ಮಹಾರಾಷ್ಟ್ರ, ಗೋವಾ, ದೆಹಲಿಯಲ್ಲಿ ಐಟಿ ದಾಳಿ: 1,000 ಕೋ.ರೂ. ಆಸ್ತಿ ಮುಟ್ಟುಗೋಲು
ಮುಂಬೈ:ಮಹಾರಾಷ್ಟ್ರ, ಗೋವಾ ಮತ್ತು ದೆಹಲಿಯಲ್ಲಿ ಆದಾಯ ತೆರಿಗೆ ಇಲಾಖೆಯು 1,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಆಪ್ತ ಸಹಾಯಕರೊಂದಿಗೆ ನಂಟು ಹೊಂದಿರುವವರ ಆಸ್ತಿಯಾಗಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.
ಮಹಾರಾಷ್ಟ್ರದ ಸತಾರಾದಲ್ಲಿರುವ ಜರಂದೇಶ್ವರ ಸಕ್ಕರೆ ಕಾರ್ಖಾನೆ, ಮುಂಬೈನ ಅಧಿಕೃತ ಆವರಣ, ದೆಹಲಿಯ ಫ್ಲ್ಯಾಟ್, ಗೋವಾದಲ್ಲಿ ರೆಸಾರ್ಟ್ ಮತ್ತು ಮಹಾ ರಾಷ್ಟ್ರದ 27 ವಿವಿಧ ಸ್ಥಳಗಳಲ್ಲಿನ ಭೂ ಪಾರ್ಸೆಲ್‌ಗಳನ್ನು ಜಪ್ತಿ ಮಾಡಿರುವ ಆಸ್ತಿ ಗಳು ಸೇರಿವೆ. ಆಸ್ತಿಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ ಅಂದಾಜು 1000 ಕೋಟಿ ರೂ.ಗೂ ಹೆಚ್ಚು ಎಂದು ಮೂಲಗಳು ತಿಳಿಸಿವೆ.
ಕಳೆದ ತಿಂಗಳು, ಆದಾಯ ತೆರಿಗೆ ಇಲಾಖೆಯು ಮುಂಬೈನಲ್ಲಿ ಎರಡು ರಿಯಲ್ ಎಸ್ಟೇಟ್ ವ್ಯವಹಾರ ಗುಂಪುಗಳು ಮತ್ತು ಅಜಿತ್ ಪವಾರ್ ಅವರ ಸಂಬಂಧಿಕರೊಂದಿಗೆ ಸಂಬಂಧ ಹೊಂದಿರುವ ಕೆಲವು ಸಂಸ್ಥೆಗಳ ಮೇಲೆ ದಾಳಿ ನಡೆಸಿದ ನಂತರ 184 ಕೋಟಿರೂ. ಸಿಕ್ಕಿತ್ತು.
ಅಕ್ಟೋಬರ್ 7 ರಂದು ಮುಂಬೈ, ಪುಣೆ, ಬಾರಾಮತಿ, ಗೋವಾ ಮತ್ತು ಜೈಪುರ ದಲ್ಲಿ ಹರಡಿರುವ ಸುಮಾರು 70 ಆವರಣದಲ್ಲಿ ದಾಳಿ ಮಾಡಲಾಯಿತು. ಕಳೆದ ತಿಂಗಳು, ಪವಾರ್ ಅವರ ಸಹೋದರಿಯರ ಒಡೆತನದ ಮನೆಗಳು ಮತ್ತು ಸಂಸ್ಥೆ ಗಳಲ್ಲಿ ತೆರಿಗೆ ಶೋಧಗಳನ್ನು ನಡೆಸಲಾಯಿತು.
ಪವಾರ್, ತನಗೆ ಸಂಬಂಧಿಸಿದ “ಎಲ್ಲಾ ಘಟಕಗಳು” ನಿಯಮಿತವಾಗಿ ತೆರಿಗೆ ಪಾವತಿಸಿವೆ ಎಂದು ಸಮರ್ಥಿಸಿಕೊಂಡಿದ್ದಾರೆ. ಹಣಕಾಸು ಸಚಿವನಾಗಿರುವು ದರಿಂದ ಹಣಕಾಸಿನ ಶಿಸ್ತಿನ ಬಗ್ಗೆ ನನಗೆ ಅರಿವಿದೆ. ನನ್ನೊಂದಿಗೆ ಸಂಪರ್ಕ ಹೊಂದಿದ ಎಲ್ಲಾ ಘಟಕಗಳು ತೆರಿಗೆ ಪಾವತಿಸಿವೆ ಎಂದು ತಿಳಿಸಿದ್ದರು.
