ಕಾನೂನು ಪಾಲನೆ, ದೇವೇಗೌಡರ ಸಿಟ್ಟಿಗೆ ತಕ್ಕ ಸಮರ್ಥನೆ
ಸತ್ಯಮೇವ ಜಯತೆ- ಭಾಗ_೧೦೪- ಶಂಕರ್‌ ಬಿದರಿ
ಕೃಷ್ಣಾ ನದಿ ನೀರನ್ನು ಕೃಷ್ಣಾ ನದಿ ಪಾತ್ರದ ರಾಜ್ಯಗಳಲ್ಲಿ ಹಂಚಿಕೆ ಮಾಡುವ ಸಲುವಾಗಿ, ೧೯೬೯ರಲ್ಲಿ ರಚಿಸಲಾದ ನ್ಯಾಯಮೂರ್ತಿ ಶ್ರೀ ಬಚಾವತ್ ಅವರ ನೇತೃತ್ವದ ಕೃಷ್ಣಾ ನದಿ ನೀರು ವಿವಾದ ನ್ಯಾಯ ಮಂಡಳಿಯು ತನ್ನ ತೀರ್ಪನ್ನು ೧೯೭೩ರಲ್ಲಿ ನೀಡಿತ್ತು.
ಅದು, ಭಾರತ ಸರ್ಕಾರದ ರಾಜ್ಯಪತ್ರದಲ್ಲಿ ೧೯೭೬ರಲ್ಲಿ ಪ್ರಕಟವಾಗಿ, ಅಂದಿನಿಂದ ಜಾರಿಗೆ ಬಂತು. ಈ ತೀರ್ಪಿನ ಪ್ರಕಾರ, ಕೃಷ್ಣಾ ನದಿ ಮತ್ತು ಅದರ ಉಪನದಿಗಳಿಂದ ಕರ್ನಾಟಕ ರಾಜ್ಯಕ್ಕೆ ೭೦೦ ಟಿ.ಎಂ.ಸಿ., ಮಹಾರಾಷ್ಟ್ರ ರಾಜ್ಯಕ್ಕೆ ೫೬೦ ಟಿ.ಎಂ.ಸಿ. ಹಾಗೂ ಆಂಧ್ರಪ್ರದೇಶ ರಾಜ್ಯಕ್ಕೆ ೮೦೦ ಟಿ.ಎಂ.ಸಿ. ನೀರನ್ನು ಹಂಚಿಕೆ ಮಾಡಲಾಗಿತ್ತು. ಈ ತೀರ್ಪಿನ ಪ್ರಕಾರ ಆಯಾ ರಾಜ್ಯಗಳು ೨೦೦೦ನೇ ಇಸವಿಯ ಒಳಗಾಗಿ ತಮಗೆ ಹಂಚಿಕೆಯಾಗಿದ್ದ ನೀರನ್ನು ಉಪಯೋಗ ಮಾಡಬೇಕಾಗಿತ್ತು.
ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ರಾಜ್ಯಗಳು ತಮ್ಮ ರಾಜ್ಯಗಳಿಗೆ ಹಂಚಿಕೆಯಾದ ನೀರನ್ನು ಸಂಪೂರ್ಣವಾಗಿ ನಿಗದಿತ ವೇಳೆಗೂ ಮೊದಲೇ ಉಪಯೋಗ ಮಾಡಿಕೊಂಡವು. ಆದರೆ ಕರ್ನಾಟಕ ರಾಜ್ಯದಲ್ಲಿ ಕರ್ನಾಟಕದ ಪಾಲಿನ ನೀರನ್ನು ಉಪಯೋಗಿಸಿ ನೀರಾವರಿ ಸೌಲಭ್ಯ ಕಲ್ಪಿಸುವುದರಲ್ಲಿ ನಾನಾ ಕಾರಣಗಳಿಂದ ಬಹಳ ವಿಳಂಬ ವಾಯಿತು.
ತೀರ್ಪಿನ ಮರುಪರಿಶೀಲನೆ?ಹಂಚಿಕೆಯಾದ ನೀರಿನಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಉಪಯೋಗಿಸಿ ಕೊಳ್ಳಬೇಕಾಗಿತ್ತು. ೨೦೦೦ನೇ ಇಸವಿಯಲ್ಲಿ ಬಚಾವತ್ ಆಯೋಗದ ತೀರ್ಪು ಮರು ಪರಿಶೀಲನೆಗೆ ಒಳಪಡುವ ನಿಬಂಧನೆ ಇತ್ತು. ಆದುದರಿಂದ, ಕರ್ನಾಟಕ ರಾಜ್ಯವು ೨೦೦೦ನೇ ಇಸವಿಯ ಒಳಗಾಗಿ, ೭೦೦ ಟಿ.ಎಂ.ಸಿ. ನೀರನ್ನು ಕೃಷ್ಣಾ ಕಣಿವೆಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಉಪಯೋಗ ಮಾಡಬೇಕಾಗಿತ್ತು. ಈ ತುರ್ತು ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ೧೯೯೩ ರಲ್ಲಿ ರಾಜ್ಯದ ಮುಖ್ಯಮಂತ್ರಿ ಗಳಾಗಿದ್ದ ಶ್ರೀ ವೀರಪ್ಪ ಮೊಯಿಲಿ ಅವರು ಕೃಷ್ಣಾ ಜಲಭಾಗ್ಯ ನಿಗಮವನ್ನು ಸ್ಥಾಪಿಸಿದರು.
ಕೃಷ್ಣಾ ನದಿ ಪಾತ್ರದಲ್ಲಿ ನಡೆಯುತ್ತಿದ್ದ ನೀರಾವರಿ ಕಾಮಗಾರಿಗಳನ್ನು ವೇಗವಾಗಿ ಪೂರ್ತಿಗೊಳಿಸಲು ಅವಶ್ಯವಿರುವ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಮತ್ತು ಸರ್ಕಾರದ ನಿಯಮ ಗಳಿಂದಾಗಿ ಕಾಮಗಾರಿಗಳನ್ನು ಪೂರ್ತಿಗೊಳಿಸುವ ಕಾರ್ಯದಲ್ಲಿ ಆಗುವ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಈ ನಿಗಮವನ್ನು ಸ್ಥಾಪಿಸಲಾಗಿತ್ತು.
