ಗುಜರಾತ್ ಮಾದರಿ; ಶಾಸಕರಿಗೆ ವರಿ
ವಿಶ್ಲೇಷಣೆ
ಪವನ ವಶಿಷ್ಠ
ಗುಜರಾತ್‌ನಲ್ಲಿ ಬಿಜೆಪಿಯ ಗೆಲವು ಹಿಮಾಚಲ ಪ್ರದೇಶದಲ್ಲಿನ ಸೋಲನ್ನು ಎರಡೂ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮದೇ ಆದ ಶೈಲಿಯಲ್ಲಿ ಸಮರ್ಥಿಸಿಕೊಳ್ಳುತ್ತಿವೆ. ಅದೇನೇ ಇರಲಿ ಈ ಫಲಿತಾಂಶ ಎರಡೂಪಕ್ಷಗಳಿಗೆ ನಿದ್ದೆಗೆಡಿಸಿರುವುದಂತೂ ಸುಳ್ಳಲ್ಲ.
ಮುಳುಗುವ ದೋಣಿಯಂತಾಗಿದ್ದ ಕಾಂಗ್ರೆಸ್ ಈ ಫಲಿತಾಂಶದಿಂದ ಮೈ ಕೊಡವಿ ನಿಂತು ಪಕ್ಷವನ್ನು ಸಂಘಟಿಸಲು ಒಂದು ಸದವಕಾಶ ಸಿಕ್ಕಿರುವು ದಂತೂ ಸುಳ್ಳಲ್ಲ. ತನ್ನ ಕೈಯಲ್ಲಿದ್ದ ಹಿಮಾಚಲ ಪರರ ಕೈ ಗೆ ಹೋಗಿದ್ದು ಬಿಜೆಪಿಗೆ ಅರಗಿಸಿಕೊಳ್ಳ ಲಾಗದ ತುಪ್ಪವಾಗಿ ಪರಿಣಮಿಸಿದೆ. ಈ ಚುನಾವಣಾ ಫಲಿತಾಂಶದಿಂದ ರಾಜಕೀಯದಲ್ಲಿ ಹಿಮಾಚಲಕ್ಕೂ ಕರ್ನಾಟಕಕ್ಕೂ ಇದ್ದ ಒಂದು ಉತ್ತಮ ನಂಟು ಕಳೆದುಕೊಂಡಿದ್ದೇವೆ.
ಹಿಮಾಚಲದ ಮಾಜಿ ಸಿಎಂ ಜೈರಾಂ ಠಾಕೂರ್ ಅವರ ಪತ್ನಿ ಡಾ.ಸಾಧನಾ ಠಾಕೂರ್ ಮೂಲತಃ ಶಿವಮೊಗ್ಗದವರು. ಹಿಮಾಚಲದ ಸೊಸೆ ಕನ್ನಡಿಗ ರಾಗಿದ್ದುದು ವಿಶೇಷ. ಶಿಮ್ಲಾದಲ್ಲಿನ ಪುನರ್ವಸತಿ ಕೇಂದ್ರದಲ್ಲಿ ಕನ್ನಡಿಗ ಮಹಿಳೆಯೊಬ್ಬರು ಗಂಡನಿಂದ ಕಿರುಕುಳಕ್ಕೆ ಒಳಗಾಗಿ ತನ್ನ ಅರಿವಿಗೇ ಬಾರದೇ ಹಿಮಾಚಲದಲ್ಲಿ ೨ ವರ್ಷದಿಂದ ಸಿಕ್ಕಿಹಾಕಿಕೊಂಡಿದ್ದ ಘಟನೆ ಪ್ರಸಾರವಾದ ಕೂಡಲೇ ಅಂದಿನ ಸಿಎಂ ಅವರ ಪತ್ನಿ ಡಾ.ಸಾಧನಾ ಅವರು ಖುದ್ದು ಪುನರ್ವಸತಿ ಕೇಂದ್ರಕ್ಕೆ ತೆರಳಿ ಸುರಕ್ಷಿತವಾಗಿ ಕರ್ನಾಟಕಕ್ಕೆ ತಲುಪಿಸುವಲ್ಲಿ ಸಹಾಯ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇನ್ನೇನು ರಾಜ್ಯದಲ್ಲೂ ಚುನಾವಣಾ ಕಾವು ಏರುವ ದಿನಗಳು ಹತ್ತಿರದಲ್ಲಿವೆ. ಗುಜರಾತ್ – ಹಿಮಾಚಲ ಪ್ರದೇಶದ ಲೆಕ್ಕಾಚಾರ ಹಾಗೂ ಅದರಿಂದ ಬಂದಿರುವಫಲಿತಾಂಶವನ್ನು ಅಳೆದೂ ತೂಗಿ ಕರ್ನಾಟಕದಲ್ಲಿ ಯಾವ ರೀತಿ ಪ್ರಯೋಗ ಮಾಡಬೇಕೆಂಬು ದನ್ನು ರಾಷ್ಟ್ರೀಯ ಪಕ್ಷಗಳು ತಲೆ ಕೆಡಿಸಿಕೊಂಡಿವೆ. ಒಂದು ವೇಳೆ ಬಿಜೆಪಿ ಏನಾದರೂ ಗುಜರಾತ್ ಮಾದರಿಯನ್ನು ಇಲ್ಲಿ ಅನುಸರಿಸಿದ್ದೇ ಆದಲ್ಲಿ ಕನಿಷ್ಠ ೫೦ ಮಂದಿ ಹಾಲಿ ಶಾಸಕರನ್ನ ಕೈ ಬಿಡಬೇಕಾಗುತ್ತದೆ.
ಗುಜರಾತ್ ನಲ್ಲಿ ಮಾಡಿದ ರಾಜಕೀಯ ಲೆಕ್ಕಚಾರ ಮತ್ತು ಅದರಫಲಿತಾಂಶದಿಂದ ಮೇಲ್ನೋಟಕ್ಕೆ ರಾಜ್ಯದಲ್ಲಿನ ಹಾಲಿ ಬಿಜೆಪಿ ಶಾಸಕರು ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದರೂ ಒಳಗೊಳಗೇ ಆತಂಕದಿಂದಲೇ ದಿನ ಕಳೆಯುತ್ತಿzರೆಂಬುದು ಸುಳ್ಳಲ್ಲ.ಇತ್ತ ಕಾಂಗ್ರೆಸ್ ನವರು ತಮಗೆ ಬೇಕಾದ ಮ್ಯಾಜಿಕ್ ನಂಬರ್ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಬದಲಾಗಿ ರಾಜ್ಯ ಬಿಜೆಪಿಗೆ 90 ಸೀಟು ಕೂಡ ಬಾರದ ಹಾಗೆ ತಂತ್ರ ರೂಪಿಸುವ ಕುರಿತು ತಲೆ ಕೆಡಿಸಿಕೊಂಡಿದ್ದಾರೆ!.
ಅವರಿಗೆ ಬೇಕಾದ ಮ್ಯಾಜಿಕ್ ನಂಬರ್ ದೊರೆತರೂ ಬಿಜೆಪಿಯವರು ಮಾಡುವ ಮ್ಯಾಜಿಕ್ ಅವರ ನಿದ್ದೆಗೆಡಿಸುತ್ತದೆ ಎಂದು ಅವರ ಪಕ್ಷದವರೇ ಊಹಿಸಿದ್ದಾರೆ. ಇತ್ತ ಕಾಂಗ್ರೆಸ್ ಗೆಲ್ಲುವ ಕುದುರೆಗಳನ್ನು ಹುಡುಕುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ಹೈಕಮಾಂಡ್ ಆಸೆ. ಆದರೆ, ಇಲ್ಲಿ ಸಿದ್ಧರಾಮಯ್ಯ ಮತ್ತು ಡಿಕೆಶಿ ಜಿದ್ದಾಜಿದ್ದಿಯಲ್ಲಿ ಪರಿಸ್ಥಿತಿ ಅಂದುಕೊಂಡಷ್ಟು ನೆಟ್ಟಗಿಲ್ಲ ಎಂಬುದನ್ನು ಜಗಜ್ಜಾಹೀರುಗೊಳಿಸಿದೆ.
