ಚುನಾವಣೆಯಲ್ಲಿ ಹಿಂಸಾಚಾರ ವಿರೋಧಿಸಿ ಬಿಜೆಪಿಯಿಂದ ಬಂದ್‌ಗೆ ಕರೆ
ಕೋಲ್ಕತ್ತಾ:ಪಶ್ಚಿಮ ಬಂಗಾಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಿಂಸಾಚಾರ ವಿರೋಧಿಸಿ ಬಿಜೆಪಿ ಸೋಮವಾರ 12 ಗಂಟೆಗಳ ಬಂದ್‌ಗೆ ಕರೆ ನೀಡಿದೆ.
ರಾಜ್ಯಾದ್ಯಂತ 108 ಪುರಸಭೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಗೂಂಡಾಗಳಿಂದ ವಿರೋಧ ಪಕ್ಷದ ಸದಸ್ಯರ ಮೇಲೆ ರಿಗ್ಗಿಂಗ್ ಮತ್ತು ಹಲ್ಲೆ ನಡೆಸಿರುವುದನ್ನು ವಿರೋ ಧಿಸಿ ಬಿಜೆಪಿ ಬಂದ್‌ಗೆ ಕರೆ ನೀಡಿದೆ.
ಪಶ್ಚಿಮ ಬಂಗಾಳದಲ್ಲಿ ಫೆ.27 ಭಾನುವಾರ ಮತದಾನ ಆರಂಭವಾದ ಮೊದಲ ಮೂರು ಗಂಟೆಗಳಲ್ಲಿ ವ್ಯಾಪಕ ಹಿಂಸಾಚಾರ ವರದಿ ಆಗಿದೆ. ಮತದಾನ ಆರಂಭವಾದಾಗಿನಿಂದ ಪ್ರತಿಪಕ್ಷಗಳ ಅಭ್ಯರ್ಥಿಗಳನ್ನು ಥಳಿಸಿರುವ ವರದಿಗಳು, ಸುಳ್ಳು ಮತದಾನ, ಬೂತ್ ಅಕ್ರಮ ಮತ್ತು ಇತರ ಚುನಾವಣಾ ಅವ್ಯವಹಾರಗಳ ಆರೋಪಗಳು ಕೇಳಿಬಂದಿದೆ.
ಭಾತ್ಪಾರಾದಲ್ಲಿ ಬಿಜೆಪಿ ಅಭ್ಯರ್ಥಿಯ ಪತಿ ಮೇಲೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ನಾಶಪಡಿಸಿದ ಆರೋಪವಿದೆ. ಬ್ಯಾರಕ್‌ಪೋರ್‌ನಲ್ಲಿ ಟಿಎಂಸಿ ಕಾರ್ಯಕರ್ತರು ಒಬ್ಬ ಸ್ವತಂತ್ರ ಅಭ್ಯರ್ಥಿ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ. ಆರಂಬಾಗ್‌ನಲ್ಲಿ ಸಿಪಿಎಂ ಅಭ್ಯರ್ಥಿಗಳ ಮೇಲೆ ಟಿಎಂಸಿ ದಾಳಿ ನಡೆಸಿದೆ. ಮುರ್ಷಿದಾಬಾದ್ ಜಿಲ್ಲೆಯಲ್ಲಿ ಹಲವು ವಿರೋಧ ಪಕ್ಷದ ಅಭ್ಯರ್ಥಿಗಳು ಥಳಿಸಿದ್ದಾರೆ. ಡಮ್ ಡಮ್ ಮತ್ತು ಪೂರ್ವ ಮಿಡ್ನಾಪುರ ಜಿಲ್ಲೆಯ ಕೊಂಟೈನಲ್ಲಿ ಮಾಧ್ಯಮದವರಿಗೂ ಟಿಎಂಸಿ ಕಾರ್ಯಕರ್ತರು ಥಳಿಸಿದ್ದಾರೆ.
ಬಿಜೆಪಿ ವಕ್ತಾರ ಸಾಮಿಕ್ ಭಟ್ಟಾಚಾರ್ಯ ಮಾತನಾಡಿ, ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಎಲ್ಲವನ್ನೂ ಸ್ಥಗಿತಗೊಳಿಸಲಾಗುತ್ತದೆ. ಈ ವೇಳೆ ಆರೋಗ್ಯ, ಹಾಲು ಸರಬರಾಜು ಮತ್ತು ಮಾಧ್ಯಮದಂತಹ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗುತ್ತದೆ ಎಂದರು.