ಹೃದಯಾಘಾತ ಎಂದರೇನು ? ಏಕೆ ? ಹೇಗೆ ?
ಸ್ವಾಸ್ಥ್ಯ ಸಂಪದ
Yoganna55@.
ಈ ಹಿಂದೆ ೪೫-೫೦ ವರ್ಷಗಳ ವಯಸ್ಕ ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಹೃದಯಾಘಾತ ಇಂದು ಯುವಕ ರಲ್ಲೂ ಮತ್ತು ಸೀಯರಲ್ಲೂ ಹೆಚ್ಚಾಗಿ ಕಾಣಿಸಿಕೊಂಡು ಬಲಿತೆಗೆದುಕೊಳ್ಳುತ್ತಿರುವುದು ಆತಂಕದ ಸಂಗತಿ. ಕರೋನಾ ದ ನಂತರ. ಕೋವಿಡ್ ಲಸಿಕೆ ತೆಗೆದುಕೊಂಡವರಲ್ಲಿ ಹೃದಯಾಘಾತ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
ಹೃದಯಾಘಾತ(ಹಾರ್ಟ್‌ಅಟ್ಯಾಕ್) ಎಂದರೇನು? ಹೃದಯಕ್ಕೆ ಆಘಾತದಂತೆ ದಿಢೀರನೆ ತಗುಲಿ ಅದರ ಕಾರ್ಯದಕ್ಷತೆಯನ್ನು ಕುಗ್ಗಿಸಿ ಹೃದಯದ ವೈಫಲ್ಯತೆಯನ್ನುಂಟು ಮಾಡುವುದು ಅಥವಾ ಹೃದಯದ ಕಾರ್ಯವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ದಿಢೀರನೆ ಸಾವನ್ನುಂಟುಮಾಡುವ ಕಾಯಿಲೆಯನ್ನು ‘ಹೃದಯಾಘಾತ’(ಹಾರ್ಟ್ ಅಟ್ಯಾಕ್) ಎನ್ನಲಾಗುತ್ತದೆ. ಹೃದಯಸ್ನಾಯು-ವಿಗೆ ಶುದ್ಧ ರಕ್ತವನ್ನು ಸರಬರಾಜು ಮಾಡುವ ಹೃತ್ ಶುದ್ಧರಕ್ತನಾಳಗಳಲ್ಲಿ ರಕ್ತಪರಿಚಲನೆಗೆ ಅಡಚಣೆಯುಂಟಾಗಿ ಹೃದಯ ಸ್ನಾಯುವಿಗೆ ರಕ್ತ ಪೂರೈಕೆ ದಿಢೀರನೆ ಸ್ಥಗಿತಗೊಂಡು ಸಂಬಂಧಿಸಿದ ಹೃದಯಸ್ನಾಯು ವಿನ ಭಾಗದ ಸಾವುಂಟಾಗಿ ಈ ಕಾಯಿಲೆ ಯುಂಟಾಗುತ್ತದೆ. ನೂರಾರು ಬಗೆಯ ಹೃದ್ರೋಗ ಗಳಿದ್ದರೂ ಪ್ರಪಂಚಾದ್ಯಂತ ವ್ಯಾಪಕವಾಗಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿ ಕೊಳ್ಳುತ್ತಿರುವ ಅಗ್ರಮಾನ್ಯ ಕಾಯಿಲೆಯಿದು.
