ಆರ್ಯನ್‌ ಪ್ರಕರಣ ದೆಹಲಿ ಎನ್‌ಸಿಬಿ ತಂಡಕ್ಕೆ ವರ್ಗಾವಣೆ
ಮುಂಬೈ:ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ಪತ್ತೆಯಾದ ಪ್ರಕರಣ ಮತ್ತು ಇತರ ಐದು ಪ್ರಕರಣಗಳನ್ನು ಮಾದಕ ದ್ರವ್ಯ ನಿಯಂತ್ರಣ ಮಂಡಳಿಯು ದೆಹಲಿ ಎನ್‌ಸಿಬಿ ತಂಡಕ್ಕೆ ವರ್ಗಾಯಿಸಿದೆ. ಶನಿವಾರ ಮುಂಬೈಗೆ ದೆಹಲಿ ಎನ್‌ಸಿಬಿ ತಂಡ ಆಗಮಿಸುತ್ತಿದ್ದು, ತನಿಖೆ ಆರಂಭಿಸಲಿದೆ.
ಪ್ರಕರಣ ವರ್ಗಾವಣೆ ಕುರಿತು ಎನ್‌ಸಿಬಿ ಘೋಷಣೆ ಮಾಡಿದ ಬಳಿಕ, ಎನ್‌ಸಿಬಿ ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮನ್ನು ತನಿಖಾ ತಂಡದಿಂದ ತೆಗೆದು ಹಾಕಿಲ್ಲ. ಆದರೆ ಪ್ರಕರಣವನ್ನು ದೆಹಲಿ ಮತ್ತು ಮುಂಬೈ ತಂಡಗಳು ಜಂಟಿಯಾಗಿ ತನಿಖೆ ನಡೆಸಲಿವೆ ಎಂದು ವಾಂಖೆಡೆ ತಿಳಿಸಿದ್ದಾರೆ.
‘ತನಿಖಾ ತಂಡದಿಂದ ತಮ್ಮನ್ನು ಕೈಬಿಡಲಾಗಿಲ್ಲ. ಕೇಂದ್ರದ ಏಜೆನ್ಸಿ ಪ್ರಕರಣವನ್ನು ತನಿಖೆ ನಡೆಸಬೇಕು ಎಂದು ಕೋರ್ಟ್‌ಗೆ ನಾನು ಮನವಿ ಸಲ್ಲಿಸಿದ್ದೆ. ಹಾಗಾಗಿ ಆರ್ಯನ್‌ ಪ್ರಕರಣ ಮತ್ತು ಸಮೀರ್‌ ಖಾನ್‌ ಪ್ರಕರಣವನ್ನು ದೆಹಲಿ ಎನ್‌ಸಿಬಿಯ ಎಸ್‌ಐಟಿ ತಂಡ ತನಿಖೆ ನಡೆಸಲಿದೆ.
ದೆಹಲಿ ಮತ್ತು ಮುಂಬಯಿ ಎನ್‌ಸಿಬಿ ತಂಡಗಳ ಪರಸ್ಪರ ಹೊಂದಾಣಿಕೆಯಿದು’ ಎಂದು ವಾಂಖೆಡೆ ಹೇಳಿದ್ದಾರೆ.