ಟಿಆರ್‌ಪಿ ತಿರುಚಿದ ಪ್ರಕರಣ: ಪಾರ್ಥೊ ದಾಸ್‌ಗುಪ್ತಾಗೆ ಜಾಮೀನು ಮಂಜೂರು
ಮುಂಬೈ:ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್ಸ್‌ (ಟಿಆರ್‌ಪಿ) ತಿರುಚಿದ ಪ್ರಕರಣದ ಸಂಬಂಧ ಬಂಧನಕ್ಕೀಡಾಗಿದ್ದ ಬಾರ್ಕ್ ಸಂಸ್ಥೆಯ ಮಾಜಿ ಮುಖ್ಯಸ್ಥ ಪಾರ್ಥೊ ದಾಸ್‌ಗುಪ್ತಾಗೆ ಬಾಂಬೆ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ಪಾರ್ಥೊ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಬಾಂಬೇ ಹೈಕೋರ್ಟ್ ನ ನ್ಯಾಯಧೀಶ ಪಿ.ಡಿ.ನಾಯಕ್‌ ಅವರು, ‘ಎರಡು ಲಕ್ಷ ರೂ ಮೌಲ್ಯದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತಕ್ಕೆ ಎರಡು ಭದ್ರತಾ ಠೇವಣಿಗಳನ್ನು ಇಡುವಂತೆ ಸೂಚಿಸಿ, ಜಾಮೀನು ಮಂಜೂರು ಮಾಡಿದರು.
ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಡಿ. 24 ಅವರನ್ನು ಮುಂಬೈ ಪೊಲೀಸರು ಅವರನ್ನು ಬಂಧಿಸಿದ್ದರು. ಅಂದಿನಿಂದ ಜೈಲಿನಲ್ಲಿದ್ದು, ಜನವರಿಯಲ್ಲಿ ಜಾಮೀನು ಕೋರಿ ಹೈ ಕೋರ್ಟ್ ಮೊರೆ ಹೋಗಿದ್ದರು. ಆದರೆ ದಾಸ್‌ಗುಪ್ತಾ ಸಲ್ಲಿಸಿದ್ದ ಮನವಿಯನ್ನು ಸೆಷನ್ಸ್‌ ಕೋರ್ಟ್‌ ತಿರಸ್ಕರಿಸಿತ್ತು.
ಟಿಆರ್‌ಪಿ ತಿರುಚುವುದಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್‌ ಟಿವಿ ಚಾನೆಲ್‌ಗಳ ಒಡೆತನದ ಎಆರ್‌ಜಿ ಔಟ್‌ಲೈಯರ್ ಮೀಡಿಯಾ ಮತ್ತು ರಿಪಬ್ಲಿಕ್‌ ಟಿವಿ ಪ್ರಧಾನ ಸಂಪಾದಕ ಅರ್ನಾಬ್‌ ಗೋಸ್ವಾಮಿ ಜೊತೆಗೆ ಕೈಜೋಡಿಸಿರುವುದು, ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪವನ್ನು ದಾಸ್‌ಗುಪ್ತಾ ಎದುರಿಸುತ್ತಿದ್ದಾರೆ.
