ಬದುಕಿ, ಸಾಧಿಸಿ ತೋರಿಸಬೇಕಾದ ಹೊತ್ತಲ್ಲಿ…
ತನ್ನಿಮಿತ್ತ
ಡಾ.ಮುರಲೀ ಮೋಹನ್‌ ಚೂಂತಾರು
ಇಂದಿನ ವೇಗದ ಧಾವಂತದ, ಸರ್ಧಾತ್ಮಕ , ಯಾಂತ್ರಿಕ ಬದುಕಿನಲ್ಲಿ ಎಲ್ಲವೂ ಕಣ್ಣು ಮಿಟುಕಿಸುವುದ ರೊಳಗೆ ಆಗಿ ಹೋಗುತ್ತದೆ. ಇಂತಹ ವ್ಯಕ್ತಿಗಳನ್ನು ಗುರುತಿಸಿ ಸಮಾಜ ಒಂದುಕ್ಷಣ ಅಂತಹ ವ್ಯಕ್ತಿಗಳಿಗೆ ಒಂದೆರಡು ಸಾಂತ್ವನದ ಸಿಹಿ ನುಡಿ ಹೇಳಿದಲ್ಲಿ ಅಚಾತುರ್ಯ ತಡೆಯಬಹುದು.
ಪ್ರತಿ ವರ್ಷ ಸೆಪ್ಟೆಂಬರ್ 10ರಂದು ‘ವಿಶ್ವ ಆತ್ಯಹತ್ಯಾ ತಡೆದಿನ’ ಎಂದು ಆಚರಿಸಿ, ಯುವ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ವಿಶ್ವದಲ್ಲಿ ಪ್ರತಿ 60 ಸೆಂಕೆಂಡ್‌ಗೆ ಒಬ್ಬರಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮತ್ತು ವರ್ಷವೊಂದರಲ್ಲಿ ಏನಿಲ್ಲವೆಂದರೂ 10 ರಿಂದ 12 ಲಕ್ಷ ಮಂದಿ ಆತ್ಮಹತ್ಯೆ ಮಾಡುತ್ತಿದ್ದಾರೆ. ಜೀವನದಲ್ಲಿ ಜುಗುಪ್ಸೆ, ಬದುಕಿನಲ್ಲಿ ನಿರಾಸಕ್ತಿ, ಉದ್ಯೋಗ ದಲ್ಲಿ ನಷ್ಟ, ವಿದ್ಯಾಭ್ಯಾಸದಲ್ಲಿ ಅನುತೀರ್ಣ, ಕೆಲಸದಲ್ಲಿ ಒತ್ತಡ ಹೀಗೆ ಹತ್ತು ಹಲವು ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳು ತ್ತಾರೆ. 15-20 ವರ್ಷದೊಳಗಿನವರಲ್ಲಿ ಸಾವಿಗೆ ಎರಡನೇ ಅತೀ ದೊಡ್ಡ ಕಾರಣ ಆತ್ಮಹತ್ಯೆ ಎಂಬುದು ಬಹಳ ಕಳವಳಕಾರಿ ಅಂಶವಾಗಿದೆ.
ಯಾರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ?
ಮನೋರೋಗ ಹೊಂದಿದವರು ಉದಾಹರಣೆಗೆ ಖಿನ್ನತೆ, ಸ್ಕಿಜೋ ಫ್ರೀನಿಯಾ ಇತ್ಯಾದಿ ಮಾನಸಿಕ ರೋಗದಿಂದ ಬಳಲುತ್ತಿರು ವವರು ಆತ್ಮಹತ್ಯೆಗೆ ಮುಂದಾಗುವ ಸಂಭವವಿದೆ. ಅಲ್ಲದೇ ಮಧ್ಯಪಾನ ಮತ್ತು ಮಾದಕ ದ್ರವ್ಯ ವ್ಯಸನಿಗಳು ಆತ್ಮಹತ್ಯೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಹಿಂದೆ ಆತ್ಮಹತ್ಯೆಗೆ ಪ್ರಯತ್ನಿಸಿದವರು, ಮಗದೊಮ್ಮೆ ಆತ್ಮಹತ್ಯೆ ಮಾಡುವ ಸಾಧ್ಯತೆ ಹೆಚ್ಚು. ಜೀವನದಲ್ಲಿ ಅತೀ ಹೆಚ್ಚು ಒತ್ತಡದ ಸನ್ನಿವೇಶಗಳನ್ನು ಎದುರಿಸುತ್ತಿರುವವರು.
