ಕಮ್ಯುನಿಸ್ಟರಿಂದ ಹೊರಬಂದ ಕಾರ್ಮಿಕ
ವೀಕೆಂಡ್ ವಿತ್‌ ಮೋಹನ್‌
ಮೋಹನ್ ವಿಶ್ವ
@.
ವೆನೆಜುಲಾ ಮಕಾಡೆ ಮಲಗಿದೆ, ರಷ್ಯಾದಲ್ಲಿ ಹಲವು ಸಮಸ್ಯೆಗಳಿವೆ, ನೇಪಾಳದ ಆರ್ಥಿಕತೆ ಸರಿಯಿಲ್ಲ, ಜಿಂಬಾಬ್ವೆ ದಿವಾಳಿಯಾಗಿತ್ತು, ದಕ್ಷಿಣ ಅಮೆರಿಕದ ದೇಶಗಳಂತೂ ಜಗತ್ತಿನ ನಿತ್ಯ ಸಂಪರ್ಕಕ್ಕೆ ಬರುವುದನ್ನೇ ಕಂಡಿಲ್ಲ.
ಕಾರ್ಮಿಕ ಜಗತ್ತಿನ ಪ್ರತಿಯೊಬ್ಬ ಬಂಡವಾಳಶಾಹಿಯ ಬೆನ್ನೆಲುಬು ಮತ್ತು ಇತಿಹಾಸದಲ್ಲಿ ಬಂದು ಹೋದ ಶ್ರೀಮಂತ ಮನೆತನದಹಿಂದಿನ ಶಕ್ತಿ- ‘ಕಾರ್ಮಿಕ’. ಭಗವಂತನ ಸೃಷ್ಟಿಯಲ್ಲಿ ಪ್ರತಿಯೊಬ್ಬರ ವ್ಯಾವಹಾರಿಕ ಶಕ್ತಿ ಒಂದೇ ರೀತಿ ಇರುವುದಿಲ್ಲ ಹಾಗೂ ಬುದ್ಧಿಶಕ್ತಿಯೂವಿಭಿನ್ನವಾಗಿರುತ್ತದೆ. ಅವರವರ ಬುದ್ಧಿಶಕ್ತಿಯ ಆಧಾರದ ಮೇಲೆ ಸಮಾಜದಲ್ಲಿ ಸ್ಥಾನಮಾನಗಳು ದೊರಕುತ್ತವೆ.
ಪ್ರತಿಯೊಬ್ಬರೂ ಬಂಡವಾಳಶಾಹಿಗಳಗಲಾರು. ಬಂಡವಾಳ ಹೂಡಿಕೆದಾರರು ತಮ್ಮ ಹೆಂಡತಿ ಮಕ್ಕಳ ಒಡವೆಗಳನ್ನು ಅಡವಿಟ್ಟು ಸಾಲ ಮಾಡಿ ಕಾರ್ಖಾನೆ ನಡೆಸುತ್ತಿರು ತ್ತಾರೆ. ಅತ್ತ ಕಾರ್ಮಿಕ ಕುಟುಂಬಕ್ಕೆ ಸಮಯ ನೀಡಲಾಗದೆ ಮಾಲೀಕನಿಗಾಗಿ ದುಡಿಯುತ್ತಿರುತ್ತಾನೆ. ರೈಲು ಹಳಿಯ ರೀತಿಯಲ್ಲಿ ಒಂದೇ ದಿಕ್ಕಿನಲ್ಲಿ ಸಾಗಿದರೆ ಮಾತ್ರ ಬಂಡವಾಳಶಾಹಿ ಹಾಗೂ ಕಾರ್ಮಿಕ ಇಬ್ಬರೂ ಯಶಸ್ಸನ್ನು ಸಾಧಿಸ ಬಲ್ಲರು.
