ಪಾದಯಾತ್ರೆಯೋ ಸ್ವಹಿತಾಸಕ್ತಿ ಪ್ರದರ್ಶನವೋ ?
ವಿಶ್ಲೇಷಣೆ
ಪವನ್ ವಶಿಷ್ಠ
ಪಾದಯಾತ್ರೆಗಳು ಕೆಲವರ ತೆವಲು ತೀರಿಸಿಕೊಳ್ಳುವ ಉಮ್ಮೀದು ಹೊಂದಿದ್ದರೆ ಮತ್ತೆ ಕೆಲವರದ್ದು ತಾವೊಬ್ಬ ಪಕ್ಷಾತೀತ ನಾಯಕನೆಂದು ಬಿಂಬಿಸುವ ಸ್ವಹಿತಾಸಕ್ತಿಯಿಂದಲೇ ಕೂಡಿವೆ. ಸ್ವತಂತ್ರ ಭಾರತದ ಪಕ್ಷವಾದ ಕಾಂಗ್ರೆಸ್ ಪಾದಯಾತ್ರೆ ಎಂದರೆ ಸಾಗರೋಪಾದಿಯಲ್ಲಿ ಜನ ಸೇರಬೇಕು.
ಹಿಂದೆ ಆಡಳಿತಾರೂಢ ಸರಕಾರಗಳಿಗೆ ಬೆಚ್ಚಿಬೀಳಿಸುವ ಪದ ಯಾವು ದಾದರೂ ಇದ್ದರೆ ಅದು ಪಾದಯಾತ್ರೆಯಾಗಿತ್ತು ಎಂದರೆ ತಪ್ಪಲ್ಲ. ಪಾದ ಯಾತ್ರೆಯ ತಾಖತ್ತು ಕೂಡ ಆವತ್ತು ಹಾಗೆಯೇ ಇತ್ತು. ಯಾವ ಮಟ್ಟಕ್ಕೆ ಎಂದರೆ; ಮೂಲೆಯ ಕೊಡಗಿನಲ್ಲಿ ಎ.ಕೆ.ಸುಬ್ಬಯ್ಯನವರು ಭಾಷಣ ಮಾಡುತ್ತಿದ್ದಾರೆಂದು ಗೊತ್ತಾದರೆ ಸಾಕು ಸರ್ಕಲ್ ಸುತ್ತ ಕನಿಷ್ಠ ಹತ್ತು ಸಾವಿರ ಜನವಾದರೂ ಜಮಾಯಿಸಿರುತ್ತಿದ್ದರು!. ಯಾರಿಗೂ ಒಂದು ನಯಾ ಪೈಸೆ ನೀಡದೆ ಬಂದಂತಹ ಜನರವರು.
ಪಾದಯಾತ್ರೆ ಅಂದರೆ ಸರಕಾರಕ್ಕೆ ಎಲ್ಲಿಲ್ಲದ ತಲೆ ನೋವು. ಪಾದ ಯಾತ್ರೆಯ ಮೂಲ ಉದ್ದೇಶಗಳೂ ಹಾಗೆ ಇರುತ್ತಿದ್ದವು. ಇತಿಹಾಸ ಗಮನಿಸಿದರೆ ನಿಜಕ್ಕೂ ಪಾದಯಾತ್ರೆಗಳು ಸಾರ್ವಜನಿಕ ಹಿತಾಸಕ್ತಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದವು. ರಾಮ ರಥಯಾತ್ರೆ, ಲಾಲ್ ಚೌಕ್ ನಲ್ಲಿ ತಿರಂಗಾ ಹಾರಿಸಿದ ಏಕತಾ ಯಾತ್ರೆ, ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇ ಕೆಂದು ಹಮ್ಮಿಕೊಂಡಿದ್ದ ಗೋಕಾಕ್ ಚಳವಳಿ, ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗಲೇ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲವೆಂದು ಮಾಡಿದ ಕಾವೇರಿ ಪಾದಯಾತ್ರೆ, ಅಕ್ರಮ ಗಣಿಗಾರಿಕೆ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಮ್ಮಿಕೊಂಡಿದ್ದ ಬಳ್ಳಾರಿ ಚಲೋ ಪಾದಯಾತ್ರೆ… ಇವೆಲ್ಲವುಗಳಲ್ಲೂ ಒಂದು ಸದುದ್ದೇಶ ಇತ್ತೆಂಬುದು ಸ್ಪಷ್ಟ.
