‘ಟೆಸ್ಟ್‌’ ಪಂದ್ಯಕ್ಕೆ ಮಳೆ ಅಡ್ಡಿ: ಭಾರತ ‘ಎ’ 229/6
ಹುಬ್ಬಳ್ಳಿ:ಭಾರತ ‘ಎ’ ಹಾಗೂ ನ್ಯೂಜಿಲೆಂಡ್‌ ‘ಎ’ ತಂಡಗಳ ನಡುವಣ ‘ಟೆಸ್ಟ್‌’ ಪಂದ್ಯಕ್ಕೆ ಶನಿವಾರ ಮಳೆ ಅಡ್ಡಿಯಾಗಿದೆ. ಶುಕ್ರವಾರ ಆರಂಭವಾದ ಮಳೆ ಶನಿವಾರ ಬೆಳಿಗ್ಗೆ ಮುಂದುವರಿದಿತ್ತು.
ಬೆಳಿಗ್ಗೆ ಎಂದಿನಂತೆ ಭಾರತ ತಂಡದ ಆಟಗಾರರು ಕ್ರೀಡಾಂಗಣಕ್ಕೆ ಬಂದಿದ್ದರು. ಆದರೆ, ಆಟವಾಡಲು ಪರಿಸ್ಥಿತಿ ಅನುಕೂಲ ವಿಲ್ಲದ್ದರಿಂದ ಹಾಗೂ ಮಧ್ಯಾಹ್ನ ತನಕ ಆಟ ನಡೆಯುವುದು ಸಾಧ್ಯವಿಲ್ಲದ ಕಾರಣ ಆಟಗಾರರು ಹೋಟೆಲ್‌ಗೆ ಮರಳಿದರು.
ಕಿವೀಸ್‌ ತಂಡದ ಆಟಗಾರರು ಬೆಳಿಗ್ಗೆ ಕ್ರೀಡಾಂಗಣಕ್ಕೆ ಬರದೇ ಹೋಟೆಲ್‌ನಲ್ಲೇ ಉಳಿದರು.
ನಾಲ್ಕು ದಿನಗಳ ಈ ಪಂದ್ಯದ ಮೊದಲ ದಿನದಾಟವೂ ಬಲಿಯಾಗಿತ್ತು. ಆಗಾಗ ಮಳೆ ಕಾಡಿದ್ದರಿಂದ 66 ಓವರ್‌ಗಳಷ್ಟೇ ಪಂದ್ಯ ನಡೆದಿತ್ತು.
ಟಾಸ್‌ ಸೋತು ಬ್ಯಾಟಿಂಗ್ ನಡೆಸುತ್ತಿರುವ ಭಾರತ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 66 ಓವರ್‌ ಅಂತ್ಯಕ್ಕೆ 6 ವಿಕೆಟ್‌ ಕಳೆದುಕೊಂಡು 229 ರನ್‌ ಗಳಿಸಿ ಆಡುತ್ತಿದೆ. ವಿಕೆಟ್‌ ಕೀಪರ್‌ ಕೆ.ಎಸ್‌.ಭರತ್‌(74) ಹಾಗೂ ರಾಹುಲ್‌ ಚಾಹರ್‌ (4) ಕ್ರೀಸ್‌ನಲ್ಲಿದ್ದಾರೆ.