ವೈರಸ್‌ಗಳಷ್ಟೇ ಅಲ್ಲ, ನಾವು ರೂಪಾಂತರವಾಗುತ್ತಿದ್ದೇವೆಯೇ ?
ಶಿಶಿರ ಕಾಲ
ಶಿಶಿರ್‌ ಹೆಗಡೆ
@.
ಮನುಷ್ಯ ತಯಾರಿಸಿದ ಆಹಾರ, ಸುಲಭದಲ್ಲಿ ಜೀರ್ಣವಾಗುವ ಆಹಾರವನ್ನೇ ಆಯ್ಕೆ ಮಾಡಿಕೊಂಡು ಸ್ವೀಕರಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮನುಷ್ಯನ ಕರುಳು ಚಿಕ್ಕದಾಗುತ್ತ ಹೋಗುತ್ತದೆ. ಸಾಮಾನ್ಯವಾಗಿ ದೇಹದ ಉಷ್ಣತೆ ಹೆಚ್ಚುವುದೆಂದರೆಅದು ದೇಹ ರೋಗದ ವಿರುದ್ಧ ಸೆಣೆಸಾಟಕ್ಕೆ ತಯಾರಾಗುವುದು. ಇನ್ನೊಂದು ದೊಡ್ಡ ಮಾರ್ಪಾಡೆಂದರೆ ನಮ್ಮ ದೇಹದ ಉಷ್ಣತೆಗೆ ಸಂಬಂಽಸಿದ್ದು. ಕಳೆದ ನೂರೈವತ್ತು ವರ್ಷದಲ್ಲಿ ಮನುಷ್ಯನ ಸರಾಸರಿ ದೇಹದ ಉಷ್ಣತೆ 0.5 ಸೆಲ್ಸಿಯಸ್ ಕಡಿಮೆಯಾಗಿದೆ.
ಅಂದಿನಿಂದ ಇಂದಿನವರೆಗೆ ಡಾರ್ವಿನ್‌ನ ವಿಕಾಸ ವಾದವನ್ನು ಅತ್ತ ಸಂಪೂರ್ಣ ಒಪ್ಪಲಿಕ್ಕೂ ಆಗುವುದಿಲ್ಲ – ಇತ್ತ ಬಿಡಲಿಕ್ಕೂ ಪೂರ್ಣ ಸಾಧ್ಯವಿಲ್ಲ. ಆತನ ವಾದದಲ್ಲಿ ಒಂದಿಷ್ಟು ಪ್ರಶ್ನೆಗಳಿಗೆ ಉತ್ತರ ಸರಿ ಹೊಂದಿದರೆ ಇನ್ನೊಂದಿಷ್ಟಕ್ಕೆ ತಾಳ ಮೇಳ ವಾಗುವುದೇ ಇಲ್ಲ.
ಅದೆಷ್ಟೋ ಬಾರಿ ಅನ್ನಿಸಿದ್ದಿದೆ – ಇದನ್ನೆಲ್ಲ ಕಟ್ಟಿಕೊಂಡ ಆಗಬೇಕಾದದ್ದೇನಿದೆ ಎಂದು. ಸನಾತನ ಧರ್ಮ ಕೂಡ ಅಂಥದ್ದಕ್ಕೆಲ್ಲ ಅಷ್ಟು ತಲೆಕೆಡಿಸಿಕೊಂಡಿಲ್ಲ. ಆದರೆ ಡಾರ್ವಿನ್ ಆ ವಾದ ಅಂದು ಇಡೀ ಕ್ರಿಶ್ಚನ್ ರಿಲೀಜಿಯನ್‌ನ ನೆಲಗಟ್ಟನ್ನೇ ಅಲುಗಿಸಿತ್ತು – ಇದು ನಿಮಗೆ ಗೊತ್ತಿರುವ ವಿಚಾರ.
ಇಂದಿಗೂ ಆತನ ವಿಕಾಸವಾದವನ್ನು ಧಾರ್ಮಿಕ ಕಾರಣಗಳಿಗೆ ಒಪ್ಪದಿರುವ ಒಂದು ಬಹು ದೊಡ್ಡ ಪಾಶ್ಚಾತ್ಯ ವರ್ಗವೇ ಇದೆ. ಆತನನ್ನು ಒಪ್ಪಿಬಿಟ್ಟರೆ ಅವರ ಧರ್ಮದ ನೆಲೆ ಯನ್ನೇ ಪ್ರಶ್ನಿಸಿದಂತೆ. ಡಾರ್ವಿನ್‌ನ ವಾದವನ್ನು ತಿರಸ್ಕರಿಸಲೆಂದೇ ಇಂದಿಗೂ ನೂರಾರು ಜಾಗತಿಕ ವಿಚಾರ ವೇದಿಕೆಗಳು ಚರ್ಚೆಗಳನ್ನು ಏರ್ಪಡಿಸುತ್ತವೆ. ಅವರು ಅದನ್ನು ಪ್ರಶ್ನಿಸುವ ಲೇಖನಗಳನ್ನು ಬಹು ಪ್ರತಿಷ್ಠಿತ ಪತ್ರಿಕೆಗಳಲ್ಲಿ (ನ್ಯೂಯಾರ್ಕ್ ಟೈಮ್ಸ್ ಆದಿಯಾಗಿ) ಬರೆಯುತ್ತಾರೆ. ನಿರಂತರ ಟಿವಿ ಕಾರ್ಯಕ್ರಮಗಳಾಗುತ್ತವೆ.
