ಕಾಡಿದ್ದರೆ ನಾಡು, ಪ್ರಕೃತಿ ಇದ್ದರೆ ನಾವು
ತನ್ನಿಮಿತ್ತ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ಈ ಭೂಮಿಗೆ ನಮ್ಮ ಅವಶ್ಯಕತೆ ಇರುವುದಕ್ಕಿಂತಲೂ ಹೆಚ್ಚುನಮಗೆ ಈ ಭೂಮಿ ಮತ್ತು ಪ್ರಕೃತಿಯ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಅರಣ್ಯ, ಸರೋವರ, ನದಿ ಮತ್ತು ವನ್ಯ ಮೃಗ ಇವುಗಳನ್ನೊಳಗೊಂಡಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸುವುದು, ಸುಧಾರಣೆ ತರುವುದು ಮತ್ತು ಜೀವಿಗಳ ಬಗ್ಗೆ ಅನುಕಂಪ ತೋರುವುದರೊಂದಿಗೆ ಮಾನವ ಕುಲವನ್ನು ಅವನತಿಯಿಂದ ರಕ್ಷಿಸಬೇಕು.
ಮಾರ್ಚ್ ತಿಂಗಳು ಆಗಮಿಸುತ್ತಿದ್ದಂತೆಯೇ ಮಾ. 21, 22ಮತ್ತು23ಕ್ರಮವಾಗಿ ವಿಶ್ವ ಅರಣ್ಯ ದಿನ, ವಿಶ್ವ ಜಲ ದಿನ ಮತ್ತು ವಿಶ್ವ ವಾತಾವರಣ ದಿನ ಆಚರಿಸುತ್ತೇವೆ. ಇವು ಜಗತ್ಪ್ರಸಿದ್ಧ ದಿನಾಚರಣೆಗಳಾಗಿವೆ. ಅರಣ್ಯಗಳು ಸಂಪತ್ತಿನ ಕಾಮಧೇನು. ಜಲವೇ ಜೀವಾಧಾರ. ವಾತಾವರಣ ವೇ ಉಸಿರು. ಈ ದಿನಾಚರಣೆಗಳು ನಮ್ಮನ್ನು ಮಾಲಿನ್ಯ ಕುರಿತಂತೆ ಎಚ್ಚರಿಸಬೇಕಾಗಿದೆ ಮತ್ತು ಈ ಬಗ್ಗೆ ಹಿಂದಿಗಿಂತಲೂ ನಾವು ಹೆಚ್ಚು ತಿಳಿದುಕೊಳ್ಳಬೇಕಾಗಿದೆ.
ಈ ಭೂಮಿಗೆ ಎಲ್ಲರ ಆಸೆಗಳನ್ನು ಪೂರೈಸುವ ಸಾಮರ್ಥ್ಯವಿದೆ. ಆದರೆ ದುರಾಸೆಗಳನ್ನು ಪೂರೈಸುವ ಸಾಮರ್ಥ್ಯವಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಮಾನವ ತನ್ನ ಸ್ವಾರ್ಥವನ್ನು ಮರೆತು ಪ್ರಕೃತಿ ಮತ್ತು ಪರಿಸರವನ್ನು ರಕ್ಷಿಸಲೇಬೇಕು ಎಂಬ ಸಂದೇಶಗಳನ್ನು ಸಾರುವ ದಿನಗಳಾಗಿವೆ. ಒಂದು ಮಾತು ಸಮಂಜಸ ‘ಮನುಜಾ ನೀನು ಬದುಕು ಇತರರನ್ನು ಬದುಕಲು ಬಿಡು. ನೀನುಬದುಕಲು ಮತ್ತು ನಿನ್ನ ಐಷರಾಮಿ ಜೀವನಕ್ಕಾಗಿ ಇತರರನ್ನು ಹಾಳುಗೆಡವಬೇಡ.