ಜಗತ್ತಿನಲ್ಲಿ ಕೈಗಾರಿಕಾ ಕ್ರಾಂತಿ ಶುರುವಾದ ತರುವಾಯ ನಡೆದಂತಹ ಕಾರ್ಮಿಕ ಚಳವಳಿಗಳಲ್ಲಿ ಹಲವು ಕಾರ್ಖಾನೆಗಳು ಪುನಶ್ಚೇತನ ಗೊಂಡ ಮತ್ತು ಬಾಗಿಲು ಮುಚ್ಚಿದ ಉದಾಹರಣೆಗಳೂ ಇವೆ. ಒಂದು ಮಾತಂತೂ ಸತ್ಯ ಬಂಡವಾಳಶಾಹಿ ವಾದವಿಲ್ಲದೆ ಸಮಾಜವಾದ ವಿಲ್ಲ. ಆಸ್ತಿ ಯನ್ನು ಸೃಷ್ಟಿ ಮಾಡಿದರೆ ಮಾತ್ರ ಸಮಾಜ ವಾದದಡಿಯಲ್ಲಿ ಎಲ್ಲರಿಗೂ ಅವರವರ ಪಾಲನ್ನು ಹಂಚಲು ಸಾಧ್ಯ. ದೊಡ್ಡಣ್ಣಅಮೆರಿಕ ತನ್ನ ಯೋಜನೆಗಳ ಮೂಲಕ ಮೂರು ಶತಮಾನಗಳಲ್ಲಿ ಬಂಡವಾಳಶಾಹಿವಾದ ಹಾಗೂ ಸಮಾಜವಾದವನ್ನು ಅನುಷ್ಠಾನ ಗೊಳಿಸಿದೆ.
ಇದಕ್ಕೆ ವಿರುದ್ಧವಾಗಿ ಹುಟ್ಟಿಕೊಂಡ ಕಮ್ಯುನಿಸ್ಟ್ ಸಿದ್ಧಾಂತ ತಲೆಬುಡವಿಲ್ಲದ ತತ್ವಗಳಿಂದ ಲಕ್ಷಾಂತರ ಕಾರ್ಮಿಕರನ್ನು ಕತ್ತಲಲ್ಲಿಟ್ಟಿತ್ತು. ಕಮ್ಯುನಿಸ್ಟ್ ಸಿದ್ಧಾಂತವನ್ನು ಪ್ರತಿಪಾದಿಸಿದ ನಾಯಕರುಗಳು ತನ್ನ ಮಾಲೀಕನ ಲಾಭದ ಮೇಲೆ ಕಣ್ಣಿಟ್ಟಿದ್ದರೆ ಹೊರತು, ಕಾರ್ಖಾನೆಯಸಮಸ್ಯೆ, ಮಾಲೀಕನ ಸಮಸ್ಯೆ, ಸರಕಾರದಿಂದ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಚಿಂತಿಸಿ ಅವನ ಪರವಾಗಿ ನಿಲ್ಲುವ ಯೋಚನೆಯನ್ನು ಮಾಡಲಿಲ್ಲ.
ಇಪ್ಪತ್ತು ವರ್ಷ ಕಷ್ಟ ಪಟ್ಟು ಸಿದ್ದಾರ್ಥ್ ಕಟ್ಟಿದ್ದ ಕಾಫಿ ಡೇ ಸಂಸ್ಥೆಯು ಆರ್ಥಿಕ ಸಂಕಷ್ಟದಲ್ಲಿದ್ದಾಗ ಕೆಂಪು ಬಣ್ಣದ ಕಮ್ಯುನಿಸ್ಟ್ ಸಂಘಟನೆಯು ಒಂದೇ ಒಂದು ಮಾತನಾಡಲಿಲ್ಲ. ತಾನು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಸಹ ತನ್ನ ಕಾರ್ಮಿಕರಿಗೆ ಸರಿಯಾದ ಸಮಯದಲ್ಲಿ ಸಂಬಳ ನೀಡುತ್ತಿದ್ದರು ಸಿದ್ದಾರ್ಥ್. ಮೂರು ದಶಕಗಳ ಕಾಲ ಪಶ್ಚಿಮ ಬಂಗಾಳವನ್ನಾಳಿದ ಕಮ್ಯುನಿಸ್ಟರು ಇಡೀ ರಾಜ್ಯವನ್ನು ಅಧಪತನಕ್ಕೆಕೊಂಡೊಯ್ದರು. ಟಾಟಾ ಸಂಸ್ಥೆಯ ನ್ಯಾನೋ ಕಾರು ಘಟಕವನ್ನು ಬಂಗಾಳದಲ್ಲಿ ಸ್ಥಾಪಿಸಲು ಕಮ್ಯುನಿಸ್ಟರು ಬಿಡಲಿಲ್ಲ.
