ತೈಲ ಹೊರೆ, ಮಾಲಿನ್ಯ ಬರೆ: ಎಲೆಕ್ಟ್ರಿಕ್‌ ವಾಹನಗಳ ಮೊರೆ
ಅಭಿವ್ಯಕ್ತಿ
ಪ್ರವೀಣ ವಿವೇಕ
ಜಗತ್ತಿನಲ್ಲಿ ಈಗಾಗಲೇ ಇರುವ ಸಮಸ್ಯೆಗಳಿಗೆ ಸೇರ್ಪಡೆಯಾಗಿರುವುದು ಪೆಟ್ರೋಲ್ ಬಿಕ್ಕಟ್ಟು. ವಾಹನಗಳು ಇಲ್ಲದಿದ್ದಾಗ ಜನನೆಮ್ಮದಿಯಿಂದ ಇದ್ದರು. ವಾಹನಗಳು ಆವಿಷ್ಕಾರ ಗೊಂಡ ನಂತರ ಹಲವು ಸಮಸ್ಯೆಗಳು ಉದ್ಭವವಾಗಿವೆ.
ವಾಹನಗಳಿಗೆ ಪೆಟ್ರೋಲ, ಡೀಸೆಲ, ನುಣುಪಾದ ರಸ್ತೆಗಳು ಬೇಕಾಗುತ್ತವೆ. ಜತೆಗೆ ಈ ವಾಹನಗಳಿಗೆ ಪೂರಕವಾಗುವಂತೆ ಇನ್ನೂ ಅನೇಕ ಸಂಗತಿಗಳು ಅನಿವಾರ್ಯವಾಗುತ್ತವೆ. ಕಾಲಾ ನಂತರದಲ್ಲಿ ವಾಹನಗಳು ಮನುಷ್ಯ ಜೀವನದ ಭಾಗವಾಗುತ್ತವೆ.ಇದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತವೆ ಎಂದು ಇಸ್ಕಾನ್‌ನ ಶ್ರೀ ಪ್ರಭುಪಾದರು೧೯೭೪ರಲ್ಲಿ ಹೇಳಿದ್ದರು.
ಅವರು ಅಂದು ಉಚ್ಚರಿಸಿದ ಮಾತು ಇಂದು ಅದೆಷ್ಟು ಪ್ರಸ್ತುತವಲ್ಲವೇ?೧೯೮೧ರಲ್ಲಿ ಕೇವಲ೫.೪ಮಿಲಿಯನ್ ವಾಹನಗಳುಮಾತ್ರ ದೇಶದಲ್ಲಿದ್ದವು. ವಾಹನಗಳ ಮೇಲಿನ ಅವಲಂಬನೆ ಹೆಚ್ಚುತ್ತಿರುವ ಕಾರಣದಿಂದ ಭಾರತೀಯ ಆಟೋಮೊಬೈಲ್ ಕ್ಷೇತ್ರ ತನ್ನ ಕಬಂಧ ಬಾಹುಗಳನ್ನು ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ವಿಸ್ತರಿಸಿ ಕೊಳ್ಳುತ್ತಿದೆ.೨೦೧೯ – ೨೦ರಲ್ಲಿಯೇ ದೇಶಾದ್ಯಂತ೨.೬ಕೋಟಿಗೂ ಅಧಿಕ ವಾಹನಗಳು ಉತ್ಪನ್ನವಾಗಿವೆ ಎಂದು ಆಟೋಮೊಬೈಲ್ ಉತ್ಪಾದಕರ ಸಂಘಟನೆಯ ಸಿಯಾನ್ ವರದಿ ತಿಳಿಸುತ್ತದೆ.
