ಅಳು ಬಂದರೂ ನಕ್ಕೋತ ಅಳಬೇಕು ಅನ್ನುತ್ತಿದ್ದ ಸಂತ ಶ್ರೇಷ್ಠರು
ಸಂಸ್ಮರಣೆ
ಕೆ.ಲೀಲಾವತಿ, ಮೈಸೂರು
ಆಗ 1990. ಡಿಸಂಬರ್ ತಿಂಗಳ ಕೊನೆಯ ವಾರ. ಸುತ್ತೂರು ಮಠದ ಆದಿ ಜಗದ್ಗುರುಗಳ ಜಯಂತಿ ಮಹೋತ್ಸವ. ಆಗ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಯವರ ಭಾಷಣವೂ ಕಾರ್ಯಕ್ರಮದ ಒಂದು. ಭಾಗವಾಗಿತ್ತು. ಅವರು ಮೈಕಿನ ಮುಂದೆ. ನಿಂತುಮೆಲ್ಲನೆಯ ದನಿಯಲ್ಲಿ ಮಾತನಾಡಲಾರಂಭಿಸಿದರು. ಪ್ರಾರಂಭದಲ್ಲಿ ಏನೂ ಕೇಳಿಸ್ತಾನೆ ಇರಲಿಲ್ಲ. ಕಿವಿಯನ್ನು ಸ್ಪೀಕರ್‌ಗೆ ಅಂಟಿಸಿ ಕೇಳಬೇಕಾಗಿತ್ತು. ಹಾಗೇ ಮಾತಾಡ್ತಾ ಮಾತಾ ಡ್ತಾ ಅವರು ಧ್ವನಿ ಏರುತ್ತಾ ಹೋಯಿತು.
ಬದುಕಿನ ಸತ್ಯಗಳನ್ನು, ಮನುಷ್ಯನ ದುರ್ಬಲತೆಗಳನ್ನು ಅದೆಷ್ಟು ನೇರವಾಗಿ ಸರಳವಾಗಿ ಹೇಳಿದರು. ಅಂದರೆ ನಾನಂತೂ ಮಂತ್ರಮುಗ್ಧಳಾಗಿ ಕೇಳಿದ್ದೆ. ಅವರು ಯಾವುದೇ ದೇವರು, ಧರ್ಮ ಅಂತ ಹೇಳಲಿಲ್ಲ, ನಮ್ಮ ಮನಸ್ಸಿನ ಆಗುಹೋಗುಗಳನ್ನು ಹೇಳಿದ್ದರು… ಅಂದು ಕೇಳಿದ ಪ್ರವಚನದ ಗುಂಗಿನಿಂದ ಹೊರ ಬರಲು ನನಗೆ ಸುಮಾರು 3 ದಿನಗಳೇ ಬೇಕಾದವು. ನಾನು ಎಲ್ಲಾ ಹುಡುಕುತ್ತಿದ್ದ ನಿಧಿ ಇಲ್ಲಿಯೇ ಸಿಕ್ಕಿಬಿಟ್ಟಂತೆ ಸಂತೋಷ ಆಗಿತ್ತು. ಈಗಲೂ ನಾ ಕೇಳಿದ ಆ ಮೊದಲ ಪ್ರವಚನ ಕಾಡುತ್ತಿರುತ್ತದೆ. ಆ ನಂತರ ೧೯೯೧ರ ಶ್ರಾವಣ ಮಾಸ ದಲ್ಲಿ ಒಂದು ತಿಂಗಳ ಪ್ರವಚನ ಇತ್ತು. ಆ ಪ್ರವಚನದ ಶೀರ್ಷಿಕೆ ಭಗವಚ್ಚಿಂತನ ಅಂತ. ವಿಷಯ ಹಾಗಿದ್ದರೂ ಅವರು ನಾವಂದುಕೊಂಡ ಯಾವುದೇ ದೇವರ ಕುರಿತಾಗಿ ಹೇಳಲಿಲ್ಲ.
