ಅಡಕೆ ಕಗ್ಗಂಟು
ದೇಶದಲ್ಲಿ ರೈತರ ಪ್ರತಿಭಟನೆ ನಾನಾ ಸ್ವರೂಪಗಳನ್ನು ಪಡೆಯುತ್ತಿರುವ ಇಂದಿನ ದಿನಗಳಲ್ಲಿ ರೈತರಿಗೆ ಸಂಬಂಧಿಸಿದಮತ್ತೊಂದು ಮಹತ್ವದ ಬೆಳವಣಿಗೆ ಸಂಭವಿಸಿದೆ.
ರಾಜ್ಯದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಅಡಕೆ ಬೆಲೆ ದುಪ್ಪಟ್ಟಾಗಿದೆ. ಇದು ಬೆಳಗಾರರಿಗೆ ಸಂತಸದ ಸುದ್ದಿಯಾಗುವುದಕ್ಕಿಂತಲೂ ವಿಷಾದದ ಬೆಳವಣಿಗೆಯಾಗಿ ಮಾರ್ಪಟ್ಟಿರುವುದೇ ದುರಂತ. ಬೆಲೆ ಹೆಚ್ಚಳವಾದರೂ, ಫಸಲು ಕಡಿಮೆಯಾಗಲು ಅನೇಕ ಕಾರಣ ಗಳಿವೆ.
ಒಂದೆಡೆ ಅಡಕೆ ಹಾನಿಕಾರಕ ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ, ಮತ್ತೊಂದೆಡೆ ವಿದೇಶಿ ಅಡಕೆ ಆಗಮನ,ಉತ್ಪಾದನಾ ವೆಚ್ಚ ಹೆಚ್ಚಳದ ಸಮಸ್ಯೆಗಳಿಂದಾಗಿ ಅಡಕೆ ಬೆಳೆಗಾರರು ಕಂಗೆಟ್ಟಿದ್ದರು. ಈ ಎಲ್ಲ ಸಮಸ್ಯೆಗಳ ಫಲವಾಗಿ ಈ ಬಾರಿ ಫಸಲು ಕಡಿಮೆಯಾಗಿದೆ. ಇದೇ ವೇಳೆಯಲ್ಲಿ ಅಡಕೆ ಬೆಲೆ ಹೆಚ್ಚಳಗೊಂಡಿದ್ದು, ಹಳೆ ಅಡಕೆ 1ಕೆಜಿಗೆ505ರಿಂದ520ರು.ಆಗಿದೆ.
ಹೊಸ ಅಡಕೆ1ಕೆಜಿಗೆ425ರಿಂದ440ರು. ಆಗಿದೆ. ಅಡಕೆ ಸಂಗ್ರಹಿಸಿಟ್ಟುಕೊಂಡವರಿಗೆ ಲಾಭವಾಗಿದ್ದು, ಇತರ ಬೆಳೆಗಾರ ರಲ್ಲಿ ನಿರಾಸೆಯ ಭಾವನೆ ಮೂಡಿದೆ. ಅಡಕೆ ಬೆಳಗಾರರು ಇಂದಿಗೂ ನಾನಾ ರೀತಿಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರಗಳನ್ನು ಒದಗಿಸುವಲ್ಲಿ ಕೇಂದ್ರ ಸರಕಾರದ ಪಾತ್ರಮಹತ್ವದ್ದಾಗಿದೆ.
ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ಅನಾನಸ್ ನಿಗದಿಗೊಳಿಸಿದೆ. ಆದರೆಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದಲ್ಲಿ ಹೆಚ್ಚಿನ ಜನರು ಅವಲಂಬಿಸಿರುವುದು ಅಡಕೆ ಬೆಳೆಯನ್ನು. ಈ ರೀತಿ ನಾನಾ ಸಮಸ್ಯೆಗಳನ್ನು ಅನುಭವಿಸುತ್ತಿರುವ ಅಡಕೆ ಬೆಳೆಗಾರರು ಸಮಸ್ಯೆ ಇಂದಿಗೂ ಕಗ್ಗಂಟಾಗಿಯೇ ಉಳಿದಿರುವುದು ವಿಪರ್ಯಾಸ.