ದೇವೇಗೌಡರ ಸರಕಾರ೧೯೯೪ರ ಡಿಸೆಂಬರ್ನಲ್ಲಿ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದು, ಜನತಾ ದಳ ಪಕ್ಷ ಅಧಿಕಾರಕ್ಕೆ ಬಂತು. ಶ್ರೀ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಗಳಾದರು. ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಅಪಾರ ಜ್ಞಾನ ಮತ್ತು ಅವುಗಳನ್ನು ಜಾರಿಗೊಳಿಸುವ ಬಗ್ಗೆ ಉತ್ಸುಕತೆ ಹೊಂದಿದ್ದ ಶ್ರೀ ದೇವೇಗೌಡರು, ಬಹಳ ನಿಧಾನಗತಿಂದ ಸಾಗುತ್ತಿದ್ದ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳನ್ನು ತ್ವರಿತಗೊಳಿಸಲು ಎಲ್ಲಾ ಅವಶ್ಯಕ್ರಮಗಳನ್ನು ಕೈಗೊಂಡರು. ಈ ಕ್ರಮದ ಅಂಗವಾಗಿ ಅವರು ಕೆಲವು ಗುತ್ತಿಗೆಗಳನ್ನು ಆಗ ಸರ್ಕಾರದ ನಿರ್ಧಾರಗಳಿಗೆ ಅನ್ವುಸುತ್ತಿದ್ದ ನಿಯಮವನ್ನು ಮೀರಿ ನೀಡಿದರು. ಕೃಷ್ಣಾ ಮೇಲ್ದಂಡೆ ಯೋಜನೆಯ ಕಾರ್ಯಗಳನ್ನು ತ್ವರಿತವಾಗಿ ಪೂರ್ತಿಗೊಳಿಸುವ ಉದ್ದೇಶದಿಂದ ಅವರು ಈ ಕ್ರಮ ಕೈಗೊಂಡಿ ದ್ದರು. ಆದರೆ ಅವರು ಈ ತುಂಡು ಗುತ್ತಿಗೆಗಳನ್ನು ಸದುದ್ದೇಶ ದಿಂದ ನೀಡಿ ಕಾಮಗಾರಿಯನ್ನು ತ್ವರಿತಗೊಳಿಸಿದ ನಂತರ, ದೇಶದ ರಾಜಕಾರಣದಲ್ಲಿ ನಡೆದ ಸ್ಥಿತ್ಯಂತರಗಳಿಂದಾಗಿ, ಅವರು ರಾಷ್ಟ್ರದ ಪ್ರಧಾನಮಂತ್ರಿಗಳಾಗಿ ಕಾರ್ಯ ನಿರ್ವಹಿಸುವ ಪ್ರಮೇಯ ಬಂತು.
ರುಚಿಸಿದ ಗೌಡರ ಯಶಸ್ಸು!ಶ್ರೀ ದೇವೇಗೌಡರು ಪ್ರಧಾನಮಂತ್ರಿಗಳಾದ ವಿಷಯ ಕೆಲವು ನಾಯಕರಿಗೆ ರುಚಿಸಲಿಲ್ಲ. ಅವರೆಲ್ಲಾ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ತುಂಡು ಗುತ್ತಿಗೆಗಳನ್ನು ನಿಯಮ ಮೀರಿ ನೀಡುವ ಮೂಲಕ ಶ್ರೀ ದೇವೇಗೌಡರು ಅಕ್ರಮ ಎಸಗಿದ್ದಾರೆ ಎಂದು ಆರೋಪ ಮಾಡಲಾರಂಭಿಸಿದರು. ಆದರೆ ಈ ಆರೋಪಗಳನ್ನು ಮಾನ್ಯ ಶ್ರೀ ಜೆ.ಎಚ್. ಪಟೇಲರ ಸರಕಾರವು ಗಂಭೀರವಾಗಿ ಪರಿಗಣಿಸಲಿಲ್ಲ. ಸದುದ್ದೇಶದಿಂದ ನಿಯಮ ಮೀರಿ ತುಂಡು ಗುತ್ತಿಗೆ ನೀಡಿದ್ದು ತಪ್ಪಲ್ಲ ಎಂದು ಶ್ರೀ ಪಟೇಲರು ಭಾವಿಸಿದ್ದರು.
ಆದರೂ ಶ್ರೀ ದೇವೇಗೌಡರ ರಾಜಕೀಯ ವಿರೋಧಿಗಳು ಕಾಲಕಾಲಕ್ಕೆ ಈ ವಿಷಯವನ್ನು ಪ್ರಸ್ತಾಪಿಸಿ, ಅವರ ವರ್ಚಸ್ಸಿಗೆ ಧಕ್ಕೆ ತರಲು ಪ್ರಯತ್ನಿಸುತ್ತಲೇ ಇದ್ದರು. ಸಿಐಡಿಗೆ ಎಚ್‌ಡಿಡಿ ನಿರ್ಧಾರ ೨೦೧೦-೧೧ರಲ್ಲಿ ಶ್ರೀ ದೇವೇಗೌಡರು ಮತ್ತು ಆಗ ಮುಖ್ಯಮಂತ್ರಿಗಳಾಗಿದ್ದ ಶ್ರೀ ಯಡಿಯೂರಪ್ಪನವರ ನಡುವೆ ರಾಜಕೀಯ ವೈಮನಸ್ಸು ತಾರಕಕ್ಕೆ ಏರಿತ್ತು. ಒಬ್ಬರು ಮತ್ತೊಬ್ಬರ ಮೇಲೆ ತೀವ್ರ ಸ್ವರೂಪದ ಆರೋಪ-ಪ್ರತ್ಯಾರೋಪ ಮಾಡಲಾರಂಭಿಸಿ ದರು. ಈ ಹಂತದಲ್ಲಿ ನೀರಾವರಿ ಇಲಾಖೆಂದ ಬಂದ ಒಂದು ಪ್ರಸ್ತಾವನೆಯನ್ನು ರಾಜ್ಯ ಸಚಿವ ಸಂಪುಟವು ಪರಿಗಣಿಸಿತು.
ಅದರ ಅನ್ವಯ, ೧೯೯೬ರಲ್ಲಿ ಶ್ರೀ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದಾಗ, ನೀಡಿದ್ದ ತುಂಡು ಗುತ್ತಿಗೆಯ ಬಗ್ಗೆ ಸಿಐಡಿ ವಿಭಾಗದವರು ತನಿಖೆ ಮಾಡಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ನಿರ್ಣಯವನ್ನು ಯಡಿಯೂರಪ್ಪನವರ ಸಚಿವ ಸಂಪುಟ ತೆಗೆದುಕೊಂಡಿತು.
ಸಾಮಾನ್ಯ ವಿಚಾರಣೆಈ ನಿರ್ಣಯದ ಪ್ರತಿಯನ್ನು ಲಗತ್ತಿಸಿ, ನೀರಾವರಿ ಇಲಾಖೆ ಸಿಐಡಿ ವಿಭಾಗದ ಮುಖ್ಯಸ್ಥರಿಗೆ ಪತ್ರ ಬರೆದು, ಸಚಿವ ಸಂಪುಟ ಕ್ರಿಮಿನಲ್ ಪ್ರಕರಣ ವೊಂದನ್ನು ದಾಖಲಿಸಿ ತನಿಖೆ ಕೈಗೊಳ್ಳಬೇಕು ಎಂದು ಸೂಚಿಸಿತ್ತು. ಆದರೆ, ನಾನು ಪ್ರಭಾರ ವಹಿಸಿಕೊಳ್ಳುವ ಮುನ್ನ ಸಿಐಡಿ ವಿಭಾಗದ ಮುಖ್ಯಸ್ಥರಾಗಿದ್ದಅಧಿಕಾರಿಗಳು, ಸರ್ಕಾರದ ಈ ಸೂಚನೆ ಬಂದ ಮೇಲೆ ಈ ಬಗ್ಗೆ ಸರ್ಕಾರದ ಆದೇಶದ ಪ್ರಕಾರ ಕ್ರಿಮಿನಲ್ ಪ್ರಕರಣವೊಂದನ್ನು ದಾಖಲಿಸಿ ತನಿಖೆಪ್ರಾರಂಭಿಸುವ ಬದಲಾಗಿ, ಒಂದು ಸಾಮಾನ್ಯ ವಿಚಾರಣೆಯನ್ನು ಪ್ರಾರಂಭಿಸಿದ್ದರು.