ಪ್ರಪಂಚದಲ್ಲಿ ಪ್ರತಿವರ್ಷ ಲಕ್ಷಾಂತರ ಜನರು ಹೃದಯಾಘಾತಕ್ಕೀಡಾಗುತ್ತಿದ್ದು, ಭಾರತದೇಶದಲ್ಲಿ ಜನಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇ ೧.೬ – ೭.೪ ಮತ್ತು ನಗರ ಪ್ರದೇಶದಲ್ಲಿ ಶೇ ೧-೧೩.೨ರಷ್ಟು ಜನ ಹೃದಯಾಘಾತಕ್ಕೀಡಾಗುತ್ತಿದ್ದು, ಹೃದಯಾ ಘಾತಕ್ಕೀಡಾದ ವರಲ್ಲಿ ಶೇ ೧೭ರಷ್ಟು ಹೃದಯಾಘಾತಿಗಳು ಸಾವನ್ನಪ್ಪುತ್ತಿದ್ದಾರೆ. ಪ್ರಪಂಚಾದ್ಯಂತ ಮಾರಣಾಂತಿಕ ವಾಗಬಲ್ಲ ಕಾಯಿಲೆಗಳಾದ ಕ್ಯಾನ್ಸರ್, ಸಕ್ಕರೆಕಾಯಿಲೆ, ಏರುರಕ್ತ ಒತ್ತಡ, ಸ್ಟ್ರೋಕ್, ಬೇರೂರಿದ ಶ್ವಾಸಕೋಶದ ಕಾಯಿಲೆಗಳು, ಅಸ್ತಮಾ, ಮನೋರೋಗಗಳು, ಆಲ್‌ಝೀಮರನ ಕಾಯಿಲೆ, ರಸ್ತೆ ಅಪಘಾತಗಳು ಮತ್ತು ಹೃದಯಾಘಾತ ಇವುಗಳಿಂದ ಸಾವನ್ನಪ್ಪುತ್ತಿರು ವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.
ಪ್ರಪಂಚಾದ್ಯಂತ ಉಂಟಾಗುತ್ತಿರುವ ಸಾವುಗಳಲ್ಲಿ ಶೇ.೭೪ರಷ್ಟು ಸಾವುಗಳಿಗೆ ಈ ಕಾಯಿಲೆಗಳೇ ಕಾರಣಗಳಾಗಿದ್ದು, ಇವುಗಳ ಗಂಭೀರತೆಗೆ ಹಿಡಿದ ಕೈಗನ್ನಡಿ. ಭಾರತದಲ್ಲುಂಟಾಗುತ್ತಿರುವ ಸಾವು ಗಳಲ್ಲಿ ಶೇ ೧೦ರಷ್ಟು ಸಾವುಗಳು ಹೃದಯಾಘಾತ ದಿಂದಾಗುತ್ತಿದ್ದು, ದಿನೇ ದಿನೇ ಇದರ ಪ್ರಮಾಣ ಏರಿಕೆಯಾಗುತ್ತಿರುವುದು ಸಮುದಾಯಕ್ಕೆ ಅದರಲ್ಲೂ ವೈದ್ಯಕೀಯ ಪ್ರಪಂಚಕ್ಕೆ ದಿಗ್ಭ್ರಾಂತಿಯನ್ನುಂಟುಮಾಡಿದೆ. ಈ ಹಿಂದೆ ೪೫-೫೦ ವರ್ಷಗಳ ವಯಸ್ಕ ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಹೃದಯಾಘಾತ ಇಂದು ಆ ಗಡಿಯನ್ನು ದಾಟಿ ಯುವಕರಲ್ಲೂ ಮತ್ತು ಸ್ತ್ರೀಯರಲ್ಲೂ ಹೆಚ್ಚಾಗಿ ಕಾಣಿಸಿಕೊಂಡು ಜೀವಗಳನ್ನು ಬಲಿತೆಗೆದುಕೊಳ್ಳುತ್ತಿರುವುದು ಆತಂಕದ ಸಂಗತಿಯಾಗಿದೆ.
ಕರೋನಾ ಎರಗಿದ ನಂತರ ಮತ್ತು ಕೋವಿಡ್ ಲಸಿಕೆ ತೆಗೆದುಕೊಂಡವರಲ್ಲಿ ಹೃದಯಾಘಾತ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಹೊಸ ಹೊಸ ಕಾರಣಕಾರಕ ಅಂಶಗಳ ಸಂದೇಹಕ್ಕೆ ಪುಷ್ಠಿ ನೀಡಿದೆ. ಹೃದಯಾಘಾತ, ಪ್ರಾಥಮಿಕವಾಗಿಯೇ ತಡೆಗಟ್ಟಬಲ್ಲ, ಸಂಭವಿಸಿದರೂ ಸಕಾಲಿಕ ಸೂಕ್ತ ಚಿಕಿತ್ಸೆಯಿಂದ ಪಾರಾಗಬಲ್ಲ ಮತ್ತು ಒಮ್ಮೆ ಸಂಭವಿಸಿದರೂ ಮತ್ತೊಮ್ಮೆ ಆಗದಂತೆತಡೆಗಟ್ಟಬಲ್ಲ ದೇಹಸ್ನೇಹಿ ಕಾಯಿಲೆಯಾದುದರಿಂದ ಇದರ ಬಗ್ಗೆ ಪ್ರತಿಯೊಬ್ಬರಿಗೂ ಅರಿವುಂಟಾಗುವುದು ಅತ್ಯವಶ್ಯಕ.
