ಆರ್‌ಸಿಬಿಗೆ ಇಂದು ’ಮಾಡು ಇಲ್ಲವೇ ಮಡಿ’ ಪಂದ್ಯ
ಮುಂಬೈ: ರಾಯಲ್‌ ಚಾಲೆಂಜರ್ ಬೆಂಗಳೂರು ಗುರುವಾರ ಗುಜರಾತ್‌ ಟೈಟಾನ್ಸ್‌ ವಿರುದ್ಧ ಅಂತಿಮ ಲೀಗ್‌ ಪಂದ್ಯ ಆಡಲಿದೆ.
ಇದನ್ನು ಭಾರೀ ಅಂತರದಿಂದ ಗೆದ್ದು, ಉಳಿದ ಒಂದೆರಡು ತಂಡಗಳು ಸೋತರಷ್ಟೇ ಆರ್‌ಸಿಬಿಗೆ ಪ್ಲೇ ಆಫ್ ಅವಕಾಶ ಎದುರಾಗಲಿದೆ.
ಆರ್‌ಸಿಬಿ 13 ಪಂದ್ಯಗಳಲ್ಲಿ ಏಳನ್ನು ಗೆದ್ದು 5ನೇ ಸ್ಥಾನದಲ್ಲಿದೆ. ಒಂದು ಮೆಟ್ಟಿಲು ಮೇಲೇರಿದರೆ ಪ್ಲೇ ಆಫ್ ಅವಕಾಶ ತೆರೆಯಲಿದೆ. ಆದರೆ ತಂಡಕ್ಕೆ ದೊಡ್ಡ ಹಿನ್ನಡೆಯಾಗಿರುವುದು ರನ್‌ರೇಟ್‌.
ಆರ್‌ಸಿಬಿಗೆ ಕಂಟಕವಾಗಿ ಕಾಡಿದ್ದು ಪಂಜಾಬ್‌ ಕಿಂಗ್ಸ್‌ ಎದುರು ಹಿಂದಿನ ಪಂದ್ಯದಲ್ಲಿ ಅನುಭವಿಸಿದ 54 ರನ್‌ ಅಂತರದ ಆಘಾತಕಾರಿ ಸೋಲು. ಸತತ ಎರಡು ಪಂದ್ಯಗಳನ್ನು ಗೆದ್ದು ಉತ್ತಮ ಲಯದಲ್ಲಿದ್ದ ಬೆಂಗಳೂರು, ಪಂಜಾಬ್‌ಗ ಇನ್ನೂರಕ್ಕೂ ಹೆಚ್ಚು ರನ್‌ ಬಿಟ್ಟುಕೊಟ್ಟು ಕೈ ಸುಟ್ಟುಕೊಂಡಿತು.
ಆರ್‌ಸಿಬಿ ಟಾಸ್‌ ಜಯಿಸಿದ್ದೇ ಆದರೆ ಮೊದಲು ಬ್ಯಾಟಿಂಗ್‌ ನಡೆಸಿ ದೊಡ್ಡ ಮೊತ್ತವನ್ನು ರಾಶಿ ಹಾಕಿದರೆ ಸೇಫ್ ಎಂಬುದು ಅನಿಸಿಕೆ. ಆದರೆ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸುವ ಧೈರ್ಯ ತೋರಿದ್ದು ಗುಜರಾತ್‌ ನಾಯಕ ಹಾರ್ದಿಕ್‌ ಪಾಂಡ್ಯ. ಗುಜರಾತ್‌ 13 ಪಂದ್ಯಗಳಲ್ಲಿ ಸೋತದ್ದು ಮೂರನ್ನು ಮಾತ್ರ. ಯಾವುದೇ ಒತ್ತಡ ಇಲ್ಲದಿರುವುದರಿಂದ ಗುಜರಾತ್‌ಗೆ ಇದು ಅಸಾಧ್ಯವೂ ಅಲ್ಲ.
ಗುಜರಾತ್‌ ಟೈಟಾನ್ಸ್‌ ತಂಡದ ಯಶಸ್ಸಿನ ಹಿಂದೆ ಫೀಲ್ಡಿಂಗ್‌ ಯಶಸ್ಸಿನ ಪಾಲು ಕೂಡ ದೊಡ್ಡದಿದೆ.
ಡೆಲ್ಲಿಒಂದು ವೇಳೆ ಗೆದ್ದರೂ ಆರ್‌ಸಿಬಿ ಪ್ಲೇ ಆಫ್ ಪ್ರವೇಶಕ್ಕಾಗಿ ಮೇ 21ರ ತನಕ ಕಾಯಬೇಕು. ಅಂದು ಡೆಲ್ಲಿ ಕ್ಯಾಪಿಟಲ್ಸ್‌, ಮುಂಬೈ ಇಂಡಿಯನ್ಸ್‌ ವಿರುದ್ಧ ಕೊನೆಯ ಲೀಗ್‌ ಪಂದ್ಯ ಆಡಲಿದೆ. ಇಲ್ಲಿ ಡೆಲ್ಲಿ ಸೋತರೆ ಆರ್‌ಸಿಬಿ ಮುಂದಿನ ಸುತ್ತಿಗೆ ತೇರ್ಗಡೆಯಾಗಲಿದೆ. ಅಕಸ್ಮಾತ್‌ ಆರ್‌ಸಿಬಿ ಮತ್ತು ಡೆಲ್ಲಿ ಎರಡೂ ಅಂತಿಮ ಲೀಗ್‌ ಪಂದ್ಯದಲ್ಲಿ ಸೋತರೆ ಇತ್ತಂಡಗಳ ಅಂಕ 14ಕ್ಕೆ ಸೀಮಿತಗೊಳ್ಳುತ್ತದೆ.