ಗಡಿ ಭದ್ರತಾ ಪಡೆ ಕಾನ್‍ಸ್ಟೆಬಲ್ ಆತ್ಮಹತ್ಯೆ
ಕಂಕೇರ್:ಛತ್ತೀಸ್‍ಗಢದ ಕಂಕೇರ್ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆ ಕಾನ್‍ಸ್ಟೆಬಲ್ ಗುರುವಾರ ತನ್ನ ಸೇವಾ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ರಾಜಧಾನಿ ರಾಯ್‍ಪುರದಿಂದ 200 ಕಿಮೀ ದೂರದಲ್ಲಿರುವ ಕೊಯಲಿಬೆಡ ಪೊಲೀಸ್ ಠಾಣೆ ವ್ಯಾಪ್ತಿಯ ಕಮ್ತೇರಾ ಗ್ರಾಮದ ಬಿಎಸ್‍ಎಫ್ ಶಿಬಿರದಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಕ್ಸಲ್ ವಿರೋಧಿ ಕಾರ್ಯಾಚರಣೆಗಾಗಿ ಕಂಕೇರ್‍ನಲ್ಲಿ ಬಿಎಸ್‍ಎಫ್ ಅನ್ನು ವ್ಯಾಪಕವಾಗಿ ನಿಯೋಜಿಸಲಾಗಿದೆ.
30 ನೇ ಬೆಟಾಲಿಯನ್‍ಗೆ ಸೇರಿದ ಕಾನ್‍ಸ್ಟೆಬಲ್ ಉಜ್ಜವಲ್ ನಂದಿ (33) ತನ್ನ ಬ್ಯಾರಕ್‍ ನಲ್ಲಿ ಎಕ್ಸ್ 95 ರೈಫಲ್‍ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗುಂಡೇಟಿನ ಸದ್ದು ಕೇಳಿದ ಆತನ ಸಹೋದ್ಯೋಗಿಗಳು ಸ್ಥಳಕ್ಕೆ ಧಾವಿಸಿ ನೋಡಿದಾಗ ಅವರು ರಕ್ತದ ಮಡುವಿನಲ್ಲಿ ನಂದಿ ಶವವಾಗಿ ಬಿದ್ದಿರುವುದು ಕಂಡು ಬಂದಿದೆ. ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಟಿಪ್ಪಣಿ ಕಂಡುಬಂದಿಲ್ಲ.
ನಂದಿ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯವರಾಗಿದ್ದು,ಮೃತದೇಹವನ್ನು ಕೊಯಲಿಬೀಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.