ಅದೆಷ್ಟೋ ಡಾಕ್ಯುಮೆಂಟರಿಗಳು ನಿರ್ಮಾಣವಾಗಿವೆ. ಅಲ್ಲಿಯೂ ಧಾರ್ಮಿಕ ವಿಚಾರಗಳನ್ನು ಒಳತರದ ನಾಜೂಕುತನವನ್ನು ಪಾಲಿಸುವು ದಿದೆ. ಅವರು  ಗಳು. ಅಬ್ರಾಹಮಿಕ್ ರೆಲಿಜಿಯನ್ನುಗಳzಲ್ಲcreationism ವಾದಗಳೇ. ದೇವರು ಭೂಮಿ ಮತ್ತು ಸ್ವರ್ಗವನ್ನು ಅದೊಂದು ಮುಹೂರ್ತದಲ್ಲಿ ಸೃಷ್ಟಿಸಿದ ಎಂಬ ವಾದ, ನಂಬಿಕೆ. ಇಂತಹ ಕ್ರಿಯೇಶಸ್ಟ್‌ಗಳ ಒಂದು ವಿಚಾರ ವೇದಿಕೆ ಯಲ್ಲಿ ಭಾಗವಹಿಸುವ ಅವಕಾಶ ಇತ್ತೀಚೆ ಸಿಕ್ಕಿತ್ತು.
ಹತ್ತೆಂಟು ರೀತಿಯ ನಮೂನಾ ವಾದಗಳು. ಒಬ್ಬ ಎದ್ದು ನಿಂತು 1960ರಲ್ಲಿ ನಾಸಾ ಸಂಸ್ಥೆಯ ವಿಜ್ಞಾನಿ ಸೂಪರ್ ಕಂಪ್ಯೂಟರ್‌ಗಳನ್ನು ಬಳಸಿ ಸಾವಿರಾರು ವರ್ಷದ ಹಿಂದಿನ ಗ್ರಹಗಳ ಕಕ್ಷೆಯನ್ನು ಕಂಪ್ಯೂಟರ್‌ನಲ್ಲಿ ಮರು ಸೃಷ್ಟಿ ಮಾಡುತ್ತಿದ್ದನಂತೆ. ಆಗ ಕಂಪ್ಯೂಟರ್‌ನಲ್ಲಿ ಒಂದು ದೋಷ ಸಂದೇಶ ಕಾಣಿಸಿಕೊಂಡಿತಂತೆ. ಅದರ ಪ್ರಕಾರ ಅದೆಷ್ಟೋ ಸಾವಿರ ವರ್ಷದ ಹಿಂದೆ ಒಂದು ಇಡೀ ದಿನ ಅಲ್ಲಿ ಮಿಸ್ಸಿಂಗ್ ಇತ್ತಂತೆ. ತಕ್ಷಣ ಜೋಶುವಾ ಪುಸ್ತಕದ ಅಧ್ಯಾಯ ೧೦ನ್ನು ಅಲ್ಲಿ ಉಲ್ಲೇಖಿಸಿ, ‘ಅಂದಿನಿಂದ ಇಂದಿನವರೆಗೂ ನಾಸಾ ಕೂಡ ವಿಕಾಸ ವಾದವನ್ನು ಒಪ್ಪುವುದಿಲ್ಲ’ ಎಂಬ ವಿಸ್ತಾರವಾದ ವಾದವನ್ನು ಮುಂದಿಟ್ಟಿದ್ದ.
ಇದೊಂದು ಸ್ಯಾಂಪಲ್ ಅಷ್ಟೇ. ಅಲ್ಲಿ ಬೆರಳೆಣಿಕೆಯಷ್ಟು ಮಂದಿ ವಿಕಾಸವಾದವನ್ನು ತೀರಾ ಕರಾರುವಕ್ಕಾಗಿ ಜಿಜ್ಞಾಸೆಗೆ ಒಳಪಡಿಸಿದ್ದರು. ಅದು ಬಿಟ್ಟರೆ ಉಳಿದವರದ್ದಲ್ಲ ಇಂತಹ ಎಡಬಿಡಂಗಿ ವಾದಗಳು. ಈ ಸೃಷ್ಟಿ ವಾದವನ್ನು ನಂಬುವ ವರ್ಗ ತೀರಾ ದೊಡ್ಡದು. ಇವರ್ಯಾ ರಿಗೂ ಅಮೀಬಾ, ವೈರಸ್ ಮೊದಲಾದ ಸೂಕ್ಷ್ಮಜೀವಿಗಳಿಂದ ವಿಕಾಸವಾಗಿ-ಆಗಿ ಮನುಷ್ಯನವರೆಗೆ ಬಂದಿದ್ದೇವೆ ಎಂಬುದನ್ನು ಒಪ್ಪು ವಂತಿಲ್ಲ. ಒಪ್ಪಿದಾಕ್ಷಣ ಅಂದು ಧಾರ್ಮಿಕ ನೆಲಗಟ್ಟು ಬುಡಮೇಲಾಗುತ್ತದೆ.