ಕಡತನ ಅಧ್ಯಯನನಾನು ೨೦೧೧ರ ಆಗಸ್ಟ್‌ನಲ್ಲಿ ಸಿಐಡಿ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡ ಕೆಲವು ತಿಂಗಳ ನಂತರ ನನ್ನ ಸಮ್ಮುಖದಲ್ಲಿ ಒಂದು ಕಡತಮಂಡಿಸಲ್ಪಟ್ಟಿತು. ಆ ಕಡತದಲ್ಲಿ ಈ ಪ್ರಕರಣದ ವಿಚಾರಣಾಧಿಕಾರಿಗಳು ಕೃಷ್ಣಾ ಜಲಭಾಗ್ಯ ನಿಗಮಕ್ಕೆ ಈ ಪ್ರಕರಣದ ವಿಚಾರಣೆಯ ಬಗ್ಗೆ ಕೆಲವು ದಾಖಲೆಪತ್ರಗಳನ್ನು ಒದಗಿಸಬೇಕು ಎಂದು ಕೇಳಿಕೊಂಡಿದ್ದರು. ಆದರೆ, ಕೃಷ್ಣಾ ಜಲ ಭಾಗ್ಯ ನಿಗಮದ ಅಧಿಕಾರಿಗಳು ಈ ರೀತಿಯ ವಿಚಾರಣೆಗೆ ನಿಗಮದ ದಾಖಲೆಗಳನ್ನು ಒದಗಿಸಲು ಸಾಧ್ಯವಿಲ್ಲ ಎಂದು ಅವರಿಗೆ ಲಿಖಿತವಾಗಿ ಉತ್ತರಿಸಿದ್ದರು.
ನಿಗಮದ ಉತ್ತರದ ಹಿನ್ನೆಲೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಲು ಕಡತವನ್ನು ನನ್ನ ಮುಂದೆ ಮಂಡಿಸಲಾಗಿತ್ತು. ನಾನು ವಿಷಯ ಪರಿಶೀಲನೆ ಮಾಡಿ ಈ ಬಗ್ಗೆ ಸಿಐಡಿ ವಿಭಾಗದಲ್ಲಿ ಆಂತರಿಕ ಕಾನೂನು ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಭಿಯೋಗ ಇಲಾಖೆಯ ಉಪ ನಿರ್ದೇಶಕರ ಅಭಿಪ್ರಾಯವನ್ನು ಪಡೆದು ಕಡತವನ್ನು ಮಂಡಿಸಲು ಸೂಚಿಸಿದೆನು. ಅಭಿಯೋಗ ಇಲಾಖೆಯ ಉಪನಿರ್ದೇಶಕರು ಈ ಕಡತವನ್ನು ಅಭ್ಯಸಿಸಿ, ಅವರ ಅಭಿಪ್ರಾಯವನ್ನು ಈ ಕೆಳಗಿನಂತೆ ನೀಡಿದರು.
ಅಭಿಪ್ರಾಯ ಮಂಡನೆ‘ಸಾಮಾನ್ಯ ವಿಚಾರಣೆಗಾಗಿ ಕೃಷ್ಣಾ ಜಲಭಾಗ್ಯ ನಿಗಮವು ವಿಚಾರಣಾಧಿಕಾರಿಗಳು ಕೇಳಿದ ದಾಖಲೆಗಳನ್ನು ಅವರಿಗೆ ನೀಡಲು ನಿರಾಕರಿಸಿರುವುದು ನ್ಯಾಯಸಮ್ಮತವಾಗಿದೆ. ಸಚಿವ ಸಂಪುಟದ ನಿರ್ಣಯ ಮತ್ತು ಸರ್ಕಾರದ ಆದೇಶದ ಪ್ರಕಾರ ಈ ಬಗ್ಗೆ ಒಂದು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ, ತನಿಖೆ ಯನ್ನು ಪ್ರಾರಂಭಿಸಬೇಕಾಗಿತ್ತು. ಆದರೆ ಸಿಐಡಿ ವಿಭಾಗದವರು ಆ ರೀತಿ ಮಾಡಿರುವುದಿಲ್ಲ. ಈಗ ಕೃಷ್ಣಾ ಜಲಭಾಗ್ಯ ನಿಗಮದಿಂದಯಾವುದಾದರೂ ದಾಖಲೆಗಳನ್ನು ಪಡೆಯಬೇಕಾದರೆ, ಒಂದು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದ ನಂತರ, ತನಿಖಾಧಿಕಾರಿಗಳು ದಂಡ ಪ್ರಕ್ರಿಯಾ ಸಂಹಿತೆಯ ಕಲಮುಗಳ ಪ್ರಕಾರ ತಮಗೆ ಬೇಕಾದ ದಾಖಲೆಗಳನ್ನು ನಿಗಮದ ಕಚೇರಿಯಿಂದ ಶೋಧಿಸಿ ವಶಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಈ ಪ್ರಕರಣದಲ್ಲಿ ಅಪರಾಧ ದಾಖಲಿಸಿ ತನಿಖೆ ಮಾಡುವುದು ಸೂಕ್ತ’ ಎಂಬ ಅಭಿಪ್ರಾಯ ನೀಡಿದರು.
ಗೌಡರಿಗೆ ಕೋಪಮುಖ್ಯವಾಗಿ, ತನಿಖೆಯು ಶಹಾಪುರ ತಾಲೂಕಿನಲ್ಲಿ ನಿರ್ಮಿಸಲ್ಪಟ್ಟ ಒಂದು ಕಾಲುವೆಯ ನಿರ್ಮಾಣಕ್ಕೆ ಸಂಬಂಧಿಸಿದ್ದಾಗಿತ್ತು. ಆದರೆ ಈ ಹಿಂದೆ ಶ್ರೀ ದೇವೇಗೌಡರ ಎಲೆಕ್ಷನ್ ಏಜೆಂಟರಾಗಿ ನಾಲ್ಕೈದು ಬಾರಿ ಸೇವೆ ಸಲ್ಲಿಸಿದ್ದ ಮತ್ತು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಮತ್ತು ಶ್ರೀ ಗೌಡರಿಗೆ ಅತ್ಯಂತ ಆತ್ಮೀಯರಾಗಿದ್ದ ಎಚ್.ಎನ್. ಕೃಷ್ಣ ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ಹಿನ್ನೆಲೆಯಲ್ಲಿ, ಶ್ರೀದೇವೇಗೌಡರು ಈ ಕುಹಕಿಗಳ ಮಾಹಿತಿಯಿಂದ ಉಗ್ರರಾದರು.