ಪ್ರಕೃತಿಯನ್ನು ರಕ್ಷಿಸು, ಉಳಿಸು, ಬೆಳೆಸು ಅದು ನಿನ್ನನ್ನು ರಕ್ಷಿಸುತ್ತದೆ’.      ,           . ನಿಸರ್ಗ, ಪ್ರಕೃತಿ ಮತ್ತು ಕಾಲದ ಎದುರು ಮಾನವನ ಎಲ್ಲಾ ನಾಟಕಗಳು ಶೂನ್ಯ. ಅರಣ್ಯಗಳ ನಾಶದಿಂದ ನೈಸರ್ಗಿಕ ವಾಸ್ತವಿಕ ಮಳೆಯ ಬದಲು ಕೃತಕ ಮಳೆಯನ್ನು ಸೃಷ್ಟಿಸಲು ಹೊರಟಿ ದ್ದಾನೆ. ಬ್ರಹ್ಮಾಂಡದ ಶಕ್ತಿ ಎಷ್ಟೊಂದು ಅದ್ಭುತವೆಂದರೆ ಪ್ರಕೃತಿ ಮತ್ತು ಕಾಲ ಎಲ್ಲಾ ಆಗುಹೋಗುಗಳಿಗೆ ಮತ್ತು ಅನಾಹುತಗಳಿಗೆ ತನ್ನದೇ ಆದ ನಿಜರೂಪದ ಉತ್ತರವನ್ನು ಕೊಡುತ್ತದೆ.
ಇತ್ತೀಚಿಗಿನ ಕೇರಳ ಮತ್ತು ಕೊಡಗಿನ ದುರಂತಗಳೂ ಇದಕ್ಕೆ ಸಾಕ್ಷಿ. ನಮ್ಮ ಘನತೆ ಮತ್ತು ಸಂಸ್ಕೃತಿಯ ಹೆಮ್ಮೆಯೆನಿಸಿದ ಅರಣ್ಯ ಸಂಪತ್ತು ಬರಿದಾಗುವಂತೆ ಮಾಡಿದ ದುಷ್ಕೃತ್ಯಗಳಿಗೆ ಹವಾಮಾನ ಬದಲಾವಣೆಯು ನಮ್ಮನ್ನು ನೋಡಿ ಅಪಹಾಸ್ಯ ಮಾಡು ವಂತಾಗಿದೆ. ಮಾನವ ಪ್ರಕೃತಿಯಿಂದ ಇನ್ನೂ ಪಾಠ ಕಲಿತಂತೆ ಕಾಣುತ್ತಿಲ್ಲ. ‘ಪರಿಸರವೆಂಬ ಮೋಹಿನಿಗೆ ಭಸ್ಮಾಸುರ ನೆಂಬ ಮಾನವ ಭಸ್ಮವಾಗುತ್ತಿದ್ದಾನೆ’.
ಮಾನವನ ಹುಟ್ಟು, ಸಾವು, ಬದುಕು, ಸಾಧನೆ ಎಲ್ಲವೂ ಪ್ರಕೃತಿಯ ಪರಿಸರ ಮತ್ತು ಮಾನವ ನಿರ್ಮಿತ ಪರಿಸರದ ಮಧ್ಯೆ ಹಾದು ಹೋಗುತ್ತದೆ. ಪರಿಸರವೇ ನಮ್ಮ ಬದುಕು. ಪರಿಸರದಿಂದಲೇ ಮತ್ತು ಪರಿಸರಕ್ಕಾಗಿ ನಮ್ಮ ಬದುಕು. ಪ್ರಾಕೃತಿಕ ಸಂಪನ್ಮೂಲಗಳಾದ ಅರಣ್ಯ, ನೆಲ, ಜಲ, ವಾಯು ಸೃಷ್ಟಿಯ ನಿಜರೂಪಗಳು. ಪ್ರಕೃತಿ ಇದ್ದರೆ ನಾವು ಮತ್ತು ಪ್ರಕೃತಿ ಮಾನವನಿಗೆ ವರ. ಅದನ್ನೆದುರಿಸಿ ಬದುಕಲು ಪ್ರಯತ್ನಿಸಿದರೆ ಪ್ರಕೃತಿ ವಿಕೋಪಗೊಳ್ಳುವುದರಲ್ಲಿ ಎರಡು ಮಾತಿಲ್ಲ. ಪ್ರಕೃತಿ ನಮಗೆದುರಾದರೆ ಅದುಮನುಕುಲಕ್ಕೆ ಶಾಪವಾಗಿ ಪರಿಗಣಿಸುತ್ತದೆ.