ಮಂಗನಿಂದ ಮನುಷ್ಯನಾದನೋ ಇಲ್ಲವೋ – ಅದು ಬಿಡಿ. ಅದನ್ನು ಯಾವತ್ತೂ ಪ್ರಶ್ನಾರ್ಥಕವಾಗಿ ನೋಡುವುದೇ ಸರಿ. ವಿಕಾಸವಾದ ವನ್ನು ನೀವು ಒಪ್ಪಿ ಅಥವಾ ಬಿಡಿ, ಆದರೆ ರೂಪಾಂತರವನ್ನಂತೂ ತಳ್ಳಿಹಾಕುವಂತಿಲ್ಲ. ಇವತ್ತು ರೂಪಾಂತರವೆಂದರೆ ಏನು ಎಂದು ಎಲ್ಲರಿಗೂ ಗೊತ್ತಿದೆ – ಕರೋನಾ ಬಂದನಂತರವಂತೂ ರೂಪಾಂತರ – ಮ್ಯುಟೇಷನ್ ಎಂಬ ಶಬ್ದಗಳನ್ನು ಅಜೀರ್ಣವಾಗುವಷ್ಟು ಕೇಳುತ್ತಲೇ ಇರುತ್ತೇವೆ. ವೈರಸ್ ನಿಂದ ಹಿಡಿದು ಸಕಲ ಜೀವವೂ ರೂಪಾಂತರ ಹೊಂದಲೇ ಬೇಕು. ಆದರೆ ಈಗ ಬಂದಿರುವ ಪ್ರಶ್ನೆ ಮನುಷ್ಯ ಇಂದಿಗೂ ರೂಪಾಂತರವಾಗುತ್ತಿದ್ದಾನೆಯೇ? ರೂಪಾಂತರ ಎನ್ನುವುದು ಜೀವಿಗಳ ಸ್ಪರ್ಧೆಯಲ್ಲಿ ಆಗುವ ಬದಲಾವಣೆಅಥವಾ ಹೊಂದಾಣಿಕೆ. ಬ್ಯಾಕ್ಟೀರಿಯಾ ಆಂಟಿಬಾಡಿ ರೆಸಿಸ್ಟೆನ್ಸ್ ಹೊಂದುವುದರಿಂದ ಹಿಡಿದು ಹಮ್ಮಿಂಗ್ ಹಕ್ಕಿಯ ಚುಂಚು ಉದ್ದ ವಾಗುವವರೆಗೆ ಎಲ್ಲವೂ ರೂಪಾಂತರಗಳೇ. ಅವೆಲ್ಲ ಅವುಗಳ ಉಳಿವಿನ ಪ್ರಶ್ನೆಯಿಂದಾಗಿ ಆದ ಬದಲಾವಣೆಗಳು.
ಅದಕ್ಕೆ ಅದೆಷ್ಟೋ ವರ್ಷಗಳು ತಗುಲಿವೆ. ಮಧು ಹೀರುವ ಹಕ್ಕಿಯ ಚುಂಚಿನ ಉದ್ದ ಆಯಾ ಜಾಗದಲ್ಲಿನ ಹೂವಿನ ಗಾತ್ರಕ್ಕನು ಗುಣ ವಾದದ್ದು. ಹೀಗೆ – ಇವೆಲ್ಲ ಅವುಗಳ ಬದುಕಿನ ಅವಶ್ಯಕತೆಗಳು. ಆದರೆ ಮನುಷ್ಯನಿಗೆ ಈಗಿನ ದಿನದಲ್ಲಂತೂ ಏನಂದರೆ ಏನೂ ಬದಲಾಗಬೇಕಾದ – ಬದಲಿಸಿಕೊಂಡು ಬದುಕಬೇಕಾದ ದರ್ದು ಇಲ್ಲ. ಹಾಗಾದರೆ ಇಂದು ನಮ್ಮ ರೂಪಾಂತರ ಸಂಪೂರ್ಣ ನಿಂತಿದೆಯೇ ಎನ್ನುವ ಪ್ರಶ್ನೆ. ಕೆಲವರ ವಾದವೆಂದರೆ ನಾವು ದೈಹಿಕವಾಗಿ ರೂಪಾಂತರವಾದದ್ದು – ವಿಕಾಸವಾದದ್ದು ಮುಗಿಯಿತು, ಇನ್ನೇನಿದ್ದರೂ ನಮ್ಮದು ಟೆಕ್ನಲಾಜಿಕಲ್, ದೇಹದ ಆಚೆಗಿನ ರೂಪಾಂತರ.