ನನ್ನ ಮೇಲೆ ನಾನು ಲಿಂಗಾಯತ ಮತ್ತು ಮುಖ್ಯಮಂತ್ರಿಗಳೂ ಲಿಂಗಾಯತರು. ಮುಖ್ಯಮಂತ್ರಿಗಳು ಶ್ರೀ ಗೌಡರ ಮೇಲೆ ಸೇಡು ತೀರಿಸಿಕೊಳ್ಳುವಂತೆ ಶ್ರೀ ಬಿದರಿಯವರಿಗೆ ಹೇಳಿ ಈ ಪ್ರಕರಣ ದಾಖಲಿಸಿದ್ದಾರೆ. ಬಿದರಿಯವರು ಅವರ ಆಣತಿಯಂತೆ ನಡೆದುಕೊಂಡಿದ್ದಾರೆ ಇತ್ಯಾದಿ ಪತ್ರಿಕಾ ಹೇಳಿಕೆ ನೀಡಿದರು.ಬೇಕೆಂದೇ ಮಾಡಿದ್ದಲ್ಲ! ವಾಸ್ತವವಾಗಿ, ಈ ವಿಷಯದಲ್ಲಿ ಶ್ರೀ ಯಡಿಯೂರಪ್ಪನವರು ಯಾವುದೇ ವಿಚಾರವನ್ನು ಮಾತನಾಡಿರಲಿಲ್ಲ. ಕ್ರಿಮಿನಲ್ ಪ್ರಕರಣದ ದಾಖಲೆ ಒಂದು ಸಾಮಾನ್ಯ ಪ್ರಕ್ರಿಯೆಯಾಗಿತ್ತು. ಅದರಲ್ಲಿ ಶ್ರೀ ದೇವೇಗೌಡರ ಹೆಸರನ್ನು ಎಳೆದು ತರಬೇಕು ಎಂದು ನಾನಾಗಲಿ, ನಮ್ಮ ಅಧಿಕಾರಿಗಳಾಗಲಿ ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ಆದರೆ ಆ ಸಮಯದಲ್ಲಿ ನಾನು ನನ್ನ ನಿರ್ಧಾರಕ್ಕೆ ಬದ್ಧನಾಗಿ ಕಾರ್ಯ ನಿರ್ವಹಿಸ ಬೇಕಾಯಿತು.
ಶ್ರೀ ದೇವೇಗೌಡರ ಪರಿಚಯ ನನಗೆ ೧೯೮೩ರಿಂದಲೂ ಇತ್ತು. ನಾನು ಅವರಿಗೆ ಅತಿ ಆತ್ಮೀಯನಾಗಿರಲಿಲ್ಲ. ಆದರೆ ಅವರೊಂದಿಗೆ ೨೦೧೧ರ ವರೆಗೂಬಹಳ ಸೌಹಾರ್ದಯುತ ಸಂಬಂಧವನ್ನು ಇಟ್ಟುಕೊಂಡಿದ್ದೆನು. ಅವರೂ ಸಹಿತ ನನ್ನ ಮೇಲೆ ಬಹಳ ವಿಶ್ವಾಸ ಮತ್ತು ಗೌರವವನ್ನು ಇಟ್ಟುಕೊಂಡಿದ್ದರು. ಆ ಸಮಯದಲ್ಲಿ ನನಗೆ ಅವರನ್ನು ಭೇಟಿ ಮಾಡಿ ವಾಸ್ತವಾಂಶಗಳನ್ನು ಹೇಳುವುದು ಉಚಿತ ಎಂದು ಕಂಡುಬರಲಿಲ್ಲ. ಆದ್ದರಿಂದ ನಾನು  ಉಪಾಯವಿಲ್ಲದೆ, ‘ನಾನು ನನ್ನ ಕರ್ತವ್ಯವನ್ನು ಕಾನೂನು ಪ್ರಕಾರ ನಿರ್ವಹಿಸಿದ್ದೇನೆ. ಅವರು ತಮಗೆ ಸರಿ ಅನಿಸಿದ್ದನ್ನು ಮಾಡಬಹುದು’ ಎಂದು ಪ್ರತಿಕ್ರಿಯೆ ನೀಡಿದೆನು.
ನನ್ನ ರಕ್ಷಣೆ ನನ್ನದೇ!ಆಗ ಶ್ರೀ ಸದಾನಂದ ಗೌಡರು ಮುಖ್ಯಮಂತ್ರಿಗಳಾಗಿದ್ದರು. ಶ್ರೀ ಆರ್. ಅಶೋಕ್ ಅವರು ಗೃಹ ಮಂತ್ರಿಗಳಾಗಿದ್ದರು. ನಾನು ಕೈಗೊಂಡ ಎಲ್ಲಾ ಕ್ರಮ ಸಚಿವ ಸಂಪುಟದ ನಿರ್ಣಯದ ಪ್ರಕಾರವೇ ಇತ್ತು. ಆದರೆ ಮುಖ್ಯಮಂತ್ರಿಗಳಾಗಲಿ, ಗೃಹ ಮಂತ್ರಿಗಳಾಗಲಿ ಅಥವಾ ಭಾರತೀಯ ಜನತಾ ಪಕ್ಷದ ಇತರ ಯಾವುದೇನಾಯಕರಾಗಲಿ ನಾನು ಕೈಗೊಂಡ ಕ್ರಮದ ಪರವಾಗಿ ಹೇಳಿಕೆ ನೀಡಿ ಶ್ರೀ ದೇವೇಗೌಡರನ್ನು ಎದುರು ಹಾಕಿಕೊಳ್ಳುವ ಧೈರ್ಯ ಮಾಡಲಿಲ್ಲ. ಎಲ್ಲರೂ ಬಾಯಿ ಮುಚ್ಚಿಕೊಂಡು ಸುಮ್ಮನೆ ಕುಳಿತರು. ಹಾಗಾಗಿ, ನಾನು ಕೈಗೊಂಡ ಕ್ರಮಗಳ ರಕ್ಷಣೆಯನ್ನು ಮಾಧ್ಯಮಗಳ ಮೂಲಕ ನಾನೇ  ಮಾಡಿಕೊಳ್ಳಬೇಕಾಯಿತು.