ನಮ್ಮ ದೇಶ, ನಮ್ಮ ನಾಡು, ನಮ್ಮ ಭಾಷೆ, ನಮ್ಮ ನೆಲ, ನಮ್ಮ ಜಲ, ನಮ್ಮ ಸಂಸ್ಕೃತಿ ಉಳಿಸುವಂತಹ ಮೌಲ್ಯಗಳುಹಿಂದಿನ ಪಾದಯಾತ್ರೆಗಳಲ್ಲಿ ಅಡಗಿರುತ್ತಿದ್ದವು. ಹಾಗೆಂದ ಮಾತ್ರಕ್ಕೆ ಇದರಲ್ಲಿ ರಾಜಕೀಯದ ಲವಲೇಶ ಎಳ್ಳಷ್ಟೂಇರುತ್ತಿರಲಿಲ್ಲ ಎಂದಲ್ಲ. ರಾಜಕೀಯವಾಗಿ ಪಾದಯಾತ್ರೆಗಳ ಮೂಲಕ ಅನೇಕ ಪಕ್ಷಗಳು ಅಧಿಕಾರದ ಲಾಭ ಪಡೆದು ಕೊಂಡಿವೆ. ಪಕ್ಷಗಳಿಗೆ ಲಾಭದ ಜತೆ ಜತಗೆ ಜನಹಿತ ಕಾಯುವಂತಹ ಅಂಶಗಳೂ ಪಾದಯಾತ್ರೆಗಳಲ್ಲಿ ಅಡಗಿದ್ದವು.
ಪಕ್ಷಕ್ಕಾಗುವ ಲಾಭ ನಷ್ಟಗಳನ್ನು ಶ್ರೀಸಾಮಾನ್ಯ ಮೌಲ್ಯಮಾಪನ ಮಾಡುವ ಗೋಜಿಗೆ ಹೋಗುತ್ತಿರಲಿಲ್ಲ. ಈ ಕಾರಣಕ್ಕಾಗಿ ಹಿಂದೆ ನೆಡೆದ ಪಾದಯಾತ್ರೆಗಳಿಗೆ ಜನರು ಸ್ವತಃ ಆಸಕ್ತಿ ತೋರಿ ನಯಾ ಪೈಸೆ ಬೇಡಿಕೆ ಇಡದೇ ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಇದನ್ನೆ ಹಿಂತಿರುಗಿ ನೋಡಿದಾಗ ಇತ್ತೀಚಿನ ಪಾದಯಾತ್ರೆಗಳು ಹೇಸಿಗೆ ಹುಟ್ಟಿಸುತ್ತವೆ.
ಈ ಪಾದಯಾತ್ರೆಗಳೆ ಇತ್ತೀಚಿನವು. ಇನ್ನೂ ಹಿಂದಕ್ಕೆ ಹೋಗಿ ನೋಡಿದಾಗ ದಂಡಿ ಸತ್ಯಾಗ್ರಹ, ವಿನೋಬಾ ಭಾವೆಯವರ ಭೂದಾನ, ಚಂದ್ರಶೇಖರ್ ಅವರ ಭಾರತ ಪರಿಕ್ರಮ… ಹೀಗೆ ಹತ್ತಾರು ಜನಪ್ರಿಯ ಪಾದಯಾತ್ರೆಗಳಲ್ಲಿ ಸಮಷ್ಟಿ ಪ್ರಜ್ಞೆ ಎದ್ದು ಕಾಣುತ್ತದೆ. ಇಂದು ಪಾದಯಾತ್ರೆಗಳು ಮನರಂಜನೆಯ ಭಾಗವಾಗಿ ಮಾರ್ಪಾಡಾಗಿವೆ. ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಮೇಕೆದಾಟು ಪಾದಯಾತ್ರೆ ತುಣುಕುಗಳು ಜನರಿಗೆ ಮನರಂಜನೆ ಒದಗಿಸಿತೇ ವಿನಃ ಅದನ್ನು ಗಂಭೀರವಾಗಿ ಪರಿಗಣಿಸುವಂತಹ ಯಾವ ಅಂಶವೂ ಆ ಯಾತ್ರೆಯಲ್ಲಿ ಕಾಣಲೇ ಇಲ್ಲ.
