ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸಿದ ಜಿಲ್ಲಾಭಿವೃದ್ದಿ ಪ್ರಾಧಿಕಾರ ಚುನಾವಣೆ
ವೀಕೆಂಡ್‌ ವಿಥ್‌ ಮೋಹನ್‌
ಮೋಹನ್ ವಿಶ್ವ
ಜಮ್ಮು ಕಾಶ್ಮೀರ’ವೆಂದರೆ ಥಟ್ಟನೆ ನೆನಪಾಗುವುದು ‘ಪ್ರಕೃತಿ ಸೌಂದರ್ಯ’ ಪ್ರೇಮ ಕಾಶ್ಮೀರವೆಂದೇ ಪ್ರಸಿದ್ಧವಾಗಿರುವ ಕಾಶ್ಮೀರದ ಕಣಿವೆಗಳನ್ನು ಕಣ್ಣಿನಿಂದ ನೋಡುವುದೇ ಪರಮಾನಂದ. ಇಂತಹ ಅದ್ಭುತ ತಾಣದಲ್ಲಿ ದಶಕಗಳ ಕಾಲ ಸರಿಯಾದ ‘ಪ್ರಜಾ ಪ್ರಭುತ್ವವೇ’ ಅಸ್ತಿತ್ವದಲ್ಲಿರಲಿಲ್ಲವೆಂಬ ಸತ್ಯ ಜಗಜ್ಜಾಹೀರ.
ಪ್ರತಿನಿತ್ಯವೂ ಒಂದಿಂದು ಕಾರಣಕ್ಕಾಗಿ ಪ್ರತಿಭಟನೆಗಳು, ಹಿಂಸಾಚಾರಗಳು ನಡೆಯುತ್ತಲೇ ಇದ್ದವು. ಇಡೀ ದೇಶಕ್ಕೊಂದುಸಂವಿಧಾನವಾದರೆ ಜಮ್ಮು ಕಾಶ್ಮೀರಕ್ಕೆ ಮಾತ್ರ ಬೇರೆಯದ್ದೇ ಸಂವಿಧಾನವಿತ್ತು, ಅದರಡಿಯಲ್ಲಿ ದಶಕಗಳ ಕಾಲ ತಮಗಿಷ್ಟಬಂದಂತೆ ಆಡಳಿತ ನಡೆಸಿಕೊಂಡು ಬಂದಂಥ ಕೀರ್ತಿ ಅಬ್ದು ಹಾಗೂ ಮಫ್ತಿ ಕುಟುಂಬಗಳಿಗೆ ಸಲ್ಲಬೇಕು.
ಸ್ವತಂತ್ರ್ಯ ಬಂದಾಗಿನಿಂದಲೂ ತನ್ನ ಒಡಲಲ್ಲಿ ಹಿಂಸಾಚಾರವೆಂಬ ಕೆಂಡವನ್ನಿಟ್ಟುಕೊಂಡು ಹೊರಜಗತ್ತಿಗೆ ಹಿಂಸೆಯತಾಣವಾಗಿ ಮಾತ್ರ ಕಾಶ್ಮೀರ ಕಾಣುತ್ತಿತ್ತು. ಪಾಕಿಸ್ತಾನದ ಹುಚ್ಚು ತಿಳಿವಳಿಕೆಗಳಿಂದ ಹಲವು ಯುವಕರು ಅಲ್ಲಿನ ಉಗ್ರ ಸಂಘಟನೆ ಯೊಂದಿಗೆ ಕೈಜೋಡಿಸಿ ಭಾರತದ ವಿರುದ್ಧ ನಿಂತರು. ತನ್ನಲ್ಲಿರುವ ಜನರಿಗೆ ಮೂರು ಹೊತ್ತು ಊಟ ನೀಡಲು ಯೋಗ್ಯತೆಯಿಲ್ಲದ ಪಾಕಿಸ್ತಾನಕ್ಕೆ ಕಾಶ್ಮೀರ ಬೇಕಂತೆ, ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ತಾವು ಪಾಕಿಸ್ತಾನಕ್ಕೆ ಹೋದರೆ ತಿನ್ನಲು ಅನ್ನ ಸಿಗುವುದಿಲ್ಲ ವೆಂಬ ಅಂಶ ತಿಳಿದ್ದಿದರೂ ಸಹ ತಮ್ಮ ಸ್ವಾರ್ಥಕ್ಕಾಗಿ ಕಾಶ್ಮೀರವನ್ನು ಬಲಿಕೊಡುವ ಮಹದಾಸೆ ಮಾತ್ರ ಕಡಿಮೆಯಾಗಿಲ್ಲ.
ಕೇಂದ್ರ ಸರಕಾರವು ಜಮ್ಮು ಕಾಶ್ಮೀರದ ವಿಷಯದಲ್ಲಿ ತಲೆ ಹಾಕುವುದಿಲ್ಲವೆಂಬ ಅಂಶವನ್ನಿಟ್ಟುಕೊಂಡು ತಮಗಿಷ್ಟ ಬಂದಂತೆ ಭಾರತದ ವಿರುದ್ಧ ಸದಾ ಕತ್ತಿ ಮಸೆಯುತ್ತಿದ್ದ ಪಾಕಿಸ್ತಾನಕ್ಕೆ ಶಾಕ್ ನೀಡಿದ್ದು ನರೇಂದ್ರ ಮೋದಿ ಹಾಗೂ ಅಮಿತ್ ಶಾ. ಕಾಶ್ಮೀರಕ್ಕೆ ನೀಡಿದ್ದ ಪ್ರತ್ಯೇಕ ಸ್ಥಾನಮಾನವನ್ನು ರದ್ದುಮಾಡುವ ಮೂಲಕ ಪಾಕಿಸ್ತಾನಕ್ಕೆ ದೊಡ್ಡದೊಂದು ಶಾಕ್ ನೀಡಿದರು. ಕಾಶ್ಮೀರದಲ್ಲಿ ಮಾತ್ರ ಭಾರತದ ತ್ರಿವರ್ಣ ಧ್ವಜವನ್ನು ಆರಿಸುವುದನ್ನು ಬಿಡುವುದಿಲ್ಲವೆಂದು ಹೇಳುತ್ತಿದ್ದವರಿಗೆ ಕಾಶ್ಮೀರದ ಮನೆ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಬೇಕಾಗಿ ಬಂತು.