ಕೊನೆಗೆ ಗುಜರಾತಿಗೆ ಟಾಟಾ ಸಂಸ್ಥೆ ತಮ್ಮ ಉತ್ಪಾದನಾ ಘಟಕವನ್ನು ಸ್ಥಳಾಂತರಿಸಿತು. ಇಂದಿಗೂ ಸಹ ಹೊರಗಿನವರು ಬಂಗಾಳದಲ್ಲಿ ಕಾರ್ಖಾನೆಯೊಂದನ್ನು ಸ್ಥಾಪಿಸಬೇಕಾದರೆ ನೂರು ಬಾರಿ ಯೋಚಿಸುವ ಪರಿಸ್ಥಿತಿಯಿದೆ. ಕೇರಳದಲ್ಲಿ ಹೊರಗಿನವರು ಬಿಡಿ ಸ್ಥಳೀಯರು ಕಾರ್ಖಾನೆಯೊಂದನ್ನು ಸ್ಥಾಪಿಸಲು ಹೊರಟರೆ ಕಮ್ಯುನಿಸ್ಟರಿಂದ ನೂರೆಂಟು ವಿಘ್ನ. ಕಳೆದ ವರ್ಷ ಕೋಲಾರದ ನರಸಾಪುರ ಬಳಿಯ ವಿಸ್ಟ್ರಾನ್ ಕಂಪನಿಯ ಗಲಭೆಯ ಹಿಂದಿದ್ದದ್ದು ಮತ್ತದೇ ಕಮ್ಯುನಿಸ್ಟರು.
ಕಂಪನಿಯ ಮಾಲೀಕನ ತಪ್ಪಿರಬಹುದು, ಆದರೆ ತನ್ನ ಕುಟುಂಬಕ್ಕೆ ಅನ್ನ ನೀಡಿದವನ ಕಾರ್ಖಾನೆಯನ್ನು ಧ್ವಂಸಗೊಳಿಸುವುದು ಎಷ್ಟು ಸರಿ? ಕಾರ್ಮಿಕ ಹಾಗೂ ಮಾಲೀಕನ ನಡುವಣ ಸಂಬಂಧವನ್ನು ಅರ್ಥ ಮಾಡಿಕೊಳ್ಳದೆ ಜಗತ್ತಿನಾದ್ಯಂತ ಮಕಾಡೆ ಮಲಗಿರುವ ಕಮ್ಯುನಿಸ್ಟ್ ಸಿದ್ಧಾಂತವನ್ನು ಮುನ್ನೆಲೆಗೆ ತರುವ ಪ್ರಯತ್ನಗಳು ಇಂದಿಗೂ ನಡೆಯುತ್ತಿದೆ. ಮಾತು ಮಾತಿಗೂ ಅಂಬಾನಿ, ಅದಾನಿಯನ್ನು ಎಳೆತಂದು ಕಾರ್ಮಿಕರಿಗೆ ಬಂಡವಾಳಶಾಹಿಗಳನ್ನು ಖಳನಾಯಕರಂತೆ ಬಿಂಬಿಸುವ ವ್ಯರ್ಥ ಪ್ರಯತ್ನ ಕಮ್ಯುನಿಸ್ಟರಿಂದ ಸದಾನಡೆಯುತ್ತಿರುತ್ತದೆ.