ಬಿಜೆಪಿಗೆ ಹೋಲಿಸಿದರೆ ಈ ಬಾರಿ ಕಾಂಗ್ರೆಸ್ಸೇ ಗುಜರಾತ್ ಮಾದರಿಯನ್ನು ಅನುಸರಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಕಾಂಗ್ರೆಸ್ ಹೊಸ ಮುಖಗಳಿಗೆ ಮಣೆ ಹಾಕುವ ನಿಟ್ಟಿನಲ್ಲಿ ಈಗಾಗಲೇ ಮುಂದಡಿ ಇಟ್ಟಿದೆ. ವಿರಾಜ ಪೇಟೆ ವಿಧಾನಸಭೆ ಕ್ಷೇತ್ರಕ್ಕೆ ಎ.ಕೆ.ಸುಬ್ಬಯ್ಯ ಅವರ ಮಗ, ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವ ಬೀರಿ ಅದನ್ನು ತಮ್ಮ ಹಿಡಿತದಲ್ಲಿ ಹಿಡಿದಿಟ್ಟುಕೊಳ್ಳಲು ಸಾಕಷ್ಟು ಹಾದಿ ಕ್ರಮಿಸಿzರೆ. ಇದೊಂದು ಉದಾಹರಣೆ ಅಷ್ಟೇ. ಈ ರೀತಿಯ ಹೊಸ ಪ್ರಯೋಗಗಳನ್ನು ರಾಜ್ಯದ ನಾನಾಕಡೆ ಕೈಗೊಳ್ಳಲು ಕಾಂಗ್ರೆಸ್ ಈಗಾಗಲೇ ತನ್ನದೇ ಆದ ತಂತ್ರ ರೂಪಿಸುತ್ತಿದೆ.
ಈ ಬಾರಿ ಬಿಜೆಪಿಗೆ ಗೆಲುವು ಅಷ್ಟೇನೂ ಸುಲಭವಲ್ಲ ಎಂಬುದು ಅವರಿಗೂ ತಿಳಿದಿದೆ. ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಿದಾಗ ಹಾಗೂ ಬಿಜೆಪಿಯವರು ಇತ್ತೀಚೆಗೆ ನಡೆಸಿದ ಕೆಲವು ಸಮಾವೇಶಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಜನರು ಸೇರದೇ ಇರುವುದನ್ನು ನೋಡಿದರೆ ಬಿಜೆಪಿಯವರು ಹೇಳಿಕೊಳ್ಳುವ ಅವರ ಅಭಿವೃದ್ಧಿ ಮಂತ್ರಕ್ಕೆ ಕೈಗನ್ನಡಿಯಾಗಿದೆ. ಈ ಬಾರಿ ಬಿಜೆಪಿಯವರು ಚುನಾವಣೆ ಗೆಲ್ಲಲು ನಿಜಕ್ಕೂ ಒಬ್ಬ ಚಾಣಾಕ್ಯನನ್ನು ಹುಡುಕಲೇ ಬೇಕಿದೆ. ಮೋದಿ ಹೆಸರು ಹೇಳಿಕೊಂಡು ವಿಧಾನಸಭೆ ಚುನಾವಣೆಗೆ ಹೋದರೆ ಜನ ಕ್ಯಾರೆ ಎನ್ನುವುದಿಲ್ಲ ಎಂಬುದನ್ನು ಕೆಲವು ಶಾಸಕರಿಗೆ ಹಿರಿಯ ನಾಯಕರು ಮನದಟ್ಟು ಮಾಡಬೇಕಿದೆ. ಈ ಬಾರಿ ಬಿಜೆಪಿ ಶಾಸಕರು ತಮ್ಮ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ೩೬೦ ಡಿಗ್ರಿ ಲೆಕ್ಕಾಚಾರ ಮಾಡಬೇಕಾದ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಗುಜರಾತ್ ಮಾದರಿಯಲ್ಲಿ ಹಾಲಿ ಶಾಸಕರಿಗೆ ಕೊಕ್ ನೀಡಲು ಹಿಂದೇಟು ಹಾಕಬೇಕಿಲ್ಲ. ಬಹುತೇಕ ಶಾಸಕರು ಈಮಾದರಿಗೆ ಯೋಗ್ಯರಿzರೆ. ಆದರೆ, ಇಲ್ಲಿ ಆ ರೀತಿ ಮಾಡಿದರೆ ಹಿರಿ ತಲೆಗಳು ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳುತ್ತಾರೆ ಎಂಬ ಆತಂಕ ದೆಹಲಿ ಮಟ್ಟದಲ್ಲಿನ ನಾಯಕರಲ್ಲಿದೆ. ಅಷ್ಟು ಮಾತ್ರವಲ್ಲದೇ ಜಾತಿ ಲೆಕ್ಕಾಚಾರದಲ್ಲಿ ನಾಯಕರನ್ನು ಹುಡುಕೋಣ ಎಂದರೆ ಅದೂ ಕೂಡ ಹೊಡೆತ ನೀಡುತ್ತೆದೇನೋ ಎಂಬ ಆತಂಕ ಇವರದ್ದು. ರಾಜ್ಯ ಬಿಜೆಪಿಯಲ್ಲಿ ಬಹುತೇಕರಿಗೆ ನಾಯಕತ್ವದ ಗುಣ ಇಲ್ಲದಿರುವುದೇ ಇದಕ್ಕೆ ಕಾರಣ.
ಜಾತಿ ಲೆಕ್ಕಚಾರ, ಜಾತಿ ಸಮೀಕರಣ ಎಲ್ಲವನ್ನೂ ಅಳೆದೂ ತೂಗಿ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದರೂ ಅವರಿಂದ ನಿರೀಕ್ಷಿತ ಮಟ್ಟದಲ್ಲಿ ಬದಲಾವಣೆ ತರಲು ಸಾಧ್ಯವೇ ಆಗಿಲ್ಲ. ಬದಲಾಗಿ ಸಿನಿಮಾಗೆ ಕ್ಲಾಪ್ ಮಾಡುವುದು, ಹೊಸ ಸಿನಿಮಾ ಗಳನ್ನು ವೀಕ್ಷಿಸುವುದು, ಸೆಲೆಬ್ರಿಟಿಗಳ ಮನೆಗಳಿಗೆ ಭೇಟಿ ನೀಡುವುದು… ಇಂತಹುದ್ದೇ ವಿಚಾರದಲ್ಲಿ ಸಿಎಂ ಬ್ಯಸಿಯಾಗಿ ಆಗಿದ್ದಾರೆಯೇ ಹೊರತು ಅಭಿವೃದ್ಧಿ ವಿಚಾರದಲ್ಲಿ ಅಲ್ಲ ಎಂಬುದು ಅವರ ಮೇಲಿರುವ ಆರೋಪ.
