ಶಬರಿಮಲೆ ಪ್ರಸಾದದಲ್ಲಿ ಹಲಾಲ್ ಬೆಲ್ಲ: ವರದಿ ಕೇಳಿದ ಆಹಾರ ಸುರಕ್ಷತಾ ಪ್ರಾಧಿಕಾರ
ತಿರುವನಂತಪುರ:ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಪ್ರಸಾದ ಸಿದ್ದಪಡಿಸುವಾಗ ‘ಹಲಾಲ್ ಬೆಲ್ಲ’ ಬಳಸಿದ್ದು, ಈ ಕುರಿತು ದೇವಸ್ಥಾನದ ಮುಖ್ಯಅರ್ಚಕರ ಅಭಿಪ್ರಾಯ ಕೇಳಬೇಕೆಂದು ಕೋರಿ ಕೇರಳ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.
ಶಬರಿಮಲೆ ಕರ್ಮ ಸಮಿತಿಯ ಪ್ರಧಾನ ಸಂಚಾಲಕ ಎಸ್‌.ಜೆ.ಆರ್. ಕುಮಾರ್ ಎಂಬವರು ಅರ್ಜಿ ಸಲ್ಲಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಸುರಕ್ಷತಾ ಪ್ರಾಧಿಕಾರದಿಂದ ಹೈಕೋರ್ಟ್ ವರದಿ ಕೇಳಿದೆ.
‘ದೇವಸ್ಥಾನವು ಸ್ವೀಕರಿಸಿದ ಬೆಲ್ಲದ ಪ್ಯಾಕೇಜ್ ಮೇಲೆ ‘ಹಲಾಲ್’ ಎಂದು ನಮೂದಿಸ ಲಾಗಿದೆ. ಇದನ್ನು ಪೂರೈಸುವ ಕಂಪನಿಯು ಅರಬ್ ದೇಶಗಳಿಗೂ ಈ ಬೆಲ್ಲವನ್ನು ರಫ್ತು ಮಾಡುತ್ತದೆ. ಈ ಹಿಂದೆ ಬೆಲ್ಲಕ್ಕೆ ಹುಳುಬಿದ್ದಿದ್ದು, ಪ್ರಸಾದಕ್ಕೆ ಬಳಸಲು ಯೋಗ್ಯವಲ್ಲದ ಕಾರಣ ಹೊಸ ಬೆಲ್ಲ ಖರೀದಿಸಲಾಗಿದೆ’ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ನ್ಯಾಯಾಲಯಕ್ಕೆ ತಿಳಿಸಿದೆ.
ಆಹಾರ ಸುರಕ್ಷತಾ ಪ್ರಾಧಿಕಾರದ ವರದಿ ಬಂದ ನಂತರ ಬುಧವಾರ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಕೋರ್ಟ್ ತಿಳಿಸಿದೆ.