ಜಮ್ಮು ಕಾಶ್ಮೀರದ ಪ್ರತ್ಯೇಕ ಸ್ಥಾನಮಾನವನ್ನು 2019ರಲ್ಲಿ ರದ್ದು ಮಾಡಿದ ಮೇಲೆ ನಡೆದಂತಹ ‘ಜಿ ಅಭಿವೃದ್ಧಿ ಮಂಡಳಿ’ಯಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು 74 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಅತ್ಯಂತ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತು. ಪ್ರತ್ಯೇಕ ಸ್ಥಾನಮಾನವನ್ನು ರದ್ದು ಮಾಡಿದ ಮೇಲೆ ನಡೆದಂಥ ಮೊಟ್ಟಮೊದಲ ಚುನಾವಣೆ ಇದಾಗಿತ್ತು. ಈ ಹಿಂದೆ ಕಾಶ್ಮೀರದಲ್ಲಿ ಚುನಾವಣೆಯೆಂದರೆ ಹಿಂಸಾಚಾರ ದಿಂದ ಕೂಡಿರುತ್ತಿತ್ತು.
ಪ್ರತ್ಯೇಕತಾವಾದಿಗಳು ಹಾಗೂ ಭಯೋತ್ಪಾದಕರ ಬೆದರಿಕೆಗಳಿಗಂಜಿ ಜನರು ಆಚೆಗೆ ಬರುತ್ತಿರಲಿಲ್ಲ. ಹೆದರಿಸಿ, ಬೆದರಿಸಿ ಜನರಿಂದ ವೋಟು ಹಾಕಿಸದೆ ಪ್ರಜಾಪ್ರಭುತ್ವದ ಮೂಲ ಸಿದ್ಧಾಂತವನ್ನೇ ಬುಡಮೇಲು ಮಾಡಲಾಗಿತ್ತು. ಕಳೆದ ಏಳು ದಶಕಗಳಲ್ಲಿ ಕೇವಲ ಐದು ಬಾರಿ ಕಾಶ್ಮೀರದ ಪುರಸಭೆ ಚುನಾವಣೆಗಳಾಗಿವೆ. 1978ರ ಬಳಿಕ 2005ರಲ್ಲಿ, ಅಂದರೆ ಬರೊಬ್ಬರು ಇಪ್ಪತ್ತೇಳು ವರ್ಷಗಳ ಬಳಿಕ ‘ಪುರಸಭಾ’ಚುನಾವಣೆಯು ನಡೆಯಿತು.
ಸಣ್ಣದೊಂದು ಪುರಸಭೆ ಚುನಾವಣೆಯನ್ನು ಇಪ್ಪತ್ತೇಳು ವರ್ಷಗಳ ಕಾಲ ನಡೆಸಲು ಸಾಧ್ಯವಾಗಲಿಲ್ಲವೆಂದರೆ ಅಲ್ಲಿನ ರಾಜಕೀಯ ವ್ಯವಸ್ಥೆಯು ಇನ್ನೆಷ್ಟು ಹದಗೆಟ್ಟಿತೆಂಬುದನ್ನು ಊಹಿಸಬಹುದು. 1987ರಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ವಿಧಾನ ಸಭಾಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾದ ‘ಫಾರೂಕ್ ಅಬ್ದು’ನ ಮೇಲೆ ಚುನಾವಣಾ ಮತ ಎಣಿಕೆಯಲ್ಲಿ ಅಕ್ರಮ ನಡೆಸಿzನೆಂಬ ಆರೋಪ ಕೇಳಿ ಬಂದಿತ್ತು. ಈತ ಅಧಿಕಾರಕ್ಕೆ ಬಂದ ಮೇಲೆ ಪ್ರತಿನಿತ್ಯವೂ ಒಂದಂದು ಅಹಿತಕರ ಘಟನೆಗಳು ಕೇಳಿ ಬರುತ್ತಲೇ ಇದ್ದವು.
1987ರ ಚುನಾವಣೆಯಲ್ಲಿ ಜಮ್ಮುವಿನಲ್ಲಿ ‘ಬಿಜೆಪಿ’ ಎರಡು ಸ್ಥಾನಗಳನ್ನು ಗೆದ್ದು ತನ್ನ ಖಾತೆಯನ್ನು ತೆರೆದಿತ್ತು. ‘ಅಬ್ದು’ನ ಕುಟುಂಬ ರಾಜಕಾರಣದಲ್ಲಿ ಕಾಶ್ಮೀರದಲ್ಲಿ ಕಂಡು ಕೇಳರಿಯದ ಅಕ್ರಮಗಳು ನಡೆದವು. ಪಾಕಿಸ್ತಾನದ ಉಗ್ರರಿಗೆ ಹಿಂಬಾಗಿಲಿ ನಿಂದ ಬೆಂಬಲ ನೀಡುತ್ತಾ, ಪ್ರತ್ಯೇಕತಾವಾದಿಗಳ ಜತೆ ಕೈ ಜೋಡಿಸಿ ಚುನಾವಣೆಗಳಲ್ಲಿ ಹೆಚ್ಚಿನ ಮತದಾನವಾಗದಂತೆ ನೋಡಿ ಕೊಳ್ಳುತ್ತಿದ್ದ. ಈತನ ‘ಜಂಗಲ್ ರಾಜ್’ ಕೊನೆಗೊಳಿಸಿ ಈತನ ಅಧಿಕಾರವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ 1990ರಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಯಿತು.