ಅದು ನಿಜವೇ? ಮಾನವಶಾಸ್ತ್ರದಲ್ಲಿ ಹೆಸರುವಾಸಿ ಹೆಸರು ಜಾನ್ ಹಾಕ್ಸ್. ಅವರು ವಿಸ್ಕಾನ್ಸಿನ್ ಮ್ಯಾಡಿಸನ್ ವಿಶ್ವವಿದ್ಯಾಲಯದ ಪ್ರೊಫೆಸರ್. ಆದಿ ಮಾನವನ ಮೂಳೆ ಮತ್ತು ಜೀನ್ಸ್ ಅಭ್ಯಾಸ ಮಾಡಿ ಅದೆಷ್ಟೋ ಪ್ರಬಂಧ ಮಂಡಿಸಿದ ಜಾನ್ ಬಹುಶಃ ವಿಕಾಸವಾದದ ಬಹುತೇಕ ಕಥೆಗಳ ಸುತ್ತ ಒಂದಿಂದು ರೀತಿಯಲ್ಲಿ ಕೆಲಸ ಮಾಡಿದವರು. ಸುಮಾರು ಹತ್ತು ಸಾವಿರ ವರ್ಷಗಳ ಮಾನವನ ದೈಹಿಕಮಾರ್ಪಾಡಿನ ಇತಿಹಾಸ ಇವರಿಗೆ ಗೊತ್ತು. ಅಮೆರಿಕ, ಆಫ್ರಿಕಾ, ಏಷ್ಯಾ ಮತ್ತು ಯುರೋಪ್ ಇಲ್ಲ ಹತ್ತಿಪ್ಪತ್ತು ಪಳೆಯುಳಿಕೆಯ ಜಾಗದಲ್ಲಿ ಸಿಕ್ಕ ಮನುಷ್ಯನ ಸಾವಿರಾರು ಮೂಳೆಯ ಸಾಂಪಲ್ ಅನ್ನು ಅಭ್ಯಸಿಸಿದವರು ಜಾನ್. ಯು ಟ್ಯೂಬ್ ನಲ್ಲಿ ಅವರ ಮಾತುಗಳನ್ನು ಕೇಳುತ್ತಿದ್ದರೆ ಅದ್ಯಾವುದೋ ಒಂದು ಲೋಕಕ್ಕೆ ನಮ್ಮನ್ನು ಕರೆದುಕೊಂಡು ಹೋಗುವ ಮೋಡಿ, ಜ್ಞಾನ ಅವರಲ್ಲಿದೆ.
ಅವರದು ತೀರಾ ಕರಾರುವಕ್ಕಾದ ವಾದ, ಜಿeಸೆಗಳು. ಅವರ ಪ್ರಕಾರ ಇಂದಿನ ಮನುಷ್ಯ ಹತ್ತು ಲಕ್ಷ ವರ್ಷ ಹಿಂದಿನ ಮನುಷ್ಯನಿಗೆ ಹೋಲಿಸಿದರೆ, ಸುಮಾರು ನೂರು ಪಟ್ಟು ಮಾರ್ಪಾಡನ್ನು ಹೊಂದುತ್ತಿದ್ದಾನಂತೆ! ಇವರು ನಡೆಸಿದ ಜೆನೆಟಿಕ್ ಅನಾಲಿಸಿಸ್ ನ ಪ್ರಕಾರ ನೈಜೀರಿಯಾ, ಅಮೆರಿಕ, ಜಪಾನ್, ಮತ್ತು ಚೀನಾದ ಪೂರ್ವಜರ ಮೂಲ ಸುಮಾರು ಎರಡು ಲಕ್ಷ ವರ್ಷದ ಹಿಂದೆ ಒಂದೇ. ನೈಜೀರಿಯಾದ ಜನರು ಕಪ್ಪು, ಅಮೆರಿಕನ್ನರು – ಮೂಲದಲ್ಲಿ ಯುರೋಪಿಯನ್ನರು ಬಿಳಿ, ಜಪಾನಿಯರು ಕುಳ್ಳರು, ಸಣ್ಣ ಕಣ್ಣು. ಈ ಎಲ್ಲ ಮಾರ್ಪಾಡುಗಳಾದದ್ದು ಕಳೆದ ಎರಡು ಲಕ್ಷ ವರ್ಷದಲ್ಲಿ ಎಂಬ ವಾದಕ್ಕೆ ನೂರಾರು ಪುರಾವೆಗಳನ್ನು ಜಾನ್ ಒದಗಿಸುತ್ತಾರೆ.