ಉದಾಹರಣೆಗೆ ವ್ಯಾಪಾರದಲ್ಲಿ ನಷ್ಟ, ಉದ್ಯೋಗ ಸಿಗದಿರುವುದು, ಆಟದಲ್ಲಿ ಸೋಲು, ವಿದ್ಯಾಭ್ಯಾಸ ಹಿನ್ನೆಲೆ, ಮಾನಹಾನಿಯಾದ ಸಂದರ್ಭಗಳು ಇತ್ಯಾದಿ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತದೆ. ಇನ್ನು ಅತೀ ಹತ್ತಿರದ ಸಂಬಂಧಿಗಳ ಸಾವು, ಪ್ರೇಮದಲ್ಲಿ ವೈಫಲ್ಯ ಮುಂತಾದವುಗಳಿಂದ ಭಾವನ್ಮಾಕವಾಗಿ ವೇದನೆ ಹೆಚ್ಚಾದಾಗ ಆತ್ಮಹತ್ಯೆಯಲ್ಲಿ ಪರ‍್ಯಯವಸಾನವಾಗುತ್ತದೆ.
ಕ್ಯಾನ್ಸರ್ ಮುಂತಾದ ಗುಣಪಡಿಲಾಗದ ಮಾರಣಾಂತಿಕ ಕಾಯಿಲೆ, ಏಡ್ಸ್ ಅಥವಾ ತಡೆದುಕೊಳ್ಳಲಾರದ ನೋವುಗಳು ಕೂಡಆತ್ಮಹತ್ಯೆಗೆ ಕಾರಣವಾಗುತ್ತದೆ. ಕೆಲಸದ ವಾತಾವರಣದಲ್ಲಿನ ವಿಪರೀತವಾದ ಒತ್ತಡ ಕೂಡ ಆತ್ಮಹತ್ಯೆಗೆ ಕಾರಣವಾಗುತ್ತದೆ. ಉದಾಹರಣೆಗೆ ಟೆಕ್ಕಿಗಳು (ಕಂಪ್ಯೂಟರ್ ಇಂಜಿನಿಯರ್‌ಗಳು) ಬಹಳಷ್ಟು ಕೆಲಸದ ಒತ್ತಡ ಮತ್ತು ಖಿನ್ನತೆಯಿಂದ ಪಾರಾಗಲುಆತ್ಮಹತ್ಯೆಯ ದಾರಿ ಕಂಡುಕೊಳ್ಳುತ್ತಾರೆ. ಇದಲ್ಲದೇ ಕ್ಷುಲ್ಲಕ ಕಾರಣಗಳು ಮತ್ತು ಮಕ್ಕಳಾಟಿಕೆ ಕೂಡ ಆತ್ಮಹತ್ಯೆಯಲ್ಲಿ ಅಂತ್ಯ ಕಾಣಬಹುದು. ಟಿವಿ ನೋಡಲು ಜಗಳ, ರಿಮೋಟ್ ಕೊಡಲಿಲ್ಲ ಎಂಬ ಜಗಳ ಇತ್ಯಾದಿ.
ಹೇಗೆ ಗುರುತಿಸಬಹುದು?ಋಣಾತ್ಮಕವಾಗಿ ಮಾತಾನಾಡುವುದು. ನಾನು ಬದುಕಲೇಬಾರದು, ನಾನು ಹುಟ್ಟಬಾರದಿತ್ತು ಎಂದು ಪದೇ ಪದೇ ಪರಿತಪಿಸು ವುದು. ಸಾವಿನ ಬಗ್ಗೆ ಹೆಚ್ಚು ಆಸಕ್ತಿ ಇತ್ಯಾದಿಗಳನ್ನು ನಾವು ಗುರುತಿಸಿದರೆ ಆತ್ಮಹತ್ಯೆಯನ್ನು ತಡೆಯಬಹುದು. ಮಾತುಕತೆ, ಬರವಣಿಗೆ ಎಲ್ಲವೂ ಸಾವಿನ ಸುತ್ತವೇ ಗಿರಕಿ ಹೊಡೆಯುತ್ತಿರುತ್ತದೆ.