ಕಾರ್ಮಿಕರ ಜತೆಗೆ ಹೊಸದಾಗಿ ರೈತ ಪ್ರತಿಭಟನೆಯ ಹೆಸರಿನಲ್ಲಿ ಉತ್ತರ ಪ್ರದೇಶದಲ್ಲಿ ರಾಕೇಶ್ ಟಿಕಾಯತ್, ಕರ್ನಾಟಕದಲ್ಲಿ ಕೋಡಿ ಹಳ್ಳಿ ಚಂದ್ರಶೇಖರ್ ರೈತರೆದುರು ಅಂಬಾನಿ, ಅದಾನಿಯನ್ನು ಖಳನಾಯಕರೆಂಬಂತೆ ಬಿಂಬಿಸುವ ಪ್ರಯತ್ನ ನಡೆಸಿದ್ದರು. ಅಂಬಾನಿ, ಅದಾನಿ, ಟಾಟಾ ಕಂಪನಿಗಳು ಒಂದು ಇಂಚು ರೈತರ ಭೂಮಿಯನ್ನು ಅಕ್ರಮವಾಗಿ ಕಿತ್ತುಕೊಂಡಿರುವ ಉದಾಹರಣೆಯಿಲ್ಲ. ಬಂಡವಾಳ ವಾದ ಹಾಗೂ ಸಮಾಜವಾದದ ಸ್ಪಷ್ಟ ಚಿತ್ರಣವನ್ನು ಅರಿತ ಮೋದಿ ಸರಕಾರ ಎರಡೂ ಕ್ಷೇತ್ರಗಳಲ್ಲಿ ಹಲವಾರು ಬದಲಾವಣೆಯನ್ನು ತರುವಲ್ಲಿ ಯಶಸ್ವಿಯಾಯಿತು.
ಆಸ್ತಿಗಳನ್ನು ಹೆಚ್ಚಿಸಲು ಬಂಡವಾಳ ಬೇಕು, ಅವರಿಗೆ ಬೇಕಿರುವ ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವೆಡೆಗೆ ಹತ್ತಾರು ಯೋಜನೆಗಳನ್ನು ರೂಪಿಸಲಾಯಿತು. ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸಲು ಆರ್ಥಿಕ ನೀತಿಗಳನ್ನು ಸಡಿಲಗೊಳಿಸಲಾಯಿತು. ಅತ್ತ ಕಾರ್ಮಿಕ ವಿಮೆಯಲ್ಲಿ ತಂದಂತಹ ಬದಲಾವಣೆ, ರಾಜ್ಯ ಕಾರ್ಮಿಕ ವಿಮಾ ಆಸ್ಪತ್ರೆಗಳ ಉನ್ನತೀಕರಣ, ರಾಜ್ಯಗಳಲ್ಲಿನ ಕನಿಷ್ಠ ವೇತನ ಕಾನೂನಿನದ ಪರಿಷ್ಕರಣೆಗಳು, ಕೆಲಸದ ಅನುಭವವಿಲ್ಲದ ಯುವಕರಿಗೆ ಕೇಂದ್ರ ಸರಕಾರದ ಕೌಶಲ್ಯಾಭಿವೃದ್ಧಿಯಡಿಯಲ್ಲಿ ನೀಡುತ್ತಿರುವ ಗುಣಮಟ್ಟದ ತರಬೇತಿ, ಖಾಸಗೀ ವಿಮಾ ಕ್ಷೇತ್ರದಲ್ಲಿ ಹೆಚ್ಚು ವಿದೇಶಿ ನೇರ ಬಂಡವಾಳಗಳನ್ನು ಹೆಚ್ಚಾಗಿ ಆಕರ್ಷಿಸಿ ಕೈಗೆಟುವ ದರದಲ್ಲಿ ಚಿಕಿತ್ಸಾ ವಿಮೆ ಸಿಗುವಂತೆ ಮಾಡಿದ್ದು, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯಡಿಯಲ್ಲಿ ಲಾಭದ ಮೊತ್ತವನ್ನುಸಾಮಾಜಿಕ ಕಲ್ಯಾಣಕ್ಕಾಗಿ ಬಳಸುವಂತಹ ಯೋಜನೆ ರೂಪಿಸಿದ್ದು, ಒಟ್ಟಾರೆಯಾಗಿ ಬಂಡವಾಳಶಾಹಿ ಹಾಗೂ ಕಾರ್ಮಿಕರ ನಡುವೆ ಕಮ್ಯುನಿಸ್ಟರು ಸೃಷ್ಟಿಸಿದ್ದಂತಹ ಒಂದು ಕಂದಕವನ್ನು ಮುಚ್ಚುವಲ್ಲಿ ಮೋದಿ ಯಶಸ್ವಿಯಾಗಿದ್ದರೆಂದರೆ ತಪ್ಪಿಲ್ಲ.