ಹಾಗೆ ನೋಡಿದರೆ ಆಕಳ ಹಾಲು, ಅಥವಾ ಇನ್ನೊಂದು ಪ್ರಾಣಿಯ ಹಾಲು ಸ್ವಾಭಾವಿಕ ಆಹಾರವಲ್ಲ. ಆಕಳನ್ನು ಸಾಕುವುದು, ನಂತರದಲ್ಲಿ ಕೃಷಿ ಇವೆಲ್ಲ ಐದಾರು ಸಾವಿರ ವರ್ಷದಿಂದೀಚೆ ನಾವು ಮಾಡಿಕೊಂಡ ಬದಲಾವಣೆ. ಅದಕ್ಕನುಗುಣವಾಗಿ ನಮ್ಮ ಜೀನ್ಸ್‌ಗಳು ಬದಲಾ ಗಿವೆ. ಜಾನ್‌ನ ಪ್ರಕಾರ ಯಾವಾಗ ನಾವು ಕೃಷಿಯನ್ನು ಆರಂಭಿಸಿದೆವೋ ಆಗ ನಮ್ಮ ವಂಶವಾಹಿನಿಯ ಬದಲಾವಣೆಯ ಗತಿ ತಗ್ಗಿದೆ. ಕೃಷಿ ಆರಂಭವಾದಂದಿನಿಂದ ನಂತರದಲ್ಲಿ ಮನುಷ್ಯನ ಜೀವನ ರೀತಿ, ಆಹಾರ ಇವೆಲ್ಲ ಅಷ್ಟಾಗಿ ಈಗ ಕಳೆದ ನೂರು ವರ್ಷದ ವರೆಗೆ ಬದಲಾಗಲೇ ಇಲ್ಲ ಎನ್ನುವುದು ಈವಾದವನ್ನು ಪುಷ್ಟೀಕರಿಸುತ್ತದೆ. ಮೊದಲನೆಯದು ಆಹಾರ ಮತ್ತು ಜೀವನ ಪದ್ಧತಿ, ಎರಡನೆಯದು ಜನಸಂಖ್ಯೆ. ಇವೆರಡು ತೀವ್ರಗತಿಯಲ್ಲಿ ಬದಲಾದದ್ದು ತೀರಾ ಇತ್ತೀಚೆಗೆ – ಸುಮಾರು ಒಂದು ನೂರು ವರ್ಷದಲ್ಲಿ. ಮ್ಯುಟೇಷನ್ ನ ಗತಿ ಹೆಚ್ಚಲು ಇಂದು ಸಡನ್ನಾಗಿ ಬದಲಾದ ಜೀವನ ಪದ್ಧತಿ, ಆಹಾರ ಇವು ಒಂದು ಕಾರಣವಾದರೆ ಇನ್ನೊಂದು ಇಂದಿನ ಜನಸಂಖ್ಯೆ.
ಇಂದು ಭೂಮಿಯ ಮೇಲೆ 7.5 ಬಿಲಿಯನ್ ಮನುಷ್ಯರಿzರೆ. ಜಾಗತೀಕರಣದಿಂದಾಗಿ – ವಲಸೆ ಸುಲಭವಾಗಿರುವುದರಿಂದ ಮನುಷ್ಯನಲ್ಲಿ ಎಲ್ಲಿಲ್ಲದ ಪ್ರಮಾಣದಲ್ಲಿ ಕ್ರಾಸ್ ಬ್ರೀಡ್‌ಗಳಾಗುತ್ತಿವೆ. ಏಷಿಯನ್ ಆಫ್ರಿಕನ್ ಅನ್ನು ಮದುವೆಯಾಗುವುದು, ಯುರೋಪಿಯನ್ ಚೈನೀಸ್ ಅನ್ನು ಮದುವೆಯಾಗುವುದು, ಸಸ್ಯಾಹಾರಿ ಮಾಂಸಾಹಾರಿಯನ್ನು ಮದುವೆಯಾಗಿ ಮಕ್ಕಳನ್ನು ಪಡೆಯುವುದು ಇತ್ಯಾದಿ ಇತ್ಯಾದಿ. ಇದೆಲ್ಲ ಇಂದು ಎಲ್ಲಿಲ್ಲದ ಪ್ರಮಾಣದಲ್ಲಿ ನಡೆಯುತ್ತಿದೆ. ಈ ಬದಲಾವಣೆಗೆ ಒಗ್ಗಿಕೊಳ್ಳಲು ಮುಂಬರುವ ಮಿಶ್ರತಳಿಯ ಮನುಷ್ಯ ಎಲ್ಲಿಲ್ಲದ ಮಾರ್ಪಾಡನ್ನು ಮಾಡಿಕೊಳ್ಳುತ್ತಿದ್ದಾನೆ ಎನ್ನುವುದು ಜಾನ್‌ನ ವಾದ – ಒಪ್ಪುವಂಥದ್ದು.
ಕೆಲವು ಬದಲಾವಣೆಗಳು ಪುರಾವೆಯ ಜತೆ ಗೋಚರವಾಗುತ್ತವೆ. ಉದಾಹರಣೆಗೆ ನಮ್ಮ ಮೆದುಳು ಚಿಕ್ಕದಾಗುತ್ತಿರುವುದು. ಕಳೆದ ಹತ್ತು ಸಾವಿರ ವರ್ಷದಲ್ಲಿ ಮನುಷ್ಯನ ಮೆದುಳು ಶೇ.15ರಷ್ಟು ಚಿಕ್ಕದಾಗಿದೆ ಎನ್ನುವುದಕ್ಕೆ ಸಾಕ್ಷ್ಯಗಳು ಸಿಗುತ್ತವೆ. ವಿಜ್ಞಾನಿಗಳ ಪ್ರಕಾರ ಈ ಟ್ರೆಂಡ್ ಇಂದು ಕೂಡ ಮುಂದುವರಿದಿದೆ. ಮೆದುಳು ಚಿಕ್ಕದಾಗುತ್ತಿದೆ ಎಂದರೆ ನಾವು ಇನ್ನಷ್ಟು ದಡ್ಡರಾಗುತ್ತಿದ್ದೇವೆಯೇ? ಹಾಗಲ್ಲ. ಮೆದುಳುಚಿಕ್ಕದಾದಂತೆ ನ್ಯೂರಾನ್‌ಗಳು ಇನ್ನಷ್ಟು ಹತ್ತಿರಕ್ಕೆ ಬರುವುದರಿಂದ ಅದರ ನಡುವಿನ ಸಂವಹನ ಇನ್ನಷ್ಟು ವೇಗ ಪಡೆದುಕೊಂಡುನಮ್ಮ ವಿಚಾರ ಶಕ್ತಿ ಮತ್ತು ಪ್ರತಿಕ್ರಿಯೆಯ ವೇಗ ಹೆಚ್ಚುತ್ತಿದೆ.
ಒಂದು ರೀತಿಯಲ್ಲಿ ಲ್ಯಾಪ್‌ಟಾಪ್, ಮೊಬೈಲ್ ನಂತೆ ನಮ್ಮ ಮೆದುಳು ಕೂಡ ಕಾಂಪ್ಯಾಕ್ಟ್ ಆಗುತ್ತಿದೆ. ಈಗ ಕಳೆದ ನೂರು ವರ್ಷಗಳಲ್ಲಿ ಮನುಷ್ಯ ಹಿಂದೆಲ್ಲದಕ್ಕಿಂತ ಹೆಚ್ಚಿಗೆ ವಿಚಾರಕ್ಕೆ ತನ್ನ ಮೆದುಳನ್ನು ಒಳಪಡಿಸುತ್ತಿರುವುದರಿಂದ ಮೆದುಳು ಚಿಕ್ಕದಾಗುವ ವೇಗ ಕೂಡ ಹೆಚ್ಚಿದೆ. ಇದಲ್ಲದೆ; ಮನುಷ್ಯ ತನ್ನ ಕಾಲಿನಿಂದ ವಸ್ತುವನ್ನು ಹಿಡಿಯಲು ಬಳಸುವುದು ನಿಲ್ಲಿಸಿ ಬಹಳ ಕಾಲವಾಯಿತು. ಆ ಕಾರಣಕ್ಕೆ ಕಿರುಬೆರಳು ತಲಗಳಿ ಕಳೆದಂತೆಚಿಕ್ಕದಾಗುತ್ತಿದೆ. ಕ್ರಮೇಣ ನಮ್ಮ ಕಿರುಬೆರಳು ನಶಿಸುತ್ತದೆ.
ಇನ್ನೊಂದು ಬದಲಾವಣೆಯೆಂದರೆ ಬುದ್ಧಿ ಹಲ್ಲು. ಈ ಹಲ್ಲು ಅವಶ್ಯಕತೆಗಿಂತ ಇದರ ಕಿರಿಕಿರಿಯೇ ಜಾಸ್ತಿ. ಆ ಕಾರಣಕ್ಕೆ ಆದ ಬದಲಾವಣೆ ಯಿಂದಾಗಿ ಇಂದು ಶೇ.10 ರಿಂದ 45 ರಷ್ಟು ಮಂದಿಗೆ ಈ ಬುದ್ಧಿ ಹಲ್ಲು ಹುಟ್ಟುವುದೇ ಇಲ್ಲ. ಅಪೆಂಡಿಕ್ಸ ಬಗ್ಗೆ, ಅದು ಕೊಡುವ ಕಿರಿಕಿರಿಯ ಬಗ್ಗೆ, ಆಪೆರೇಷನ್ ಮಾಡಿಸಿ ತೆಗೆಸಿಕೊಳ್ಳುವುದರ ಬಗ್ಗೆ ನಿಮಗೆ ಗೊತ್ತೇ ಇದೆ. ಇವೆಲ್ಲ ತುಂಬಾ ವೇಗದಗುತ್ತಿರುವ ಮಾರ್ಪಾಡುಗಳು. ಇದರ ಜತೆ ಕೆಲವು ರಕ್ತನಾಳಗಳು ಕೂಡ ತೀವ್ರಗತಿಯಲ್ಲಿ ಇಂದು ಬದಲಾಗುತ್ತಿವೆ.