ಪಂಚಮಸಾಲಿಗಳಿಗೆ ೨ ಎ ಮೀಸಲು ನೀಡುವ ವಿವಾದ ದಿನದಿಂದ ದಿನಕ್ಕೆ ಭುಗಿಲೇಳುತ್ತಲೇ ಇದ್ದರೂ ಸಿಎಂ ಬರೀ ತುಪ್ಪ ಸವರುವ ಕೆಲಸ ಮಾಡುತ್ತಿzರೆಯೇ ಹೊರತು ದೃಢವಾದ ನಿರ್ಧಾರ ತೆಗೆದುಕೊಳ್ಳವ ಧೈರ್ಯವನ್ನೇ ತೋರುತ್ತಿಲ್ಲ. ಹೋಗಲಿ ಅಭಿವೃದ್ಧಿ ವಿಚಾರದಲ್ಲಿ ಏನಾದರೂ ಮಾಡಿದ್ದಾರಾ ಎಂದರೆ ಅದು ಕೂಡಾ ಆಗಿಲ್ಲ. ಗ್ರಾಮೀಣ ಹಾಗೂ ನಗರ ರಸ್ತೆಗಳ ಪರಿಸ್ಥಿತಿ ನೋಡಿದರೆ ಸಾಕು ರಾಜ್ಯ ಹೇಗೆ ಕುಂಟುತ್ತಾ ಮುಂದೆ ಸಾಗುತ್ತಿದೆ ಎಂಬುನ್ನು ಯಾರು ಬೇಕಾದರೂ ಹೇಳುತ್ತಾರೆ!.
ಒಕ್ಕಲಿಗ ಸಮುದಾಯದಿಂದ ಬಿಜೆಪಿಯವರ ಮುಂದಿರುವ ಆಯ್ಕೆ ಸಿ.ಟಿ.ರವಿ, ಡಾ.ಅಶ್ವತ್ಥ ನಾರಾಯಣ. ಲಿಂಗಾಯತಸಮುದಾಯದಿಂದ ನಿರಾಣಿ. ಅವಕಾಶ ಸಿಕ್ಕಾಗಲೆ ನಿರಾಣಿ ತಾವೇ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುವ ಪ್ರಯತ್ನಗಳನ್ನು ನಡೆಸುತ್ತಲೇ ಬರುತ್ತಿzರೆ. ಇವರೆಲ್ಲರೂ ಪಕ್ಷಕ್ಕಿಂತ ತಾವೇ ದೊಡ್ಡವರು ಎಂಬ ರೀತಿಯಲ್ಲಿ ಹಾರಾಡುತ್ತಿದ್ದರೆ, ಇತ್ತಇವರ ಬಾಯಿ ಮುಚ್ಚಿಸಲು ಬಿಜೆಪಿಗೆ ಶೋಭಾಸ್ರ್ತ ಪ್ರಯೋಗವೇ ಸರಿ ಎಂಬುದು ಒಂದು ವರ್ಗದ ಅಂಬೋಣ.
ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಶೋಭಾಸ್ರ್ತಲಾಭ ತಂದು ಕೊಡುತ್ತದೆ ಎಂದು ಕೆಲವು ಬಿಜೆಪಿ ನಾಯಕರೂ ಸಹಮತ ವ್ಯಕ್ತಪಡಿಸಿದ್ದಾರೆ. ಜಾತಿ ಲೆಕ್ಕಚಾರದಲ್ಲಿ ಒಕ್ಕಲಿಗ ಸಮುದಾಯದ ಮತಗಳೂ ನಿರ್ಣಾಯಕವೇ ಆಗಿರುವ ಕಾರಣ ಒಕ್ಕಲಿಗರೇ ಮುಂದಿನ ಸಿಎಂ ಎಂಬ ಮಾತು ಹೆಚ್ಚು ಚಾಲ್ತಿಯಲ್ಲಿದೆ. ಇನ್ನು ಯಡಿಯೂರಪ್ಪ ನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವಪರಿಣಾಮ ಯಡಿಯೂರಪ್ಪ ನವರ ಮುಖಾಂತರ ಲಿಂಗಾಯತರ ಮನವೊಲಿಸುವುದು ಅಷ್ಟೇನೂ ಕಷ್ಟವಲ್ಲ.