ಸಮಸ್ಯೆಗಳು ಬಹಳಷ್ಟು ಕಡಿಮೆಯಾಗಿರುವುದಂತೂ ನಿಜ. ಕೆಲವರಿಗೆ ಅಪರೂಪದ ಸಮಸ್ಯೆಗಳೇ ದೊಡ್ಡದಾಗಿ ಕಾಣುತ್ತವೆ. ಅಂತಹ ಮನಸ್ಥಿತಿಯವರಿಗೆ ಏನೂ ಹೇಳಲಿಕ್ಕಾಗುವುದಿಲ್ಲ. ಅಂಬಾನಿ ಹಾಗೂ ಅದಾನಿ ಕಂಪನಿಯ ಷೇರುಗಳನ್ನು ಮಾರಿ ಲಕ್ಷಾಂತರ ರುಪಾಯಿಲಾಭ ಮಾಡಿಕೊಂಡಿರುವ ಕಮ್ಯುನಿಸ್ಟರೇ ಹೆಚ್ಚಾಗಿ ಅವರ ವಿರುದ್ಧ ಮಾತನಾಡುತ್ತಿರುತ್ತಾರೆ. ಬಹುತೇಕ ನೂತನ ಕಂಪನಿಗಳು ತಮ್ಮ ಕಾರ್ಮಿಕರಿಗೆ ಇಂತಿಷ್ಟು ಷೇರುಗಳನ್ನು ಎತ್ತಿಡುವುದನ್ನು ರೂಢಿಯಾಗಿಸಿಕೊಂಡಿವೆ, ತಮ್ಮ ಜತೆಗೆ ದುಡಿದ ಕಾರ್ಮಿಕರೊಂದಿಗೆ ಲಾಭದ ಭಾಗವನ್ನು ಹಂಚಿಕೊಳ್ಳುವ ಮನಸ್ಥಿತಿಗೆ ಕಂಪೆನಿಗಳು ಬಂದಿವೆ. ಈ ಅಂಶಗಳು ಕಮ್ಯುನಿಸ್ಟರಿಗೆ ಕಾಣುವುದಿಲ್ಲ.
ಭಾರತದ ಮತ್ತೊಂದು ಬಹುದೊಡ್ಡ ವರ್ಗ ಅಸಂಘಟಿತ ಕಾರ್ಮಿಕರು. ತೋಟದಲ್ಲಿ ಕೆಲಸ ಮಾಡುವವರು, ಕಟ್ಟಡ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಸಣ್ಣ ಹೊಟೇಲುಗಳಲ್ಲಿ ಕೆಲಸ ಮಾಡುವವರು, ಮನೆ ಕೆಲಸದವರು, ವಲಸೆ ಕಾರ್ಮಿಕರು.. ಅಸಂಘಟಿತ ವಲಯ ದಲ್ಲಿ ಯೋಜನೆಗಳನ್ನು ರೂಪಿಸುವುದು ಕಷ್ಟದ ಕೆಲಸ. ಸುಲಭವಾಗಿ ಭ್ರಷಾಚಾರಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ಈ ವಲಯವನ್ನು ಜನ್ ಧನ್ ಬ್ಯಾಂಕ್ ಖಾತೆಗಳನ್ನು ತೆರೆಸುವ ಮೂಲಕ ನಿಯಂತ್ರಣಕ್ಕೆ ತರಲಾಯಿತು.
ನಂತರ ಈ ಖಾತೆಗಳಿಗೆ ಆಧಾರ್ ಲಿಂಕ್ ಮಾಡಿಸುವ ಮೂಲಕ ಫಲಾನುಭವಿಯನ್ನು ನೇರವಾಗಿ ಗುರುತಿಸುವಂತೆ ಮಾಡಲಾಯಿತು. ರಾಜೀವ್ ಗಾಂಧಿ ಕೇಂದ್ರ ಸರಕಾರ ಮೇಲಿನಿಂದ100ರುಪಾಯಿ ನೀಡಿದರೆ ಕೆಳಗೆ ಕೇವಲ15ರುಪಾಯಿ ತಲುಪುತ್ತದೆಯೆಂದು ಹೇಳಿದ್ದರು. ಆ ಮಟ್ಟದ ಭ್ರಷ್ಟಾಚಾರ ಕಾಂಗ್ರೆಸ್ ಅವಧಿಯಲ್ಲಿ ತಾಂಡವವಾಡುತ್ತಿತ್ತು. ಈಗ ಕಾಲ ಬದಲಾಗಿದೆ ಮೇಲಿನಿಂದ ತಲುಪಿಸಬೇಕಿರುವ ಸಂಪೂರ್ಣ ಹಣ ನೆಲಮಟ್ಟದ ಫಲಾನುಭವಿಗೆ ತಲುಪುತ್ತಿದೆ.
