ಜೇಮ್ಸ್ ಚಿರಂತನ ಕಾವ್ಯ
ಅದ್ಧೂರಿಯಾಗಿ ತೆರೆ ಕಂಡ ಅಪ್ಪುವಿನ ಜೇಮ್ಸ್ ಚಲನಚಿತ್ರಅಭಿಮಾನಿಗಳಿಂದ ಹರಿದ ಅಭಿಮಾನದ ಮಹಾಪೂರ
ಪ್ರಶಾಂತ್ ಟಿ.ಆರ್. ಬೆಂಗಳೂರು
ಪವರ್‌ಸ್ಟಾರ್ ದಿ.ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಅದ್ಧೂರಿಯಾಗಿ ತೆರೆ ಕಂಡಿದೆ. ದೇಶ,ವಿದೇಶಗಳಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಜನಸಾಗರವೇ ಸೇರಿದೆ. ಅಭಿಮಾನಿಗಳು ಪುನೀತರನ್ನು ನೆನೆಯುತ್ತಾ, ಕಂಬನಿಮಿಡಿಯುತಲೇ ಜೇಮ್ಸ್ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅಪ್ಪು ಜನುಮ ದಿನ ದಂದೇ ಚಿತ್ರ ತೆರೆಗೆ ಬಂದಿದ್ದು, ಅಭಿಮಾನಿಗಳ ಸಂಭ್ರಮ ಇಮ್ಮಡಿಗೊಂಡಿದೆ.
ರಾಜ್ಯದ ಬಹುತೇಕ ಚಿತ್ರಮಂದಿರಗಳ ಮುಂದೆ ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಕಟೌಟ್‌ಗಳು ನಿರ್ಮಾಣವಾಗಿವೆ. ಹೆಲಿಕ್ಯಾಪ್ಟರ್‌ನಲ್ಲಿ ಹೂಮಳೆ ಸುರಿಸಿ, ಹಾಲಿನ ಅಭಿಷೇಕ ಮಾಡಿ ಅಭಿಮಾನಿಗಳು, ಅಭಿಮಾನ ಮೆರೆಯುತ್ತಿದ್ದಾರೆ. ಪ್ರೇಕ್ಷಕರಿಗೆಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.
ಜೇಮ್ಸ್ ಕೇವಲ ಸಿನಿಮಾ ಮಾತ್ರವಲ್ಲ, ಇದು ಕರುನಾಡಿನ ಜನರ ಮನಮನದಲ್ಲೂ ಭಾವನಾತ್ಮಕ ನಂಟು ಬೆಸೆದಂತಾಗಿದೆ. ಹೀಗಾಗಿಯೇ ಪ್ರೇಕ್ಷಕರು ಹೃದಯತುಂಬಿ ಚಿತ್ರ ವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಈವರೆಗೂ ಯಾವ ಸಿನಿಮಾ ಗಳಿಗೂ ಈ ರೀತಿಯ ಸ್ವಾಗತ, ಪ್ರೀತಿ ಸಿಕ್ಕಿರಲಿಲ್ಲ. ಸ್ಯಾಂಡಲ್‌ವುಡ್‌ನ ಅಪುರೂಪದಲ್ಲಿ ಅಪರೂಪದ ಸಿನಿಮಾ ಜೇಮ್ಸ್. ಚಿತ್ರದ ಕಥೆ ಅದನ್ನು ತೆರೆಗೆ ತಂದಿರುವ ಪರಿ ಎಲ್ಲವೂ ಅದ್ಭುತವಾಗಿವೆ.
ಇಂತಹ ಕಥೆಗೆ ಪವರ್ ಸ್ಟಾರ್ ಪವರ್ ತುಂಬಿದ್ದು ಚಿತ್ರದ ಹೆಗ್ಗಳಿಕೆಯೇ ಸರಿ. ಅಪ್ಪು ಅದ್ಭುತ ನಟನೆಯ ಬಗ್ಗೆ ಎರಡು ಮಾತಿಲ್ಲ. ಪುನೀತ್ ಭಾವನಾತ್ಮಕ ಪಾತ್ರಗಳಿಗೆ ಜೀವತುಂಬಿದ್ದಾರೆ. ಅಂತೆಯೇ ಆಕ್ಷನ್‌ಗೂ ಸೈ, ಡ್ಯಾನ್ಸ್‌ಗೂ ಸೈ ಎನಿಸಿಕೊಂಡಿದ್ದಾರೆ. ಇಂತಹಅಪರೂಪದ ನಟ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಬ್ಬರು ಸಿಗುವುದಿಲ್ಲ. ಈ ಹಿಂದೆ ಎಂದು ಕಂಡಿರದ ಅಪ್ಪುವನ್ನು ಈ ಚಿತ್ರದಲ್ಲಿಕಣ್ತುಂಬಿಕೊಳ್ಳಬಹುದಾಗಿದೆ. ರೋಮಾಂಚನಗೊಳಿಸುವ ಡ್ಯಾನ್ಸ್, ಅಚ್ಚರಿಗೊಳಿಸುವ ಫೈಟ್ಸ್ ಇವೆಲ್ಲವೂ ಜೇಮ್ಸ್‌ನ ಹೈಲೈಟ್ಸ್ ಆಗಿದೆ. ಪ್ರತಿ ಫ್ರೇಮ್‌ನಲ್ಲೂಅಪ್ಪು ಹ್ಯಾಂಡ್ಸಮ್ ಲುಕ್‌ನಲ್ಲಿ ಕಂಗೊಳಿಸಿದ್ದಾರೆ.