ಇನ್ನು ಭಾರತ ಜಗತ್ತಿನ೫ನೇ ಅತೀ ಹೆಚ್ಚು ಕಾರು ತಯಾರಿಕೆ ಹಾಗೂ ಮಾರಾಟ ಮಾಡುವ ದೇಶವಾಗಿದೆ. ಜಗತ್ತಿನಲ್ಲಿ ಚೀನಾ ಮತ್ತು ಅಮೆರಿಕದ ನಂತರ ಅತೀ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುವ ದೇಶವೇ ಭಾರತ. ನಾವು ನಮ್ಮ ಬೇಡಿಕೆಯಶೇ.೬೫ರಷ್ಟು ತೈಲವನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತವೆ. ನಮ್ಮ ದೇಶ೨೦೧೪ -೧೫ರ೧೧೨ಬಿಲಿಯನ್ ಡಾಲರ್ ಅಂದರೆ ಸುಮಾರು೭ಲಕ್ಷ ಕೋಟಿಯಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತಿತ್ತು.
ವಿಶ್ವದ ಒಟ್ಟು ಬಳಕೆಯ ಶೇ.೪.೬ರಷ್ಟು ತೈಲವನ್ನು ಭಾರತವೇ ಖರೀದಿ ಮಾಡುತ್ತದೆ. ಕರೋನಾ ವೈರಸ್ ಜಗತ್ತಿಗೆ ಕಾಲಿಟ್ಟ ನಂತರ ವ್ಯಾಪಾರ ವಹಿವಾಟುಗಳು ಸ್ಥಗಿತವಾಗಿದ್ದರಿಂದ ತೈಲದ ಬೇಡಿಕೆ ಕುಸಿದಿದ್ದರಿಂದ ತೈಲ ದರ ಪಾತಾಳಕ್ಕೆ ಇಳಿಯಿತು,ಕರೋನಾ ಲಾಕ್ ಡೌನ್ ಸಮಯದಲ್ಲಿ ಕೇವಲ೯ಡಾಲರ್‌ಗೆ ಒಂದು ಬ್ಯಾರಲ್ ಕಚ್ಚಾ ತೈಲ ಸಿಗುತ್ತಿತ್ತು. ಆದರೆ ಈಗ ಲಾಕ್ ಡೌನ್ ಸಡಿಲಗೊಂಡು ಆರ್ಥಿಕ ಚಟುವಟಿಕೆಗಳು ಪುನರ್ ಆರಂಭಗೊಂಡಿರುವುದರಿಂದ ತೈಲಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ, ವಿಪರ್ಯಾಸ ವೆಂದರೆ ತೈಲ ಉತ್ಪನ್ನ ರಾಷ್ಟಗಳು ಉತ್ಪಾದನೆಯನ್ನು ಕಡಿತಗೊಳಿಸಿವೆ.
ಇದರಿಂದ ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ ಈಗ೬೫ಡಾಲರ್ ಆಗಿದೆ. ಬೇರೆ ದೇಶಗಳಿಂದ ಆಮದು ಮಾಡಿಕೊಂಡಿರುವತೈಲಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರತ್ಯೇಕವಾಗಿ ತೆರಿಗೆಯನ್ನು ವಿಧಿಸುತ್ತವೆ. ಮೊನ್ನೆ ನಡೆದ ಸಂಸತ್ ಅಧಿವೇಶನದಲ್ಲಿ ಸಂಸದರೊಬ್ಬರು ನೀಡಿದ ಮಾಹಿತಿ ಪ್ರಕಾರ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರತಿ ವರ್ಷವೂ ತೈಲದಿಂದಲೇ ಸುಮಾರು೫ಲಕ್ಷ ಕೋಟಿ ತೆರಿಗೆಯನ್ನು ಸಂಗ್ರಹಿಸುತ್ತವಂತೆ.
ಒಂದು ಸಣ್ಣ ವೈರಸ್ ಕಾಟದಿಂದ ದೇಶದ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳು ಬಹಳ ಬದಲಾಗಿವೆ. ಸರಕಾರದ ಬೊಕ್ಕಸಕ್ಕೆ ಈ ಮೊದಲು ಬರುತ್ತಿದ್ದಷ್ಟು ಆದಾಯ ಈಗ ಬರುತ್ತಿಲ್ಲ. ಆದ್ದರಿಂದಲೇ ತೈಲದ ಮೇಲೆ ಅಬಕಾರಿ ಸುಂಕವನ್ನು ಸರಕಾರಗಳು ತೈಲದಮೇಲೆ ವಿಽಸುತ್ತಿವೆ. ಅದೇನೇ ಇರಲಿ ತೈಲ ದರ ಏರಿಕೆಯಿಂದ ಜನಸಾಮಾನ್ಯರ ಬದುಕು ಮಾತ್ರ ಹೈರಾಣಾಗಿದೆ.