ಕರ್ತವ್ಯಕ್ಕೂ ಕೊಂಕುಆಗ ಭಾರತೀಯ ಜನತಾ ಪಕ್ಷದಲ್ಲಿ ಆಂತರಿಕ ಕಚ್ಚಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಶ್ರೀ ಸದಾನಂದಗೌಡರನ್ನು ಮುಖ್ಯಮಂತ್ರಿಯಾಗಿ ಮಾಡುವಲ್ಲಿ ಶ್ರೀ ಯಡಿಯೂರಪ್ಪನವರು ಮುಖ್ಯ ಪಾತ್ರ ವಹಿಸಿದ್ದರು. ಆದರೆ ಶ್ರೀ ಸದಾನಂದ ಗೌಡರು ಮತ್ತು ಶ್ರೀ ಯಡಿಯೂರಪ್ಪನವರ ಮಧ್ಯ ಸಂಬಂಧ ಹಳಸಿತ್ತು. ಶ್ರೀ ಯಡಿಯೂರಪ್ಪನವರು ಶ್ರೀ ಸದಾನಂದ ಗೌಡರಿಗೆ ನೀಡಿದ್ದ ಬೆಂಬಲವನ್ನು ಹಿಂತೆಗೆದು ಕೊಳ್ಳುವುದಾಗಿ ಹೇಳಿಕೆ ನೀಡಲುಪ್ರಾರಂಭಿಸಿದರು. ಆ ಸಂದರ್ಭದಲ್ಲಿ ಶ್ರೀ ಸದಾನಂದ ಗೌಡರು, ಬಹುಶಃ ಯಡಿಯೂರಪ್ಪ ನವರು ತಮ್ಮ ಸಂಪುಟಕ್ಕೆ ನೀಡಿದ್ದ ಬೆಂಬಲವನ್ನು ಒಂದು ವೇಳೆ ಹಿಂತೆಗೆದು ಕೊಂಡರೆ, ಜಾತ್ಯತೀತ ಜನತಾದಳದ ಸದಸ್ಯರ ಬೆಂಬಲವನ್ನು ಪಡೆದುಕೊಂಡು ಸರಕಾರ ಮುಂದುವರಿಸಬೇಕು ಎಂದು ಯೋಚಿಸಿದ್ದರು.
ರಾಜಕೀಯ ಕಲಹಗಳಿಂದಾಗಿ ಬಿಜೆಪಿ ನೇತೃತ್ವದ ಸರ್ಕಾರದ ಸಚಿವ ಸಂಪುಟ ತೆಗೆದುಕೊಂಡಿದ್ದ ನಿರ್ಧಾರ ಜಾರಿ ಮಾಡಿದ್ದ ನಾನು, ಬಹಳಷ್ಟುವಿವಾದ ಮತ್ತು ಟೀಕೆ ಟಿಪ್ಪಣಿಗಳನ್ನು ಅನುಭವಿಸ ಬೇಕಾಯಿತು.
೨೦೧೧ ನವೆಂಬರ್ ೩೦ಹೀಗಿರುವಾಗ, ನವೆಂಬರ್ ೩೦ರಂದು, ಆಗ ರಾಜ್ಯ ಪೊಲೀಸ್ ಮುಖ್ಯಸ್ಥರಾಗಿದ್ದ ಶ್ರೀ ನೀಲಂ ಅಚ್ಯುತರಾವ್ ಅವರು ಸೇವಾ ನಿವೃತ್ತಿ ಹೊಂದು ವವರಿದ್ದರು. ಅವರ ಸ್ಥಾನಕ್ಕೆ ನೇಮಕಾತಿ ಮಾಡಲು ಕೇಂದ್ರ ಲೋಕಸೇವಾ ಆಯೋಗದವರು ಅರ್ಹ ಅಧಿಕಾರಿಗಳಲ್ಲಿ ಮೂವರ ಪಟ್ಟಿಯನ್ನು ತಯಾರಿಸಿ, ರಾಜ್ಯಕ್ಕೆ ಕಳುಹಿಸಬೇಕಾಗಿತ್ತು. ಈ ಪಟ್ಟಿಯಲ್ಲಿ ತಮಗೆ ಸರಿ ಅನಿಸಿದವರನ್ನು ರಾಜ್ಯ ಪೊಲೀಸ್ ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಅಧಿಕಾರ ರಾಜ್ಯ ಸರಕಾರಕ್ಕೆ ಇತ್ತು. ನವೆಂಬರ್ ೩೦ರಂದು ಬೆಳಿಗ್ಗೆ ಮೂವರು ಅರ್ಹ ಅಧಿಕಾರಿಗಳ ಪಟ್ಟಿಯನ್ನು ತಯಾರಿಸಲು ಕೇಂದ್ರ ಲೋಕಸೇವಾ ಆಯೋಗದಲ್ಲಿ ಒಂದು ಸಭೆಯನ್ನು ಕರೆಯಲಾಗಿತ್ತು.
ರಾಜ್ಯದ ಮುಖ್ಯ ಕಾರ್ಯದರ್ಶಿಗಳಾಗಿದ್ದ ಶ್ರೀ ರಂಗನಾಥ್ ಅವರು, ಶ್ರೀ ನೀಲಂ ಅಚ್ಯುತರಾವ್ ಅವರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಸಾಮಾನ್ಯವಾಗಿ ಈ ಸಭೆಗಳು ೧೫-೨೦ ನಿಮಿಷಗಳಲ್ಲಿ ಮುಗಿಯುತ್ತಿದ್ದವು. ಆದರೆ, ಅರ್ಹ ಅಧಿಕಾರಿಗಳ ಪಟ್ಟಿಯಲ್ಲಿ ನನ್ನ ಹೆಸರು ಸೇರಬಾರದು ಎಂದು, ಬಹಳ ಪ್ರಭಾವಿವ್ಯಕ್ತಿಗಳು ಕೇಂದ್ರ ಲೋಕಸೇವಾ ಆಯೋಗದ ಮೇಲೆ ಒತ್ತಡ ಹೇರಿದ್ದರೆಂದು ಕಂಡುಬರುತ್ತದೆ. ಆದ್ದರಿಂದ, ಈ ಸಭೆಯು ಐದು ಗಂಟೆಗಳ ಕಾಲ ನಡೆದು ಕೊನೆಗೆ, ಕೇಂದ್ರ ಲೋಕಸೇವಾ ಆಯೋಗವು ನನ್ನ ಹೆಸರನ್ನೂ ಒಳಗೊಂಡ ಮೂವರು ಅಧಿಕಾರಿಗಳ ಪಟ್ಟಿಯನ್ನು ರಾಜ್ಯ ಸರ್ಕಾರಕ್ಕೆ ರವಾನಿಸಿತು.