ಅವರ ಪ್ರಕಾರ ಕಾಣೋದೆಲ್ಲವೂ ದೇವರೇ ಆಗಿರುವಾಗ ಬೇರೇನನ್ನು ಕಾಣಲು ಸಾಧ್ಯ? ಅವರ ಪ್ರವಚನಗಳ ಮುಖ್ಯ ವಿಷಯ ನಮ್ಮ ಮನಸ್ಸನ್ನು ಕುರಿತದ್ದೇ ಆಗಿರುತ್ತಿತ್ತು. ಮನಸ್ಸಿನ ಶಕ್ತಿ, ಮಾನಸಿಕ ದೌರ್ಬಲ್ಯಗಳು, ನಮ್ಮೊಳಗಿನ ದುರಾಸೆ, ನಮ್ಮಲ್ಲಿನ ಹಪಾಹಪಿತನ, ಮೌಢ್ಯಗಳು ನಮ್ಮೊಳಗೆ ಹೇಗಿರುತ್ತವೆ ಎಂಬುದನ್ನು ಅವರ ಅನೇಕ ಪ್ರವಚನಗಳಲ್ಲಿ ಕೇಳಿದ್ದೇನೆ. ಒಮ್ಮೊಮ್ಮೆ ಅವರ ಮಾತುಗಳನ್ನು ಕೇಳಿದಾಗ ಚಾಟಿಯಿಂದ ಹೊಡೆದಂತೆಯೂ ಭಾಸವಾಗುತ್ತಿತ್ತು.
ಅವರ ಪ್ರವಚನ ಕೇಳಿದ ಕೋಟ್ಯಂತರ ಫಲಾನುಭವಿಗಳಲ್ಲಿ ನಾನೂ ಒಬ್ಬಳು. ಅಂತಹ ಒಬ್ಬ ಸಂತ ನಮ್ಮ ಜೀವಿತಾವಧಿಯ ನಮಗೆ ದೊರಕಿದ್ದು ನಮ್ಮ ಪುಣ್ಯ. ನನಗಂತೂ ಅವರು ಜೀವಂತ ದೇವರೇ ಆಗಿದ್ದರು. ನನ್ನೊಳಗಿನ ಗಟ್ಟಿತನಕ್ಕೆ ಅವರ ಕೊಡುಗೆ ಮಹತ್ತಾದುದು. ಇದು ಸರಿ, ಇದೇ ಸತ್ಯ ಅಂತ ಮನವರಿಕೆ ಮಾಡಿಕೊಟ್ಟಿದ್ದರು. ನನಗೆ ಯಾವುದೇ ದುಃಖ, ಯಾವುದೇ ಸಮಸ್ಯೆಅನ್ನಿಸಿದ್ದಲ್ಲಿ, ಅವರ ಪ್ರವಚನದ ಯಾವುದೋ ಮಾತುಗಳು ನೆನಪಾಗಿ ಸಮಸ್ಯೆಯೇ ಇಲ್ಲದಂತೆ ಹಗುರಾಗ್ತಿದ್ದೆ.
ಅವರ ಋಣ ನನಗೆ ಎಂದಿಗೂ ತೀರಿಸಲಾಗದಂತಹುದು. ನನ್ನ ಬದುಕಿನಲ್ಲಿ ಇಂತಹ ಶ್ರೇಷ್ಠ ಸಂತನನ್ನು ಕಂಡಿದ್ದಕ್ಕೆ ಧನ್ಯತಾಭಾವವಿದೆ… ಇಂತಹ ಸಂತರನ್ನು ಕಂಡಿದ್ದಕ್ಕಾಗಿ ಆ ಭಗವಂತನಿಗೆ. ಸಾವಿರ. ಸಾವಿರ. ನಮನಗಳನ್ನು ಮತ್ತೆ ಮತ್ತೆ ಸಲ್ಲಿಸುತ್ತಿರು ತ್ತೇನೆ. ೦೨-೧೦-೨೦೦೦ರಂದು ನನ್ನ ಮನವಿಯ ಮೇರೆಗೆ ನಮ್ಮ ಮನೆಗೆ ಭೇಟಿ ಕೊಟ್ಟಿದ್ದರು. ಆಗ್ಗೆ ಎರಡು ತಿಂಗಳ ಮೊದಲು ನಮ್ಮ ಮನೆಯ ಗೃಹ ಪ್ರವೇಶವಾಗಿದ್ದರೂ, ಅಂದೇ ಹೊಸದಾಗಿ ಗೃಹಪ್ರವೇಶವಾದಂತೆ ಸಂಭ್ರಮಿಸಿ‌ದ್ದೆ.