ಕೇಂದ್ರ ಸರಕಾರ ಇತ್ತೀಚಿನ ಬಜೆಟ್‌ನಲ್ಲಿ ಆಟೋಮೊಬೈಲ್ ಕ್ಷೇತ್ರಕ್ಕೆ ಸಂಬಂಧಿಸಿದ ಗುಜರಿ ನೀತಿಯೊಂದನ್ನು ಪ್ರಕಟಿಸಿದೆ. ಇದರ ಪ್ರಕಾರ ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಾಹನಗಳು೧೫ವರ್ಷ ಹಳೆಯದಾಗಿದ್ದರೆ, ಹಾಗೂ ಸ್ವಂತ ವಾಹನಗಳು೨೦ವರ್ಷ ಹಳೆಯದಾಗಿದ್ದರೆ ಆ ವಾಹನಗಳನ್ನು ಸಾರ್ವಜನಿಕರು ಗುಜರಿಗೆ ಹಾಕಬೇಕು, ದೇಶಾದ್ಯಂತ ಹೀಗೆ ಹಳೆಯ ವಾಹನಗಳ ಸಂಖ್ಯೆ೪ಕೋಟಿಗಿಂತಲೂ ಅಧಿಕವಾಗಿದೆ. ಇಷ್ಟು ದೊಡ್ಡ ಪ್ರಮಾಣದ ಹಳೆಯ ವಾಹನಗಳಿಂದ ವಾತಾವರಣದಲ್ಲಿ ಅದೆಷ್ಟು ಮಾಲಿನ್ಯಉಂಟಾಗುತ್ತದೆ ಎಂಬುವುದನ್ನು ಹಾಗೆ ಸುಮ್ಮನೆ ಊಹಿಸಿಕೊಳ್ಳಿ.
ಹೀಗಾಗಿಯೇ ತೈಲದ ಮೇಲಿನ ಅವಲಂಬನೆ ಮತ್ತು ವಾತಾವರಣದಲ್ಲಿ ಉಂಟಾಗುತ್ತಿರುವ ಮಾಲಿನ್ಯವನ್ನು ಕಡಿತಗೊಳಿಸಲು ದೇಶಾದ್ಯಂತ ನೀತಿ ನಿರೂಪಕರು ಭವಿಷ್ಯವನ್ನು ಕಡಿಮೆ – ಇಂಗಾಲದ ದಿನಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ.ಅದಕ್ಕಾಗಿ ಶೂನ್ಯ ಮಾಲಿನ್ಯವನ್ನು ಹೊರ ಸೂಸುವ ವಾಹನಗಳನ್ನು ಉಪಯೋಗಿಸುವಂತೆ ದೇಶದ ಜನರಲ್ಲಿ ಕೇಳಿಕೊಳ್ಳುತ್ತಿದ್ದಾರೆ. ಆದ್ದರಿಂದ ಈಗ ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಯುಗ ಆರಂಭವಾಗಿದೆ ಎಂದರೆ ಖಂಡಿತವಾಗಿಯೂಅತಿಶಯೋಕ್ತಿ ಆಗಲಾರದು!