ದುರದೃಷ್ಟವೆಂದರೆ ತಿಳಿದೂ ತಿಳಿದು ಮಾನವನು ಎಸಗುತ್ತಿರುವ ದುಷ್ಕ ತ್ಯಗಳಿಂದ ಪ್ರಕೃತಿ ತನ್ನ ಸಮತೋಲನವನ್ನು ಕಾಪಾಡುವುದರಲ್ಲಿ ವಿಫಲವಾಗಿ ಪ್ರಕೋಪಗಳಿಗೆ ಕಾರಣವಾಗಿದೆ. ಮರ, ಗಿಡ, ನೆಲ, ಜಲ ಮತ್ತು ವಾತಾವರಣದ ಮೇಲೆ ಮಾಡಿದ ದಾಳಿ ಬಿರುಗಾಳಿ, ಚಂಡಮಾರುತ, ಅತಿವೃಷ್ಟಿ, ಅನಾವೃಷ್ಟಿಗಳೆಲ್ಲವನ್ನು ಎದುರಿಸುವಂತೆ ಮಾಡಿದೆ. ಇನ್ನೊಂದೆಡೆ ಕೆರೆಕುಂಟೆ ಮತ್ತು ನದಿ ನೀರನ್ನು ಮಲಿನಗೊಳಿಸುತ್ತಿದ್ದಾನೆ. ಈ ದುಷ್ಕ ತ್ಯಗಳಿಗೆ ಮಾನವನು ದುಬಾರಿ ಬೆಲೆ ತೆರುತ್ತಿರುವ ಈ ಸಂದರ್ಭದಲ್ಲಿ ವಿನಾಶದ ಅಂಚಿಗೂ ತಲುಪುವುದರಲ್ಲಿದ್ದಾನೆ. ಈ ಮಧ್ಯೆ ಪ್ರಕೃತಿ ಮತ್ತು ಪರಿಸರದ ಬಗ್ಗೆ ಸ್ವಲ್ಪ ಬೆಳಕು ಚೆಲ್ಲುವುದೂ ಅಗತ್ಯ ಎಂದು ತಿಳಿದುಕೊಳ್ಳಬೇಕು.
ಕಾರ್ಬನ್ ಉತ್ಪತ್ತಿಯಲ್ಲಿ ವಿಶ್ವದಲ್ಲಿ ಭಾರತಕ್ಕೆ ಎರಡನೇ ಸ್ಥಾನ. ಪ್ರಪಂಚದ20ಅತ್ಯಂತ ಮಾಲಿನ್ಯ ನಗರಗಳಲ್ಲಿ 15ನಗರಗಳು ಭಾರತಲ್ಲಿಯೇ ಇವೆ. ರಾಷ್ಟ್ರದ ರಾಜಧಾನಿ ದೆಹಲಿಗೆ ಹನ್ನೊಂದನೆಯ ಸ್ಥಾನವಾದರೆ ರಾಜಧಾನಿ ಪ್ರದೇಶಕ್ಕೆ ಸೇರಿದ ಗುರುಗ್ರಾಮ, ಗಾಜಿಯಾಬಾದ್, ಫರೀದಾಬಾದ್, ನೋಯ್ಡಾ ಕ್ರಮವಾಗಿ ಮೊದಲನೆಯ, ಎರಡನೆಯ, ನಾಲ್ಕನೆಯ ಮತ್ತು ಆರನೇಯ ಸ್ಥಾನ ದಲ್ಲಿವೆ ಎಂಬುದು ವಿಷಾದದ ವಿಚಾರ. ರಾಜಧಾನಿಯ ಏಳು ಪ್ರದೇಶಗಳಲ್ಲಿನ ಜೀವನವೇ ಅಪಾಯವೆಂಬಂತಿದೆ.
ಪರಿಸರ ಮಾಲಿನ್ಯದಿಂದಾಗಿ ಮೃತರಾಗುತ್ತಿರುವವರ ಸಂಖ್ಯೆ ಭಾರತದಲ್ಲಿ ಅತ್ಯಧಿಕ. ವಾಯು ಮಾಲಿನ್ಯದ ಸಾವುಗಳಲ್ಲಿ ಭಾರತದ ಪಾಲು ಶೇ.28ರಷ್ಟಿದೆ. ಜಾಗತಿಕ ಉಷ್ಣಾಂಶ ನಿಯಂತ್ರಣದಲ್ಲಿಡಬೇಕೆಂಬ ಚರ್ಚೆಗಳಾಗುತ್ತಿವೆ. ಪ್ಯಾರಿಸ್‌ನಲ್ಲಿ ನಡೆದ ಒಪ್ಪಂದ ದಲ್ಲಿ ಎಲ್ಲಾ ದೇಶಗಳು ಇಂಗಾಲದ ಬಳಕೆಯನ್ನು ಕಡಿಮೆ ಮಾಡಬೇಕು. ಅಟೋ ಮೊಬೈಲ್ ಕ್ಷೇತ್ರದ ಮೇಲೆ ಹಿಡಿತವ ನ್ನು ಸಾಧಿಸಬೇಕು ಮತ್ತು ಇಂಗಾಲ ಹೊರಹೊಮ್ಮುವುದನ್ನು ಕಡಿಮೆ ಮಾಡಿ ಆಮ್ಲಜನಕ ಉತ್ಪಾದನೆ ಮತ್ತು ಸಂರಕ್ಷಣೆಯನಿರ್ಧಾರ ಕೈಗೊಳ್ಳುತ್ತಿರುವ ಈ ಸಂದರ್ಭದಲ್ಲಿ ನಾವು ಇನ್ನೂ ಎಚ್ಚರಗೊಂಡಿಲ್ಲ.