ಅಂದು ಅವರ ಪಾದ ಧೂಳಿಯಿಂದ ನಮ್ಮ ಮನೆ ಪಾವನವಾಗಿತ್ತು. ಆದರೂ ಅವರ ವಿಷಯದಲ್ಲಿ ನನಗೆ ಕೆಲವು ಅಭಿಪ್ರಾಯ ಭೇಧಗಳೂ ಇದ್ದವು. ಕೆಲ ವರ್ಷಗಳಿಂದ ಅವರು ಬೆಳಗ್ಗೆ ಮಾತ್ರ ಪ್ರವಚನ ಮಾಡುತ್ತಿದ್ದರು. ನಾನು ಅವರಲ್ಲಿ ಹೇಳುತ್ತಿದ್ದೆ, ನೀವು ಹೀಗೆ ಬೆಳಗ್ಗೆ ಮಾತ್ರ ಮಾಡಿದರೆ ಮಹಿಳೆಯರಿಗೆ ಕಷ್ಟ ಆಗ್ತದೆ, ಬೆಳಗ್ಗೆ ಎದ್ದ ಕೂಡಲೇ ಮನೆಯಲ್ಲಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿರುತ್ತದೆ.
ಎಲ್ಲಾ ಬಿಟ್ಟು ಪ್ರವಚನಕ್ಕೆ ಬಂದು ಬಿಡಲು ಕಷ್ಟ ಆಗ್ತದೆ ಅಂದ್ರೆ, ಸಂಜೆನೂ ಅದೇ ಸಮಸ್ಯೆ ಅಂದರು. ಇ, ಸಂಜೆಯಾದರೆ ಎಲ್ಲಾ ಸ್ವಲ್ಪ ತಣ್ಣಗಾಗಿರ್ತದೆ, ಸ್ವಲ್ಪ ಸುಧಾರಿಸಿಕೊಂಡು ಬರಬಹುದು ಅಂದೆ. ಅವರು ಒಪ್ಪಲೇ ಇಲ್ಲ. ಬೆಳಗ್ಗೆ ಮಾತ್ರವೇ ಪ್ರವಚನಮಾಡುವುದನ್ನು ಮುಂದುವರಿಸಿದ್ದರು. ಕೆಲವೊಮ್ಮೆ ಯಾರಾದರೂ ಗಣ್ಯ ವ್ಯಕ್ತಿಗಳು ಬಂದಾಗ, ಅವರಿಗೆ ಮಾತಾಡಲು ಬಿಟ್ಟು ಇವರು ಹಿಂದೆ ಸರಿದುಬಿಡುತ್ತಿದ್ದರು. ಗುರುಗಳ ಮಾತುಗಳನ್ನೇ ಕೇಳಬೇಕೆಂದುಕೊಂಡಿದ್ದ ನಮ್ಮಂತಹ ಭಕ್ತರಿಗೆ ನಿರಾಸೆಯಾಗುತ್ತಿತ್ತು. ಈ ಬಗ್ಗೆ ಅವರಲ್ಲಿ ನಾನೇದರೂ ಆಕ್ಷೇಪ ವ್ಯಕ್ತಪಡಿಸಿದರೆ ‘ನಿಮಗೆ ತಿಳಿದಿದೆಯಲ್ರೀ’ ಅಂದುಬಿಡುತ್ತಿದ್ದರು.