ಇದಲ್ಲದೇ, ಇಂದು ನಾವು ಬಹುತೇಕ ಕೆಲಸಕ್ಕೆ ಕೈ ಬೆರಳನ್ನು ಮಾತ್ರ ಬಳಸುವುದು – ಬರವಣಿಗೆಗೆ, ಕಂಪ್ಯೂಟರ್‌ನಲ್ಲಿ ಟೈಪಿಸಲು, ಮೊಬೈಲ್ ಬಳಸುವಾಗ, ಯಂತ್ರೋಪಕರಣ ಚಲಾಯಿಸುವಾಗ ಹೀಗೆ. ಆ ಕಾರಣಕ್ಕೆ ಈಗ ಮೂವತ್ತು ವರ್ಷ ಹಿಂದಿನ ದೇಹರಚನೆಗೆ ಹೋಲಿಸಿದರೆ ಇಂದು ಕೈ ಬೆರಳಿಗೆ ಹರಿಯುವ ರಕ್ತನಾಳ ಇನ್ನಷ್ಟು ಸದೃಢವಾಗಿವೆ. ಇದು ಮುಂದಿವರಿದರೆ ತೋರ್ಬೆರಳು ಮತ್ತು ಮಧ್ಯದ ಬೆರಳು ಇನ್ನೊಂದು ಐವತ್ತು ವರ್ಷದಲ್ಲಿ ಉದ್ದವಾಗುವ ಸಾಧ್ಯತೆ ತೀರಾ ಹೆಚ್ಚಿದೆ.
ನಾವು ನೀವೆಲ್ಲ ಟಿಬೆಟ್‌ನ ಎತ್ತರದ ಬೆಟ್ಟ ಏರಿದರೆ ಅಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಿರುವುದರಿಂದ ಉಸಿರಾಡುವುದು ಕಷ್ಟವಾ ಗುತ್ತದೆ, ತಲೆ ಸುತ್ತಿ ಬೀಳುತ್ತೇವೆ, ತಲೆನೋವು ಕಾಣಿಸಿಕೊಂಡು ಹೃದಯಬಡಿತ ಹೆಚ್ಚುತ್ತದೆ. ಟಿಬೆಟ್ ಸಮುದ್ರತಟದಿಂದ ನಾಲ್ಕೈದು ಕಿಲೋಮೀಟರ್ ಎತ್ತರದ ಪ್ರದೇಶ. ಅಲ್ಲಿ ನಮ್ಮ ಕರಾವಳಿಗೆ ಹೋಲಿಸಿದರೆ ಆಮ್ಲಜನಕ ಪ್ರಮಾಣ ಶೇ. 33 ಕಡಿಮೆ. ಆದರೆ ಅಲ್ಲಿ ಕೂಡ ಮನುಷ್ಯವಾಸವಿದೆ. ಅವರೇನು ಹುಟ್ಟಿದಾಗಿನಿಂದ ಅಲ್ಲಿದ್ದರಿಂದ ಅದಕ್ಕೆ ಹೊಂದಿಕೊಂಡವರಲ್ಲ. ಅವರೆಲ್ಲ ಅಲ್ಲಿ ಆರಾಮಾಗಿ ಬದುಕು ತ್ತಿರುವುದು ವಂಶವಾಹಿನಿಯಲ್ಲಿ ಮಾರ್ಪಾಡಾಗಿ ಪಡೆದ ಶಕ್ತಿಯಿಂದ. ಈ ಶಕ್ತಿ ಒಲಿದ ಪ್ರದೇಶದವರ ವಂಶವಾಹಿನಿಯಲ್ಲಿ ಕೇವಲ ಶೇ. 1 ರಷ್ಟು ಜನರಲ್ಲಿ ಮಾತ್ರ ಇದೆ. ಇನ್ನೊಂದು ದೊಡ್ಡ ಮಾರ್ಪಾಡೆಂದರೆ ನಮ್ಮ ದೇಹದ ಉಷ್ಣತೆಗೆ ಸಂಬಂಧಿಸಿದ್ದು. ಕಳೆದ ನೂರೈವತ್ತು ವರ್ಷದಲ್ಲಿ ಮನುಷ್ಯನ ಸರಾಸರಿ ದೇಹದ ಉಷ್ಣತೆ 0.5 ಸೆಲ್ಸಿಯಸ್ ಕಡಿಮೆಯಾಗಿದೆ.