ಕಾಡ್ಗಿಚ್ಚು ಇಡೀ ಕಾಡನ್ನು ನುಂಗಲು ಪ್ರಯತ್ನಿಸುತ್ತವೆ. ಇದರಿಂದ ಪರಿಸರ ಹಾನಿಯಾಗುವುದಲ್ಲದೇ ಕಾಡಿನ ಜೀವ ಸಂಕುಲಗಳುಅಗ್ನಿಗೆ ಅಹುತಿಯಾಗುತ್ತವೆ. ಕಾಡಿನ ಅಮೂಲ್ಯ ಮರಮುಟ್ಟು, ಔಷಧಿ ಸಸ್ಯಗಳು, ಕಾಡುಪ್ರಾಣಿಗಳು, ಅಪಾರ ಜೀವರಾಶಿಗಳು ನಿರ್ನಾಮವಾಗುತ್ತವೆ. ಅಭಯಾರಣ್ಯಗಳ ಉಳಿವಿಗಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿಗಳು ವಿಶೇಷ ಕಾಳಜಿವಹಿಸಬೇಕು. ಮತ್ತು ಬೇಸಿಗೆಯ ಕಾಲದಲ್ಲಿ ಹೆಚ್ಚು ಜಾಗೃತರಾಗಬೇಕು.
ಕಾಡುಗಳ ರಕ್ಷಣೆ ಜಲ ಮೂಲಗಳ ರಕ್ಷಣೆಯಿಂದ ಹವಾಮಾನ ನಿಯಂತ್ರಣ ಸಾಧ್ಯವಾಗುವುದರಿಂದ ಅರಣ್ಯ ಜಲಮೂಲಗಳಾದತೆರೆ, ನದಿ ಹಳ್ಳಗಳನ್ನು ಸರಿಪಡಿಸಿಕೊಳ್ಳಬೇಕು. ಅರಣ್ಯ ಒತ್ತುವರಿ ತೆರವುಗೊಳಿಸಿ ಕಾಡು ನಾಶಕ್ಕೆ ತೆರೆ ಎಳೆಯಬೇಕು. ಹಸಿರೀಕರಣ ಯೋಜನೆ, ಅಂತರ್ಜಲ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ನೆಲ, ಜಲ, ಕಾಡು, ಖನಿಜ ಸಂಪತ್ತು ನಾಶಗೊಳಿಸಬಾರದು. ಇವೆಲ್ಲಾಯೋಜನೆಗಳಿದ್ದರೂ ಕೇವಲ ಆದೇಶ, ಅಪ್ಪಣೆ, ನಿಯಮಕ್ಕೆ ಸೀಮಿತವಾಗಿರುವುದು ದುರಂತ ಮತ್ತು ಆಡಳಿತ ವೈಫಲ್ಯ.
ತಂತ್ರಜ್ಞಾನಗಳು, ಸ್ಯಾಟಲೈಟ್, ಡ್ರೋನ್, ರೊಬೋಟ್‌ಗಳನ್ನು ಉಪಯೋಗಿಸಿ ಮಾಹಿತಿಯನ್ನು ಪಡೆದುಕೊಳ್ಳು ವುದರ ಮೂಲಕ ಕಾಡ್ಗಿಚ್ಚನ್ನು ನಂದಿಸುವರೆ ತುರ್ತುಕ್ರಮಕ್ಕೆ ಯಾವತ್ತೂ ಸಜ್ಜಾಗಿರಬೇಕು.