ಏನೇ ಆಗಲಿ ಅವರು ನನ್ನ ಪಾಲಿನ ದೇವರು. ನನ್ನನ್ನು ಮಾನಸಿಕವಾಗಿ ಗಟ್ಟಿಗೊಳಿಸಿದವರು. ಅವರ ಖುಣ ನನ್ನ ಮೇಲಿದೆ. ಜೈ ಗುರುದೇವ! ಅವರ ಕೆಲ ನುಡಿಮುತ್ತುಗಳು: ೧. ಭಗವಂತ ಏನೆ ಇಟ್ಟು ಈ ಭೂಮಿಯಾಗೆ ನಮ್ಮನ್ನು ಕಳಿಸಿದ್ದಾನೆ, ಬೆಳಕ ಇಟ್ಟಾನೆ, ನೀರ ಇಟ್ಟಾನೆ, ತಿನ್ನಲಿಕ್ಕೆ ಅನೇಕ ಬಗೆಯ ದವಸ ಧಾನ್ಯಗಳು, ಹಣ್ಣುಗಳು ಇವೆ. ಇಷ್ಟೆ ಅನುಕೂಲ ಮಾಡಿರುವ ಭಗವಂತನಮ್ಮನ್ನು ಅಳಲಿ ಅಂತ ಕಳುಹಿಸಿದ್ದಾನಾ? ೨. ಬೆಳಗ್ಗೆ ಎದ್ದ ಕೂಡಲೇ ನಕ್ಕೋತ ಏಳಬೇಕು. ರಾತ್ರಿ ಮಲಗುವಾಗಲೂ ನಗುವಿನೊಂದಿಗೆ ಮಲಗಬೇಕು. ಆಗ ಜೀವನ ಸ್ವರ್ಗ ಆಗ್ತದೆ.
೩. ಅಳು ಬಂದರೂ ನಕ್ಕೋತ ಅಳಬೇಕು. ೪. ಭಕ್ತಿಗಿರುವ ದೊಡ್ಡ ಆತಂಕ ಎಂದರೆ ಅತೃಪ್ತಿ. ಜಗತ್ತಿನ ಜನಾಂಗವೆ ಒಂದಿ ಒಂದು ಜಾಗಕ್ಕೆ ಹೋಗಿ ಭಕ್ತಿ ಮಾಡ್ತದೆ, ಆದರೂ ಒಬ್ಬ ಭಕ್ತ ಸಿಗುವುದು ಕಷ್ಟ. ಎಷ್ಟೇ ಇದ್ದರೂ ಸಹ ಅತೃಪ್ತಿ ಹೋಗೋದಿಲ್ಲ. ಯಾರದೇಹೃದಯವನ್ನು ಬಡಿದರೂ ಸಹಿತ     ಅಂತ ಬಂದೀತೇ ವಿನಃ          ಅನ್ನುವ ಭಾವ ಬರೋದಿಲ್ಲ. ಎಷ್ಟು ಇದ್ದರೂ ಸಮಾಧಾನವಾಗದೇ ಇರೋದೇ ಭಕ್ತಿಯ ಅಡಚಣೆ. ಭಕ್ತಿ ಕಠಿಣ ಅಲ್ಲ, ಈ ಅಂತರಾಳ ತೆಗೆಯೋದು ಕಷ್ಟ.
