ಟಿಡಿಪಿ ಪಕ್ಷದ ಮಾನ್ಯತೆ ರದ್ದಿಗೆ ವೈಎಸ್‌ಆರ್‌ಸಿಪಿ ಮನವಿ
ನವದೆಹಲಿ:ಟಿಡಿಪಿಯ ನಾಯಕರು ನಿಂದನೀಯ ಭಾಷೆ ಬಳಸಿದ್ದಾರೆ ಎಂದು ಆರೋಪಿಸಿ, ಅವರ ತೆಲುಗು ದೇಶಂ ಪಕ್ಷದ (ಟಿಡಿಪಿ)ಮಾನ್ಯತೆಯನ್ನು ರದ್ದುಪಡಿಸ ಬೇಕೆಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿ ಮಾಡಿ ಆಂಧ್ರ ಪ್ರದೇಶದ ವೈಎಸ್‌ಆರ್‌ಸಿಪಿ ಪಕ್ಷದ ನಿಯೋಗ ಕೋರಿದೆ.
ಆಂಧ್ರದ ಮುಖ್ಯಮಂತ್ರಿ ವೈ.ಎಸ್.ಜಗನ್‌ಮೋಹನ್ ರೆಡ್ಡಿ ಅವರ ವಿರುದ್ಧ ನಿಂದನೀಯ ಭಾಷೆ ಬಳಸಿದ್ದಾರೆ. ಈ ಕಾರಣಕ್ಕಾಗಿ ಟಿಡಿಪಿಯ ಮಾನ್ಯತೆ ರದ್ದುಪಡಿಸಬೇಕೆಂದು ನಿಯೋಗವು ಒತ್ತಾಯಿಸಿದೆ.
ದುರುದ್ದೇಶಪೂರಿತ ಕೃತ್ಯಗಳಿಗೆ ನಿರ್ದಿಷ್ಟವಾಗಿ ದಂಡ ವಿಧಿಸುವ ನ್ಯಾಯಾಂಗ ನಿಂದನೆ ಕಾಯ್ದೆ ಯಂತಹ ಕಾನೂನನ್ನು ಸಂಸತ್ತಿ ನಲ್ಲಿ ರೂಪಿಸುವಂತೆ ಕೇಂದ್ರ ಕಾನೂನು ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು’ ಎಂದು ಪಕ್ಷದ ನಿಯೋಗದ ನೇತೃತ್ವ ವಹಿಸಿದ್ದ ವೈಎಸ್‌ಆರ್‌ಸಿಪಿ ಪ್ರಧಾನ ಕಾರ್ಯದರ್ಶಿ ವಿ.ವಿಜಯ್ ಸಾಯಿರೆಡ್ಡಿ ಅವರು ರಾಷ್ಟ್ರಪತಿ ಅವರನ್ನು ಒತ್ತಾಯಿಸಿದ್ದಾರೆ.
ಟಿಡಿಪಿಯ ಮಾನ್ಯತೆ ರದ್ದುಗೊಳಿಸುವಂತೆ ಕೋರಿ ಅ. 28ರಂದು ಕೇಂದ್ರ ಚುನಾವಣಾ ಆಯೋಗಕ್ಕೆ ವೈಎಸ್‌ಆರ್‌ಸಿಪಿ ದೂರು ನೀಡಿತ್ತು.