ಈ ಹಿನ್ನೆಲೆಯಲ್ಲಿ ಹೃದಯದ ಪ್ರಾಮುಖ್ಯತೆ, ಅದರ ರಚನೆ, ಕಾರ್ಯ, ಹೃದಯಾಘಾತ ಎಂದರೇನು?, ವಿಧಗಳು, ಸಂಭವಿಸಬಹು ದಾದ ಅವಘಡಗಳು, ಪ್ರಚೋದಕ ಅಂಶಗಳು ಮತ್ತು ಕಾರಣಗಳು, ರೋಗ ಪತ್ತೆ ವಿಧಾನಗಳು, ಚಿಕಿತ್ಸೆ ಮತ್ತು ತಡೆಗಟ್ಟುವ ವಿಧಾನಗಳು ಇವುಗಳ ಬಗ್ಗೆ ಬೆಳಕು ಚೆಲ್ಲುವ ಲೇಖನವಿದು ರಕ್ತ ಕುಂದಿಕೆ ಹೃದ್ರೋಗ ಎಂದರೇನು? ಹೃದ್ರೋಗಗಳಲ್ಲಿ ಹೃದಯ ಸ್ನಾಯುವಿಗೆ ರಕ್ತಪರಿಚಲನೆ ಕಡಿಮೆಯಾಗುವ, ಹೃದಯದ ರಕ್ತ ಕುಂದಿಕೆ ರೋಗ(ಇಸ್ಕೀಮಿಕ್ ಹಾರ್ಟ್ ಡಿಸೀಸ್) ಅಗ್ರಗಣ್ಯ ವಾಗಿದ್ದು, ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವ ಹೃದ್ರೋಗ.
ಹೃದಯದ ಶುದ್ಧ ರಕ್ತನಾಳಗಳಲ್ಲಿ ಅಡಚಣೆಯ ತೀವ್ರತೆಗನುಗುಣವಾಗಿ ಹೃದಯಸ್ನಾಯುವಿನ ಭಾಗಕ್ಕೆ ರಕ್ತ ಹರಿಕೆ ಕಡಿಮೆ ಯಾಗಬಹುದು ಅಥವಾ ಸಂಪೂರ್ಣವಾಗಿ ಸ್ಥಗಿತವಾಗಬಹುದು. ಹೃದಯ ಸ್ನಾಯುವಿಗೆ ರಕ್ತ ಕಡಿಮೆಯಾಗುವುದನ್ನುಹೃದಯದ ರಕ್ತ ಕುಂದಿಕೆ(ಕಾರ್ಡಿಯಾಕ್ ಇಸ್ಕೀಮಿಯ) ಎಂದು ಮತ್ತು ಹೃದಯ ಸ್ನಾಯುವಿಗೆ ಸಂಪೂರ್ಣವಾಗಿ ರಕ್ತ ಸ್ಥಗಿತವಾದಲ್ಲಿ ಹೃದಯಸ್ನಾಯು ಸಾವಿಗೀಡಾಗುತ್ತದೆ. ಇದನ್ನು ‘ಹೃದಯಸ್ನಾಯುವಿನ ನಿರಕ್ತ ಸಾವು’ (ಮಯೋ ಕಾರ್ಡಿಯಲ್ ಇನ್-ಕ್ಷನ್- ಎಂ.ಐ.) ಎನ್ನಲಾಗುತ್ತದೆ. ಇದು ಹೃದಯದ ರಕ್ತಕುಂದಿಕೆ ಕಾಯಿಲೆಯ ಅಂತಿಮಹಂತ.
