ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಬಂಧನ
ಪುಣೆ:ಶಿರಡಿಗೆ ತೆರಳುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಹಾಗೂ ಅವರ ನೇತೃತ್ವದ ಭೂಮಾತಾ ಬ್ರಿಗೇಡ್‌ನ ಹಲವು ಸದಸ್ಯರನ್ನು ಅಹ್ಮದ್‌ನಗರದಲ್ಲಿ ಪೊಲೀಸರು ಗುರುವಾರ ಬಂಧಿಸಲಾಯಿತು.
ಶಿರಡಿಯ ಸಾಯಿಬಾಬಾ ಮಂದಿರದಲ್ಲಿ ‘ಭಕ್ತರು ಸುಸಂಸ್ಕೃತ ರೀತಿಯಲ್ಲಿ ವಸ್ತ್ರ ಧರಿಸಬೇಕು’ ಎಂಬ ಒಕ್ಕಣೆ ಇರುವ ಫಲಕ ಅಳವಡಿಸಲಾಗಿದೆ. ಈ ಫಲಕವನ್ನು ತೆರವುಗೊಳಿಸುವ ಸಲುವಾಗಿ ತೃಪ್ತಿ ದೇಸಾಯಿ ನೇತೃತ್ವದಲ್ಲಿ ಭೂಮಾತಾ ಬ್ರಿಗೇಡ್‌ ಸದಸ್ಯರು ಶಿರಡಿಗೆ ತೆರಳುತ್ತಿದ್ದರು.
‘ವಿವಾದಾತ್ಮಕ ಸಂದೇಶ ಹೊಂದಿರುವ ಫಲಕವನ್ನು ಕೂಡಲೇ ತೆಗೆದು ಹಾಕಬೇಕು. ತಪ್ಪಿದಲ್ಲಿ ಡಿ. 10ರಂದು ಸಂಘಟನೆಯ ಸದಸ್ಯರೊಂದಿಗೆ ತೆರಳಿ ಆ ಫಲಕವನ್ನು ತೆರವು ಮಾಡುವುದಾಗಿ’ ದೇಸಾಯಿ ಎಚ್ಚರಿಕೆ ನೀಡಿದ್ದರು.
ದೇಸಾಯಿಗೆ ಮಂಗಳವಾರ ನೋಟಿಸ್‌ ನೀಡಿದ್ದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌ ಗೋವಿಂದ ಶಿಂಧೆ, ಡಿ.8ರಿಂದ 11ರ ಮಧ್ಯ ರಾತ್ರಿ 11ರ ವರೆಗೆ ಅಹ್ಮದ್‌ನಗರ ಜಿಲ್ಲೆಯ ಶಿರಡಿ ಪಟ್ಟಣವನ್ನು ಪ್ರವೇಶಿಸಬಾರದು ಎಂದು ಸೂಚಿಸಿದ್ದರು.