1996ರವರೆಗೂ ರಾಷ್ಟ್ರಪತಿಗಳ ಆಡಳಿತ ಜಾರಿಯಲ್ಲಿದ್ದಂಥ ರಾಜ್ಯದಲ್ಲಿ ಚುನಾವಣೆ ನಡೆಯಿತು, ವಿಪರ್ಯಾಸವೆಂದರೆ ಪುನಃ ‘ಅಬ್ದು’ನ ಪಕ್ಷವೇ ಅಧಿಕಾರಕ್ಕೆ ಬಂದಿತ್ತು.‘ಇಂದಿರಾ ಗಾಂಧಿ’ಯು ಸಂವಿಧಾನ ವಿರೋಧಿ ತುರ್ತು ಪರಿಸ್ಥಿತಿಯನ್ನು ಹೇರಿದಮೇಲೂ ಸಹ ಜನರು ಅವರನ್ನು ಮತ್ತೆ ಆಯ್ಕೆ ಮಾಡಿದ ರೀತಿಯಲ್ಲಿ ‘ಫಾರೂಕ್ ಅಬ್ದು’ ತನ್ನ ಶಕ್ತಿಯನ್ನು ಬಳಸಿ ಅಧಿಕಾರಕ್ಕೆ ಬಂದಿದ್ದ. 1996ರ ಚುನಾವಣೆಯಲ್ಲಿ ‘ಬಿಜೆಪಿ’ ತನ್ನ ಸಂಖ್ಯೆಯನ್ನು ಎರಡರಿಂದ ಎಂಟಕ್ಕೆ ಏರಿಸಿಕೊಂಡಿತ್ತು, ನಿಧಾನವಾಗಿ ಕಣಿವೆ ರಾಜ್ಯದಲ್ಲಿ ಬಿ.ಜೆ.ಪಿ ವಿಸ್ತಾರವಾಗಿ ಹರಡಲು ಶುರುಮಾಡಿತ್ತು.
ಜಮ್ಮು ಕಾಶ್ಮೀರದಲ್ಲಿ ಸರಿಯಾದ ಸಮಯದಲ್ಲಿ ಪಂಚಾಯತ್ ಚುನಾವಣೆಗಳೂ ಸಹ ನಡೆಯುತ್ತಿರಲಿಲ್ಲ, ಹಲವು ಕಡೆಗಳಲ್ಲಿ ಶೇ.೬೦ರಷ್ಟು ಅಭ್ಯರ್ಥಿಗಳೇ ಇರುತ್ತಿರಲಿಲ್ಲ. ಚುನಾವಣೆಗೆ ನಿಲ್ಲಲೂ ಸಹ ಅಲ್ಲಿನ ಜನ ಹೆದರುತ್ತಿದ್ದರು. ತಾವು ನಿಂತರೆ ತಮ್ಮ ಮೇಲೆ ಭಯೋತ್ಪಾದಕರಿಂದ ದಾಳಿಯಾಗುತ್ತದೆಯೆಂಬ ಭಯವು ಅವರಲ್ಲಿ ಸದಾ ಇತ್ತು. ಪ್ರತ್ಯೇಕತಾವಾದಿಗಳ ಜತೆ ನಿಂತವರು ಮಾತ್ರ ಚುನಾವಣೆಗೆ ನಿಲ್ಲುತ್ತಿದ್ದರು. ಅವರ ಸಹಾಯವಿಲ್ಲದೆ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಿರುತ್ತಿರಲಿಲ್ಲ.
ಸರಿಯಾದ ಸಮಯದಲ್ಲಿ ಚುನಾವಣೆಗಳು ನಡೆಯದೆ ಸಾವಿರಾರು ಕೋಟಿಯಷ್ಟು ಸರಕಾರದ ಅನುದಾನವು ಅಲ್ಲಿನಪಂಚಾಯತ್‌ಗಳಿಗೆ ಸಿಗುತ್ತಲಿರಲಿಲ್ಲ. ಅನುದಾನಗಳೇ ಸಿಗಲಿಲ್ಲವೆಂದಮೇಲೆ ಹೇಗೆ ತಾನೇ ಅಲ್ಲಿನ ಹಳ್ಳಿಗಳು ಅಭಿವೃದ್ಧಿ ಹೊಂದಲು ಸಾಧ್ಯ? ಜಮ್ಮುವಿನಲ್ಲಿ 2005ರಿಂದ2010ರ ನಡುವೆ ಕೇವಲ12ಕೋಟಿಯಷ್ಟು ಅಸ್ತಿ ತೆರಿಗೆಯನ್ನು ಮಾತ್ರ ಸಂಗ್ರಹಮಾಡಲಾಗಿತ್ತು. ನಂತರ2ಕೋಟಿಯಷ್ಟು ತೆರಿಗೆಯನ್ನು ಸಂಗ್ರಹ ಮಾಡಲೂ ಸಹ ಸಾಧ್ಯವಾಗಿರಲಿಲ್ಲ.