೫. ಸಹಜ ಆಸೆಗಳು ಬೇರೆ, ತೃಷ್ಣೆಗಳು ಬೇರೆ. ಸಹಜ ಆಸೆಗಳು ಅಂದರೆ ಹಸಿವು, ನೀರಡಿಕೆ, ಏನನ್ನಾದರೂ ನೋಡಬೇಕೆನ್ನುವುದು. ತೃಷ್ಣೆಗಳು ಬೇರೆ, ಇವು ಇನ್ನಷ್ಟು ಮತ್ತಷ್ಟು ಬೇಕು, ಬೇಕು ಅನ್ನುವುದು. ೬. ಜ್ಞಾನ ಎಲ್ಲರಿಗೂ ಆಗೋದಿಲ್ಲ, ಬುದ್ಧಿ ಸಾಮರ್ಥ್ಯಎಲ್ಲರಿಗೂ ಇರೋದಿಲ್ಲ. ನನಗೆ ವಿಚಾರಗಳು ಕಡಿಮೆ ಇರಬಹುದು ನಿಮಗೆ ವಿಚಾರಗಳು ಹೆಚ್ಚಿರಬಹುದು. ಕರ್ಮ ಎಲ್ಲರಿಗೂ ಆಗೋದಿಲ್ಲ. ನನಗೆ ಶಕ್ತಿ ಜಾಸ್ತಿ ಇರಬಹುದು ನಿಮಗೆ ಕಡಿಮೆ ಇರಬಹುದು. ಆದರೆ ಹೃದಯವಿಲ್ಲದಂತಹ ಒಬ್ಬ ವ್ಯಕ್ತಿ ಜಗತ್ತಿನೊಳಗಿಲ್ಲ… ಭಗವಂತ ಎಲ್ಲವನ್ನೂ ನಿರ್ಮಾಣ ಮಾಡಿ ಎಲ್ಲರಿಗೂ ಭಿನ್ನ ಭಿನ್ನ ಪ್ರಮಾಣದಲ್ಲಿ ವಸ್ತುಗಳನ್ನು ಕೊಟ್ಟ.
ಕೆಲವರಿಗೆ ಗಳಿಸುವ ಸಾಮಥ್ಯ ಹೆಚ್ಚು ಕೊಟ್ಟ, ಕೆಲವರಿಗೆ ದೇಹ ಸಾಮರ್ಥ ಹೆಚ್ಚು ಕೊಟ್ಟ. ಎಲ್ಲಾ ಕಡೆ ವಿಷಮ ಮಾಡಿದ ಭಗವಂತ ಒಂದರಲ್ಲಿ ಸಮಗೊಳಿಸಿದ ಅದೇ ಹೃದಯ. ಯಾವುದನ್ನು ನಾವು ಸಮನಾಗಿ ಪಡೆದು ಬಂದಿದ್ದೀವಿ ಅದನ್ನು ಬಳಸಿಕೊಳ್ತಾ ಇದ್ರೆ ವಿಶ್ವದಾಳಗೆ ಸಮತೆ ಪ್ರಾರಂಭವಾಗ್ತದೆ. ನಾನು ನಿಮ್ಮನ್ನು ಪೀತಿಸ್ತಾ ಇದ್ರೆ ನೀವು ನನ್ನನ್ನು ಪ್ರೀತಿಸ್ತಾ ಇದ್ರೆ ನಮ್ಮ ನಡುವೆ ಎಷ್ಟೇ ಅಸಮಾನತೆ ಇದ್ದರೂ ಸಹ ಪ್ರೇಮ ಸಮಗೊಳಿಸ್ತದೆ. ಇಂಥ ಅದ್ಭುತವಾದ ಪ್ರೇಮವನ್ನು ಮನಸ್ಸಿನ ವಿಕಾಸಕ್ಕಾಗಿ, ಅದ್ಭುತ ಸಾಮರ್ಥಕ್ಕಾಗಿ ಬಳಸಿಕೊಳುವುದನ್ನು ಭಕ್ತಿಯೋಗ ಅಂತ ಕರೀಬೇಕು.