ಕಾಡಿದ ಆ ಕೊರಗು:ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ದನಿಯಲ್ಲಿಯೇ ಒಂದು ಪವರ್ ಇದೆ. ಅಪ್ಪು ದನಿಯನ್ನು ಕೊನೆಯ ಬಾರಿಗೆ ಕೇಳಬೇಕು ಎಂಬ ಅಭಿಮಾನಿಗಳ ಆಸೆ ನಿರಾಸೆಯಾಗಿದೆ. ಜೇಮ್ಸ್ ಡಬ್ಬಿಂಗ್ ಆರಂಭಿಸುವ ಹೊತ್ತಿಗೆ ಅಪ್ಪು ನಮ್ಮನ್ನು ಅಗಲಿದ್ದರು. ಹೀಗಾಗಿ ಅಪ್ಪು ಪಾತ್ರಕ್ಕೆ ಶಿವಣ್ಣ ದನಿ ನೀಡಿದ್ದರು. ಆದರೂ ಚಿತ್ರದಲ್ಲಿ ಒಂದಾದರೂ ಡೈಲಾಗ್‌ಗಳನ್ನು ಅಪ್ಪು ದನಿಯಲ್ಲಿ ಕೇಳಬಹುದು ಎಂದು ಎವೆಯಿಕ್ಕದೆ ಸಿನಿಮಾ ವೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಇದರಿಂದ ಅದೆಷ್ಟೋ ಅಭಿಮಾನಿಗಳು ಅಪ್ಪು ದನಿ ಕೇಳಲಾಗದೆ ಭಾರವಾದ ಹೃದಯದಿಂದ ನೊಂದು ಕಣ್ಣೀರು ಸುರಿಸಿದ್ದಾರೆ.
***
ಒಂದೇ ಚಿತ್ರದಲ್ಲಿ ದೊಡ್ಮನೆ ಮಕ್ಕಳುದೊಡ್ಮನೆ ಮಕ್ಕಳಾದ ಶಿವಣ್ಣ, ರಾಘಣ್ಣ ಹಾಗೂ ಅಪ್ಪು ಅವರನ್ನು ಒಂದೇ ಸಿನಿಮಾದಲ್ಲಿ ಕಣ್ತುಂಬಿಕೊಳ್ಳಬೇಕು ಎಂಬ ಆಸೆಕರುನಾಡಿನ ಜತೆಯಲ್ಲಿತ್ತು. ಆದರೆ ಅದಕ್ಕೆ ಕಾಲ ಕೂಡಿಬರಲೇ ಇಲ್ಲ. ಅಷ್ಟೊತ್ತಿಗೆ ಅಪ್ಪು ನಮ್ಮನ್ನು ಅಗಲಿ ಬಾರದ ಲೋಕಕ್ಕೆ ಪಯಣಿಸಿದರು. ಹೀಗಾಗಿ ಪ್ರೇಕ್ಷಕರ ಆಸೆ ನುಚ್ಚು ನೂರಾಗಿತ್ತು. ಅಭಿಮಾನಿಗಳ ಆಸೆಯಂತೆ ಅಣ್ಣಾವ್ರ ಮಕ್ಕಳನ್ನು ಒಂದೇ ಚಿತ್ರದಲ್ಲಿ ತೋರಿಸಬೇಕು ಎಂದು ನಿರ್ಧರಿಸಿದ ನಿರ್ದೇಶಕ ಚೇತನ್ ಕುಮಾರ್, ಜೇಮ್ಸ್ ಚಿತ್ರಕ್ಕಾಗಿ ಶಿವಣ್ಣ ಹಾಗೂ ರಾಘಣ್ಣಅವರನ್ನು ಕರೆತಂದರು. ಈ ಚಿತ್ರದಲ್ಲಿ ಶಿವಣ್ಣ ಸೇನಾಧಿಕಾರಿಯಾಗಿ ನಟಿಸಿದ್ದು, ರಾಘಣ್ಣ ಆಶ್ರಮದ ಮುಖ್ಯಸ್ಥರಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಒಂದೇ ಫ್ರೇಮ್‌ನಲ್ಲಿ ಮೂವರನ್ನು ಒಟ್ಟಿಗೆ ಕಾಣುವ ಅದೃಷ್ಟ ನಾಡಿನ ಜನಕ್ಕೆ ಒದಗಿಬರಲೇ ಇಲ್ಲ.