ಒಂದು ರಾಜ್ಯವು ಅಭಿವೃದ್ಧಿ ಹೊಂದಬೇಕಾದರೆ ಆಡಳಿತ ವ್ಯವಸ್ಥೆ ಅತೀಮುಖ್ಯ. ಆಡಳಿತ ವ್ಯವಸ್ಥೆಯನ್ನು ಚುನಾಯಿಸುವ ಜನರನ್ನೇ ಹೆದರಿಸಿ ಬೆದರಿಸಿ ಚುನಾವಣೆಗಳೇ ನಡೆಸದಂತೆ ನೋಡಿಕೊಂಡರೆ ಸ್ಮಶಾನದ ವಾತಾವರಣ ನಿರ್ಮಾಣವಾಗುವುದು ನಿಶ್ಚಯ. ಕಾಶ್ಮೀರದಲ್ಲೂ ಅಷ್ಟೇ ಅಭಿವೃದ್ಧಿಯನ್ನು ಕುಂಠಿತಗೊಳಿಸುವ ಸಲುವಾಗಿ ಪ್ರಜಾಪ್ರಭುತ್ವಕ್ಕೆ ಅವಕಾಶವನ್ನೇ ಕೊಡದೆ,ತಮಗಿಷ್ಟಬಂದಂತೆ ಚುನಾವಣೆಗಳನ್ನು ನಡೆಸಲಾಗಿತ್ತು.
ಇಂತಹ ಕಿರಾತಕರ ವಿರುದ್ಧ ತೊಡೆತಟ್ಟಿ ನಿಂತು ಅಲ್ಲಿನ ಜನರಿಗೆ ಮತದಾನದ ಅವಕಾಶವನ್ನು ಮಾಡಿಕೊಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಲೇಯಿಲ್ಲ. ದೇಶದಾದ್ಯಂತ ಮುಸಲ್ಮಾನರನ್ನು ಒಲಿಸಿಕೊಂಡು ತಮ್ಮ ವೋಟ್ ಬ್ಯಾಂಕ್ ಭದ್ರ ಮಾಡಿಕೊಳ್ಳುವ ಸಲುವಾಗಿ ಅಲ್ಲಿನವರಿಗೇ ಸಹಾಯ ಮಾಡಿಕೊಂಡು ಅವರ ತಾಳಕ್ಕೆ ತಕ್ಕಂತೆ ಕುಣಿದು ವಿಶೇಷ ಸ್ಥಾನಮಾನವನ್ನು ರದ್ದು ಮಾಡುವ ಧೈರ್ಯವನ್ನು ಮಾಡಿರಲಿಲ್ಲ.
2018ರಲ್ಲಿ ನಡೆದ ಪಂಚಾಯತ್ ಚುನಾವಣೆಯನ್ನು ನ್ಯಾಷನಲ್ ಕಾನರೆನ್ಸ್’ ಹಾಗೂ ‘ಪಿಡಿಪಿ’ ಪಕ್ಷಗಳು ಸಂವಿಧಾನದ ಪರಿಚ್ಛಯ 35ರ ವಿಚಾರವಾಗಿ ಬಹಿಷ್ಕರಿಸಿದ್ದವು. ಇದರ ಪರಿಣಾಮವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿತ್ತು. ಈ ಸಮಯದಲ್ಲಿ ಉಗ್ರ ಸಂಘಟನೆಯಾದ ‘ಹಿಜ್ಬುಲ್ ಮುಜಾಯಿದ್ದೀನ್’ನ ‘ರಿಯಾಜ್ ನೈಕೋ’ ತನ್ನ ಆಡಿಯೋ ಸಂದೇಶದ ಮೂಲಕ ಅಲ್ಲಿನ ಜನತೆಗೆ ಮತದಾನ ಮಾಡದಂತೆ ಧಮ್ಕಿ ಹಾಕಿದ್ದ.
ಯಾರಾದರೂ ಮತದಾನ ಮಾಡಿದ್ದೇ ಆದಲ್ಲಿ ಅಂತಹವರನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುವುದಾಗಿ ಹೇಳಿದ್ದ. ಇವನ ಮಾತಿಗೆಹೆದರಿದ ಕಾಶ್ಮೀರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನವನ್ನು ಮಾಡಲು ಮುಂದೆ ಬರಲಿಲ್ಲ. ಎಂತಹ ವಿಪರ್ಯಾಸವೆಂದರೆ ‘ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ’ ಅಡಿಯಲ್ಲಿ ಇಡೀ ಭಾರತದಲ್ಲಿನ ಹಳ್ಳಿಗಳಲ್ಲಿನ ಬಡವರಿಗೆಸರಕಾರ ದಿಂದ ಹಣ ಸಂದಾಯವಾಗುತ್ತಿದ್ದರೆ ಚುನಾಯಿತ ಪಂಚಾಯಿತಿಗಳಿಲ್ಲದೆ ಅದೆಷ್ಟೋ ವರ್ಷಗಳ ಕಾಲ ಕಾಶ್ಮೀರದಲ್ಲಿನ ಹಳ್ಳಿಗಳಲ್ಲಿನ ಬಡವರಿಗೆ ಕೂಲಿ ಸಂದಾಯವಾಗಿರಲಿಲ್ಲ.
ಒಂದು ಉದಾಹರಣೆಯನ್ನು ನೀಡುವುದಾದರೆ2016ರಿಂದ2018ರ ನಡುವೆ ಪಚಾಯಿತಿಯ ಚುನಾವಣೆ ನಡೆಯದ ಕಾರಣ ಸುಮಾರು1100ಕೋಟಿಯಷ್ಟು ಹಣವು ಹಳ್ಳಿಗಳ ಅಭಿವೃದ್ಧಿಗೆ ಬಳಸಲಾಗಲಿಲ್ಲ. ಮಹಾತ್ಮಾ ಗಾಂಧಿಯವರ ಹಳ್ಳಿಗಳ ಸರ್ವಾಂಗೀಣ ಅಭಿವೃದ್ಧಿಯ ಕನಸು ಕಾಶ್ಮೀರಕ್ಕೆ ಮಾತ್ರ ಮರೀಚಿಕೆಯಾಗಿತ್ತು. ಕಾಶ್ಮೀರದಲ್ಲಿನ ಉಗ್ರ ಸಂಘಟನೆಗಳು ಪ್ರತ್ಯೇಕತಾ ವಾದಿಗಳ ಜತೆ ಸೇರಿಕೊಂಡು ಕಣಿವೆಯನ್ನು ಅಭಿವೃದ್ಧಿ ಮಾಡಲು ಬಿಡುತ್ತಿರಲಿಲ್ಲ. ಪಾಕಿಸ್ತಾನಕ್ಕೂ ಅಷ್ಟೇ ಕಣಿವೆ ರಾಜ್ಯ ಅಭಿವೃದ್ಧಿಯಾಗುವುದು ಬೇಕಿರಲಿಲ್ಲ, ತನ್ನ ದೇಶದಲ್ಲಿ ಅಭಿವೃದ್ಧಿಯ ಪಥವನ್ನೇ ಕಾಣದ ದರಿದ್ರ ದೇಶ ಪಾಕಿಸ್ತಾನದ ಜತೆ ಕಾಶ್ಮೀರವನ್ನು ವಿಲೀನಗೊಳಿಸಬೇಕೆಂಬ ಪ್ರತ್ಯೇಕತಾವಾದಿಗಳದ್ದು.
