ಅಭಿವೃದ್ದಿಗೆ ಮಹತ್ವದ ಕೊಡುಗೆ
ಕರೋನಾ ಸಂದರ್ಭದಲ್ಲಿ ವಿದೇಶಿ ಸಂಸ್ಥೆಗಳು ಭಾರತದಲ್ಲಿ ಹೂಡಿಕೆಗೆ ಆಸಕ್ತಿ ತೋರುತ್ತಿವೆ ಎನ್ನುವ ಸಂಗತಿಯೇ ಪ್ರತಿಷ್ಠೆಯಾಗಿ ಪರಿಣಮಿಸಿತ್ತು.
ಆದರೆ ಇದೀಗ ಬಜೆಟ್‌ನಲ್ಲಿ ದೇಶಿಯ ಉತ್ಪಾದನೆಗೆ ಹೆಚ್ಚಿನ ಆದ್ಯತೆ ದೊರೆತಿರುವುದು ದೇಶಿಯ ಉತ್ಪಾದಕರಿಗೆ ಮಾತ್ರವಲ್ಲದೆ, ಭಾರತೀಯರೆಲ್ಲರೂ ನಮ್ಮದೆ ದೇಶದ ಗುಣಮಟ್ಟದ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಕ್ಷೇತ್ರಕ್ಕೆ೧೫,೭೦೦ಕೋಟಿ ಅನುದಾನವನ್ನು ಘೋಷಿಸಲಾಗಿದೆ. ಆತ್ಮ ನಿರ್ಭರ ಭಾರತದ ಆಶಯಗಳು ಈಡೇರುವಂಥ ಈ ಸುಸಂದರ್ಭದ ದಿನಗಳಲ್ಲಿ ದೇಶದ ಪ್ರಗತಿಗೆ ರಾಜ್ಯದ ಕೊಡುಗೆಯೂ ಹೆಚ್ಚಿದೆ.
ದೇಶದ ಯುದ್ಧ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳ ಉತ್ಪಾದನೆಯಲ್ಲಿ ಶೇ.೬೭ರಷ್ಟು ಕೊಡುಗೆ ಕರ್ನಾಟಕದ್ದಾಗಿದೆ ಎಂಬುದು ಹೆಮ್ಮೆಯ ಸಂಗತಿ. ದೇವನಹಳ್ಳಿಯಲ್ಲಿ೧೪,೭೦೦ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಏರೋಸ್ಪೇಸ್ ಪಾರ್ಕ್‌ನಿಂದ೧೦,೫೦೦ಉದ್ಯೋಗವೂ ಸೃಷ್ಟಿಯಾಗಲಿವೆ.
ವೈಮಾನಿಕ ಕ್ಷೇತ್ರ ಮಾತ್ರವಲ್ಲದೆ, ಆಟಿಕೆ ಉತ್ಪಾದನೆಯಲ್ಲೂ ದೇಶಿಯ ಉತ್ಪಾದನೆ ಹೆಚ್ಚಿಸಲು ಈಗಾಗಲೇ ಟಾಯ್ ಕ್ಲಸ್ಟರ್ ಆರಂಭದ ಪ್ರಕ್ರಿಯೆಯೂ ಮುಂದುವರಿದಿದೆ.೨೦೨೩ರ ವೇಳೆಗೆ ಈ ಟಾಯ್ ಕ್ಲಸ್ಟರ್೨೩೦೦ಕೋಟಿ ರು. ವ್ಯವಹಾರ ನಡೆಸಲಿದೆ. ಇವೆಲ್ಲವು ದೇಶದ ಪ್ರಗತಿಗೆ ಪೂರಕವಾದ ರಾಜ್ಯದ ಕೊಡುಗೆಗಳು. ಈಗಾಗಲೇ ತಂತ್ರಜ್ಞಾನ ಕ್ಷೇತ್ರ ಹಾಗೂ ಸ್ಟಾರ್ಟಪ್‌ಗಳ ಬೆಳವಣಿಗೆಯಿಂದ ದೇಶದಲ್ಲಿ ಕರ್ನಾಟಕ ಹೆಗ್ಗಳಿಕೆಯನ್ನು ಗಳಿಸಿಕೊಂಡಿದ್ದು, ಇದೀಗ ವೈಮಾನಿಕ ಕ್ಷೇತ್ರ ಹಾಗೂ ಟಾಯ್ಸ್ ಕ್ಲಸ್ಟರ್ ಮೂಲಕವೂ ಮತ್ತಷ್ಟು ಕೊಡುಗೆ ನೀಡುತ್ತಿದೆ. ದೇಶದ ಅಭಿವೃದ್ಧಿಗೆ ರಾಜ್ಯದ ಕೊಡುಗೆ ದಿನೇ ದಿನೇ ಏರಿಕೆಯಾಗುತ್ತಿರುವುದು ರಾಜ್ಯದ ಮಹತ್ವವನ್ನು ಹೆಚ್ಚಿಸಿದೆ.