 : ಕರ್ನಾಟಕ ರಣಜಿ ಸಂಭಾವ್ಯ ತಂಡದಲ್ಲಿ ಸಮಿತ್‌ ದ್ರಾವಿಡ್‌
ಬೆಂಗಳೂರು:ಕೆಲ ದಿನಗಳ ಹಿಂದಷ್ಟೇ ಭಾರತ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದ 18 ವರ್ಷ ಪ್ರಾಯದ ಸಮಿತ್‌ ದ್ರಾವಿಡ್‌( ) ಇದೀಗ ಮುಂದಿನ ತಿಂಗಳು ಆರಂಭಗೊಳ್ಳಲಿರುವ 2024-25ರ ರಣಜಿ ಟ್ರೋಫಿಗೆ( ) ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಪ್ರಕಟಿಸಿದ ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತ ತಂಡದ ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ರ ಪುತ್ರನಾಗಿರುವ ಸಮಿತ್‌ ದ್ರಾವಿಡ್‌ ಕಿರಿಯರ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿ, ಇತ್ತೀಚೆಗೆ ಮುಕ್ತಾಯಗೊಂಡ 3ನೇ ಆವೃತ್ತಿಯ ಮಹಾರಾಜ ಟ್ರೋಫಿಯಲ್ಲಿಯೂ ಆಡಿದ್ದರು. ಈ ವರ್ಷದ ಆರಂಭದಲ್ಲಿ ನಡೆದಿದ್ದ 19 ವರ್ಷದ ಕೂಚ್ ಬೆಹಾರ್ ಟ್ರೋಫಿಯಲ್ಲಿ ಕರ್ನಾಟಕ ತಂಡ ಗೆಲ್ಲುವಲ್ಲಿ ಸಮಿತ್‌ ಪ್ರಮುಖ ಪಾತ್ರ ವಹಿಸಿದ್ದರು. ಆಡಿದ ಎಂಟು ಪಂದ್ಯಗಳಲ್ಲಿ 362 ರನ್ ಗಳಿಸಿದ್ದರು. ಈ ಪ್ರದರ್ಶನ ಕಂಡು ಅವರಿಗೆ ರಾಜ್ಯ ಹಿರಿಯರ ತಂಡದಲ್ಲಿಯೂ ಆಡುವ ಅವಕಾಶವೊಂದು ಒದಗಿ ಬಂದಿದೆ. ಸದ್ಯದಲ್ಲೇ ಕೆಎಸ್‌ಸಿಎ ಅಂತಿಮ 15 ಆಟಗಾರರ ಪಟ್ಟಿ ಪ್ರಕಟ ಮಾಡಲಿದೆ. ಅಂತಿಮ ಪಟ್ಟಿಯಲ್ಲಿ ಅವರು ಸ್ಥಾನ ಪಡೆಯಲಿದ್ದಾರಾ ಎಂದು ಕಾದು ನೋಡಬೇಕಿದೆ. ‘ಸಿ’ ಗುಂಪಿನಲ್ಲಿರುವ ಕರ್ನಾಟಕ, ಮೊದಲ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಸೆಣಸಲಿದೆ.
ಸಂಭವನೀಯ ತಂಡದಲ್ಲಿ ಕೆ.ಎಲ್‌. ರಾಹುಲ್‌, ಮಾಯಾಂಕ್‌ ಅಗರ್ವಾಲ್‌, ದೇವದತ್‌ ಪಡಿಕ್ಕಲ್‌, ಪ್ರಸಿದ್ಧ್ ಕೃಷ್ಣ, ವೈಶಾಕ್‌ ವಿಜಯ್‌ ಕುಮಾರ್‌, ಶ್ರೇಯಸ್‌ ಗೋಪಾಲ್‌, ಶುಭಂಗ್‌ ಹೆಗ್ಡೆ, ಚೇತನ್‌ ಎಲ್‌.ಆರ್‌., ಅಭಿನವ್‌ ಮನೋಹರ್‌, ಮೊಹ್ಸಿನ್‌ ಖಾನ್‌, ಅಭಿಲಾಷ್‌ ಶೆಟ್ಟಿ ಪ್ರಮುಖ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ  : ಮೊದಲ ಟೆಸ್ಟ್‌ಗೆ ಭಾರತದ ತ್ರಿವಳಿ ಸ್ಪಿನ್‌ ಅಸ್ತ್ರ
ಇದೇ ತಿಂಗಳು 21, 23 ಮತ್ತು 26 ರಂದು ಪುದುಚೇರಿಯಲ್ಲಿ ಮೂರು 50-ಓವರ್‌ಗಳ ಪಂದ್ಯಗಳಲ್ಲಿ ಆಸ್ಟ್ರೇಲಿಯಾ -19 ತಂಡದ ವಿರುದ್ಧ ಭಾರತ ಕಣಕ್ಕಿಳಿಯಲಿದೆ. ಸಮಿತ್‌ ಕೂಡ ತಂಡದಲ್ಲಿದ್ದಾರೆ. ಸಮಿತ್‌ ಏಕದಿನ ಮತ್ತು ಟೆಸ್ಟ್‌ ಎರಡೂ ತಂಡಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ರಣಜಿ ಸಂಭವನೀಯ ಆಟಗಾರರ ಪಟ್ಟಿ
ಕೆ.ಎಲ್‌.ರಾಹುಲ್‌, ಮಾಯಾಂಕ್‌ ಅಗರ್ವಾಲ್‌, ಮನೀಶ್‌ ಪಾಂಡೆ, ದೇವದತ್‌ ಪಡಿಕ್ಕಲ್‌, ಪ್ರಸಿದ್ಧ್‌ ಕೃಷ್ಣ, ವಿದ್ವತ್‌ ಕಾವೇರಪ್ಪ, ವೈಶಾಖ್‌ ವಿಜಯ್‌ಕುಮಾರ್‌, ನಿಕಿನ್‌ ಜೋಸ್‌, ಸ್ಮರಣ್‌ ಆರ್‌, ಕಿಶನ್‌ ಬೆಡಾರೆ, ಅನೀಶ್‌ ಕೆ.ವಿ., ಶರತ್‌ ಶ್ರೀನಿವಾಸ್‌, ಸುಜಯ್‌ ಸತೇರಿ, ಕೃತಿಕ್‌ ಕೃಷ್ಣ, ವಾಸುಕಿ ಕೌಶಿಕ್‌, ಅಭಿಲಾಷ್‌ ಶೆಟ್ಟಿ, ವೆಂಕಟೇಶ್‌ ಎಂ., ಶ್ರೇಯಸ್‌ ಗೋಪಾಲ್‌, ಹಾರ್ದಿಕ್‌ ರಾಜ್‌, ಶುಭಾಂಗ್‌ ಹೆಗಡೆ, ರೋಹಿತ್‌ ಕುಮಾರ್‌, ಧೀರಜ್‌ ಗೌಡ, ಮೊಹ್ಸಿನ್‌ ಖಾನ್‌, ಶಶಿಕುಮಾರ್‌ ಕೆ., ಅಧೋಕ್ಷ್‌, ಶಿಖರ್‌ ಶೆಟ್ಟಿ, ಯಶೋವರ್ಧನ್‌, ವಿಶಾಲ್‌ ಓನತ್‌, ಜ್ಯಾಸ್ಪರ್‌ ಇ.ಜೆ., ಸಮಿತ್‌ ದ್ರಾವಿಡ್‌, ಕಾರ್ತಿಕೇಯ ಕೆ.ಪಿ., ಸಮರ್ಥ್‌ ನಾಗರಾಜ್‌, ಲುವ್ನಿತ್‌ ಸಿಸೋಡಿಯಾ, ಚೇತನ್‌ ಎಲ್‌.ಆರ್‌., ಅಭಿನವ್‌ ಮನೋಹರ್‌.