ಕಾಶ್ಮೀರವು ಎಲ್ಲಿ ಅಭಿವೃದ್ಧಿಯ ಪಥವನ್ನಿಡಿದು ಹೊರಜಗತ್ತಿನ ಸಂಪರ್ಕಕ್ಕೆ ಬರುತ್ತದೆಯೆಂಬ ಭಯದಿಂದ ಕಣಿವೆಯಲ್ಲಿ ಚುನಾವಣೆ ಯನ್ನು ಸರಿಯಾಗಿ ನಡೆಸಲು ಬಿಡುತ್ತಿರಲಿಲ್ಲ. ಅಲ್ಲಿನ ಜನ ಪ್ರತಿನಿತ್ಯ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವಂಥ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿತ್ತು. ಕಾಶ್ಮೀರದಲ್ಲಿನ ಜನರು ಭಾರತದ ಜತೆಗೆ ಇರಲೆಂದು ತಂದಂಥ ಪ್ರತ್ಯೇಕ ಸ್ಥಾನಮಾನವನ್ನು ದುರುಪಯೋಗಪಡಿಸಿಕೊಂಡಂಥ ‘ಅಬ್ದು’ ಹಾಗೂ ‘ಮಫ್ತಿ’ ಸಂತತಿಯವರು ತಮ್ಮ ಆಸ್ತಿ ಪಾಸ್ತಿ ಯನ್ನು ಭದ್ರ ಮಾಡಿಕೊಂಡರೆ ಹೊರತು ಅಲ್ಲಿನ ಜನರ ಪರವಾಗಿ ನಿಲ್ಲಲಿಲ್ಲ.
ಹಳ್ಳಿಗಳಲ್ಲಿ, ಪಟ್ಟಣ ಪಂಚಾಯಿತಿಗಳಲ್ಲಿ, ಪುರಸಭೆಗಳಲ್ಲಿ ಚುನಾಯಿತ ಸರಕಾರಗಳೇ ಇಲ್ಲದಂತೆ ಮಾಡಿದ್ದರು. ತಾವು ಎಲ್ಲಿ ಗೆಲ್ಲಲು ಸಾಧ್ಯವೋ ಅ ಚುನಾವಣೆಗಳನ್ನು ನಡೆಸಿ ಅಧಿಕಾರಕ್ಕೆ ಬರುವುದು, ಇತರೆ ಜಾಗಗಳಲ್ಲಿ ಚುನಾವಣೆಗಳೇ ನಡೆಯದಂತೆನೋಡಿಕೊಳ್ಳುವ ಆಂತರಿಕ ಹುನ್ನಾರವನ್ನು ಈ ಎರಡು ಕುಟುಂಬ ಪಕ್ಷಗಳು ಮಾಡಿದ್ದವು. ಇವರಿಗೆ ತಕ್ಕಂತೆ ಕಾಂಗ್ರೆಸ್ ತಮ್ಮದೇ ನಾಯಕ ‘ಜವಾಹರಲಾಲ್ ನೆಹರು’ ಮಾಡಿದ್ದಂಥ ಪ್ರಮಾದವನ್ನು ಕಿತ್ತು ಹಾಕುವ ಧೈರ್ಯ ಮಾಡಿರಲಿಲ್ಲ, ಯಾಕೆಂದರೆಕಾಂಗ್ರೆಸ್ಸಿಗೆ ಎಲ್ಲಿ ಮುಸಲ್ಮಾನರು ತಮ್ಮನ್ನು ಬಿಟ್ಟು ಹೋಗುತ್ತಾರೆಂಬ ಭಯ ಕಾಡುತ್ತಿತ್ತು.
ಮುಸಲ್ಮಾನರ ಓಲೈಕೆಯ ರಾಜಕಾರಣ ದಲ್ಲಿ ಮೊದಲಿನಿಂದಲೂ ತೊಡಗಿರುವ ಕಾಂಗ್ರೆಸ್ಸಿಗೆ ಕಾಶ್ಮೀರಕ್ಕೆ ನ್ಯಾಯ ದೊರಕಿಸಿಕೊಡುವ ಮನಸ್ಸಿರಲಿಲ್ಲ. ಮೊನ್ನೆ ಮೊನ್ನೆ ತಾನೇ ಚಿದಂಬರಂ ತಾವು ಪುನಃ ಅಧಿಕಾರಕ್ಕೆ ಬಂದರೆ ಜಮ್ಮು ಕಾಶ್ಮೀರದಲ್ಲಿ ರದ್ದು ಗೊಳಿಸಿದ ವಿಶೇಷ ಸ್ಥಾನಮಾನವನ್ನು ಪುನಃ ವಾಪಾಸ್ ತರುವುದಾಗಿ ಹೇಳುವ ಮೂಲಕ ತಮ್ಮ ಪಕ್ಷದ ಉದ್ದೇಶ ಪುನಃ ಕಾಶ್ಮೀರ ವನ್ನು ಅಧಃಪತನಕ್ಕೆ ತೆಗೆದುಕೊಂಡು ಹೋಗುವುದೆಂಬ ಸ್ಪಷ್ಟ ಸಂದೇಶವನ್ನು ಕೊಟ್ಟಿದ್ಧಾರೆ.