ಹೃದಯದ ರಚನೆ ಮತ್ತು ಕಾರ್ಯ ರಚನೆ:ಹೃದಯಾಘಾತವನ್ನು ಅರ್ಥಮಾಡಿಕೊಳ್ಳಲು ಹೃದಯದ ರಚನೆ ಮತ್ತು ಕಾರ್ಯಗಳನ್ನು ಅರಿತುಕೊಳ್ಳುವುದು ಅತ್ಯವಶ್ಯಕ. ಹೃದಯ ಶಂಖಾಕೃತಿಯಂತಿದ್ದು, ಬಲ ಮತ್ತು ಎಡಭಾಗಗಳ ವಿಭಜಿತ ೪ ಗುಡಿ ಗಳನ್ನೊಳಗೊಂಡ ಪಂಪಿನಂತಹ ರಚನೆ. ಮೇಲುಭಾಗದಲ್ಲಿ ೨ ಗುಡಿಗಳು (ಹೃತ್ಕರ್ಣಗಳು) ಮತ್ತು ಅನುಕ್ರಮವಾಗಿ ಜೋಡಣೆಯಾಗುವ ಕೆಳಭಾಗದ ೨ಗುಡಿಗಳಿವೆ (ಹೃತ್ಕುಕ್ಷಿಗಳು). ಹೃದಯವು, ಮೇಲು ಪದರ ಪೆರಿಕಾರ್ಡಿಯಂ, ಮಧ್ಯಪದರ ಮಯೋಕಾರ್ಡಿಯಂ (ಹೃದಯಸ್ನಾಯು)ಮತ್ತು ಕೆಳಪದರ ಎಂಡೋಕಾರ್ಡಿಯಂ, ಕವಾಟಗಳು (ವಾಲ್ವ್ಸ್) ಮತ್ತವುಗಳ ಉಪಾಂಗಗಳು (ಆಪರೇ ಟರ‍್ಸ್) ಹಾಗೂ ಹೃದಯದ ಮಿಡಿತಾeಯನ್ನು ಉತ್ಪಾದಿಸಿ ಹೃದಯದ ವಿವಿಧ ಭಾಗಗಳಿಗೆ ಅದನ್ನು ರವಾನಿಸುವ ಹೃದಯದ ರವಾನಕ ವ್ಯವಸ್ಥೆ (ಕಂಡಕ್ಟಿಂಗ್ ಸಿಸ್ಟಮ್ ಆಫ್ ಹಾರ್ಟ್) ಮತ್ತು ಹೃದಯದ ರಕ್ತನಾಳ ವ್ಯವಸ್ಥೆ ಇವುಗಳಿಂದರಚಿತವಾಗಿದೆ. ಈ ಯಾವುದಾದರೊಂದು ಭಾಗಕ್ಕೆ ರಕ್ತ ಸ್ಥಗಿತವಾಗಿ, ಆ ರಚನೆಯ ಸಾವುಂಟಾಗಿ ಹೃದಯಾಘಾತ ಸಂಭವಿಸಬಹುದು.
ಮಯೋ ಕಾರ್ಡಿಯಂ ಹೃದಯದ ಪ್ರಮುಖ ಭಾಗವಾಗಿದ್ದು, ವಿಶಿಷ್ಟ ಸ್ನಾಯುವಿನಿಂದ ರಚಿತವಾಗಿದ್ದು, ಹೃದಯದ ಗಾತ್ರ, ದಪ್ಪ, ಆಕಾರ ಮತ್ತು ಮಿಡಿತಕ್ಕೆ ಇದೇ ಪ್ರಮುಖ ಕಾರಣ. ಹೃದಯದ ಕಾರ್ಯ ನಿರ್ವಹಣೆ ಮಯೋಕಾರ್ಡಿಯಂನ ಸಂಕುಚಿತಮತ್ತು ವಿಕಾಸದಿಂದಾಗುವುದರಿಂದ ಹೃದಯದ ಅತ್ಯಂತ ಪ್ರಮುಖವಾದ ಭಾಗವಿದು. ಸಾಮಾನ್ಯವಾಗಿ ಹೃದಯಾಘಾತ ಮಯೋಕಾರ್ಡಿಯಂಗೆ ವ್ಯಾಪಕವಾಗಿ ತಗಲುತ್ತದೆ.
