ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿ
ಕೇರಳದಲ್ಲಿ ಕೋವಿಡ್ ಉಪ ತಳಿ ಜೆಎನ್ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದೆ. ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿಕಾಸಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶನಿವಾರ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ.
ಕರ್ನಾಟಕದಲ್ಲಿ ಈವರೆಗೆ ೫೮ ಕೋವಿಡ್ ಪಾಸಿಟಿವ್ ಕೇಸ್ ದಾಖಲಾಗಿವೆ. ಇದರೊಂದಿಗೆ ಮತ್ತೆ ಕರೋನಾ ಆತಂಕದ ದಿನಗಳು ಮರಳುವ ಸೂಚನೆ ಕಂಡುಬರುತ್ತಿದೆ. ಆದರೆ ಈ ಬಾರಿ ಕೋವಿಡ್ ಲಸಿಕೆ ಇರುವುದರಿಂದ ತೀರಾ ಆತಂಕಪಡುವ ಅಗತ್ಯವಿಲ್ಲ. ಹೀಗಾಗಿ ಮೊದಲ ಅಲೆ, ಎರಡನೇ ಅಲೆಗಳು ಸೃಷ್ಟಿಸಿದ ಅನಾಹುತವನ್ನು ಈ ಬಾರಿ ಕೋವಿಡ್ ಸೃಷ್ಟಿಸದು ಎಂಬ ಧೈರ್ಯವನ್ನು ತಾಳಬಹುದು. ಆದರೆ ಮುನ್ನೆಚ್ಚರಿಕೆ ಅತ್ಯಂತ ಅಗತ್ಯ. ಇಂದು ಸಾರ್ವಜನಿಕ ಸ್ಥಳಗಳಲ್ಲಿ ಯಾರೂ ಮಾ ಧರಿಸುತ್ತಿಲ್ಲ.
ಸ್ಯಾನಿಟೈಸರ್ ಹಾಗೂ ಮಾ ಬಳಕೆ ಮಾಯವಾಗಿದೆ. ಪ್ರತಿಯೊಂದನ್ನೂ ಸರಕಾರ ಹೇಳಿಯೇ ಮಾಡಿಸಬೇಕಿಲ್ಲ. ಜನತೆ ತಮ್ಮ ಆರೋಗ್ಯದ ಜಾಗ್ರತೆಯನ್ನುತಾವೇ ಮಾಡಬೇಕು. ತುಂಬಾ ಜನಜಂಗುಳಿ ಸೇರಿದಾಗ ಮಾಸ್ಕ್ ಧರಿಸುವುದು ಸೂಕ್ತ. ಹಾಗೆಯೇ ಹೊರಗೆ ಹೋಗಿ ಬಂದ ಬಳಿಕ ಸ್ಯಾನಿಟೈಸರ್ ಬಳಸು ವುದು, ಕೈಗಳನ್ನು ತೊಳೆದುಕೊಳ್ಳುವುದು, ಕೈಗಳಿಂದ ಮುಖ ಸವರಿ ಕೊಳ್ಳದಿರುವುದನ್ನೂ ರೂಢಿ ಮಾಡಿಕೊಳ್ಳುವುದು ಸದಾ ಕಾಲಕ್ಕೂ ಉತ್ತಮಆರೋಗ್ಯ ಪ್ರಜ್ಞೆ. ಇನ್ನು ಸರಕಾರ ಕೂಡ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ.
ಕೋವಿಡ್ ನಿರ್ವಹಣೆಗೆ ಅಗತ್ಯ ಬಿದ್ದರೆ ಒಂದು ಟಾಸ್ಕ್ ಫೋರ್ಸ್ ರಚಿಸಬೇಕು. ಆಸ್ಪತ್ರೆಗಳಲ್ಲಿ ನ್ಯೂನತೆ ಕಂಡು ಬಂದರೆ ಸರಿಪಡಿಸಬೇಕು. ಕೋವಿಡ್ ಪರೀಕ್ಷೆ ಕಿಟ್‌ಗಳು ಲಭ್ಯವಿರಬೇಕು. ಪ್ರಕರಣಗಳು ಹೆಚ್ಚಿದರೆ ಅವರ ಚಿಕಿತ್ಸೆಗೆ ಪ್ರತ್ಯೇಕ ಜಾಗ ನಿಗದಿಪಡಿಸಬೇಕು. ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ ತಜ್ಞರಿಂದ ಸಲಹೆಗಳನ್ನು ಪಡೆಯಬೇಕು. ಅಗತ್ಯ ಬಿದ್ದಾಗ ಸಾರ್ವಜನಿಕರಿಗೆ ಮಾರ್ಗಸೂಚಿಗಳನ್ನು ಹೊರಡಿಸಬೇಕು.
ಹೊರರಾಜ್ಯದ ಪ್ರಯಾಣಿಕರ ಮೇಲೆ ಸೂಕ್ತ ಸಮಯದಲ್ಲಿ ನಿಗಾ ಇಡುವುದು, ತಪಾಸಣೆ ಮಾಡುವುದು ಅಗತ್ಯ. ಮುಂದಿನ ದಿನಗಳಲ್ಲಿ ಕೋವಿಡ್‌ನಂತಹಸಾಂಕ್ರಾಮಿಕಗಳು ಮತ್ತೆ ಮತ್ತೆ ಬರಲಿವೆ ಎಂದು ತಜ್ಞರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಆರೋಗ್ಯ ಸೇವಾ ವ್ಯವಸ್ಥೆಯನ್ನು ಸಮಗ್ರವಾಗಿ ಬಲಪಡಿಸಬೇಕಿದೆ.