ಒಮ್ಮಿದೊಮ್ಮೆಲೇ ವಿಲ್ ಬರೆಯುವುದು, ಸಾಲ ತೀರಿಸುವುದು ಮತ್ತು ದಾನ ಮಾಡುವುದು ಇತ್ಯಾದಿ ವಿಲಕ್ಷಣ ಚಟುವಟಿಕೆಗಳು ಕೂಡ ಆತ್ಮಹತ್ಯೆಯ ಮುನ್ಸೂಚನೆಯಾಗಿರುತ್ತದೆ. ಯಾರೊಂದಿಗೂ ಬೆರೆಯದೆ ಒಂಟಿಯಾಗಿ ಇರುವುದು, ಅತಿಯಾದ ಮಧ್ಯ ಪಾನ, ಧೂಮಪಾನ ಎಲ್ಲವೂ ಹೆಚ್ಚಿನ ಮಾನಸಿಕ ಒತ್ತಡದ ಸಂದರ್ಭದಲ್ಲಿ ಕಂಡುಬರುವ ಸೂಚನೆಗಳು.
ಭವಿಷ್ಯದ ಬಗ್ಗೆ ವಿಪರೀತವಾಗಿ ಅನಗತ್ಯವಾಗಿ ಚಿಂತಿಸುವುದು. ತನ್ನ ಸಮಸ್ಯೆಗೆ ಪರಿಹಾರವೇ ಇಲ್ಲ ಎಂದು ಆಕಾಶವೇ ಕಳಚಿಬಿದ್ದಂತೆ ವರ್ತಿಸುವುದು ಕೂಡ ಅತ್ಮಹತ್ಯೆಯ ಮೂನ್ಸೂಚನೆಯಾಗಿರುತ್ತದೆ.
ನಾವೇನು ಮಾಡಬೇಕು?ಋಣಾತ್ಮಕ ಚಿಂತನೆ ಇರುವ ವ್ಯಕ್ತಿಗಳ ಬಗ್ಗೆ ಅಸಡ್ಡೆ ಬೇಡ. ಅವರ ಬಗ್ಗೆ ಕನಿಕರ ಸಹಾನೂಭೂತಿ ತೋರಿಸಬೇಕು. ಒಂದು ಒಳ್ಳೆಯ ಮಾತು ಅಥವಾ ಸಾಂತ್ವನದಿಂದ ಒಂದು ಜೀವ ಉಳಿಯಲೂ ಬಹುದು. ನಿಮ್ಮ ಮನೆಯಲ್ಲಿ ಈ ರೀತಿಯ ಖಿನ್ನತೆ ಇರುವ ವ್ಯಕ್ತಿ ಇದ್ದಲ್ಲಿ, ಯಾವುದೇ ಕಾರಣಕ್ಕೂ ಒಬ್ಬಂಟಿಯಾಗಿ ಇರಲು ಬಿಡಬೇಡಿ. ಯಾವತ್ತೂ ಅಂತಹ ವ್ಯಕ್ತಿಗಳ ಮೇಲೆ ಒಂದು ಕಣ್ಣು ಇಡಬೇಕು. ಅಂತಹ ವ್ಯಕ್ತಿಗಳಿಗೆ ಸುಲಭವಾಗಿ ಹರಿತ ಆಯುಧ, ಹಗ್ಗ, ಬಳ್ಳಿ ಅಥವಾ ವಿಷಕಾರಿ ಔಷಧಿ ಸುಲಭವಾಗಿ ಸಿಗದಂತೆನೋಡಿಕೊಳ್ಳಿ.
ಯಾವ ಕಾರಣಕ್ಕಾಗಿ ವ್ಯಕ್ತಿ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಅದಕ್ಕೆ ಪೂರಕವಾದ ಚಿಕಿತ್ಸೆ ನೀಡಬೇಕು. ಮನೋ ವೈದ್ಯರ ಬಳಿ ತೋರಿಸಿ ಆಪ್ತ ಸಮಾಲೋಚನೆ ಮಾಡಿಸಿಕೊಳ್ಳಿ ಸಾಕಷ್ಟು ಪ್ರೀತಿ, ಆದರ, ಧೈರ್ಯ ಮತ್ತು ಸಾಂತ್ವನದ ನುಡಿ ಹೇಳಿ ಅವರನ್ನು ಉಲ್ಲಸಿತರಾಗಿರುವಂತೆ ನೋಡಿಕೊಳ್ಳಬೇಕು. ‘ಆತ್ಮಹತ್ಯೆ ಮಹಾಪಾಪ’ ಎಂದು ಬಲ್ಲವರು ಪದೇ ಪದೇ ಹೇಳುವ ಮಾತು. ಅದರೆ ಮನಸ್ಸಿನ ತೊಳಲಾಟ, ವಿಪರೀತ ನೋವು ಹತಾಶೆಯಿಂದಾಗಿ ಮನದ ಭಾವನೆಗಳೇ ಭಾರವಾದಾಗ, ಭವಿಷ್ಯದ ಬಗ್ಗೆ ಜುಗುಪ್ಸೆ ಹುಟ್ಟಿ, ಬದುಕೇ ಯಾತನಾಮಯವಾದಾಗ, ತಮ್ಮ ಅಸ್ತಿತ್ವವೇ ಅರ್ಥಹೀ ನವೆನಿಸಿ ಜನರು ಆತ್ಮಹತ್ಯೆಯಂತಹಾಕೆಲಸಕ್ಕೆ ಮುಂದಾಗುತ್ತಾರೆ.