ನರೇಗಾ ಯೋಜನೆಯಡಿಯಲ್ಲಿ ನೇರ ಹಣ ವರ್ಗಾವಣೆ ಮೂಲಕ ಅಸಂಘಟಿತ ವಲಯದಗುತ್ತಿದ್ದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾ ಯಿತು. ಅಸಂಘಟಿತವಲಯದ ಕೇಂದ್ರ ಸರಕಾರದ ಯೋಜನೆಗಳ ಫಲಾನುಭವಿಗಳನ್ನು ಆಧಾರ್ ಮೂಲಕ ಗುರುತಿಸಿ ನೇರವಾಗಿ ಖಾತೆಗಳಿಗೆ ಹಣವನ್ನು ಜಮಾ ಮಾಡಲಾಗುತ್ತಿದೆ. ಬೀದಿ ಬದಿಯ ವ್ಯಾಪಾರಿಗಳ ಅನುಕೂಲಕ್ಕಾಗಿ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿದೆ, ಆಟೋ ಚಾಲಕರ ಕುಟುಂಬದ ನೆರವಿಗಾಗಿ ಪ್ರಧಾನಮಂತ್ರಿ ಶ್ರಮಯೋಗಿ ಪಿಂಚಣಿ ಯೋಜನೆ ಜಾರಿಗೆ ತರಲಾ ಗಿದೆ, ಅಸಂಘಟಿತ ವಲಯದ ಕಾರ್ಮಿಕರ ಕುಟುಂಬದ ನೆರವಿಗಾಗಿ ಪ್ರಧಾನಮಂತ್ರಿ ಜೀವನ್ ಜ್ಯೋತಿ ಯೋಜನೆಯಡಿಯಲ್ಲಿ ಮೃತ ವ್ಯಕ್ತಿಯ ಕುಟುಂಬಕ್ಕೆ ಎರಡು ಲಕ್ಷ ವಿಮೆ ಯೋಜನೆಯನ್ನು ಜಾರಿಗೆ ತರಲಾಗಿದೆ.
ಕಾರ್ಮಿಕ ಯೋಜನೆಗಳನ್ನು ಜಾರಿಗೆ ತರಬೇಕಾದರೆ ಯೋಜನೆಗಳ ಅರಿವು ಮುಖ್ಯ. ಇಂದಿನ ಸಾಮಾಜಿಕ ಜಾಲತಾಣದ ಯುಗದಲ್ಲಿ ಯೋಜನೆಗಳ ಅರಿವು ಬಹುಬೇಗ ಕಾರ್ಮಿಕರಿಗೆ ತಲುಪುತ್ತಿದೆ. ಅಸಂಘಟಿತ ವಲಯದಲ್ಲಿನ ಕಾರ್ಮಿಕರಲ್ಲಿ ಬಹುತೇಕರು ಬಡತನ ರೇಖೆಗಿಂತ ಕೆಳಗಿರುವವರು. ಅವರ ಆದಾಯಕ್ಕನುಗುಣವಾಗಿ ಖರ್ಚನ್ನು ಸರಿಹೊಂದಿಸುವ ಯೋಜನೆಗಳನ್ನು ತರುವಲ್ಲಿ ಮೋದಿ ಯಶಸ್ವಿಯಾಗಿzರೆ. ಸಾಮಾನ್ಯ ಕಾಯಿಲೆಗಳಾದ ಮೆಧುಮೇಹ, ಅಧಿಕ ರಕ್ತದೊತ್ತಡ, ಡೈಯಾಲಿಸೀಸ್ ಸಂಬಂಧಿಸಿದ ಔಷಧಗಳು ಕೈಗೆಟುವ ದರದಲ್ಲಿ ಸಿಗುವಂತೆ ಮಾಡುವ ಮೂಲಕ ಕೋಟ್ಯಂತರ ಅಸಂಘಟಿತ ಕಾರ್ಮಿಕರ ಪರವಾಗಿ ನಿಲ್ಲಲಾಗಿದೆ.