೭. ಜ್ಞಾನ ಹೊತ್ತಿಗೆಯಿಂದ ಬರೋದಲ್ಲ. ಜೀವನದ ಬುತ್ತಿಯಿಂದ ಬರೋದು. ನಾವು ಒಂದಿಷ್ಟು ಕಣ್ಣು ತೆರೆದು ನೋಡಿದರೆ ಸಾಕು ನಮ್ಮ ಸುತ್ತಮುತ್ತಲಿನ ಜಗತ್ತು ಜ್ಞಾನವನ್ನು ತುಂಬಿ ಬಿಡುತ್ತದೆ. ಕಣ್ಣು ತೆರೆಯಬೇಕು ಅಷ್ಟೇ. ೮. ನಿಸರ್ಗ ನಮಗೇನು ಮಾಡಿದೆ, ಎಲ್ಲವನ್ನೂ ಚೆನ್ನಾಗಿಯೇ ಮಾಡಿದೆ. ಮರೆವು’ ನಿಸರ್ಗ ನಮಗಿತ್ತ ಅತ್ಯುತ್ತಮ ವರಗಳಲ್ಲೊಂದು. ಎಲ್ಲವನ್ನೂ ಮರೆಯ ಬೇಕು. ಮಾಡಿದ್ದನ್ನು ಮರೆಯಬೇಕು… ಮರೆಯೋದು ಅಂದರೆ ತಲೆಯೊಳಗೆ ಯಾವುದೇ ಭಾವನೆಗಳು ಬರದಂತೆ ಇರೋದು. ಇದು ಬಹಳ ಸುಲಭವಾದ ಶಾಂತಿದರ್ಶನದ ಸಾಧನ.
ಬಹಳ ಅದ್ಭುತವಾದ ಸಾಧನ. ಯಾರಾದರೂ ಏನಾದರೂ ಅಂದಿರುತ್ತಾರೆ, ಅದನ್ನು ಮರೀಬೇಕು. ಆದರೆ ಹಾಗಾಗುವುದಿಲ್ಲ. ನಾವು ಅದಕ್ಕೆ ಬಹಳ ಮಹತ್ವ ಕೊಟ್ಟು ಕೊರಗುತ್ತೇವೆ. ಅವರು ನಮ್ಮನ್ನು ಬೇಸರ ಪಡಿಸಿದ್ದಕ್ಕಾಗಿ ಅವರಿಗೆ ಬಹಳ ಮಹತ್ವ ಕೊಟ್ಟಂತೆ ಆಗುತ್ತದೆ. ನಮಗೆ ನಮ್ಮ ಸಂತೋಷಕ್ಕಿಂತ, ನೆಮ್ಮದಿಗಿಂತ ಅವರ ಮಾತುಗಳೇ ಅತೀ ಮಹತ್ವದ್ದಾಗಿ ಬಿಟ್ಟಿರುತ್ತವೆ. ಹಾಗಾಗಿ ನಮ್ಮ ನೆಮ್ಮದಿಯನ್ನು ನಾವೇ ಹಾಳು ಮಾಡಿಕೊಳ್ಳುತ್ತೇವೆ.
೯. ಕುಡಿದಾಗ ಯಾಕೆ ಸಂತೋಷ ಆಗುತ್ತದೆ ಅಂದರೆ ಎಲ್ಲಾ ಮರೀತೇವೆ ಅಂತ ಅಲ್ಲವೇ? ಎಚ್ಚರವಾಗಿರುವಾಗಲೂ ಸಂತೋಷ ವಾಗಿರಬೇಕಾದರೆ ನಾವು ದೋಡ್ಡೋರು, ನಾವು ಬುದ್ಧಿವಂತರು, ನಾವು ಸುಂದರರು, ನಾವು ಕುರೂಪಿಗಳು, ನಾವು ಅವರಂತಿಲ್ಲ,  ನಾವು ಬಡವರು, ನಾವು ಸಣ್ಣವರು ಇತ್ಯಾದಿಗಳನ್ನು ಮರೆಯಬೇಕು. ಇದೆ ಮನಸ್ಸಿನ ಹೊರವಲಯದಲ್ಲಿ ವ್ಯಾವಹಾರಿಕ ಬದುಕಿಗೆ ಮಾತ್ರ ಮೀಸಲಾಗಿರಬೇಕೇ ಹೊರತು ಒಳ ಮನಸ್ಸಿನಲ್ಲಿ ನಾವು ನಾವಾಗಿರಬೇಕು. ನಾವು ಗಟ್ಟಿಗರಾಗಿರಬೇಕು. ನಮ್ಮೊಳಗಿನ ನಮ್ಮನ್ನು ಯಾರೂ ಅಡಿಸುವಂತೆ ಇರಬಾರದು.