ಆತ್ಮಹತ್ಯೆ ಹೇಡಿಗಳ ಲಕ್ಷಣ ಎಂದರೂ, ಆತ್ಮಹತ್ಯೆ ಮಾಡಿಕೊಳ್ಳಲು ಗಟ್ಟಿ ಗುಂಡಿಗೆ ಇರಬೇಕು ಎಂದರೂ ದ್ವಂದವಾದೀತು. ಅದೇನೇ ಇರಲಿ ಇತ್ತೀಚಿನ ದಿನಗಳಲ್ಲಿ ಯುವಜನತೆ ಹೆಚ್ಚು ಹೆಚ್ಚು ಈ ಆತ್ಮಹತ್ಯೆಗೆ ಮುಂದಾಗುತ್ತಿರುವುದು, ನಮ್ಮ ಸಮಾಜ ಎತ್ತಕಡೆಗೆ ಸಾಗುತ್ತದೆ ಎಂಬುದರ ಮುನ್ಸೂಚನೆ. ಇಂದಿನ ವೇಗದ ಧಾವಂತದ, ಸರ್ಧಾತ್ಮಕ ಮತ್ತು ಯಾಂತ್ರಿಕ ಬದುಕಿನಲ್ಲಿ ಎಲ್ಲವೂ ಕಣ್ಣು ಮಿಟುಕಿಸುವುದರೊಳಗೆ ಆಗಿ ಹೋಗುತ್ತದೆ. ಇಂತಹ ವ್ಯಕ್ತಿಗಳನ್ನು ಗುರುತಿಸಿ ಸಮಾಜ ಒಂದುಕ್ಷಣ ಅಂತಹ ವ್ಯಕ್ತಿಗಳಿಗೆ ಒಂದೆರಡು ಸಾಂತ್ವನದ ಸಿಹಿ ನುಡಿ ಹೇಳಿ ಸಂತೈಸಿದಲ್ಲಿ ಒಂದು ಕ್ಷಣದ ಅಚಾತುರ್ಯವನ್ನು ತಡೆಯಬಹುದು.
‘ಸಾಯಲು ನೂರು ಮಾರ್ಗವಿದ್ದರೆ ಬದುಕಲು ಸಾವಿರ ಮಾರ್ಗವಿದೆ’ ಎಂಬ ಸತ್ಯವನ್ನು ಯುವಜನರು ಅರ್ಥಮಾಡಿಕೊಳ್ಳಬೇಕು.ಬದುಕಿ, ಸಾಧಿಸಿ ತೋರಿಸಬೇಕಾದ ಹೊತ್ತಲ್ಲಿ, ಕ್ಷುಲ್ಲಕ ನೋವಿಗಾಗಿ ಸಾವಿಗೆ ಶರಣಾಗಿ ಹೇಡಿಗಳಾಗುವ ಬದಲು, ಛಲದಿಂದ ಜೀವನದ ಕಷ್ಟಕಾರ್ಪಣ್ಯಗಳನ್ನು ಎದುರಿಸಿ ಜೀವನದಲ್ಲಿ ಎನಾದರೂ ಸಾಧಿಸಿ ತೋರಿಸುವ ಗಟ್ಟಿತನವನ್ನು ಯುವಜನರು ಮೈಗೂಡಿಸಿಕೊಳ್ಳಬೇಕು. ಹಾಗಾದಲ್ಲಿ ಮಾತ್ರ ಸುಂದರ ಸುದೃಡ ಸಮಾಜ ನಿರ್ಮಾಣವಾಗಬಹುದು.