ಭ್ರಷ್ಟಾಚಾರದ ಆರೋಪ ಹೊತ್ತು ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿ ಕಂಬಿ ಎಣಿಸಿ ಬಿಡುಗಡೆಗೊಂಡಿದ್ದ ಡಿಕೆಶಿ ಮೇಕೆ ದಾಟು ಪಾದಯಾತ್ರೆ ಹೆಸರಲ್ಲಿ ಹೈಕಮಾಂಡ್‌ಗೆ ತಮ್ಮ ಶಕ್ತಿ ಪ್ರದರ್ಶನ ಮಾಡುವ ಸ್ವಹಿತಾಸಕ್ತಿ ಹೊಂದಿದ್ದುದು ಆ ಪಾದ ಯಾತ್ರೆ ತುಂಬೆ ಅಡಗಿತ್ತು. ಒಂದು ಹಂತದಲ್ಲಂತೂ ಪಾದಯಾತ್ರೆಗೆ ಬಂದಿದ್ದ ಕೆಲವರು ಪಾನಮತ್ತರಾಗಿ ಇದು ಪಾದ ಯಾತ್ರೆ ಅಲ್ಲ ಪಾನ ಯಾತ್ರೆ ಎಂದು ನಗೆಪಾಟಲೀಗೀಡು ಮಾಡುವ ಸಂದರ್ಭಗಳೂ ಕಂಡು ಬಂದವು.
ವಾಸ್ತವದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರಿಗೇ ಈ ಪಾದಯಾತ್ರೆ ಬೇಡವಾಗಿತ್ತು. ಅಂತಿಮವಾಗಿ ಕೋವಿಡ್ ನೆಪ ಹಾಗೂ ಕೋರ್ಟ್ ಆದೇಶದಿಂದ ಕಾಂಗ್ರೆಸ್ ನಾಯಕರು ಬಚಾವಾದರು. ಇಲ್ಲದಿದ್ದರೆ ಕಾಂಗ್ರೆಸ್ ಒಳ ಜಗಳ ಇನ್ನಷ್ಟು ಬೆತ್ತಲೆಗೊಂಡು ಆವತ್ತೇ ಬೀದಿಗೆ ಬೀಳುತಿತ್ತು. ಸದ್ಯ ಚಾಲ್ತಿಯಲ್ಲಿರುವ ಭಾರತ್ ಜೋಡೊ ಯಾತ್ರೆ ಕೂಡ ಯಾವುದೇ ಸಾರ್ವಜನಿಕ ಹಿತಾಸಕ್ತಿ, ಸದುದ್ದೇಶ ಹೊಂದಿಲ್ಲ ಎಂಬುದು ರಾಹುಲ್ ಗಾಂಧಿ ತಮ್ಮ ನಡೆಯಿಂದ ಪದೇ ಪದೆ ಸಾಬೀತುಪಡಿಸುತ್ತಿದ್ದಾರೆ.
ಭಾರತ್ ಜೋಡೊ ಯಾತ್ರೆಯಿಂದಾಗಿ ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ಪಕ್ಷದ ಒಂದು ಹುಲ್ಲು ಕಡ್ಡಿಯನ್ನೂ ಅಲುಗಾಡಿ ಸಲು ಕಾಂಗ್ರೆಸ್‌ನಿಂದ ಈವರೆಗೂ ಸಾಧ್ಯವಾಗಿಲ್ಲ. ಉತ್ತರಪ್ರದೇಶದಲ್ಲಿ ತಮ್ಮವರೇ ಆದ ಮಹಾಘಟಬಂಧನದ ಮಂಚೂಣಿ ಯಲ್ಲಿದ್ದ ಪ್ರಮುಖ ಪಕ್ಷಗಳಾದ ಎಸ್‌ಪಿ ಹಾಗೂ ಬಿಎಸ್‌ಪಿ ನಾಯಕರೇ ರಾಹುಲ್ ಗಾಂಧಿ ಯಾತ್ರೆಯಲ್ಲಿ ಭಾಗವಹಿಸದೆ ಕೈ ಕೊಟ್ಟು ಅಂತರ ಕಾಪಾಡಿಕೊಂಡಿರುವುದು ಸೋಜಿಗ.
ಸರ್ದಾರ್ ವಲ್ಲಭಭಾಯಿ ಪಟೇಲರ ದೂರದೃಷ್ಟಿ ಹಾಗೂ ಅವರಲ್ಲಿದ್ದ ರಾಷ್ಟ್ರೀಯತೆ ಮತ್ತು ಅಖಂಡ ಭಾರತದ ಆಲೋಚನೆಯ ಪ್ರಭಾವದಿಂದಾಗಿ ಹೈದಾರಾಬಾದ್ ಪ್ರದೇಶವನ್ನು ನಿಜಾಮರಿಂದ ಕಿತ್ತುಕೊಂಡು ಭಾರತದ ಭೂಪಟಕ್ಕೆ ಸೇರಿಸುವ ಮೂಲಕ ೧೯೪೮ರ ಭಾರತ ಜೋಡೊ ನಾಂದಿ ಹಾಡಿ ಯಶಸ್ವೀ ನಾಯಕರಾಗಿ ಹೊರಹೊಮ್ಮಿದ್ದರು. ಬಹುಶಃ ಪಟೇಲರಿದ್ದಿದ್ದರೆ ಕಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಮಾಡುವ ಪ್ರಸಂಗ ಮೋದಿ ಅವರಿಗೆ ಬರುತ್ತಲೇ ಇರಲಿಲ್ಲ.
