ಕೇದಾರನಾಥಕ್ಕೆ ನವೆಂಬರ್ 5 ರಂದು ಪ್ರಧಾನಿ ಭೇಟಿ
ನವದೆಹಲಿ:ಉತ್ತರಾಖಂಡದ ಕೇದಾರನಾಥಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 5 ರಂದು ಭೇಟಿ ನೀಡಲಿದ್ದಾರೆ.
ಕೇದಾರನಾಥ ದೇವಾಲಯದಲ್ಲಿ ಪ್ರಧಾನಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನಂತರ ಶ್ರೀ ಆದಿ ಶಂಕರಾಚಾರ್ಯ ಸಮಾಧಿ ಉದ್ಘಾಟಸಿ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. 2013 ರ ಪ್ರವಾಹದಲ್ಲಿ ನಾಶವಾದ ನಂತರ ಸಮಾಧಿಯನ್ನು ಪುನರ್ನಿರ್ಮಿಸಲಾಯಿತು.
ವಿಧಾನಸಭೆ ಚುನಾವಣೆ ನಡೆಯಲಿರುವ ಉತ್ತರಾಖಂಡ ರಾಜ್ಯದಲ್ಲಿ ರ್‍ಯಾಲಿಯನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.
130 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದ ಪೂರ್ಣಗೊಂಡಿರುವ ಪ್ರಮುಖ ಮೂಲ ಸೌಕರ್ಯ ಯೋಜನೆಗಳನ್ನು ಉದ್ಘಾಟಿಸ ಲಿದ್ದಾರೆ. ಸಂಗಮ ಘಾಟ್, ಪ್ರಥಮ ಚಿಕಿತ್ಸಾ ಮತ್ತು ಪ್ರವಾಸಿ ಸೌಲಭ್ಯ ಕೇಂದ್ರ, ಆಡಳಿತ ಕಚೇರಿ ಮತ್ತು ಆಸ್ಪತ್ರೆ, ಎರಡು ಅತಿಥಿ ಗೃಹಗಳು, ಪೊಲೀಸ್ ಠಾಣೆ, ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್, ಮಂದಾಕಿನಿ ಆಸ್ಥಾಪತ್ ಸೇರಿದಂತೆ 180 ಕೋಟಿ ರೂ.ಗಳ ಬಹುವಿಧದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ.
ಸಮಾಧಿಯ ಮರುನಿರ್ಮಾಣ ಉಲ್ಲೇಖಿಸಿರುವ ಪ್ರಧಾನಿ ಕಚೇರಿ, ಮೋದಿ ಅವರ ಮಾರ್ಗದರ್ಶನದಲ್ಲಿ ಸಂಪೂರ್ಣ ಕೆಲಸವನ್ನು ಕೈಗೊಳ್ಳಲಾಗಿದ್ದು, ಅವರು ನಿರಂತರವಾಗಿ ಅದರ ಪ್ರಗತಿಯನ್ನು ಪರಿಶೀಲಿಸಿದ್ದಾರೆ ಮತ್ತು ಮೇಲ್ವಿಚಾರಣೆ ಮಾಡಿದ್ದಾರೆ ಎಂದು ಹೇಳಿದೆ.