ಮಹಿಳೆಯೊಬ್ಬರು ಸಿಎಂ ಅಭ್ಯರ್ಥಿ ಎಂದಾದರೆ ಮತ ಕೇಂದ್ರಕ್ಕೆ ದಾಂಗುಡಿಯಿಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಬಲ್ಲದುಎಂಬುದು ಮತ್ತೊಂದು ಲೆಕ್ಕಾಚಾರ. ಉಳಿದಿರುವುದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ. ಕೇಂದ್ರ ಮಟ್ಟದಲ್ಲಿ ಪರಿಶಿಷ್ಟ ಜಾತಿಹಾಗೂ ಪಂಗಡದವರಿಗೆ ಯಾವ ಸರ್ಕಾರಗಳೂ ಮಾಡಲಾಗದಷ್ಟು ಯೋಜನೆಗಳನ್ನು ಇಂದಿನ ಬಿಜೆಪಿ ಸರಕಾರವು ಅನುಷ್ಠಾನಗೊಳಿಸಿರುವುದು ಸುಳ್ಳಲ್ಲ. ಅಷ್ಟೇ ಅಲ್ಲದೇ ಉನ್ನತ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದಅಭ್ಯರ್ಥಿಗಳಿಗೆ ಕೇಂದ್ರ ಮಣೆ ಹಾಕಿರುವುದು ಕಿಂಚಿತ್ ಆಶಾ ಭಾವನೆ ಮೂಡಿಸಿದೆ. ಮೇಲ್ಜಾತಿಯವರು ಬಿಜೆಪಿ ಬಿಟ್ಟು ಅಷ್ಟುಸುಲಭವಾಗಿ ಬೇರೆಡೆ ಹೋಗುವುದಿಲ್ಲ. ಅಲ್ಪಸಂಖ್ಯಾತರ ಮತವನ್ನ ಬಿಜೆಪಿ ಎಂದಿಗೂ ನಂಬಿಲ್ಲ.
ಶೋಭಾ ಕರಂದ್ಲಾಜೆ ರಾಜ್ಯದಲ್ಲಿ ಪವರ್ ಮಿನಿಸ್ಟರ್ ಆಗಿದ್ದಾಗ ಇಲಾಖೆಯನ್ನು ಅವರು ನಿಭಾಯಿಸಿದ ರೀತಿಯನ್ನುಎಲ್ಲರೂ ಕೊಂಡಾಡಿದ್ದರು. ಅದರಲ್ಲೂ ಅವರ ಅವಧಿಯಲ್ಲಿ ಸಿಬ್ಬಂದಿ ನೇಮಕದಲ್ಲಿ ಕಾಪಾಡಿಕೊಂಡ ಪಾರದರ್ಶಕತೆ ಎಲ್ಲರೂ ಮೆಚ್ಚುವಂತಹುzಗಿತ್ತು. ರಾಜ್ಯದ ಅಭಿವೃದ್ಧಿ ಹಾಗೂ ಪಕ್ಷದ ಹಿತದೃಷ್ಟಿಯಿಂದ ಶೋಭಾಸ್ರ್ತ ಪ್ರಯೋಗವೇ ಲೇಸು ಎಂಬುದು ಜನಸಾಮಾನ್ಯರ ಮಾತು.
ಬಿಜೆಪಿಗೆ ಲೆಕ್ಕಚಾರ ಒಂದೆಡೆಯಾದರೆ ಕಾಂಗ್ರೆಸ್ ನಲ್ಲಿ ಸಿದ್ದು-ಡಿಕೆಶಿ ಹೊಂದಾಣಿಕೆಯೇ ಸವಾಲಾಗಿ ಪರಿಣಮಿಸಿದೆ.ನಾಯಕರ ನಾಲಗೆಯನ್ನು ಕಟ್ಟಿ ಹಾಕುವುದು ಎರಡನೇ ದೊಡ್ಡ ಸವಾಲು. ಬಹುಶಃ ಗುಜರಾತ್ ಚುನಾವಣೆ ಸಂದರ್ಭದಲ್ಲಿ ಖರ್ಗೆ ಅವರು ಮೋದಿ ಒಬ್ಬ ರಾವಣ ಎಂಬ ಮಾತು ಹೇಳದೇ ಇದ್ದಿದ್ದರೆ ಕನಿಷ್ಠ 15-20 ಸೀಟು ಕೈ ಪಾಲಾಗುತ್ತಿತ್ತು.ಹಿರಿಯರಾಗಿ ಅವರು ಆಡಿದ ಮಾತು ಅವರಿಗೇ ಮುಳುವಾಯಿತು. ಇಂತಹವುಗಳೇ ಕಾಂಗ್ರೆಸ್‌ನ ದೌರ್ಬಲ್ಯ.