ಈ ಪಟ್ಟಿಯಲ್ಲಿ ನನ್ನ ಮತ್ತು ನನಗಿಂತ ಸೇವೆಯಲ್ಲಿ ಒಂದು ವರ್ಷ ಮೊದಲು ಸೇರಿದ್ದ ಶ್ರೀ ಎ.ಆರ್. ಇನೆಂಟ್ ಅವರ ಹೆಸರುಗಳಿದ್ದವು. ಸರಕಾರವು ತನ್ನವಿವೇಚನೆಯನ್ನು ಉಪಯೋಗಿಸಿ, ನನ್ನನ್ನು ರಾಜ್ಯ ಪೊಲೀಸ್ ಮುಖ್ಯಸ್ಥನನ್ನಾಗಿ ನೇಮಕಾತಿ ಮಾಡಿ ಆದೇಶ ಹೊರಡಿಸಿತು. ಅದರಂತೆ ನಾನು ೨೦೧೧ರ ನವೆಂಬರ್ ೩೦ರಂದು ರಾಜ್ಯ ಪೊಲೀಸ್ ಮುಖ್ಯಸ್ಥನಾಗಿ ಶ್ರೀ ನೀಲಂ ಅಚ್ಯುತರಾವ್ ಅವರಿಂದ ಪ್ರಭಾರ ವಹಿಸಿಕೊಂಡೆನು.
ಅನುಷ್ಠಾನದತ್ತ ಹೆಜ್ಜೆರಾಜ್ಯ ಪೊಲೀಸ್ ಮುಖ್ಯಸ್ಥನಾಗಿ ಪ್ರಭಾರ ವಹಿಸಿಕೊಂಡ ತಕ್ಷಣ ನಾನು ಕಾರ್ಯಪ್ರವೃತ್ತನಾದೆನು. ಈ ಹಿಂದೆ ರಾಜ್ಯ ಪೊಲೀಸ್ ಮುಖ್ಯಸ್ಥರು ಯಾವ ಯಾವ ಸುಧಾರಣೆಗಳನ್ನು ಜಾರಿಗೆ ತರಬೇಕು ಎಂದು ನಾನು ಬಯಸಿದ್ದೆನೋ ಆ ಸುಧಾರಣೆಗಳನ್ನು ಒಂದೊಂದಾಗಿ ಅನುಷ್ಠಾನಕ್ಕೆ ತರಲು ಪ್ರಾರಂಭಿಸಿದೆನು.
ಆದೇಶಗಳು ತ್ವರಿತಇಲಾಖೆಯಲ್ಲಿ ೨೫ ವರ್ಷಗಳಿಗೂ ಹೆಚ್ಚು ಸೇವೆ ಸಲ್ಲಿಸಿದ ಶೀಘ್ರ ಲಿಪಿಕಾರರಿಗೆ, ಸಚಿವಾಲಯದಲ್ಲಿ ಇದ್ದಂತೆ ಆಪ್ತ ಕಾರ್ಯದರ್ಶಿ ಹುದ್ದೆಗೆ ಪದೋನ್ನತಿ ಕಲ್ಪಿಸಲು ಅವಕಾಶ ನೀಡಿ, ೨೦೧೦ರಲ್ಲಿಯೇ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶದ ಪ್ರಕಾರ, ೨೦ ಜನ ಹಿರಿಯ ಶೀಘ್ರ ಲಿಪಿಕಾರರು ಆಪ್ತ ಕಾರ್ಯದರ್ಶಿ ಹುದ್ದೆಗೆ ಪದೋನ್ನತಿ ಹೊಂದಿ, ಹೆಚ್ಚಿನ ವೇತನ ಶ್ರೇಣಿ ಮತ್ತು ವೇತನ ಪಡೆಯಲು ಅವಕಾಶ ಇತ್ತು. ಈ ಆದೇಶದಲ್ಲಿ ಇದ್ದ ಒಂದು ಸಣ್ಣ ಅಂಶದ ಬಗ್ಗೆ ಸರ್ಕಾರದಿಂದ ಸ್ಪಷ್ಟೀಕರಣ ಪಡೆಯುವ ಉದ್ದೇಶದಿಂದ, ಈ ಆದೇಶವನ್ನು ಇಲಾಖೆ ಜಾರಿ ಮಾಡಿರಲಿಲ್ಲ. ಇದನ್ನು ನಾನು ಪರಿಶೀಲಿಸಿದಾಗ, ಸರ್ಕಾರದ ಆದೇಶ ಸ್ಪಷ್ಟವಾಗಿದ್ದು, ಸರ್ಕಾರದಿಂದ ಈ ಸ್ಪಷ್ಟೀಕರಣ ಪಡೆಯುವ ಅಗತ್ಯ ಇಲ್ಲ ಎಂದು ನನಗೆ ಅನಿಸಿತು. ಆದ್ದರಿಂದ ನಾನು, ಪ್ರಭಾರ ವಹಿಸಿಕೊಂಡ ಮರುದಿನವೇ ೨೦ ಜನ ಶೀಘ್ರ ಲಿಪಿಕಾರರಿಗೆ ಸರ್ಕಾರದ ಆದೇಶದ ಪ್ರಕಾರ ಆಪ್ತ ಕಾರ್ಯದರ್ಶಿ ಹುದ್ದೆಗೆ ಪದೋನ್ನತಿ ನೀಡಿ ಆದೇಶ ಹೊರಡಿಸಿದೆನು. ಈ ಆದೇಶ ತತ್ ಕ್ಷಣದಿಂದ ಜಾರಿಯಾಗುವಂತೆ ನೋಡಿಕೊಂಡೆನು.
ವಿಮೆ ಹಣ ಹೆಚ್ಚಳಸರ್ಕಾರವು ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಅಂದರೆ, ಕಾನ್‌ಸ್ಟೇಬಲ್, ಹೆಡ್ ಕಾನ್‌ಸ್ಟೇಬಲ್, ಸಬ್ ಇನ್ಸ್‌ಪೆಕ್ಟರ್‌ಗಳಿಗೆ ೩ ಲಕ್ಷ ರೂಪಾಯಿಗಳ ಸಾಮೂಹಿಕ ವಿಮಾ ಯೋಜನೆಯನ್ನು ಜಾರಿಗೆ ತಂದಿತ್ತು. ಇದರಿಂದಾಗಿ, ಕರ್ತವ್ಯ ನಿರ್ವಹಣೆ ವೇಳೆ ಅಥವಾ ಅನಾರೋಗ್ಯದಿಂದ ಮರಣ ಹೊಂದುವ ಪೊಲೀಸ್ ಸಿಬ್ಬಂದಿ ವರ್ಗದರ ಕುಟುಂಬಗಳಿಗೆ ಸಾಮೂಹಿಕ ವಿಮಾ ಯೋಜನೆಯಿಂದ ಮೂರು ಲಕ್ಷ ರೂಪಾಯಿ ನೀಡುವ ವ್ಯವಸ್ಥೆ ಇತ್ತು. ಸಾಮಾನ್ಯ ಬೆಲೆಗಳಲ್ಲಿ ಆದ ಏರಿಕೆಯಿಂದಾಗಿ, ಸಾಮೂಹಿಕ ವಿಮೆಯ ಈ ಪರಿಹಾರಧನವು ಬಹಳ ಕಡಿಮೆ ಮೊತ್ತ ಎಂದು ನನಗೆ ಅನಿಸಿತು.