ಇವರಿಗೆ ಕಾಶ್ಮೀರದ ಅಭಿವೃದ್ಧಿಯು ಬೇಕಾಗಿಲ್ಲ, ಅಲ್ಲಿ ಪ್ರತಿನಿತ್ಯ ನಡೆಯುತ್ತಿದ್ದಂಥ ಉಗ್ರ ಚಟುವಟಿಕೆಗಳು ಮರುಕಳಿಸಿದರಷ್ಟೇ ಇವರಿಗೆ ಖುಷಿ. ಅಲ್ಲಿನ ಜನರಿಗೆ ಪ್ರಜಾಪ್ರಭುತ್ವದ ಹಕ್ಕನ್ನು ಕಿತ್ತುಕೊಂಡು ಮನೆಯಿಂದ ಹೊರಬರದಂತೆ ಮಾಡುವುದಷ್ಟೇ ಇವರ ಗುರಿ. ಪುಲ್ವಾಮಾ ದಾಳಿಯ ಮೇಲಿನ ಸೇಡನ್ನು ತೀರಿಸಿಕೊಳ್ಳಲು ಪಾಕಿಸ್ತಾನದ ಉಗ್ರ ನೆಲೆಗಳ ಮೇಲಿನ ದಾಳಿಯ ಸಾಕ್ಷಿ ಕೇಳಿದ ಪಕ್ಷದಿಂದ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ?1948ರಲ್ಲಿ ಹೈದರಾಬಾದಿನ ನಿಜಾಮರನ್ನು ಸೆದೆ ಬಡಿಯಲು ‘ಸರ್ದಾರ್ ವಲ್ಲಭ ಭಾಯ್ ಪಟೇಲ’ ಆಪರೇಷನ್ ಪೋಲೊ ನಡೆಸಿದ ರೀತಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ಆಪರೇಷನ್ ಅಂದೇ ನಡೆದಿದ್ದರೆ ಕಾಶ್ಮೀರದಲ್ಲಿ ಇಷ್ಟೊಂದು ಹಿಂಸಾಚಾರಗಳು ನಡೆಯುತ್ತಿರಲಿಲ್ಲ.
ಪಾಪ ನೆಹರುವಿಗೆ ಅಬ್ದುನ ವಿಚಾರದಲ್ಲಿ ಅದೇನೋ ಒಲವು, ಹಾಗಾಗಿ ಆ ರೀತಿಯ ಆಪರೇಷನ್ ಮಾಡಲು ಬಿಡಲಿಲ್ಲ. ‘ಅಬ್ದು’ನ ವಿರುದ್ಧ ನಿಲ್ಲಲು ನೆಹರೂವಿಗೆ ಧೈರ್ಯವಿರಲಿಲ್ಲವೇನೋ! ‘ರೋಶಿನಿ ಕಾಯಿದೆ’ ಯ ಮೂಲಕ ಜಮ್ಮು ಹಾಗೂ ಕಾಶ್ಮೀರದ ಸರಕಾರಿ ಜಾಗಗಳನ್ನು ತಮ್ಮ ಸ್ವಂತ ಆಸ್ತಿಗಳನ್ನಾಗಿ ಮಾಡಿಕೊಳ್ಳು ವಲ್ಲಿ ಯಶಸ್ವಿಯಾದ ಅಬ್ದು ಹಾಗೂ ಮುಫ್ತಿ ಕುಟುಂಬ ದವರು ಪ್ರಜಾಪ್ರಭುತ್ವವನ್ನು ಕಾಶ್ಮೀರದಲ್ಲಿ ಸ್ಥಾಪಿಸಲು ಬಿಡಲೇ ಇಲ್ಲ.
2018ರ ಚುನಾವಣೆಯ ಅಂಕಿ ಸಂಖ್ಯೆಗಳನ್ನೊಮ್ಮೆ ನೋಡುವುದಾದರೆ ರಾಜ್ಯದ1145ವಾರ್ಡುಗಳಲ್ಲಿ244ವಾರ್ಡು ಗಳಲ್ಲಿ ಚುನಾವಣೆಯೇ ನಡೆಯಲೇಯಿಲ್ಲ, ಈ ವಾರ್ಡುಗಳಲ್ಲಿ ಅಭ್ಯರ್ಥಿಗಳೇ ಕಣಕ್ಕಿಳಿಯಲಿಲ್ಲ. ಅಂದರೆ ಸುಮಾರು ಶೇ.5ರಷ್ಟು ವಾರ್ಡುಗಳಲ್ಲಿ ಚುನಾವಣೆಯೇ ನಡೆಯಲಿಲ್ಲ, ಸುಮಾರು17ಲಕ್ಷ ಮತದಾರರ ಪೈಕಿ ಕೇವಲ6ಲಕ್ಷ ಮತದಾರರು ಹೊರಬಂದು ಮತಹಾಕಿದ್ದರು. ಶ್ರೀನಗರ ಪಾಲಿಕೆಯ ಚುನಾವಣೆಯಲ್ಲಿ ಶೇ.0.53ರಷ್ಟು ಮತದಾನ ವಾಗಿತ್ತು. 11486 ಮತದಾರರ ಪೈಕಿಯಲ್ಲಿ ಕೇವಲ61ಜನರು ಹೊರಬಂದು ಮತದಾನ ಮಾಡಿದ್ದರು.