‘ಕೋವಿಡ್ ಕಲಿಸಿದ ಪಾಠ: ಈ ವೈರಸ್ ಅವಾಂತರಗಳನ್ನು ಸೃಷ್ಟಿಸಿದರೂ ನಮ್ಮ ಜೀವನ ಶೈಲಿಯ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಲು ಸಹಾಯಕವಾಗಿದೆ ಮತ್ತು ಪ್ರಕೃತಿಯ ಎದುರು ಮಾನವ ತೃಣ ಸಮಾನ ಎಂಬುದನ್ನು ಸಾಬೀತುಪಡಿಸಿದೆ. ಈ ಸಾಂಕ್ರಾಮಿಕವು ನೀಡಿದ ಎಚ್ಚರಿಕೆಗಳನ್ನು ಅರ್ಥೈಸಿಕೊಳ್ಳಬೇಕು. ಕರೊನಾದ ಎಲ್ಲಾ ನಕಾರಾತ್ಮಕ ಪರಿಣಾಮಗಳ ಹೊರತಾಗಿಯೂ ಜನರಲ್ಲಿ ನೈರ್ಮಲ್ಯ ಸುರಕ್ಷತೆಯ ಬಗೆಗೆ ಜಾಗೃತಿ ಮೂಡುವಂತೆ ಮಾಡಿದೆ.
ಲಾಕ್‌ಡೌನ್ ಸಮಯದಲ್ಲಿ ಜನರ ವ್ಯವಹಾರಗಳು ಕಡಿಮೆಯಾದ ಕಾರಣ ಪ್ರಕೃತಿಯೂ ನಿಟ್ಟುಸಿರು ಬಿಟ್ಟು ಹಾಯಾಗಿತ್ತು.ವಾಹನಗಳ ವಾಯುಮಾಲಿನ್ಯ ಅಚ್ಚರಿಯ ರೀತಿಯಲ್ಲಿ ಕಡಿಮೆಯಾಗಿತ್ತು. ನದಿ, ಸಾಗರಗಳಲ್ಲಿ ವಾಣಿಜ್ಯ ಚಟುಟಿಕೆಗಳು ಕಡಿಮೆಯಾದುದರಿಂದ ಜಲಮಾಲಿನ್ಯ, ವಾಯುಮಾಲಿನ್ಯ ಕಡಿಮೆಯಾಗಿ ಆಗಸ, ಭೂಮಿ ನಿರ್ಮಲವಾಗಿತ್ತು. ಈ ಭೂಮಿಗೆ ನಮ್ಮ ಅವಶ್ಯಕತೆ ಇರುವುದಕ್ಕಿಂತಲೂ ಹೆಚ್ಚು ನಮಗೆ ಈ ಭೂಮಿ ಮತ್ತು ಪ್ರಕೃತಿಯ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಅರಣ್ಯ, ಸರೋವರ, ನದಿ ಮತ್ತು ವನ್ಯ ಮೃಗ ಇವುಗಳನ್ನೊಳಗೊಂಡಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸುವುದು, ಸುಧಾರಣೆ ತರುವುದು ಮತ್ತು ಜೀವಿಗಳ ಬಗ್ಗೆ ಅನುಕಂಪ ತೋರುವುದರೊಂದಿಗೆ ಮಾನವ ಕುಲವನ್ನು ಅವನತಿಯಿಂದ ರಕ್ಷಿಸಬೇಕು.
ನಿಸರ್ಗವನ್ನು ರಕ್ಷಿಸದಿದ್ದಲ್ಲಿ ಕಾಡೇಕೆ ಧರೆಯೇ ಹತ್ತಿ ಉರಿಯುವುದು. ಬದುಕಲೆಲ್ಲಿ ಓಡಲಿ? ಒಂದು ಮನೆಗೆ ಒಂದು ಮರವನ್ನು ನೆಡುವುದು ಮನುಷ್ಯನಿಗೆ ದೊಡ್ಡ ವಿಷಯವೇನಲ್ಲ. ಇದು ಇಂದಿನ ಆದ್ಯತೆ. ನೆಲ, ಜಲ, ವಾಯು, ಅರಣ್ಯಗಳು ಮಾನವ ಜೀವನದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ನೀರು ಮತ್ತು ಗಾಳಿಯ ಸಂರಕ್ಷಣೆ ಸಸ್ಯಗಳಿಂದ ಸಾಧ್ಯ. ಕಾಡಿನ ಪ್ರತಿಯೊಂದು ಎಲೆಯೂ ಮನುಕುಲದ ಸಂರಕ್ಷಣೆಗೆ ಆಧಾರ. ಕಾಡಿದ್ದರೆ ನಾಡು. ಪ್ರಕೃತಿ ಇದ್ದರೆ ನಾವು.