ಏಮ್ಸ್ ಗುಂಡಿನ ಚಕಮಕಿ ಪ್ರಕರಣ: ಮೂವರ ಬಂಧನ
ನವದೆಹಲಿ:ದೆಹಲಿಯ ಕಿದ್ವಾಯಿನಗರದ ಏಮ್ಸ್ ಆವರಣದಲ್ಲಿ ನಡೆದ ಗುಂಡಿನ ಚಕಮಕಿಗೆ ಸಂಬಂಧಪಟ್ಟಂತೆ ಮೂವರನ್ನು ಬಂಧಿಸಲಾಗಿದೆ.
ಸಚಿವರುಗಳ ನಿವಾಸಕ್ಕೆ ಸಮೀಪದಲ್ಲೇ ದುಷ್ಕರ್ಮಿಗಳು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದು ಆತಂಕ ಸೃಷ್ಟಿಸಿತ್ತು. ಸೋಮವಾರ ಮಧ್ಯರಾತ್ರಿ ಪೊಲೀಸ್ ಸಿಬ್ಬಂದಿಗಳು ಕೋಲ್ತಾ ಮುಬಾರಕ್‍ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಸ್ತು ತಿರುಗುವಾಗ, ಮೂರು ಮಂದಿ ಶಂಕಾಸ್ಪದವಾಗಿ ಸಂಚರಿಸಿರುವುದನ್ನು ಗುರುತಿಸಿದ್ದಾರೆ.
ಪೊಲೀಸರು ಶಂಕಿತರನ್ನು ಬೆನ್ನಟ್ಟಿದ ವೇಳೆ ಬೈಕ್‍ನಲ್ಲಿ ಕುಳಿತಿದ್ದ ವ್ಯಕ್ತಿ ಪೊಲೀಸರತ್ತ ಗುಂಡು ಹಾರಿಸಿದ್ದಾನೆ. ಆತ್ಮ ರಕ್ಷಣೆಗಾಗಿ ಕಾನ್‍ಸ್ಟೆಬಲ್ ಕುಲ್‍ದೀಪ್ ಗುಂಡು ಹಾರಿಸಿದ್ದು, ಹಿಂದೆ ಕುಳಿತಿದ್ದವರ ಕಾಲಿಗೆ ಗಾಯವಾಗಿದೆ.
ಆರೋಪಿಗಳನ್ನು ಅಬೀ ಸೌರವ್, ಗುರುದೇವ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಡಿಸಿಪಿ ಬೆನಿಟಾ ಮೇರಿ ಜೈಕರ್ ತಿಳಿಸಿದ್ದಾರೆ.