ಇದಕ್ಕೆಲ್ಲ ಕಾರಣವಾಗಿದಿದ್ದು ಕಾಶ್ಮೀರಕ್ಕಿದ್ದಂಥ ವಿಶೇಷ ಸ್ಥಾನಮಾನ. ಕೇವಲ 61 ಜನರು ಹೊರಬಂದು ಮತದಾನಮಾಡುತ್ತಾರೆಂದರೆ ಯಾವ ಮಟ್ಟದ ಪ್ರಜಾಪ್ರಭುತ್ವದಡಿಯಲ್ಲಿ ಕಾಶ್ಮೀರವಿತ್ತೆಂಬುದನ್ನು ಊಹಿಸಿಕೊಳ್ಳಿ.2018ಕ್ಕಿಂತಲೂ ಹಿಂದೆ ಚುನಾವಣೆಗಳನ್ನು ಬಹಿಷ್ಕರಿಸುವುದು ಕಾಶ್ಮೀರದಲ್ಲಿ ಸರ್ವೇ ಸಾಮಾನ್ಯವಾಗಿತ್ತು, ಚುನಾವಣೆ ನಡೆಯುವ ಕಟ್ಟಡಗಳಿಗೆ ಬೆಂಕಿ ಹಚ್ಚುವುದು, ಬಾಂಬುಗಳ ಮೂಲಕ ಧ್ವಂಸಗೊಳಿಸುವುದು, ಸೈನಿಕರ ಮೇಲೆ ದಾಳಿ ನಡೆಸುವುದು, ಮತದಾರರನ್ನು ಹೆದರಿಸುವುದು, ಬೆದರಿಸುವುದು ಸರ್ವೇ ಸಾಮಾನ್ಯವಾಗಿತ್ತು.
ಪಾಕಿಸ್ತಾನವು ತಾನು ಕಾಶ್ಮೀರ ಕಣಿವೆಯಲ್ಲಿ ಏನೇ ಮಾಡಿದರೂ ಸಹ ಭಾರತವು ತನ್ನ ತಂಟೆಗೆ ಬರುವುದಿಲ್ಲವೆಂದು ಕೊಂಡಿತ್ತು, ಆದರೆ ಉಗ್ರರ ನೆಲೆಗಳ ಮೇಲೆ ನಡೆದ ‘ಸರ್ಜಿಕಲ್ ಸ್ಟ್ರ ಕ್’ ಪಾಕಿಸ್ತಾನಕ್ಕೆ ದೊಡ್ಡದೊಂದು ಶಾಕ್ ನೀಡಿತ್ತು. ಇತ್ತ ಪುಲ್ವಾಮಾ ದಾಳಿಯ ಪ್ರತೀಕಾರವಾಗಿ ಭಾರತವು ಪಾಕಿಗಳ ಉಗ್ರ ನೆಲೆಯೊಳಗೆ ನುಗ್ಗಿ ವೈಮಾನಿಕ ದಾಳಿಯನ್ನು ನಡೆಸಿತೋ ಆಗ, ಪಾಕಿಸ್ತಾನಕ್ಕೆ ಇನ್ನು ತಾನು ಕಾಶ್ಮೀರದ ವಿಷಯದಲ್ಲಿ ಹೆಚ್ಚು ತಲೆ ಹಾಕಿದರೆ ತನ್ನ ಬುಡಕ್ಕೆ ಬೆಂಕಿ ಬೀಳುತ್ತದೆಯೆಂಬ ಅಂಶವು ತಿಳಿದು ಹೋಯಿತು.
2019ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಕೂಡಲೇ ಮಾಡಿದ ಮೊದಲಕೆಲಸವೇ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕಿತ್ತೊಗೆದಿದ್ದು. ಜಮ್ಮು ಕಾಶ್ಮೀರ ಹಾಗೂ ‘ಲಡಾಖ್’ ಎರಡನ್ನೂ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡುವ ಮೂಲಕ ಸಂಪೂರ್ಣ ಹಿಡಿತವನ್ನು ಕಣಿವೆ ರಾಜ್ಯದಲ್ಲಿ ತೆಗೆದು ಕೊಳ್ಳಲಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾರೂ ಸಹ ಭಾರತದ ಮೇಲೆ ಒತ್ತಡ ತರದಂತೆ ನೋಡಿಕೊಳ್ಳಲಾಯಿತು. ಹಿಂಸಾಚಾರಗಳು ಸಂಭವಿಸುತ್ತವೆಂದು ಭಾವಿಸಿದ್ದವರಿಗೆ ಶಾಂತ ರೀತಿಯಲ್ಲಿದ್ದ ಕಾಶ್ಮೀರವನ್ನು ನೋಡಿ ‘ಆಘಾತ’ವಾಯಿತು. ಜಮ್ಮು ಮತ್ತು ಕಾಶ್ಮೀರ ರಾಜ್ಯ ಏಳು ದಶಕಗಳ ಬಳಿಕ ಕಾನೂನುಬದ್ಧವಾಗಿ ಹೊರ ಜಗತ್ತಿನ ಸಂಪರ್ಕಕ್ಕೆ ಬಂದಿತ್ತು. ವಿಶೇಷ ಸ್ಥಾನಮಾನ ವನ್ನು ರದ್ದು ಮಾಡಿದ ಮೇಲೆ ಮೊದಲ ಬಾರಿಗೆ ‘ಜಿಲ್ಲಾ ಅಭಿವೃದ್ಧಿ ಮಂಡಳಿ’ಯ ಚುನಾವಣೆ ನಡೆಯಿತು.