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ಉತ್ತೇಜಿಸಲು೨೦೧೩ರಲ್ಲಿ ರಾಷ್ಟ್ರೀಯ ಇ – ಮೊಬಿಲಿಟಿ ಮಿಷನ್ ನನ್ನು ಸ್ಥಾಪನೆ ಮಾಡಲಾಯಿತು. ಈ ಮಿಷನ್೨೦೨೦ರವರೆಗೆ ಸುಮಾರು೭ಮಿಲಿಯನ್ವಾಹನಗಳನ್ನು ಉತ್ಪಾದಿಸಿ ಮಾರಾಟ ಮಾಡುವುದರ ಜತೆಗೆ ಶೇ.೩ರಷ್ಟು ಕಾರ್ಬನ್ ಡೈ ಆಕ್ಸೆ ಡ್‌ನ್ನು ಕಡಿಮೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಯಿತು. ಅದೇ ವರ್ಷದಿಂದಲೇ ವಿದ್ಯುತ್ ಚಾಲಿತ ವಾಹನಗಳ ಉತ್ಪಾದನಾ ಉದ್ಯಮವನ್ನು ಪ್ರೋತ್ಸಾಹಿಸಲು ಕೇಂದ್ರ ಸರಕಾರ ಹಣಕಾಸಿನ ನೆರವನ್ನು ನೀಡಲು ಆರಂಭಿಸಿತು. ಸೊಸೈಟಿ ಆಫ್ ಮ್ಯಾನ್ಯುಫ್ಯಾಕ್ಚರರ್ಸ್ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ (ಎಸ್‌ಎಂಇವಿ) ಪ್ರಕಾರ೨೦೨೦ರಲ್ಲಿ ವಿದ್ಯುತ್ ಚಾಲಿತ ವಾಹನಗಳ ಮಾರಾಟವು೧ಲಕ್ಷದ೫೬ಸಾವಿರ ಯುನಿಟ್‌ಗಳಾಗಿದ್ದು, ಇದುವರ್ಷದಿಂದ ವರ್ಷಕ್ಕೆ ಶೇ.೨೦ರಷ್ಟು ಹೆಚ್ಚಾಗಿದೆ.
ವಿದ್ಯುತ್ ಚಾಲಿತ ವಾಹನಗಳಿಗೆ ಪ್ರಮುಖವಾಗಿ ಅವಶ್ಯಕತೆ ಇರುವುದು ಚಾರ್ಜಿಂಗ್ ಸ್ಟೇಷನ್‌ಗಳು. ಭಾರತದಲ್ಲಿ ಈಗ ಕೇವಲ೨೫೦ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳು ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಸರಕಾರ ರಾಷ್ಟೀಯ ಹೆದ್ದಾರಿಯ ಎರಡೂ ಬದಿಯಲ್ಲಿ ಪ್ರತಿ ಇಪ್ಪತ್ತೈದು ಕಿಲೋ ಮೀಟರ್‌ಗೊಂದು ಹಾಗೂ ನಗರಗಳಲ್ಲಿ ಪ್ರತಿ ಮೂರು ಕಿಲೋ ಮೀಟರ್‌ಗೊಂದು ಚಾರ್ಜಿಂಗ್ ಸ್ಟೇಷನ್ ಸ್ಥಾಪನೆ ಮಾಡಲು ಯೋಜನೆ ಹಾಕಿಕೊಂಡಿದೆ.
ಜಪಾನಿನ ಪ್ಯಾನಾಸಾನಿಕ್ ಎಲೆಕ್ಟ್ರಿಕ್ ಕಂಪನಿ೨೦೨೫ರೊಳಗೆ ನಮ್ಮ ದೇಶದ೨೫ಬೃಹತ್ ನಗರಗಳಲ್ಲಿ ಸುಮಾರು ಒಂದು ಲಕ್ಷ ಚಾರ್ಜಿಂಗ್ ಸ್ಟೇಷನ್ ಸ್ಥಾಪನೆ ಮಾಡಲು ಮುಂದಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ನಗರೀಕರಣದ ಪರಿಣಾಮದಿಂದ ಪ್ರತಿಯೊಂದು ಯೋಜನೆಯನ್ನು ಕಾರ್ಯರೂಪಕ್ಕೆ ತರುವುದು ಸುಲಭದ ಮಾತಾಗಿ ಉಳಿದಿಲ್ಲ!