ದೇಶದ ಕೋಟ್ಯಂತರ ಅಸಂಘಟಿತ ಕಾರ್ಮಿಕರಿಗೆ ಉಚಿತವಾಗಿ ಕರೋನ ಲಸಿಕೆ ನೀಡುವ ಮೂಲಕ ಮಹಾಮಾರಿಯಿಂದ ಅಸಂಘಟಿತ ಕಾರ್ಮಿಕರನ್ನು ರಕ್ಷಿಸಲಾಗಿದೆ. ಕಮ್ಯುನಿಸ್ಟರು ಕಾರ್ಮಿಕ ಹಕ್ಕುಗಳ ಹೆಸರಿನಲ್ಲಿ ಕೆಂಪನೆಯ ಬಣ್ಣವನ್ನು ಲಾಂಛನವನ್ನಾಗಿಸಿಕೊಂಡು ಕಾರ್ಮಿಕರ ಸಮಸ್ಯೆಗೆ ಪರಿಹಾರವನ್ನು ಹುಡುಕುವ ಬದಲು ಸಮಸ್ಯೆಯನ್ನು ದೊಡ್ಡದಾಗಿ ಬಿಂಬಿಸಿ ಮಾಲೀಕ ಶ್ರೀಮಂತನೆಂಬ ಗುಮ್ಮವನ್ನು ತೋರಿಸಿ ದಶಕಗಳ ಕಾಲ ದಾರಿ ತಪ್ಪಿಸಿದರು. ಬಂಡವಾಳಶಾಹಿಗಳಿಲ್ಲದೆ ಸಮಾಜವಾದವಿಲ್ಲವೆಂಬ ಸಾಮಾನ್ಯ ಜ್ಞಾನವಿಲ್ಲದೆ, ಇರುವ ಸಂಪನ್ಮೂಲಗಳನ್ನು ಬರಿದಾಗಿಸಿ ದೇಶಗಳನ್ನೇ ಮುಳುಗಿಸಿರುವ ಉದಾಹರಣೆಗಳಿವೆ.
ಗ್ರೀಸ್ ದೇಶ3ಬಾರಿ ದಿವಾಳಿಯಾಗಿತ್ತು, ವೆನೆಜುಲಾ ಮಕಾಡೆ ಮಲಗಿದೆ, ರಷ್ಯಾದಲ್ಲಿ ಹಲವು ಸಮಸ್ಯೆಗಳಿವೆ, ನೇಪಾಳದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ, ಜಿಂಬಾಬ್ವೆ ದಿವಾಳಿಯಾಗಿತ್ತು, ದಕ್ಷಿಣ ಅಮೆರಿಕದ ದೇಶಗಳಂತೂ ಜಗತ್ತಿನ ನಿತ್ಯ ಸಂಪರ್ಕಕ್ಕೆ ಬರುವುದನ್ನೇ ಕಂಡಿಲ್ಲ. ಕಮ್ಯುನಿಸ್ಟರ ಟೊಳ್ಳುವಾದಗಳು ನೆಲಕಚ್ಚಿಹೋಗಿ, ಭಾರತದಲ್ಲೀಗ ಬಂಡವಾಳಶಾಹಿವಾದ ಹಾಗೂ ಸಮಾಜವಾದದ ಹಳಿಗಳು ಸಮ ನಾಗಿ ಚಲಿಸುವ ಯೋಜನೆಗಳು ಜಾರಿಯಲ್ಲಿರುವುದನ್ನು ಕಾರ್ಮಿಕ ದಿನಾಚರಣೆಯಂದು ಸ್ಮರಿಸಿಕೊಳ್ಳಬೇಕಿದೆ.