ಇದರ ಫಲಿತಾಂಶವು ಕಳೆದ ಮೂರು ದಿನಗಳ ಹಿಂದೆ ಬಂದಿದೆ. ಈ ಚುನಾವಣೆಯಲ್ಲಿ ಶೇ.51ರಷ್ಟು ಮತದಾನವಾಗಿತ್ತು. ಆರುಹಂತಗಳಲ್ಲಿ ನಡೆದ ಚುನಾವಣೆಯು ಬಹುತೇಕ ಶಾಂತಿಯುತವಾಗಿತ್ತು. ಪ್ರತಿಯೊಂದು ಹಂತದಲ್ಲಿಯೂ ಅಂದಾಜು ಶೇ.50ರಷ್ಟು ಮತದಾನವಾಗಿತ್ತು. ಕರೋನಾ ಸಂದರ್ಭದಲ್ಲಿಯೂ ಜಮ್ಮು ಮತ್ತು ಕಾಶ್ಮೀರದ ಜನತೆ ಈ ಮಟ್ಟದಲ್ಲಿ ಹೊರಬಂದು ಮತದಾನ ಮಾಡಿದ್ದು ಜಮ್ಮು ಹಾಗೂ ಕಾಶ್ಮೀರದ ಜನರು ವಿಶೇಷ ಸ್ಥಾನಮಾನ ರದ್ಧತಿಯ ಪರವಾಗಿರುವುದರ ಸೂಚಕವಾಗಿತ್ತು. ಉತ್ತರ ಕಾಶ್ಮೀರದ ‘ಕೂಪ್ವಾರ’ ಜಿಯಲ್ಲಿ ದಾಖಲೆಯ ಶೇ.63.8ರಷ್ಟು ಮತದಾನವಾಗಿತ್ತು.
‘ಬ್ಯಾಲಟ್ ಪೇಪರ್’ ಬಳಸಿ ಈ ಚುನಾವಣೆಯನ್ನು ನಡೆಸಲಾಗಿತ್ತು. ‘ಇ.ವಿ.ಎಂ’ಗಳ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದವರಿಗೆ ಫಲಿತಾಂಶ ಸ್ವಲ್ಪ ಶಾಕ್ ನೀಡಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹೊರಬಂದು ಮತದಾನ ಮಾಡಿದ್ದು ಈ ಚುನಾ ವಣೆಯ ಮತ್ತೊಂದು ವಿಶೇಷವಾಗಿತ್ತು. ವಿಶೇಷ ಸ್ಥಾನಮಾನ ರದ್ಧತಿಯ ನಂತರ ನಡೆದ ಮೊದಲ ಚುನಾವಣೆಯಲ್ಲಿ,74ಸೀಟುಗಳನ್ನು ಗೆಲ್ಲುವ ಮೂಲಕ ಬಿ.ಜೆ.ಪಿಯು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಶ್ಮೀರ ಕಣಿವೆಯಲ್ಲಿ3ಸೀಟು ಗಳನ್ನು ಗೆಲ್ಲುವ ಮೂಲಕ ಪ್ರತ್ಯೇಕತಾವಾದಿಗಳ ಜಾಗಕ್ಕೆ ಕಾಲಿಟ್ಟಿದೆ.
ಏಳು ಪಕ್ಷಗಳ ಒಕ್ಕೂಟವನ್ನು ಮಾಡಿಕೊಂಡಿದ್ದಂಥ ‘ಗುಪ್ಕಾರ್ ಒಕ್ಕೂಟ’109ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ವಿಲ್ಲದೆ ಕುಳಿತಿದೆ. ಈ ಚುನಾವಣೆಯ ಮತ್ತೊಂದು ವಿಶೇಷ ವೆಂದರೆ ಸ್ವತಂತ್ರ್ಯ ಅಭ್ಯರ್ಥಿಗಳು45ಸೀಟುಗಳನ್ನು ಗೆಲ್ಲುವ ಮೂಲಕ ‘ಗುಪಿಕರ್ ಒಕ್ಕೂಟ’ಕ್ಕೆ ಆಘಾತವನ್ನು ನೀಡಿದ್ಧಾರೆ. ಪ್ರಸ್ತುತ ಚುನಾವಣಾ ಫಲಿತಾಂಶದಿಂದ ಯಾರೊಬ್ಬರೂ ಸಹ ಅಷ್ಟು ಸುಲಭವಾಗಿ ಅಧಿಕಾರ ನಡೆಸಲು ಸಾಧ್ಯವಿಲ್ಲದಂತಾಗಿದೆ.
‘ಬಿಜೆಪಿ’ಯ ಸೋಲು ಗೆಲುವಿಗಿಂತಲೂ ಪ್ರಮುಖವಾಗಿ ಸ್ಮರಿಸಬಹುದಾದ ವಿಷಯವೆಂದರೆ ವಿಶೇಷ ಸ್ಥಾನಮಾನ ರದ್ಧತಿಯ ನಂತರ ನಡೆದ ಮೊದಲ ಚುನಾವಣೆಯು ಶಾಂತಿಯುತವಾಗಿತ್ತು, ಹೆಚ್ಚಿನ ಮಂದಿ ಹೊರಬಂದು ಮತದಾನ ಮಾಡಿದರು, ಹೆಚ್ಚಿನ ಹೆಣ್ಣು ಮಕ್ಕಳು ಹೊರಬಂದು ಮತದಾನ ಮಾಡಿದರು. ದಶಕಗಳ ಕಾಲ ನಡೆಯದಿದ್ದಂಥ ಕಾರ್ಯವೊಂದು ಕಣಿವೆ ರಾಜ್ಯದಲ್ಲಿಯಶಸ್ವಿಯಾಗಿ ನಡೆಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ನೀಡಬೇಕಿದ್ದಂಥ ಮೂಲಭೂತ ಹಕ್ಕನ್ನು ನರೇಂದ್ರಮೋದಿ ನೇತೃತ್ವದ ಸರಕಾರವು ಜಮ್ಮು ಕಾಶ್ಮೀರಕ್ಕೆ ನೀಡಿರುವುದೇ ಬಹುದೊಡ್ಡ ಗೆಲುವೆಂದರೆ ತಪ್ಪಿಲ್ಲ