ಪ್ರತಿಯೊಂದು ಯೋಜನೆಯ ಹಿಂದೆ ಗುಣಾತ್ಮಕ ಹಾಗೂ ಋಣಾತ್ಮಕ ಅಂಶಗಳು ಇದ್ದೇ ಇರುತ್ತವೆ. ಆದರೆ ಯಾವುದು ಒಳಿತನ್ನು ಉಂಟು ಮಾಡುತ್ತದೆಯೋ ಅದನ್ನು ಅಳವಡಿಸಿಕೊಂಡರೆ ಒಳ್ಳೆಯದು. ಎಲೆಕ್ಟ್ರಾನಿಕ್ ವಾಹನಗಳನ್ನು ಸಮರ್ಕವಾಗಿ ಜಾರಿಗೆಮಾಡಲು ಒಟ್ಟಾರೆ ಎರಡು ಆಧಾರ ಸ್ತಂಭಗಳ ಅವಶ್ಯಕತೆಯಿದೆ. ಮೊದಲನೆ ಯದ್ದು ಸರಿಯಾದ ನಗರ ಯೋಜನೆ, ಎರಡನೆಯದ್ದು ಸಮರ್ಪಕವಾದ ವಿದ್ಯುತ್ ಕ್ಷೇತ್ರ. ಭಾರತ ವಿದ್ಯುತ್ ಚಾಲಿತ ವಾಹನಗಳ ಉತ್ಪಾದನಾ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಲು೨೦೩೦ರೊಳಗೆ ಸುಮಾರು೧೨ಲಕ್ಷದ೫೦ಸಾವಿರ ಕೋಟಿ ಹಣವನ್ನು ಹೂಡಿಕೆ ಮಾಡುವ ಅವಶ್ಯಕತೆ ಇದೆ.
ಇವೆಲ್ಲವೂ ಸರಿಯಾದ ಸಮಯದಲ್ಲಿ ಕಾರ್ಯರೂಪಕ್ಕೆ ಬಂದಾಗ ಮಾತ್ರ ಕೈಗೆಟುಕುವ ದರದಲ್ಲಿ, ಉತ್ತಮ ಗುಣಮಟ್ಟದ ವಾಹನಗಳನ್ನು ಜನರು ಬಳಕೆ ಮಾಡಲು ಅನುಕೂಲವಾಗುತ್ತದೆ. ಶ್ರೀಪ್ರಭು ಪಾದರು ಹೇಳಿದ ಮಾತಿನ ವಾಸ್ತವಿಕತೆ ಇಂದು ಅರಿವಿಗೆ ಬರುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆ, ವಾಹನಗಳ ಸಂಖ್ಯೆ, ದಿನದಿಂದ ದಿನಕ್ಕೆ ಏರಿಕೆ ಯಾಗುತ್ತಿರುವ ತೈಲ ದರ, ವಾಹನಗಳ ಮಾಲಿನ್ಯದ ಪ್ರಮಾಣ ಎಲ್ಲವೂ ಗಾಬರಿ ಗೊಳಿಸುವಂಥದ್ದೆ. ಈ ಸಮಸ್ಯೆಗಳ ನಡುವೆಯೇ ನಮಗೊಂದು ಜವಾಬ್ದಾರಿಯೂ ಇದೆ ಎಂಬುವುದನ್ನು ನಾವು ಎಂದಿಗೂ ಮರೆಯಬಾರದು.
ನಮ್ಮ ಪೂರ್ವಜರು ನೆಟ್ಟಿರುವ ಗಿಡದಲ್ಲಿ ಇಂದು ನಾವು ನೆರಳನ್ನು ಪಡೆಯತ್ತಿದ್ದೇವೆ! ಆ ನೆರಳು ಮುಂದಿನ ಪೀಳಿಗೆಗೆ ಬೇಕಲ್ಲವೇ? ಹಾಗಾಗಿ ಗಿಡ ನೆಡುವುದೆಂದರೆ ಇಲ್ಲಿ ಕೇವಲ ಗಿಡವನ್ನು ನೆಟ್ಟು ಫೋಟೋ ತೆಗೆಸಿಕೊಳ್ಳುವುದಲ್ಲ! ಬದಲಾಗಿ ನಮಗೆ ಬಳುವಳಿ ಯಾಗಿ ಬಂದಿರುವ ಸ್ವಚ್ಛವಾದ ವಾತಾವರಣ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗೆ ಲಭಿಸುವಂತೆ ಮಾಡುವುದು. ಆ ಮಹಾನ್ ಕಾರ್ಯಕ್ಕೆ ವಿದ್ಯುತ್ ಚಾಲಿತ ವಾಹನಗಳ ಬಳಕೆಯೂ ಒಂದು ಮೈಲಿಗಲ್ಲು.