ಹೃದಯದ ಕಾರ್ಯ:ಎಡಭಾಗದ ಹೃದಯ ಶ್ವಾಸಕೋಶಗಳಿಂದ ಶುದ್ಧೀಕರಿಸಿದ ರಕ್ತವನ್ನು ಪಡೆದು ಅದಕ್ಕೆ ಜೋಡಣೆ ಯಾಗಿರುವ ಶುದ್ಧರಕ್ತ ನಾಳ ವ್ಯವಸ್ಥೆಯ ಮೂಲಕ ಆಹಾರಾಂಶಗಳು ಮತ್ತು ಆಮ್ಲಜನಕವನ್ನು ದೇಹದ ಎಲ್ಲ ಭಾಗಗಳಿಗೂ ಶುದ್ಧರಕ್ತವನ್ನು ಪರಿಚಲಿಸಿ, ಅಂಗಾಂಗ ಗಳಲ್ಲಿ ಉತ್ಪತ್ತಿಯಾದ ಇಂಗಾಲದ ಡೈಆಕ್ಸೈಡ್ ಮತ್ತಿತರ ವಿಷಮ ವಸ್ತುಗಳನ್ನು ಅಶುದ್ಧ ರಕ್ತನಾಳ ವ್ಯವಸ್ಥೆಯ ಮೂಲಕ ಅಶುದ್ಧರಕ್ತವನ್ನು ಬಲ ಭಾಗದ ಹೃದಯದ ಕೊಠಡಿಗಳಿಗೆ ವಾಪಸ್ ಪಡೆದು, ಶ್ವಾಸಕೋಶಗಳಿಗೆ ಪರಿಚಲಿಸಿ ಅಲ್ಲಿ ಶುದ್ಧೀಕರಿಸಿ, ಶುದ್ಧೀಕರಣಗೊಂಡ ರಕ್ತವನ್ನು ಎಡಭಾಗದ ಹೃದಯದ ಗುಡಿಗಳಿಗೆ ವಾಪಸ್ ಪಡೆದು, ಪುನಃ ಶುದ್ಧರಕ್ತನಾಳ ವ್ಯವಸ್ಥೆಯ ಮೂಲಕ ಶುದ್ಧರಕ್ತವನ್ನು ಪುನರ್ ಪರಿಚಲಿಸುವುದು ಹೃದಯದ ಪ್ರಮುಖ ಕಾರ್ಯ.
ಹೃದಯದ ಮೇಲು ೨ಗುಡಿಗಳನ್ನು ಬಲ ಮತ್ತು ಎಡ ಹೃತ್ಕರ್ಣ(ಏಟ್ರಿಯಾ) ಎಂದೂ ಕರೆಯಲಾಗಿದ್ದು, ಇವೆರಡೂ ಹೃತ್ಕರ್ಣ ನಡುವಿನ ವಿಭಜಕದಿಂದ (ಇಂಟರ್ ಏಟ್ರಿಯಲ್ ಸೆಪ್ಟಮ್) ಬೇರ್ಪಟ್ಟಿವೆ.ಹೃದಯದ ಕೆಳ ೨ ಗುಡಿಗಳನ್ನು ಬಲ ಮತ್ತು ಎಡಹೃತ್ಕುಕ್ಷಿಗಳೆಂದೂ ಕರೆಯಲಾಗಿದ್ದು, ಇವೆರಡನ್ನೂ ಹೃತ್ಕುಕ್ಷಿ ನಡುವಿನ ವಿಭಜಕ(ಇಂಟರ್ ವೆಂಟಿಕ್ಯುಲಾರ್ ಸೆಪ್ಟಮ್) ಬೇರ್ಪಡಿಸಿದೆ. ಎಡ ಹೃತ್ಕರ್ಣ ಎಡ ಹೃತ್ಕುಕ್ಷಿಯೊಡನೆಯೂ ಜೋಡಿತವಾಗಿದ್ದು, ಇವೆರಡರ ನಡುವೆ ರಕ್ತ ಹರಿಯುವಿಕೆಯನ್ನು ಕೆಳಮುಖನಾಗಿ ನಿಯಂತ್ರಿಸುವ ಮೈಟ್ರಲ್ ಕವಾಟ(ಮೈಟ್ರಲ್ ವಾಲ್ವ್) ಇದೆ.
