ಎಲೆಕ್ಟ್ರಿಕ್ ಬಸ್ ನಿಯಂತ್ರಣ ತಪ್ಪಿ ಡಿಕ್ಕಿ: ಆರು ಮಂದಿ ಸಾವು
ಕಾನ್ಪುರ:ಉತ್ತರ ಪ್ರದೇಶ ರಾಜ್ಯ ಕಾನ್ಪುರದ ಟಾಟ್ ಮಿಲ್ ಕ್ರಾಸ್ ರೋಡ್ ಬಳಿ ಭಾನುವಾರ ತಡರಾತ್ರಿ ಎಲೆಕ್ಟ್ರಿಕ್ ಬಸ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಆರು ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತ ನಡೆದ ಸ್ಥಳದಲ್ಲಿ 15 ಜನರ ತಂಡವಿತ್ತು. ಮೃತಪಟ್ಟವರಲ್ಲಿ ಮೂವರನ್ನು ಗುರುತಿಸಲಾಗಿದೆ.
ಟ್ಯಾಟ್ ಮಿಲ್ ಇಳಿಜಾರಿನಲ್ಲಿ ಬಸ್‌ ನ ಬ್ರೇಕ್‌ಗಳು ಕೆಲಸ ಮಾಡುವುದನ್ನು ನಿಲ್ಲಿಸಿದ ಕಾರಣ ನಿಯಂತ್ರಣ ತಪ್ಪಿದ ಬಸ್ ಕಾರುಗಳು, ಮೋಟರ್‌ ಸೈಕಲ್‌ಗಳು ಮತ್ತು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ ಎಂದು ಕಾನ್ಪುರ ಪೂರ್ವ ಪೊಲೀಸ್ ಉಪ ಆಯುಕ್ತ ಪ್ರಮೋದ್ ಕುಮಾರ್ ಹೇಳಿದ್ದಾರೆ. ಒಂಬತ್ತು ಜನರ ಸ್ಥಿತಿ ಚಿಂತಾಜನಕ ವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಸ್ತೆ ಅಪಘಾತದಲ್ಲಿ ಮೃತರ ಕುಟುಂಬಗಳಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವಿಟರ್‌ನಲ್ಲಿ ಸಂತಾಪ ತಿಳಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಅವರು ಹಿಂದಿಯಲ್ಲಿ ಪೋಸ್ಟ್ ಮಾಡಿದ ಟ್ವೀಟ್‌ ನಲ್ಲಿ ತಿಳಿಸಿದ್ದಾರೆ.