ಬೆಳಕಿನ ಹಬ್ಬದಲ್ಲಿ ಮಹತ್ವದ ಬದಲಾವಣೆ
ಬೆಳಕಿನ ಮಹತ್ವ ಸಾರುವುದೇ ದೀಪಾವಳಿಯ ಆಶಯ. ಹಬ್ಬದ ಆಶಯ ಸಾಕಾರಗೊಳಿಸುವಲ್ಲಿ ಈ ಬಾರಿ ಎರಡು ಮಹತ್ವದಬದಲಾವಣೆಗಳನ್ನು ಕಾಣಬಹುದು. ಮೊದಲನೆಯದಾಗಿ ರಾಜ್ಯದಲ್ಲಿ ಪಟಾಕಿ ನಿಷೇಧಿಸಿ ಸುರಕ್ಷಿತ ದೀಪಾವಳಿ ಆಚರಣೆಗೆ ಕರೆ ನೀಡಿರುವುದು. ಈ ಮೂಲಕ ಮಾಲಿನ್ಯ ನಿಯಂತ್ರಣ ಹಾಗೂ ಆರೋಗ್ಯ ಸುರಕ್ಷತೆಗೆ ಆದ್ಯತೆ ಒದಗಿಸಿರುವುದು. ಮತ್ತೊಂದು ಮಹತ್ವದ ಬೆಳವಣಿಗೆ ಎಂದರೆ ಕರೋನಾ ನಿರ್ಮೂಲನೆ ನಿವಾರಣೆ ನಿಟ್ಟಿನಲ್ಲಿ ಲಸಿಕೆಗಳು ಲಭ್ಯವಾಗುವ ನಿರೀಕ್ಷೆ ಹುಟ್ಟಿಸಿರು ವುದು.
ಪ್ರಯೋಗ ಹಂತದಲ್ಲಿರುವ ಕೋವಿಶೀಲ್ಡ್ ಲಸಿಕೆ ಯಶಸ್ವಿಯಾಗುವುದಾಗಿ ಭರವಸೆ ದೊರೆತಿರುವ ಹಿನ್ನೆಲೆಯಲ್ಲಿ ಪುಣೆಯ ಸೀರಂಇನ್ಸ್‌ಟಿಟ್ಯೂಟ್ ಲಸಿಕೆ ವಿತರಣೆಗೆ ಸಾಕಷ್ಟು ಸಿದ್ಧತೆಗಳನ್ನು ಆರಂಭಿಸಿದೆ. ಉತ್ಪಾದನೆಯಲ್ಲಿ ಶೇ.50ರಷ್ಟು ಪ್ರಮಾಣವನ್ನು ಭಾರತಕ್ಕೆ ಹಾಗೂ ಶೇ.50ರಷ್ಟು ಬಡ ದೇಶಗಳಿಗೆ ವಿತರಿಸಲು ಚಿಂತನೆ ನಡೆದಿದೆ. ಈಗಾಗಲೇ ಮೂರನೆ ಹಂತದ ಪ್ರಯೋಗದ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದ್ದು, ಡಿಸೆಂಬರ್ ವೇಳೆಗೆ ಅನುಮತಿ ದೊರೆಯಬಹುದೆಂಬ ನಿರೀಕ್ಷೆಯನ್ನು ಹೊಂದಿದೆ ಸೀರಂ ಇನ್ಸ್‌ಟಿಟ್ಯೂಟ್.
ಮೊದಲ ಹಂತದಲ್ಲಿ ಕರೋನಾ ವಾರಿಯರ‍್ಸ್ ಸೇರಿದಂತೆ 30 ಕೋಟಿ ಆದ್ಯತಾ ವಲಯಕ್ಕೆ ಲಸಿಕೆ ವಿತರಣೆಗಾಗಿ ಪ್ರಯತ್ನಗಳು ಆರಂಭಗೊಂಡಿವೆ. ಲಾಕ್ ಡೌನ್‌ನಂಥ ಗಂಭೀರ ಸ್ಥಿತಿಯಿಂದ ಹೊರಬಂದು ಇದೀಗ ಸಂಭ್ರಮದಿಂದ ದೀಪಾವಳಿಯನ್ನು ಆಚರಿಸುತ್ತಿರುವ ವೇಳೆಗೆ ಕರೋನಾ ನಿವಾರಣೆಗೆ ಲಸಿಕೆ ಪ್ರಯೋಗಗಳು ಮೂರನೆ ಹಂತಪೂರ್ಣಗೊಳಿಸಿರುವುದು ಭರವಸೆಮೂಡಿಸಿದೆ.
ಇದೇ ವೇಳೆ ದೇಶದ ಆರ್ಥಿಕ ಪ್ರಗತಿಯಲ್ಲಿಯೂ ಏರಿಕೆ ಕಂಡುಬರುತ್ತಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ ಲಾಕ್‌ಡೌನ್ ನಂತರದ ಜನಜೀವನದ ಸುಧಾರಣೆಯಲ್ಲಿ ದೀಪಾವಳಿ ಮಹತ್ವದ ಬದಲಾವಣೆಗಳನ್ನು ಮೂಡಿಸಿದೆ.