ವಾಯು ಮಾಲಿನ್ಯ; ಎಚ್ಚರಿಕೆ ಗಂಟೆ
ಉದ್ಯಾನನಗರಿ, ಹಸಿರು ನಗರಿ ಎಂಬ ಪಟ್ಟ ಹೊಂದಿದ ಬೆಂಗಳೂರಿನ ಜನರು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾರ್ಗಸೂಚಿಗಳಲ್ಲಿ ಇರುವು ದಕ್ಕಿಂತಲೂ ಐದು ಪಟ್ಟು ಕೆಟ್ಟದಾದ ಗಾಳಿಯನ್ನು ಉಸಿರಾಡುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಬೆಂಗಳೂರಿನ ಜನರು ನೆಮ್ಮದಿಯಾಗಿ ಉಸಿರಾಡುವುದಕ್ಕೂ ಕಷ್ಟವಾಗಲಿದೆ ಎಂದು ವರದಿಯೊಂದು ಹೇಳಿದ್ದು, ಬೆಂಗಳೂರಿಗರಿಗೆ ಇದೊಂದು ಎಚ್ಚರಿಕೆ ಗಂಟೆಯಾಗಿದೆ.
ವಾಹನಗಳ ದಟ್ಟಣೆ, ರಸ್ತೆಯ ಧೂಳು, ನಿರ್ಮಾಣ ಹಂತದ ಕಟ್ಟಡಗಳ ಧೂಳಿನಿಂದ ನಗರದ ಹಲವು ಭಾಗಗಳಲ್ಲಿ ದಿನದಿಂದ ದಿನಕ್ಕೆ ಗಣನೀಯಮಟ್ಟದಲ್ಲಿ ವಾಯು ಹದಗೆಡುತ್ತಿದೆ. ನಿತ್ಯ ಇದೇ ಕಲುಷಿತ ಗಾಳಿಯನ್ನು ಸೇವಿಸುತ್ತಿರುವವವರು ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಸಾರಿಗೆವಲಯ, ಕೈಗಾರಿಕಾ ಘಟಕಗಳು, ಕಸ, ತ್ಯಾಜ್ಯ ಸುಡುವುದು ಮುಂತಾದವು ವಾಯು ಮಾಲಿನ್ಯದ ಮುಖ್ಯ ಮೂಲಗಳು. ನಾವು ಇರುವ ಪರಿಸರದಪ್ರತಿ ಕ್ಯುಬಿಕ್ ಮೀಟರ್ ಪ್ರದೇಶದಲ್ಲಿ ಮಾಲಿನ್ಯಕ್ಕೆ ಕಾರಣವಾಗುವ ಪಿಎಂ ೨.೫ ಸೂಕ್ಷ್ಮಾಣು ಕಣಗಳ ಪ್ರಮಾಣ ೫ ಮೈಕ್ರೊಗ್ರಾಂಗಿಂತ ಹೆಚ್ಚಿಗೆ ಇರಬಾರದು. ಹೆಚ್ಚಿದ್ದರೆ ಅದನ್ನು ಕಡಿಮೆ ಮಾಡಲು ಕ್ರಮಗಳನ್ನು ಕೈಗೊಳ್ಳಬೇಕು.
ನಾವೇ ನೋಡುತ್ತಿರುವಂತೆ, ಒಂದೆರಡು ದಶಕಗಳ ಹಿಂದೆ ಉದ್ಯಾನವನಗಳ ಪಟ್ಟಣವಾಗಿದ್ದ, ಕೆರೆಗಳ ನಗರಿಯಾಗಿದ್ದ, ನಿವೃತ್ತರ ಸ್ವರ್ಗವೆನಿಸಿದ್ದ, ಸಮಶೀತೋಷ್ಣ ವಾತಾವರಣ ಹೊಂದಿದ್ದ ಬೆಂಗಳೂರು ಇಂದು ಗಿಜಿಗುಟ್ಟುವ ಟ್ರಾಫಿಕ್, ಕೆರೆಗಳ ಒತ್ತುವರಿಯ, ವಿಲೇವಾರಿ ಯಾಗದ ಕಸದ ರಾಶಿಗಳನ್ನು ಹೊಂದಿದ, ಮುಗಿಯದ ರಸ್ತೆ ಕಾಮಗಾರಿಗಳಿಂದ ಸದಾ ಏಳುತ್ತಿರುವ ಧೂಳಿನ ಸ್ವರ್ಗವಾಗಿದೆ. ಹದತಪ್ಪಿದ ಅಧಿಕಾರಶಾಹಿ, ಅಂಕೆಯೇ ಇಲ್ಲದ ರಿಯಲ್ ಎಸ್ಟೇಟ್ ಮಾಫಿಯಾ, ಧನ ದಾಹದ ಜನಪ್ರತಿನಿಽಗಳಿಂದಾಗಿ ನರಕವಾಗುತ್ತಿದೆ.
ಇದನ್ನು ತಡೆಯದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಸರಕಾರ ಮತ್ತು ನಾಗರಿಕ ಸಮಾಜ ಕೂಡಲೇ ಎಚ್ಚರಗೊಂಡರೆ ಮಾತ್ರ ಮಾಲಿನ್ಯ ತಗ್ಗಿಸಿ, ಮುಂದಿನ ತಲೆಮಾರನ್ನು ಅನಾರೋಗ್ಯದ ಕೂಪದಿಂದ ರಕ್ಷಿಸಲು ಸಾಧ್ಯ. ಇದಕ್ಕೆ ಹಲವು ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಬೇಕಿದೆ. ಪೆಟ್ರೋಲಿಯಂ ಬಳಕೆ ಕಡಿಮೆ ಮಾಡಿ ಶುದ್ಧ ಇಂಧನಕ್ಕೆ ಪರಿವರ್ತನೆ, -ಕ್ಟರಿಗಳಿಂದ ಆಗುವ ಮಾಲಿನ್ಯ ತಡೆಗೆ ಕಟ್ಟುನಿಟ್ಟಾದ ಮಾರ್ಗಸೂಚಿ ಜಾರಿ, ಕೆರೆಗಳಿಗೆ ಮತ್ತೆ ಜೀವ ಕೊಡುವುದು, ಪಾರ್ಕುಗಳನ್ನು ಹೆಚ್ಚಿಸುವುದು, ಅರಣ್ಯೀಕರಣ, ಒತ್ತುವರಿ ತೆರವು ಆಗಬೇಕು