ನಾಯಕತ್ವ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ಹೇಳಿದ್ದೇ ವೇದವಾಕ್ಯ ಎಂಬುದನ್ನು ರಾಜ್ಯಮಟ್ಟದಲ್ಲಿ ಎರಡೂ ಪಕ್ಷಗಳನಾಯಕರು ಈಗಾಗಲೇ ಒಪ್ಪಿಕೊಂಡಿದ್ದಾರೆ. ಅವರು ಏನೇ ಹೇಳಿದರೂ ಇವರದ್ದು ತಲೆ ಅಡಿಸುವುದಷ್ಟೇ ಕೆಲಸ. ಇನ್ನುಆಮ್ ಆದ್ಮಿ ಪಕ್ಷವನ್ನು ನಮ್ಮ ರಾಜ್ಯದ ಮತದಾರರು ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ. ಜೆಡಿಎಸ್ ನವರು ಎಷ್ಟೇ ಬೊಬ್ಬೆ ಹಾಕಿದರೂ ಅವರ ಟಾರ್ಗೆಟ್ 40 ಮಾತ್ರ!.
ಎಲ್ಲರೂ ಮಿಷನ್ 150 ಎಂದರೆ ಇವರದ್ದು ನಿಜವಾಗಿಯೂ ಮಿಷನ್ 40 ಮಾತ್ರ. ಕಾಂಗ್ರೆಸ್‌ನವರಿಗೆ ಈ ಬಾರಿ  ಚುನಾವಣೆ ಯಲ್ಲಿ ಬಿಜೆಪಿಯನ್ನು ಮಟ್ಟ ಹಾಕಲು ಸಾಕಷ್ಟು ವಿಷಯಗಳು ಸಿಕ್ಕಿವೆ. ಅದರಲ್ಲಿ ಪ್ರಮುಖವಾಗಿ ಗುತ್ತಿಗೆಯಲ್ಲಿ 40% ಕಮಿಷನ, ನೇಮಕದಲ್ಲಿ ಭ್ರಷ್ಟಾಚಾರ, ಹಣದುಬ್ಬರ, ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾರ್ಯಗಳು. ಬಿಜೆಪಿಗೆ ಹಿಂದುತ್ವವೇ ಒಂದು ದೊಡ್ಡಅಸ್ತ್ರ. ಈ ಬಾರಿಯೂ ಹಿಂದುತ್ವದ ಅಜೆಂಡಾ ಇಟ್ಟುಕೊಂಡೇ ಬಿಜೆಪಿ ಮನೆ ಬಾಗಿಲಿಗೆ ಹೋಗಬೇಕು.ಅಭಿವೃದ್ಧಿ ಮಾಡಿದ್ದೇವೆಂದು ಹೋದರೆ ಜನ ರೊಚ್ಚಿಗೇಳುವುದು ಮಾತ್ರ ಸುಳ್ಳಲ್ಲ. ಈ ಬಾರಿ ಚುನಾವಣೆ ಮತ್ತು ಚುನಾವಣಾ ತಂತ್ರ ನಿಜಕ್ಕೂ ಕುತೂಹಲಕಾರಿ ಆಗಿರುತ್ತದೆ. ಕಾದು ನೋಡುವ.
 - 