ಎಡ ಹೃತ್ಕುಕ್ಷಿಯ ಮೇಲುಭಾಗಕ್ಕೆ ಅಯೋರ್ಟಾ ಶುದ್ಧರಕ್ತನಾಳ ಜೋಡಣೆಯಾಗಿದ್ದು, ಇವೆರಡರ ನಡುವೆ ಇರುವ ಅಯೋರ್ಟಾಕವಾಟ (ಅಯೋರ್ಟಿಕ್ ವಾಲ್ವ್) ಎಡ ಹೃತ್ಕುಕ್ಷಿಯಿಂದ ಶುದ್ಧರಕ್ತ ಅಯೋರ್ಟಾ ಶುದ್ಧರಕ್ತನಾಳಕ್ಕೆ ಮೇಲ್ಮುಖನಾಗಿ ಹರಿಯುವಂತೆ ನಿಯಂತ್ರಿಸುತ್ತದೆ. ಬಲ ಹೃತ್ಕರ್ಣ ಬಲ ಹೃತ್ಕುಕ್ಷಿಯೊಡನೆ ಜೋಡಣೆಯಾಗಿದ್ದು, ಇವೆರಡರ ನಡುವೆಟ್ರೈಕಸ್‌ಪಿಡ್ ಕವಾಟವಿದ್ದು (ಟ್ರೈಕಸ್‌ಪಿಡ್ ವಾಲ್ವ್), ಇವೆರಡರ ನಡುವೆ ರಕ್ತ ಹರಿಯುವಿಕೆಯನ್ನು ಕೆಳಮುಖನಾಗಿ ಅದು ನಿಯಂತ್ರಿಸುತ್ತದೆ.
ಬಲ ಹೃತ್ಕುಕ್ಷಿಯಿಂದ ಉದ್ಭವಿಸುವ ಶ್ವಾಸ ಶುದ್ಧ ರಕ್ತನಾಳ (ಪಲ್ಮನರಿ ಆರ್ಟರಿ) ಬಲ ಹೃತ್ಕುಕ್ಷಿಯಿಂದ ಅಶುದ್ಧ ರಕ್ತವನ್ನು ಶ್ವಾಸಕೋಶಗಳಿಗೆ ಶುದ್ಧೀಕರಣಕ್ಕಾಗಿ ಒಯ್ಯುತ್ತದೆ. ಬಲ ಹೃತ್ಕುಕ್ಷಿ ಮತ್ತು ಶ್ವಾಸ ಶುದ್ಧರಕ್ತನಾಳದ ನಡುವೆ ಇರುವ ಪಲ್ಮನರಿ ಕವಾಟ(ಪಲ್ಮನರಿ ವಾಲ್ವ್) ಬಲ ಹೃತ್ಕುಕ್ಷಿಯಿಂದ ರಕ್ತ ಮೇಲ್ಮುಖನಾಗಿ ಹರಿಯುವಂತೆ ನಿಯಂತ್ರಿಸುತ್ತದೆ. ಹೃದಯದ ಕಾರ್ಯ ಕುಗ್ಗಿಕೆ (ಸಿಸ್ಟೋಲೆ) ಮತ್ತು ಹಿಗ್ಗಿಕೆ(ಡಯಾಸ್ಟೋಲೆ) ಕಾರ್ಯಗಳಿಂದ ಕೂಡಿದ್ದು, ಹಿಗ್ಗಿಕಾ ಅವಧಿಯಲ್ಲಿ ಕೊಠಡಿಗಳು ರಕ್ತವನ್ನು ಸ್ವೀಕರಿಸುತ್ತವೆ ಮತ್ತು ಕುಗ್ಗಿಕಾ ಅವಧಿಯಲ್ಲಿ ರಕ್ತವನ್ನು ಅವುಗಳಿಂದ ಹೊರಚಿಮ್ಮಿಸುತ್ತವೆ.
ಹೃದಯ ಮಿಡಿತಾಜ್ಞೆ ಉತ್ಪಾದಕ ಮತ್ತು ರವಾನಕ ವ್ಯವಸ್ಥೆ (ಕಂಡಕ್ಟಿಂಗ್ ಸಿಸ್ಟಮ್ ಆಫ್ ಹಾರ್ಟ್): ಹೃದಯ ತನ್ನಲ್ಲಿಯೇ ವಿದ್ಯುತ್ ಸ್ವರೂಪದ ಹೃದಯದ ಮಿಡಿತಾಜ್ಞೆ (ಕಾರ್ಡಿಯಾಕ್ ಇಂಪಲ್ಸ್) ಯನ್ನು ಉತ್ಪಾದಿಸಿ ಅದನ್ನು ಹೃದಯ ಸ್ನಾಯುವಿಗೆ ರವಾನಿಸಿ ಹೃದಯದ ಸಂಕುಚಿತ ಮತ್ತು ಸಡಿಲಿಕ ಕ್ರಿಯೆಗಳನ್ನು ನಿರ್ವಹಿಸುತ್ತದೆ. ಇದಕ್ಕಾಗಿಯೇ ಹೃದಯದಲ್ಲಿ ಈ ವಿಶಿಷ್ಟ ವ್ಯವಸ್ಥೆಯಿದೆ. ಬಲ ಹೃತ್ಕರ್ಣದಲ್ಲಿರುವ ಹೃತ್ಕರ್ಣ -ಸೈನಸ್.
