತಾಗಿದೆ. ಹೀಗಾಗಿ ರೈತರು ತಮ್ಮ ಬೆಳೆ ರಕ್ಷಣೆ ಮಾಡಿಕೊಳ್ಳಲು ವಿವಿಧ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಅಗತ್ಯ. ಬೆಂಕಿ ರೇಖೆ ಇದಕ್ಕೊಂದು ಪರಿಹಾರ. ರಸ್ತೆ ಬದಿಯಲ್ಲಿ ತೋಟವಿದ್ದರೆ ರೈತರು ಬೆಂಕಿ ರೇಖೆ ನಿರ್ಮಿಸಿಕೊಳ್ಳುವುದು ಒಳಿತು.
ರಸ್ತೆ ಬದಿಯಲ್ಲಿರುವ ಒಣ ಹುಲ್ಲು, ಕಸಕಡ್ಡಿಗಳನ್ನು ಒಟ್ಟು ಸೇರಿಸಿ ಬೆಂಕಿ ಹಚ್ಚಿ ಸುಟ್ಟುಹಾಕುವ ಮೂಲಕ ಅಲ್ಲಿ ದಹ್ಯ ವಸ್ತುಗಳು ಇಲ್ಲದಂತೆ ಮಾಡ ಬೇಕು. ಗಿಡಗಳ ಸುತ್ತಲೂ ಬೆಳೆದು ಒಣಗಿಹೋದ ಉಲ್ಲು, ಕಳೆಗಿಡಗಳನ್ನು ಸುಡಬೇಕು. ಇದರಿಂದ ಬೆಂಕಿ ಪಸರಿಸುವುದನ್ನು ತಡೆಗಟ್ಟಬಹುದು. ಬೆಂಕಿ ಹೊತ್ತಿಕೊಳ್ಳಲು ಉರುವಲುಗಳೇ ಇಲ್ಲದಿರುವಾಗ ಬೆಂಕಿ ಹೊತ್ತಿಕೊಳ್ಳುವ ಅಪಾಯವೇ ಇರುವುದಿಲ