ಅದಾಗ್ಯೂ, ಇತಿಹಾಸದದ ಪ್ರಮಾದ ತಿದ್ದಿಕೊಳ್ಳಲು ಮೋದಿ ಅವರಿಗೆ ಸಿಕ್ಕ ಸುವರ್ಣಾವಕಾಶವನ್ನು ಬಳಸಿಕೊಂಡಿದ್ದಾರೆ. ಕಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಸಂವಿಧಾನದ ೩೭೦ನೇ ವಿಽಯನ್ನು ಕಿತ್ತೊಗೆಯುವ ಮೂಲಕ ನಿಜವಾದ ಭಾರತ್ ಜೋಡೊ ಆಂದೋಲನವನ್ನು ಬಿಜೆಪಿ ಆರಂಭಿಸಿದೆ. ಇದಕ್ಕೆ ಭಾರತೀಯರಾದ ನಾವೆಲ್ಲರೂ ಹೆಮ್ಮೆಪಡಲೇಬೇಕು. ವಾಸ್ತವ ಹೀಗಿರುವಾಗ ರಾಹುಲ್ ಗಾಂಧಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಶ್ಮೀರಕ್ಕೆ ಮತ್ತೊಮ್ಮೆ ರಾಜ್ಯದ ವಿಶೇಷ ಸ್ಥಾನ ನೀಡುವು ದಾಗಿ ಹೇಳಿಕೊಂಡಿದ್ದಾರೆ.
ಈ ಮೂಲಕ ತಾವು ಮಾಡುತ್ತಿರುವ ಭಾರತ ಜೋಡೊ  ಯಾತ್ರೆಯ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು ‘ಭಾರತ್ತೋಡೊ’ ಯಾತ್ರೆಯಾಗಿದೆ. ವಿಪರ್ಯಾಸ ಎಂದರೆ ನಾವು ಯಾರನ್ನು ಬಹಳ ಜ್ಞಾನಿಗಳೆಂದು ಹೊಗಳಿದ್ದೇವೋ ಅಂತಹ ಆರ್‌ಬಿಐ ಗೌವರ್ನರ್ ಆಗಿದ್ದ ರಘುರಾಮನ್ ರಾಜನ್, ರಾ ಸಂಸ್ಥೆಯ ಮಾಜಿ ಮುಖ್ಯಸ್ಥರು ಈ ಯಾತ್ರೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್‌ನ ಋಣ ತೀರಿಸುವ ತವಕದಲ್ಲಿ ತಮ್ಮ ದಡ್ಡತನ ಪ್ರದರ್ಶಿಸಿಕೊಂಡಿದ್ದಾರೆ.
ಸಂಪೂರ್ಣ ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷರು ನಾಮ ಕೆ ವಾಸ್ಥೆ ಎಂಬುದನ್ನು ಈ ಯಾತ್ರೆಯಿಂದ ಗಾಂಧಿ ಕುಟುಂಬ ಮತ್ತೊಮ್ಮೆ ಸಾಬೀತುಪಡಿಸಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರು ಎಂಬುದನ್ನು ರಾಹುಲ್ ಗಾಂಧಿಗೆ ಆಗಾಗ್ಗೆ ಜ್ಞಾಪಿಸಬೇಕಾಗಿದೆ. ಪ್ರಸ್ತುತ ರಾಹುಲ್ ಗಾಂಧಿ ಅವರನ್ನು ಗಮನಿಸಿದರೆ ಅವರಿನ್ನೂ ಎಐಸಿಸಿಯಲ್ಲಿ ಅನುಭವಿಸಿದ ಅಧಿಕಾರದ ಗುಂಗಿನಿಂದ ಹೊರಬಂದಿಲ್ಲ ಎಂಬಂತೆ ಭಾಸವಾಗುತ್ತಿದೆ. ಗಾಂಧಿ ಕುಟುಂಬದವರು ಆ ಗುಂಗಿನಿಂದ ಹೊರಬರಬೇಕು ಎಂದುನಿರೀಕ್ಷಿಸುವುದು ತಪ್ಪೇ ಬಿಡಿ. ಆದರೆ, ಖರ್ಗೆ ಅಧ್ಯಕ್ಷರಾಗುವ ಮೊದಲಿದ್ದ ಸ್ವಾತಂತ್ರ್ಯ ಈಗ ಇಲ್ಲವಾಗಿದೆ ಎಂಬುದು ಈಪಾದಯಾತ್ರೆಯಿಂದ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಆದರೂ ಖರ್ಗೆ ಒಬ್ಬ ವಿಷಕಂಠನಂತೆ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದಾರೆ. ಇದೊಂದು ರೀತಿ ಹೆಬ್ಬೆಟ್ಟು ರಾಜಕಾರಣಿಗಳುನಡೆಸುವ ಶಾಲೆಯಲ್ಲಿ ಪಿಎಚ್‌ಡಿ ಪಡೆದವನೇ ಪ್ರಾಂಶುಪಾಲನಿದ್ದಂತೆ. ಎಲ್ಲ ನಿರ್ಧಾರ ಹೆಬ್ಬೆಟ್ಟು ಹೇಳಿದಂತೆ ಆಗಬೇಕೇ ಹೊರತು ಪಿಎಚ್‌ಡಿ ಪಡೆದ ಪ್ರಾಂಶುಪಾಲ ಬರೀ ತಲೆ ಅಡಿಸಬೇಕಿದೆ. ಇಂದಿನ ಪಾದಯಾತ್ರೆಗಳು ಕೆಲವರ ತೆವಲುತೀರಿಸಿಕೊಳ್ಳುವ ಉಮ್ಮೀದು ಹೊಂದಿದ್ದರೆ ಮತ್ತೆ ಕೆಲವರದ್ದು ತಾವೊಬ್ಬ ಪಕ್ಷಾತೀತ ನಾಯಕನೆಂದು ಬಿಂಬಿಸುವಸ್ವಹಿತಾ ಸಕ್ತಿಯಿಂದಲೇ ಕೂಡಿವೆ.
ಸ್ವತಂತ್ರ ಭಾರತದ ಪಕ್ಷವಾದ ಕಾಂಗ್ರೆಸ್ ಪಾದಯಾತ್ರೆ ಎಂದರೆ ಸಾಗರೋಪಾದಿಯಲ್ಲಿ ಜನ ಸೇರಬೇಕು. ಆದರೆ ಈಗಿನ ಪಾದಯಾತ್ರೆ ಗಮನಿಸಿದರೆ ಪಂಚಾಯಿತಿ ಸದಸ್ಯನ ಮಕ್ಕಳ ಮದುವೆಗೆ ಸೇರುವ ಅರ್ಧದಷ್ಟು ಜನರೂ ಕಾಣುತ್ತಿಲ್ಲ. ಈ ಪಾದಯಾತ್ರೆಗಳೆ ಜನಾನುಕೂಲ ವಾತಾವರಣ ಸೃಷ್ಟಿಸುವಲ್ಲಿ ವಿಫಲವಾಗಿವೆ. ಸ್ವಾರ್ಥ ಉದ್ದೇಶದಿಂದ ಕೂಡಿದ ಕಾರ್ಯಕ್ರಮಗಳು ಮಾತ್ರ ಈ ರೀತಿಯ ಹಿನ್ನೆಡೆ ಅನುಭವಿಸುತ್ತವೆ.
ಇಂತಹ ಬೂಟಾಟಿಕೆ ಪಾದಯಾತ್ರೆಗಳು ಉಳಿದ ಪಕ್ಷಗಳಿಗೆ ಪಾಠವಾಗಬೇಕು. ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಪಾದಯಾತ್ರೆಯಿಂದಾಗಬೇಕಿತ್ತು. ಆದರೆ ರಾಹುಲ್ ಗಾಂಽ ಪಾದಯಾತ್ರೆ ಆಡಳಿತಾರೂಢ ಸರಕಾರಕ್ಕೆ ಒಬ್ಬಟ್ಟಾಗಿ ಅದರ ಸವಿಯನ್ನು ಸಂತೋಷದಿಂದ ಅನುಭವಿಸುವಂತೆ ಮಾಡಿದೆ. ಸಂವೇದನೆ ಕಳೆದುಕೊಂಡಿರುವ ಪಾದಯಾತ್ರೆಗೆ ತನ್ನ ಹಳೆಯ ಹುರುಪು ಮತ್ತೆ ಮೂಡಲಿ. ಅಂತಹ ನಾಯಕನ ಉದಯವಾಗಲಿ, ಜನ ಹಿತಾಸಕ್ತಿ ಕಾಯುವಂತಹ ವಿಷಯಾಧಾರಿತ ಯಾತ್ರೆಗಳ ಮೂಲಕ ಭಾರತ ಮತ್ತಷ್ಟು ಬಲಿಷ್ಠವಾಗಲಿ. - 