ಸಾಮೂಹಿಕ ವಿಮಾ ಯೋಜನೆಯ ಮೊತ್ತವನ್ನು ೧೦ ಲಕ್ಷ ರೂಪಾಯಿಗಳಿಗೆ ಹೆಚ್ಚಿಸಬೇಕು ಎಂದು ನಾನು ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದೆನು. ಸರ್ಕಾರವು ಈ ಪ್ರಸ್ತಾವನೆಯನ್ನು ಸಂತೋಷದಿಂದ ಒಪ್ಪಿ, ಅನುಮೋದಿಸಿತು. ಇದರಿಂದಾಗಿ, ಸಿಬ್ಬಂದಿ ವರ್ಗದವರು ಸೇವೆ ಯಲ್ಲಿರುವಾಗ ನಿಧನ ಹೊಂದಿದರೆ ಅವರ ಕುಟುಂಬಕ್ಕೆ ೧೦ ಲಕ್ಷ ರೂಪಾಯಿಗಳ ವಿಮೆಯ ಹಣ ದೊರೆಯುವಂತಾಯಿತು.
ಆರೋಗ್ಯವೇ ಭಾಗ್ಯಪೊಲೀಸ್ ಇಲಾಖೆಯ ಎಲ್ಲಾ ಕಾನ್‌ಸ್ಟೇಬಲ್‌ಗಳಿಂದ ಡಿಜಿಪಿ ಹುದ್ದೆಯವರೆಗೆ ಮತ್ತು ಲಿಪಿಕ ನೌಕರ ವರ್ಗದವರಿಗೆ ಅನುಕೂಲವಾಗುವಂತೆ ‘ಆರೋಗ್ಯ ಭಾಗ್ಯ’ ಯೋಜನೆಯನ್ನು ಬಹಳ ವರ್ಷಗಳ ಹಿಂದೆಯೇ ಜಾರಿಗೆ ತಂದಿತ್ತು. ಈ ಯೋಜನೆಯ ಪ್ರಕಾರ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗೆ ‘ಆರೋಗ್ಯ ಭಾಗ್ಯ’ ಕಾರ್ಡ್ ನೀಡಲಾಗುತ್ತಿತ್ತು. ಅವರು ಮತ್ತು ಅವರ ಕುಟುಂಬ ವರ್ಗದವರು ರಾಜ್ಯದ ಯಾವುದೇ ಉತ್ತಮ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಈ ಯೋಜನೆಯ ಮೂಲಕ ಉತ್ತಮ ಚಿಕಿತ್ಸೆ ದೊರೆಯುತ್ತಿತ್ತು. ಈ ಚಿಕಿತ್ಸೆಯ ವೆಚ್ಚಕ್ಕೆ ಯಾವುದೇ ಮಿತಿ ಇರಲಿಲ್ಲ. ಇದರಿಂದಾಗಿ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಹೆಚ್ಚಿನ ಅನುಕೂಲವಾಗಿತ್ತು.
ಪ್ರಾಧಿಕಾರದಿಂದ ಹಣಕಾನ್‌ಸ್ಟೇಬಲ್‌ನಿಂದ ಡಿಜಿಪಿವರೆಗಿನ ಎಲ್ಲಾ ಹಂತದ ಅಧಿಕಾರಿಗಳಿಗೆ ಅವರವರ ವೇತನ ಶ್ರೇಣಿಗೆ ಅನುಗುಣವಾಗಿ ಪ್ರತಿ ತಿಂಗಳು ನಿಗದಿತ ವಂತಿಗೆಯನ್ನು ಈ ಯೋಜನೆಗೆ ನೀಡಬೇಕಾಗಿತ್ತು. ಆರೋಗ್ಯ ಭಾಗ್ಯ ಯೋಜನೆಯನ್ನು ನಿರ್ವಹಿಸುವ ಸಮಿತಿಯು ಈ ವಂತಿಗೆಯ ಮೊತ್ತವನ್ನು ಕಾಲಕಾಲಕ್ಕೆ ನಿರ್ಧರಿಸುತ್ತಿತ್ತು. ಈ ವಂತಿಗೆಯನ್ನು ಅವರ ವೇತನ ದಿಂದ ಕಡಿತ ಮಾಡಿ, ಇದಕ್ಕಾಗಿ ರಚಿಸಿದ ಒಂದು ಕೋಶದಲ್ಲಿ ಇಡಲಾಗುತ್ತಿತ್ತು. ಆರೋಗ್ಯ ಭಾಗ್ಯ ಯೋಜನೆಯ ಲಾಭ ಪಡೆದು ಯಾವುದೇ ಆಸ್ಪತ್ರೆಯಲ್ಲಿ ಸಿಬ್ಬಂದಿವರ್ಗದವರು ಚಿಕಿತ್ಸೆ ಪಡೆದಾಗ ಅದಕ್ಕೆ ಆ ಖಾಸಗಿ ಆಸ್ಪತ್ರೆಯವರು ಅದಕ್ಕೆ ಸಂಬಂಧಿಸಿದ ಬಿಲ್‌ಅನ್ನು ನೇರವಾಗಿ ಆರೋಗ್ಯಭಾಗ್ಯ ಯೋಜನೆಗೆ ಕಳುಹಿಸಿಕೊಡುತ್ತಿದ್ದರು. ಆರೋಗ್ಯಭಾಗ್ಯ ಯೋಜನೆಯ ವಿಭಾಗದಲ್ಲಿ ಆ ಸಿಬ್ಬಂದಿವರ್ಗದವರಿಗೆ ಸರ್ಕಾರದ ವೈದ್ಯಕೀಯ ವೆಚ್ಚ ಮರುಪಾವತಿ ನಿಯಮಗಳ ಪ್ರಕಾರ ಮಂಜೂರಾಗಬೇಕಾದ ಹಣವನ್ನು ಸೂಕ್ತ ಪ್ರಾಧಿಕಾರದಿಂದ ಮಂಜೂರಾತಿ ಪಡೆದು ಆ ಹಣವನ್ನು ಆರೋಗ್ಯಭಾಗ್ಯ ಯೋಜನೆಗೆ ಸಂದಾಯ ಮಾಡುತ್ತಿದ್ದರು.