೧೦. ಏನೂ ಇರಬಾರದು ಅಂತ ಅಲ್ಲ. ಮನೆ, ಮಡದಿ, ಮಕ್ಕಳು, ಮಂದಿ ಎಲ್ಲಾ ಇರಬೇಕು, ಸಂತೋಷವಾಗಿರಬೇಕು. ಒಂದು ವೇಳೆ ಇದು ಒಂದಿಷ್ಟು ವ್ಯತ್ಯಾಸವಾದರೂ ಅಷ್ಟೇ ಸಂತೋಷವಾಗಿರಬೇಕು. ಇದೇ ಬದುಕಿನ ಅತಿ ದೊಡ್ಡ ಸಾಧನೆ. ಕೆಲವರಿಗೆ ಚಿಂತೆಯೇ ಬದುಕಾಗಿರುತ್ತದೆ. ಅಗತ್ಯವಿಲ್ಲದೆಯೂ ಚಿಂತೆ ಮಾಡೋದೇ ಅವರ ಸ್ವಭಾವವಾಗಿರುತ್ತದೆ. ಎಲ್ಲಾ ಮರೆತು ಆರಾಮಾಗಿ ನಿದ್ರೆ ಮಾಡುವಂತೆ ಆದರೆ ಅದೇ ದೊಡ್ಡ ಸಾಧನೆ. ನನ್ನ ಸುಖ, ನನ್ನ ಸಂತೋಷವನ್ನು ಯಾರಿಗಾಗಿ ಯಾಕೆ ಬಲಿ ಕೊಡಬೇಕು? ಮೊದಲು ನಿದ್ರೆ ಮಾಡುವ ಎದ್ದಾಗ ಚಿಂತಿಸಬೇಕಾದಲ್ಲಿ ಚಿಂತಿಸಿದರೆ ಆಯ್ತು ಅಂತ ಮನಸ್ಸನ್ನು ಖಾಲಿ ಮಾಡಿಮಲಗಿಬಿಡಬೇಕು. ನಮ್ಮ ನಿದ್ರೆಯ ಸುಖಕ್ಕಿಂತ ಯಾವುದೂ ಹೆಚ್ಚಿನದಲ್ಲ ಅನ್ನುವ ಅರಿವು ನಮಗಿರಬೇಕು. ನಮ್ಮ ಶಕ್ತಿಯನ್ನು, ನಮ್ಮ ಕಾಲವನ್ನು ಅನಗತ್ಯ ವಿಷಯಗಳಲ್ಲಿ ವ್ಯಯಿಸಬಾರದು.