ಅದರರ್ಥ ಇಂದು ನಾವು ಸ್ವಲ್ಪ ಜ್ವರ ಬಂದಿದೆ ಎನ್ನುವ ದೇಹದ ಉಷ್ಣತೆ 1860-70 ರಲ್ಲಿ ಜ್ವರವೇ ಆಗಿರುತ್ತಿರಲಿಲ್ಲ. ಸಾಮಾನ್ಯವಾಗಿ ದೇಹದ ಉಷ್ಣತೆ ಹೆಚ್ಚುವುದೆಂದರೆ ಅದು ದೇಹ ರೋಗದ ವಿರುದ್ಧ ಸೆಣೆಸಾಟಕ್ಕೆ ತಯಾರಾಗುವುದು. ಇತ್ತೀಚೆ ಸ್ವಚ್ಛತೆ ಹೆಚ್ಚಿರುವುದರಿಂದ, ರೋಗ ಕಡಿಮೆಯಾಗಿ ಕ್ರಮೇಣ ನಾವು ಉಷ್ಣತೆಯನ್ನು ಕಳೆದುಕೊಂಡಿದ್ದೇವೆ. ಇದಕ್ಕೆ ಜಾಗತಿಕ ಉಷ್ಣೇತೆಯ ಏರಿಕೆಯ ಕಾರಣ ಕೊಡು ವುದು ಕೂಡ ಇದೆ. ಒಟ್ಟಾರೆ ಇದೊಂದುದೊಡ್ಡ ಮಾರ್ಪಾಡು.
ಇಂದು ಮನುಷ್ಯ ತಯಾರಿಸಿದ ಆಹಾರ, ಸುಲಭದಲ್ಲಿ ಜೀರ್ಣವಾಗುವ ಆಹಾರವನ್ನೇ ಆಯ್ಕೆ ಮಾಡಿಕೊಂಡು ಸ್ವೀಕರಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮನುಷ್ಯನ ಕರುಳು ಚಿಕ್ಕದಾಗುತ್ತ ಹೋಗುತ್ತದೆ. ಇದರ ಕುರುಹು ಈಗಾಗಲೇ ಮುಂದುವರಿದ ದೇಶಗಳಲ್ಲಿ, ಅಮೆರಿಕಾ ಮತ್ತು ಇಂಗ್ಲೆಂಡಿನಲ್ಲಿ ಕಾಣಿಸಿಕೊಳ್ಳಲಾರಂಭಿಸಿದೆ. ಅದಲ್ಲದೆ ಆಹಾರಕ್ಕೆ, ಕೆಲಸಕ್ಕೆ ಮನುಷ್ಯ ಓಡಾಡುವುದು ಕೂಡ ಕಡಿಮೆಯಾಗುತ್ತಿರುವುದರಿಂದ ಮನುಷ್ಯನ ಮೂಳೆ ಇನ್ನಷ್ಟು ದುರ್ಬಲವಾಗುತ್ತ ಹೋಗುತ್ತದೆ.
ಇದೆಲ್ಲ ಕಾರಣ ಸಿಗುವ ರೂಪಾಂತರಗಳಾದವು. ಇನ್ನು ಕೆಲವು ಸುಲಭದಲ್ಲಿ ಕಾರಣ ಸಿಗದ ರೂಪಾಂತರಗಳಿವೆ. ಜಪಾನಿನ ಓಕಿನಾವಾ ವಿಶ್ವವಿದ್ಯಾಲಯ ಈಗ, ತಿಂಗಳ ಹಿಂದೆ ಒಂದು ವಿಚಿತ್ರ ಸುದ್ದಿಯನ್ನು ಪ್ರಕಟಿಸಿತ್ತು. ಅದರ ಪ್ರಕಾರ ಮನುಷ್ಯನ ಎಂಜಲಿನಲ್ಲಿ ಇನ್ನೊಬ್ಬ ಮನುಷ್ಯನಿಗೆ ವಿಷವಾಗುವ ಜೀನ್ಸ ಗಳು ಮುನ್ನೆಲೆಗೆ ಬರುತ್ತಿವೆಯಂತೆ. ಇದಕ್ಕೆ ಸರಿಯಾದ ಕಾರಣ ಅವರು ಹೇಳಿಲ್ಲವಾದರೂ ಇದಕ್ಕೆ ಬದಲಾದ ಆಹಾರ ಪದ್ಧತಿ, ಅತಿಯಾದ ಮಾಂಸಾಹಾರ ಸೇವನೆ ಕಾರಣ ಎನ್ನಲಾಗುತ್ತಿದೆ. ಈ ರೀತಿ ಅಂದಾಜಿಗೆ ಸಿಗದ ಹತ್ತಾರು ಬದಲಾವಣೆಗಳಿಗೆ ಉತ್ತರ ಇನ್ನೂ ಸಿಕ್ಕಬೇಕಿದೆ.
ಒಟ್ಟಾರೆ ನಮಗರಿವಿಲ್ಲದಂತೆ ನಾವು ಬದಲಾಗುತ್ತಿದ್ದೇವೆ. ಕೆಲ ಬದಲಾವಣೆಗಳು – ಉದಾಹರಣೆಗೆ ಡಯಾಬಿಟೀಸ್, ಬಿಪಿ ಮೊದಲಾ ದವಕ್ಕೆ ಪರಿಹಾರ ಕೂಡ ಆಗಬಹುದು. ಬಹುತೇಕ ಬದಲಾವಣೆಗಳು ನಮ್ಮ ಜೀವಮಾನದಲ್ಲಿ ಗೋಚರವಾಗದೇ ಹೋಗಬಹುದು. ಆದರೆ ಬದಲಾವಣೆ ನಿರಂತರ.