ಹಣಕಾಸಿನ ತೊಂದರೆಸಾಮಾನ್ಯವಾಗಿ ಪ್ರತಿಯೊಂದು ಪ್ರಕರಣದಲ್ಲಿ ಈ ರೀತಿ ವೈದ್ಯಕೀಯ ವೆಚ್ಚ ಮರುಪಾವತಿ ನಿಯಮಗಳ ಪ್ರಕಾರ ಸಂದಾಯವಾಗುತ್ತಿದ್ದ ಹಣ, ಯಾವಾಗಲೂ ಖಾಸಗಿ ಆಸ್ಪತ್ರೆಯ ಬಿಲ್‌ಗಳಿಗಿಂತ ಕಡಿಮೆಯಾಗಿರುತ್ತಿತ್ತು. ಈ ಅಂತರವನ್ನು ಆರೋಗ್ಯಭಾಗ್ಯ ಯೋಜನೆಯ ನಿರ್ವಹಣಾ ಸಮಿತಿಯುಸಿಬ್ಬಂದಿ ವರ್ಗದವರಿಂದ ಸಂಗ್ರಹಿಸಿದ ವಂತಿಗೆ ಹಣದಿಂದ ಭರಿಸುತ್ತಿತ್ತು. ಈ ಯೋಜನೆಯು ಆರಂಭದ ಕೆಲ ವರ್ಷಗಳ ಕಾಲ ಉತ್ತಮ ರೀತಿಯಿಂದ ನಡೆಯಿತು. ಆದರೆ, ನಂತರ ಆರೋಗ್ಯಭಾಗ್ಯ ಯೋಜನೆಯ ಹಣಕಾಸಿನ ತೊಂದರೆಯನ್ನು ಎದುರಿಸಬೇಕಾಯಿತು. ಯಾಕೆಂದರೆ, ವಂತಿಗೆಯಿಂದ ಸಂಗ್ರಹವಾಗುತ್ತಿದ್ದ ಹಣ ಯೋಜನೆಯ ಪ್ರಕಾರ ಸರ್ಕಾರದಿಂದ ಮರು ಪಾವತಿಯಾಗುತ್ತಿದ್ದ ಹಣಕ್ಕಿಂತ ಹೆಚ್ಚಿಗೆ ನೀಡಬೇಕಾದ ಮೊತ್ತವನ್ನು ನೀಡಲು ಸಾಕಾಗುತ್ತಿರಲಿಲ್ಲ.
ಸರ್ವರಿಗೂ ವಿಸ್ತರಣೆಆದ್ದರಿಂದ ಸಮಿತಿಯು ಈ ಯೋಜನೆಯ ಲಾಭವನ್ನು ಸಿಬ್ಬಂದಿವರ್ಗದವರು ಮತ್ತು ಅವರ ಹೆಂಡತಿ ಹಾಗೂ ಮಕ್ಕಳಿಗೆ ಮಾತ್ರ ಮಿತಿ ಗೊಳಿಸಿತು. ಸಿಬ್ಬಂದಿ ವರ್ಗದವರ ತಾಯಿ ತಂದೆಗೆ ಈ ಸೌಲಭ್ಯ ನೀಡುವುದನ್ನು ನಿಲ್ಲಿಸಿತು. ಇದರಿಂದಾಗಿ ಕೆಳವರ್ಗದ ಸಿಬ್ಬಂದಿ ವರ್ಗದವರಿಗೆ ಅವರ ತಾಯಿ ತಂದೆಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವುದು ದುಸ್ತರವಾಯಿತು. ನಾನು ಈ ವಿಷಯವನ್ನು ಪರಿಶೀಲಿಸಿ, ಅಽಕಾರಿ ಮತ್ತು ಸಿಬ್ಬಂದಿವರ್ಗದವರು ಆರೋಗ್ಯಭಾಗ್ಯ ಯೋಜನೆಗೆ ನೀಡುತ್ತಿದ್ದ ವಂತಿಗೆಯ ಮೊತ್ತವನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಳ ಮಾಡಿ, ಈ ಯೋಜನೆಯ ಲಾಭವನ್ನು ಸಿಬ್ಬಂದಿ ವರ್ಗದವರ ಹೆತ್ತವರಿಗೂ ವಿಸ್ತರಿಸಿದೆನು. ಇದರಿಂದ ಸಿಬ್ಬಂದಿವರ್ಗದವರಿಗೆ ತಮ್ಮ ಹೆತ್ತವರಿಗೂ ಉತ್ತಮ ಚಿಕಿತ್ಸೆ ಕೊಡಿಸುವುದು ಸಾಧ್ಯವಾಯಿತು.
ಅರ್ಹರ ನಿಯುಕ್ತಿಪೊಲೀಸ್ ವ್ಯವಸ್ಥೆ ಅಸ್ತಿತ್ವಕ್ಕೆ ಬಂದ ಕಾಲಕ್ಕೆ ಅಂದರೆ ಸುಮಾರು ೧೮೮೫ರಿಂದಲೂ ಕರ್ನಾಟಕ ರಾಜ್ಯದಲ್ಲಿ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳು ಅವರ ಘಟಕದಲ್ಲಿ ರಿಕ್ತವಾಗುವ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡುವ ಅಧಿಕಾರ ಮತ್ತು ಜವಾಬ್ದಾರಿ ಹೊಂದಿದ್ದರು. ಇದಕ್ಕಾಗಿ ಸರ್ಕಾರದಿಂದ ಅನುಮೋದಿತವಾದ ನಿಯಮಗಳನ್ನು ಪಾಲಿಸಿ, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳು ತಮ್ಮ ತಮ್ಮ ಘಟಕಗಳಲ್ಲಿ ಕಾನ್‌ಸ್ಟೇಬಲ್ಹುದ್ದೆಗೆ ಅರ್ಹರನ್ನು ಆಯ್ಕೆ ಮಾಡಿ ನಿಯುಕ್ತ ಮಾಡುತ್ತಿದ್ದರು.
ದೇವೇಗೌಡರಿಗೆ ಚಾಡಿ!ಈ ಕಾನೂನು ಸಲಹೆಗೆ ಅನುಗುಣವಾಗಿ ನಾನು ಸಚಿವ ಸಂಪುಟದ ನಿರ್ಣಯ ಮತ್ತು ಸರ್ಕಾರದ ಆದೇಶದ ಪ್ರಕಾರ ಪ್ರಕರಣ ವೊಂದನ್ನು ದಾಖಲಿಸಿ ತನಿಖೆ ಮಾಡುವಂತೆ ಆದೇಶಿಸಿದೆನು. ಈ ಪ್ರಕರಣ ದಾಖಲಾದ ನಂತರ, ಕೆಲವು ಕುಹಕಿಗಳು ಮತ್ತು ನನ್ನ ವೃತ್ತಿಯಲ್ಲಿ ನಾನು ಸಾಧಿಸಿದ ಉತ್ಕರ್ಷವನ್ನು ಸಹಿಸದ ಕೆಲವರು ಶ್ರೀ ದೇವೇಗೌಡರನ್ನು ಭೇಟಿಯಾಗಿ, ‘ನಿಮ್ಮ ಮೇಲೆ ಕ್ರಿಮಿನಲ್ ಪ್ರಕರಣವನ್ನು ಬಿದರಿಯವರು ದಾಖಲಿಸಿದ್ದಾರೆ. ಅವರು ನಿಮ್ಮನ್ನುಬಂಧಿಸುವಂತಹ ಕ್ರಮ ಕೈಗೊಳ್ಳಬಹುದು’ ಎಂದು ಅವರಿಗೆ ಚಾಡಿ ಹೇಳಿದರು. ನಿಜವಾಗಿಯೂ ಆ ಪ್ರಕರಣದಲ್ಲಿ ಯಾವುದೇ ಅಪರಾಧಿಗಳನ್ನು ಹೆಸರಿಸಿರಲಿಲ್ಲ.