೧೧. ಮನಸ್ಸನ್ನು ಅರಳಿಸಬೇಕು ಅಂತ ಅನೇಕ ಸಂತರು ಅನೇಕ ಬಗೆಯಲ್ಲಿ ಉಪದೇಶ ಮಾಡಿದ್ದಾರೆ. ಕೆಲವರ ಉಪದೇಶ ಕೆಲವರಿಗೆ ಹಿಡಿಸ್ತದೆ, ಕೆಲವರ ಉಪದೇಶ ಕೆಲವರಿಗೆ ಹಿಡಿಸೋದಿಲ್ಲ. ಆದರೆ. ಪರಿಣಾಮ ಮಾತ್ರ ಒಂದೇ ಆಗಿರುತ್ತದೆ. ಮನಸ್ಸನ್ನು ವಿಕಾಸಗೊಳಿಸುವುದು. ೧೨. ಕೆಲವರಿಗೆ ಭಕ್ತಿ ಹಿಡಿಸುತ್ತದೆ, ಕೆಲವರಿಗೆ ಜ್ಞಾನ ಹಿಡಿಸುತ್ತದೆ. ಕೆಲವರಿಗೆ ಧ್ಯಾನ ಹಿಡಿಸುತ್ತದೆ, ಕೆಲವರಿಗೆ ಕರ್ಮ ಹಿಡಿಸುತ್ತದೆ, ಕೆಲವರಿಗೆ ಯೋಗ ಹಿಡಿಸುತ್ತದೆ. ಏನು ಹಿಡಿಸುತ್ತದೆ. ಅದು ಮಹತ್ವದ್ದಲ್ಲ.. ಮನಸ್ಸು ವಿಕಾಸ ಗೊಳ್ಳೋದು ಮಹತ್ವದ್ದು. ಮೊದಲಿಗೆ ಮನಸ್ಸು ವಿಕಾಸಗೊಳ್ಳಬೇಕಾದರೆ ಯಾವುದಾದರೊಂದು ಪಥ ಹಿಡೀಬೇಕಾಗುತ್ತದೆ.
೧೩. ಒಂದು ಹೂವು ಅರಳಬೇಕಾದರೆ ತನ್ನಷ್ಟಕ್ಕೆ ತಾನೇ ವಿಕಾಸ ಆಗೋದಿಲ್ಲ. ಒಂದು ಮೊಗ್ಗು ಹೂವಾಗಿ ಅರಳ ಬೇಕಾದರೆ ಚಂದ್ರನ ಬೆಳಕು ಬೇಕಾಗುತ್ತದೆ, ಇನ್ನೊಂದು ಹೂ ಅರಳಬೇಕಾದರೆ ಸೂರ್ಯನ ಪ್ರಥಮ ಕಿರಣಗಳು ಅದನ್ನು ಸ್ಪರ್ಶ ಮಾಡಬೇಕಾಗುತ್ತದೆ. ಕೆಲವು ಹೂಗಳು ವಿಕಾಸವಾಗಬೇಕಾಗಿದ್ದರೆ ರಾತ್ರಿ ಬೇಕಾಗುತ್ತದೆ. ಇನ್ನು ಕೆಲವು ಹೂಗಳು ಅರಳಬೇಕಾದರೆ ತಂಪು ಗಾಳಿ ಬೇಕಾಗುತ್ತದೆ. ಇನ್ನೂ ಕೆಲವು ಹೂಗಳು ಅರಳಬೇಕಾದರೆ ಬಿಸಿ ಗಾಳಿ ಬೇಕಾಗುತ್ತದೆ. ಇಲ್ಲಿ ಯಾವ ಗಾಳಿ, ಬಿಸಿಲು,ಕತ್ತಲು ಮಹತ್ವದ್ದಲ್ಲ, ಹೂವು ಅರಳೋದು ಮಹತ್ವದ್ದು.
ಆದ್ದರಿಂದ ನಾವು ಯಾವ ಪಥ ಹಿಡೀತೀವಿ ಅನ್ನೋದು ಮುಖ್ಯ ಅಲ್ಲ. ಮನಸ್ಸು ವಿಕಾಸ ಆಗ್ತಿತ್ತು ಅಂದ್ರೆ ಅದೇ ಶಿವ ಪಥ, ಅದೇ ದೇವ ಪಥ, ಅದೇ ಬ್ರಹ್ಮ ಪಥ. ಸಂತರ ಉಪದೇಶದೊಳಗೆ ಭೇದ ಮಾಡಬಾರದು. ಅದನ್ನು ಬಳಸಿಕೊಳ್ಳುವ ನಮ್ಮೊಳಗೆ ಒಂದು ವಿಶಾಲ ಮನೋಭಾವ ಉಂಟಾದರೆ ಎಲ್ಲವೂ ಪಥ್ಯವಾಗ್ತದೆ.
 - 