ಹೃದಯ ಮಿಡಿತಾಜ್ಞೆ ಉತ್ಪಾದಕ ಮತ್ತು ರವಾನಕ ವ್ಯವಸ್ಥೆಯ ಚಿತ್ರ ಗೆಡ್ಡೆ (ಎಸ್ ಎ ನೋಡ್) ಆರೋಗ್ಯಸ್ಥರಲ್ಲಿ ಹೃದಯದ ನಿಯಂತ್ರಕ(ಪೇಸ್ ಮೇಕರ್) ವಾಗಿದ್ದು, ಇಲ್ಲಿ ಹೃದಯದ ಮಿಡಿತಾಜ್ಞೆ ಗಳು ಉತ್ಪತ್ತಿಯಾಗಿ ಹೃತ್ಕರ್ಣ – ಹೃತ್ಕುಕ್ಷಿ ಗೆಡ್ಡೆಗಳನಡುವೆ ಇರುವ ಕಟ್ಟುಗಳ ಮೂಲಕ ಹೃತ್ಕರ್ಣ ಮತ್ತು ಹೃತ್ಕುಕ್ಷಿಗಳು ಸಂಧಿಸುವ ಸ್ಥಳದಲ್ಲಿರುವ ಹೃತ್ಕರ್ಣ-ಹೃತ್ಕುಕ್ಷಿ ಗೆಡ್ಡೆಗಳಿಗೆ (ಏಟ್ರಿಯೋ ವೆಂಟ್ರಿಕ್ಯುಲಾಲ್ ನೋಡ್-ಏವಿ ನೋಡ್) ರವಾನೆಯಾಗುತ್ತವೆ.
ಅಲ್ಲಿಂದ, ಹೃತ್ಕರ್ಣ, ಹೃತ್ಕುಕ್ಷಿ ಗೆಡ್ಡೆಯ ತಳಭಾಗದಿಂದ ಉದ್ಭವಿಸುವ ಹಿಸ್ಸನ ಕಟ್ಟು(ಬಂಡಲ್ ಆಫ್ ಹಿಸ್) ಮೂಲಕ ಹಾದು, ಹಿಸ್ಸನ ಕಟ್ಟು ಎಡ ಮತ್ತು ಬಲ ಕಟ್ಟುಗಳಾಗಿ ದ್ವಿಭಜನೆಯಾಗಿರುವ ಕಟ್ಟುಗಳ ಮೂಲಕ ಹಾದು ತದನಂತರ ಅವುಗಳ ತಂತು ಗಳಾದ ಪರ್ಕಿಂಜಿ ತಂತುಗಳ ಮೂಲಕ ಅನುಕ್ರಮವಾಗಿ ಎಡ ಮತ್ತು ಬಲ ಹೃತ್ಕುಕ್ಷಿಗಳ ಸ್ನಾಯುಗಳನ್ನು ತಲುಪಿ ಹೃದಯ ಮಿಡಿತ ವಾಗುತ್ತದೆ. ಹೃದಯ ಕಾರ್ಯವನ್ನು ನಿರ್ವಹಿಸುವ ಹೃದಯದೊಳಗೇ ಪ್ರತ್ಯೇಕವಾಗಿ ಇರುವ ಈ ರಚನಾ ವ್ಯವಸ್ಥೆಗೆ ರಕ್ತಕುಂದಿಕೆಯಾದಲ್ಲಿ ಹೃದಯದ ಮಿಡಿತಾ ಉತ್ಪತ್ತಿ ರವಾನೆಯಲ್ಲಿ ಅವ್ಯವಸ್ಥೆಗಳುಂಟಾಗುತ್ತವೆ.
(ಮುಂದುವರೆಯುವುದು)